ಧರ್ಮದ ಹಾದಿಯಲ್ಲಿ ಸಮಾಜದಲ್ಲಿ ಬದಲಾವಣೆ ತರಲು ಸಿದ್ಧಗಂಗಾ ಶ್ರೀಗಳು ಶಿಕ್ಷಣ ದಾಸೋಹ ನಡೆಸಿದರು. ಅವರ ಸೇವೆಗೆ ಭಕ್ತರು ನಡೆದಾಡುವ ದೇವರೆಂದೇ ಹೇಳಿದ್ದಾರೆ. ಅವರ ಸಂದೇಶ ಇಂದಿನ ಸಮಾಜಕ್ಕೆ ಅಗತ್ಯವಾಗಿದೆ ಎಂದು ತಹಶೀಲ್ದಾರ್ ಅಜಿತ್ಕುಮಾರ್ ರೈ ತಿಳಿಸಿದರು.
ನಗರದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದ ಆವರಣಕ್ಕೆ ಶನಿವಾರ ಸಂಜೆ ಆಗಮಿಸಿದ ಸಿದ್ದಗಂಗಾ ಮಠದ ಶಿವಕುಮಾರಸ್ವಾಮಿಗಳ ವಿವಿಧ ಭಾವಚಿತ್ರಗಳನ್ನೊಳಗೊಂಡು ಸಿಂಗರಿಸಿದ ಶೋಭಾಯಾತ್ರೆಯನ್ನು ಸ್ವಾಗತಿಸಿ ಅವರು ಮಾತನಾಡಿದರು.
ಸಿದ್ದಗಂಗಾ ಮಠದ ಶಿವಕುಮಾರಸ್ವಾಮಿಗಳು 110ನೇ ಜನ್ಮದಿನೋತ್ಸವವನ್ನು ಆಚರಿಸಿಕೊಳ್ಳಲಿದ್ದು, ಭಕ್ತಸಮೂಹ ಈ ಸಂತೋಷಕ್ಕೆ ಸಾಕ್ಷಿಯಾಗಿ ಏಪ್ರಿಲ್ 1 ರಂದು ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಬೃಹತ್ ಗುರುವಂದನಾ ಸಮಾರಂಭವನ್ನು ಹಮ್ಮಿಕೊಂಡಿದ್ದಾರೆ. ಈ ಸಂದರ್ಭಕ್ಕೆ ರಾಜ್ಯದ 12 ಜಿಲ್ಲೆಗಳಲ್ಲಿ ಶ್ರೀಗಳವರ ವಿವಿಧ ಭಾವಚಿತ್ರಗಳನ್ನೊಳಗೊಂಡು ಸಿಂಗರಿಸಿದ ಶೋಭಾಯಾತ್ರೆಯನ್ನು ಕಳುಹಿಸಲಾಗುತ್ತಿದೆ ಎಂದು ಹೇಳಿದರು.
ಈ ಶೋಭಾಯಾತ್ರೆಯ ರಥವು ತಾಲ್ಲೂಕಿನ ಕುಂಬಿಗಾನಹಳ್ಳಿ ಗ್ರಾಮಕ್ಕೆ ಶುಕ್ರವಾರ ರಾತ್ರಿ ಬಂದಿದ್ದು, ಶನಿವಾರ ಬೆಳಿಗ್ಗೆ ಕುಂಬಿಗಾನಹಳ್ಳಿ ಗ್ರಾಮದಲ್ಲಿ ಶಿವಪೂಜೆ ಮತ್ತು ಪ್ರಸಾದವನ್ನು ಮಾಡಿಕೊಂಡು ತಾಲ್ಲೂಕಿನ ಚೀಮಂಗಲ ಗ್ರಾಮಕ್ಕೆ ಶನಿವಾರ ಬೆಳಿಗ್ಗೆ ಬಂದಿತ್ತು.
ಬಸವೇಶ್ವರ ದೇವಾಲಯದಲ್ಲಿ ಪೂಜೆ, ಪಾನಕ, ಸಿಹಿ ಮತ್ತು ಪ್ರಸಾದವನ್ನು ವಿತರಿಸಲಾಯಿತು. ಸಂಜೆ ನಗರದ ಪ್ರಮುಖ ಬೀದಿಗಳಲ್ಲಿ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಿ ಪೂಜ್ಯರ ರಥಕ್ಕೆ ಶ್ರದ್ಧಾಪೂರ್ವಕವಾಗಿ ಗೌರವ ಸಲ್ಲಿಸಲಾಯಿತು.
ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಬಿ.ಸಿ.ನಂದೀಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ವಿ.ನಾಗರಾಜ್, ಚಂದ್ರಶೇಖರ್, ದಾಮೋದರ್, ವೃಷಭೇಂದ್ರಪ್ಪ ಹಾಜರಿದ್ದರು.
- Advertisement -
- Advertisement -
- Advertisement -