ಜಿಲ್ಲೆಯು ಹತ್ತು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಆಚರಿಸುತ್ತಿರುವ ದಶಮಾನೋತ್ಸವ ಸಂಭ್ರಮವನ್ನು ರೈತ ಹಬ್ಬದಂತೆ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ತಾಲ್ಲೂಕಿನ ಯುವಶಕ್ತಿ ವಲಸೆ ಹೋಗುವುದನ್ನು ತಪ್ಪಿಸಲು ಕೈಗಾರಿಕೆಯನ್ನು ಸ್ಥಾಪಿಸಲು ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ನೆಹರು ಕ್ರೀಡಾಂಗಣದಲ್ಲಿ ಸೋಮವಾರ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಳೆ ಹಾಗೂ ಅಂತರ್ಜಲವನ್ನಷ್ಟೇ ನಂಬಿದ್ದರೂ, ನೀರಿನ ಕೊರತೆಯಿದ್ದರೂ ನಮ್ಮ ರೈತರು ಹಾಲು ಮತ್ತು ರೇಷ್ಮೆಯಿಂದ ತಾಲ್ಲೂಕಿಗೆ ಖ್ಯಾತಿ ದೊರಕಿಸಿಕೊಟ್ಟಿದ್ದಾರೆ. ಹಣ್ಣು, ತರಕಾರಿ ನಗರಗಳಿಗೆ ಸರಬರಾಜು ಮಾಡುತ್ತಿದ್ದಾರೆ. ಆದರೂ ಕೃಷಿ ಲಾಭದಾಯಕವಾಗಿಲ್ಲ. ಕೆಲವೇ ಮಂದಿ ರೈತರು ಮಾತ್ರ ಆಧುನಿಕ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಶ್ರಮ ಜೀವಿಗಳಾದ ನಮ್ಮ ರೈತ ಬಂಧುಗಳಿಗೆ ನೀರಿನ ಅಗತ್ಯವಿದೆ. ರಾಜಕೀಯವಿಲ್ಲದೆ ಬಯಲುಸೀಮೆಗೆ ನೀರನ್ನು ಹರಿಸಬೇಕಾಗಿದೆ ಎಂದು ಹೇಳಿದರು.
ಹಾಪ್ಕಾಮ್ಸ್ ಅಧ್ಯಕ್ಷ ಎ.ಎಸ್.ಚಂದ್ರೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಅಂತರ್ಜಲ ಕುಸಿಯುತ್ತಿದೆ. ಎರಡು ವರ್ಷಗಳಲ್ಲಿ ನಮ್ಮ ಭಾಗದ ಕೆರೆಗಳನ್ನು ತುಂಬಿಸುತ್ತೇವೆಂದು ಹೇಳಿದ ಭರವಸೆಯ ಮಾತುಗಳು ಏನಾದವು. ಎಲ್ಲಿಂದಲಾದರೂ ನೀರು ತನ್ನಿ, ಆದರೆ ಕೃಷಿಯಾಧಾರಿತ ನೀರನ್ನು ತನ್ನಿ. ನೀರಿನ ವಿಚಾರದಲ್ಲಿ ರಾಜಕೀಯ ಬೇಡ. ನಾವು ಜಿಲ್ಲೆಯ ಅಭಿವೃದ್ಧಿಯ ಬಗ್ಗೆಯಷ್ಟೇ ಚಿಂತನೆ ಮಾಡಬೇಕಿದೆ. ಶುದ್ಧೀಕರಿಸಿದ ನೀರಿನಿಂದ ಯಾವುದೇ ರೀತಿಯ ಅಪಾಯವಿಲ್ಲ. ನೀರು ನಮ್ಮ ಕೆರೆ ತುಂಬಿ ನಮ್ಮ ರೈತರ ಬದುಕು ಹಸನಾಗಲಿ ಎಂದು ಹೇಳಿದರು.
ತಹಶೀಲ್ದಾರ್ ಅಜಿತ್ ಕುಮಾರ್ ರೈ ಮಾತನಾಡಿ, ಆಡಳಿತದ ಹಿತದೃಷ್ಟಿ, ಆಡಳಿತವನ್ನು ಜನರಿಗೆ ಸಮೀಪ ತರುವುದು, ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವುದು ಹಾಗೂ ಜನತೆಗೆ ಅಗತ್ಯಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಸರ್ಕಾರವು ಚಿಕ್ಕಬಳ್ಳಾಪುರ ಉಪವಿಭಾಗವನ್ನುಒಂದು ಸ್ವತಂತ್ರ ಜಿಲ್ಲೆಯಾಗಿ ರೂಪಿಸಿದೆ.
ಇದರಿಂದಾಗಿ ಆಡಳಿತ ಮತ್ತು ಅಭಿವೃದ್ಧಿಯು ಜನತೆಗೆ ಸಮೀಪವಾಗಿದ್ದು ಜನತೆಗೆ ಹಲವು ಅನುಕೂಲಗಳಾಗಿವೆ. ತಮ್ಮ ಕೆಲಸ ಕಾರ್ಯಗಳಿಗಾಗಿ ದೂರದ ಕೋಲಾರಕ್ಕೆ ಹೋಗಿ ಬರುವ ಶ್ರಮತಪ್ಪಿದೆ. ಜಿಲ್ಲಾಡಳಿತ ಭವನದ ಒಂದೇ ಸೂರಿನಡಿಯಲ್ಲಿ ಹಲವು ಇಲಾಖೆಗಳು ಲಭ್ಯವಾಗಿವೆ. ಜಿಲ್ಲೆಯ ಅಭಿವೃದ್ಧಿಗೆ ಅನುದಾನವು ಹೆಚ್ಚಿದೆ. ಕೃಷಿ, ಶಿಕ್ಷಣ, ಆರೋಗ್ಯ, ಸಾಮಾಜಿಕನ್ಯಾಯ, ಮೂಲಭೂತ ಸೌಲಭ್ಯಗಳು, ನಾಡು-ನುಡಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳುವೃದ್ಧಿಯಾಗಿವೆ. ಆಡಳಿತಾತ್ಮಕವಾಗಿ ಚಿಕ್ಕಬಳ್ಳಾಪುರವು ಕೋಲಾರದಿಂದ ಬೇರ್ಪಟ್ಟಿದ್ದರೂ ಸಹ ಸಾಮಾಜಿಕ,ಸಾಂಸ್ಕೃತಿಕ ಹಾಗೂ ಭಾವನಾತ್ಮಕವಾಗಿ ಸೋದರ ಬಾಂಧವ್ಯವು ಉಳಿದಿದ್ದು ಇದು ಭಾವೈಕ್ಯತೆಗೆ ನಾಂದಿಯಾಗಿದೆ ಎಂದರು.
ನಗರಸಭಾ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್ ಮಾತನಾಡಿ, ಜಿಲ್ಲೆಯಾದ ನಂತರ ಹಲವಾರು ಅನುಕೂಲಗಳಾಗಿವೆ. ಪ್ರಗತಿಗೆ ಹಲವು ದಾರಿಗಳಿವೆ. ಈ ಸಂದರ್ಭದಲ್ಲಿ ಹಿಂದಿನದನ್ನು ಮೆಲುಕು ಹಾಕುತ್ತಾ ಮುಂದೆ ಆಗಬೇಕಾದ ಯೋಜನೆಗಳು ಅತ್ಯಗತ್ಯತೆಗಳ ಬಗ್ಗೆ ಆಲೋಚಿಸಬೇಕಾಗಿದೆ ಎಂದು ನುಡಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಸದಸ್ಯರಾದ ರಾಜಶೇಖರ್, ಪಂಕಜಾ ನಿರಂಜನ್, ಶೋಭಾ ಶಶಿಕುಮಾರ್, ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಂಕ್ ಮುನಿಯಪ್ಪ, ಸತೀಶ್, ನಗರಸಭಾ ಆಯುಕ್ತ ಚಲಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಬಾಬು, ಸಿಡಿಪಿಒ ಲಕ್ಷ್ಮೀದೇವಮ್ಮ, ತಹಶೀಲ್ದಾರ್ ಟ್ರೇನಿ ಮಮತಾಕುಮಾರಿ, ಬೆಸ್ಕಾಂ ಅನ್ಸರ್ಬಾಷ, ಪಶು ಇಲಾಖೆಯ ಡಾ.ಮುನಿನಾರಾಯಣರೆಡ್ಡಿ, ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷರಾದ ರವಿಕುಮಾರ್, ತಾದೂರು ಮಂಜುನಾಥ್, ದ.ಸಂ.ಸ ಜಿಲ್ಲಾ ಸಂಘಟನಾ ಸಂಚಾಲಕ ಮುನಯ್ಯ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೇಶವರೆಡ್ಡಿ, ಎಚ್.ಜಿ.ಗೋಪಾಲಗೌಡ, ಜೆ.ಎಸ್.ವೆಂಕಟಸ್ವಾಮಿ, ನಾರಾಯಣಸ್ವಾಮಿ, ಸರ್ಕಲ್ ಇನ್ಸ್ಪೆಕ್ಟರ್ ಸಿದ್ದರಾಜು ಹಾಜರಿದ್ದರು.
ಆರೋಗ್ಯದೆಡೆಗೆ ನಮ್ಮ ನಡಿಗೆ: ಮುಂಜಾನೆ 6 ಗಂಟೆಗೆ ಕೋರ್ಟ್ ಮುಂಭಾಗದಿಂದ ಶಾಮಣ್ಣ ಬಾವಿಯವರೆಗೆ ‘ಆರೋಗ್ಯದೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನ್ಯಾಯಾಧೀಶರು, ವಕೀಲರು, ನಗರಸಭಾ ಸಿಬ್ಬಂದಿ, ಕ್ರೀಡಾಪಟುಗಳು, ಶಾಸಕರನ್ನೊಳಗೊಂಡಂತೆ ‘ಜಿಲ್ಲಾ ದಶಮಾನೋತ್ಸವ ಶಿಡ್ಲಘಟ್ಟ ತಾಲ್ಲೂಕು’ ಎಂಬ ಬರಹವಿರುವ ಬಿಳಿ ಟೀ ಶರ್ಟ್ ಧರಿಸಿ ಜಾಥಾ ನಡೆಸಲಾಯಿತು.
ಸ್ವಚ್ಛತೆ: ಬೆಳಿಗ್ಗೆ ಅಗ್ರಹಾರ ಬೀದಿಯ ಶಾಮಣ್ಣ ಬಾವಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಸುಮಾರು 400 ವರ್ಷಗಳಷ್ಟು ಹಳೆಯದಾದ ಶಾಮಣ್ಣ ಬಾವಿಯನ್ನು ಕಲ್ಲಿನ ಚಪ್ಪಡಿಗಳಿಂದ ಚತುಷ್ಕೋನಾಕಾರದಲ್ಲಿ ನಿರ್ಮಿಸಲಾಗಿದೆ. ಗೌಡನ ಕೆರೆಯಿಂದ ಹೆಚ್ಚಾದ ನೀರು ಕಲ್ಯಾಣಿಗೆ ಹರಿಯುವಂತೆ ತೂಬನ್ನು ನಿರ್ಮಿಸಲಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು, ಕ್ರೀಡಾಪಟುಗಳು ನಗರಸಭೆ ಸಿಬ್ಬಂದಿ, ವಕೀಲರು ಒಗ್ಗೂಡಿ ಕಳೆಗಿಡಗಳು, ತ್ಯಾಜ್ಯದ ರಾಶಿಯನ್ನು ತೆರವುಗೊಳಿಸಿದರು.
ಕಲಾತಂಡಗಳೊಂದಿಗೆ ಮೆರವಣಿಗೆ: ಬಸ್ ನಿಲ್ದಾಣದಿಂದ ನೆಹರು ಕ್ರೀಡಾಂಗಣದವರೆಗೆ ವಿವಿಧ ಕಲಾತಂಡಗಳು ಮತ್ತು ಸ್ತಬ್ದ ಚಿತ್ರಗಳೊಂದಿಗೆ ದಶಮಾನೋತ್ಸವದ ತೇರಿಗೆ ಶಾಸಕ ಎಂ.ರಾಜಣ್ಣ ಚಾಲನೆಯನ್ನು ನೀಡಿದರು, ಬಂಡೂರು ಕುರಿಗಳು, ಎತ್ತಿನ ಬಂಡಿಗಳು, ಕರಡಿ ವೇಷಧಾರಿ, ಗಾರ್ಡಿ ಬೊಂಬೆಗಳು, ತಮಟೆ ವಾದನ, ನಾಸಿಕ್ ಡೋಲ್, ವಿವಿಧ ಶಾಲೆಗಳ ವಾದ್ಯ ತಂಡಗಳು, ಪೂರ್ಣಕುಂಭ ಹೊತ್ತ ಮಹಿಳೆಯರು, ಶಾಲಾ ವಿದ್ಯಾರ್ಥಿಗಳು ಮೆರವಣಿಗೆಯ ಆಕರ್ಷಣೆಯನ್ನು ಹೆಚ್ಚಿಸಿದ್ದರು.
ವಸ್ತು ಪ್ರದರ್ಶನದ ಮಳಿಗೆಗಳು: ಒಂದೂಕಾಲು ಲಕ್ಷ ರೂಗಳ ಜಮುನಾಪಾರಿ ಮೇಕೆಗಳು, ಅವಳಿ ಮರಿಗಳನ್ನು ನೀಡುವ ನಾರಿ ಸುವರ್ಣ ಟಗರು, ದಕ್ಷಿಣ ಆಫ್ರಿಕಾ ಮೂಲದ ಡಾರ್ಪರ್ ಟಗರು, ಬಂಡೂರು ಕುರಿಗಳು, ಕಡಿಮೆ ನೀರಿನಲ್ಲಿ ಹಸಿಮೇವನ್ನು ಬೆಳೆಯುವ ಹೈಡ್ರೋಫೋನಿಕ್ ಪದ್ಧತಿಯ ಪ್ರಾತ್ಯಕ್ಷಿಕೆಯನ್ನು ಪಶುಪಾಲನಾ ಮತ್ತು ಪಶುಸೇವಾ ಇಲಾಖೆಯ ಮಳಿಗೆಯಲ್ಲಿ ಕಂಡುಬಂದಿತು. ಕೋಚಿಮುಲ್ ಮಳಿಗೆಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಪ್ರದರ್ಶನ, ಆರೋಗ್ಯ ಇಲಾಖೆಯ ಮಳಿಗೆಗಳಲ್ಲಿ ಆರೋಗ್ಯ ಅರಿವು, ತೋಟಗಾರಿಕಾ ಮಳಿಗೆಯಲ್ಲಿ ತರಕಾರಿ, ಫಲ ಪುಷ್ಪಗಳ ಪ್ರದರ್ಶನ, ರೇಷ್ಮೆ ಇಲಾಖೆಯ ಮಳಿಗೆಯಲ್ಲಿ ರೇಷ್ಮೆ ಉತ್ಪನ್ನಗಳು, ರೈತ ಸಂಘದ ಮಳಿಗೆಯಲ್ಲಿ ವಿವಿಧ ಕೃಷಿ ಪರಿಕರಗಳ ಪ್ರದರ್ಶನ, ಬೋದಗೂರು ಸಿರಿ ಸಮೃದ್ಧಿ ರೈತ ಕೂಟದಿಂದ ಸಂಕ್ರಾಂತಿಯ ಆಚರಣೆಯನ್ನೇ ಮಾಡಲಾಗಿತ್ತು. ರೈತ ವೆಂಕಟಸ್ವಾಮಿರೆಡ್ಡಿ ಅವರ ಸಿರಿ ಧಾನ್ಯಗಳ ಪ್ರದರ್ಶನ, ಅರಣ್ಯ ಇಲಾಖೆ, ಬೆಸ್ಕಾಂ ಇಲಾಖೆಯ ಮಾಹಿತಿ ನೀಡುವ ಮಳಿಗೆಗಳೂ ಇದ್ದವು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -