‘ಕತ್ತೆಹಾಲು ಬೇಕಾ ಕತ್ತೆ ಹಾಲು, ದಮ್ಮು, ಕೆಮ್ಮು, ವಾಯು, ಕಫ, ಶೀತ, ನೆಗಡಿ ಎಲ್ಲಾ ಮಾಯ ಕತ್ತೆಹಾಲು…., ಮಕ್ಳು ಮರಿ, ದೊಡ್ಡೋರ್, ಚಿಕ್ಕೋರ್ ಎಲ್ಲರಿಗೂ ಕತ್ತೆಹಾಲು….!’ ಇದು ಯಾವುದೋ ನಾಟಕದ ಸಂಭಾಷಣೆಯಲ್ಲ, ಬದಲಾಗಿ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಈಚೆಗೆ ಈ ರೀತಿಯ ಧ್ವನಿಯೊಂದು ಕೇಳಿ ಬರುತ್ತಿತ್ತು.
ಈ ಧ್ವನಿ ಕೇಳಿದೊಡನೇ ಮಹಿಳೆಯರು ಅಡುಗೆ ಮನೆಯಲ್ಲಿದ್ದ ಪುಟ್ಟ ಲೋಟವನ್ನು ಒಂದು ಕೈಲಿ ಹಿಡಿದು ಕಂಕುಳಲ್ಲಿ ಮಗುವನ್ನು ಇನ್ನೊಂದು ಕೈಲಿ ಹಿಡಿದುಕೊಂಡು ಓಡುತ್ತಿದ್ದುದು ಮತ್ತೂ ವಿಶೇಷವಾಗಿತ್ತು. ಕತ್ತೆಯನ್ನಿಡಿದುಕೊಂಡು ಬಂದಿದ್ದ ಮುನಿಯಪ್ಪ, ಒಂದು ವಳಲೆ ಹಾಲನ್ನು ಕರೆದು ಮಹಿಳೆಯರು ತಂದಿದ್ದ ಲೋಟಕ್ಕೆ ಸುರಿದು 100 ರೂ ಪಡೆಯುತ್ತಿದ್ದ. ಮಹಿಳೆಯರು ಬೆಚ್ಚಗಿರುವ ಆ ಹಾಲನ್ನು ಮಕ್ಕಳನ್ನು ತೊಡೆಯ ಮೇಲೆ ಮಲಗಿಸಿಕೊಂಡು ಕುಡಿಸುತ್ತಿದ್ದರು. ಇದನ್ನು ನೋಡಿದ ದೊಡ್ಡವರೂ ನೂರು ರೂಗಳನ್ನು ನೀಡಿ ತಾವೂ ಕುಡಿದರೆ, ಇನ್ನು ಕೆಲವರು ಮನೆಗಳಿಗೆ ಕೊಂಡೊಯ್ಯುತ್ತಿದ್ದರು.
ಕತ್ತೆ ಎಂಬುದು ಅಪಹಾಸ್ಯಕ್ಕೊಳಗಾದ ಪ್ರಾಣಿಯೂ ಹೌದು. ಆದರೆ, ಕತ್ತೆಯ ಹಾಲಿನ ಪೌಷ್ಟಿಕಾಂಶದ ಗುಣ ನಗೆಯ ವಿಷಯವಲ್ಲ. ಕತ್ತೆಯ ಹಾಲೇ ಈಜಿಪ್ಟಿನ ರಾಜಕುಮಾರಿ ಕ್ಲಿಯೋಪಾತ್ರಾಳ ಮಿಂಚುವ ಸೌಂದರ್ಯಕ್ಕೆ ಕಾರಣವಾಗಿತ್ತೆನ್ನಲಾಗಿದೆ. ನವಜಾತ ಶಿಶುಗಳಿಗೆ ಉತ್ತಮ ಔಷಧೀಯ ಸತ್ತ್ವ ಕತ್ತೆಯ ಹಾಲಿನಲ್ಲಿದೆಯೆಂಬುದು ಬಹುತೇಕರ ನಂಬಿಕೆ. ಕತ್ತೆಯ ಹಾಲು ತಾಯಿಯ ಹಾಲಿಗೆ ಸಮಾನವಾದುದಾದರೂ, ಅದರಲ್ಲಿ ಪ್ರೋಟೀನ್ ಹಾಗೂ ಕೊಬ್ಬಿನಾಂಶ ಕಡಿಮೆಯಿದ್ದು, ಲ್ಯಾಕ್ಟೋಸ್ನ ಅಂಶ ಹೆಚ್ಚಿದೆ. ಕತ್ತೆಯ ಹಾಲು ಅಸ್ತಮಾದಿಂದ ಬಳಲುವ ನವಜಾತ ಶಿಶುಗಳಿಗೆ ಅತ್ಯುತ್ತಮ ಔಷಧಿ, ಕ್ಷಯ ಹಾಗೂ ಗಂಟಲು ಬೇನೆಗಳನ್ನು ಅದು ನಿವಾರಿಸುತ್ತದೆಂದು ಆಯುರ್ವೇದದ ತಜ್ಞರೂ ಹೇಳಿರುವುದರಿಂದ ಅದಕ್ಕೆ ಬೇಡಿಕೆ ಕುದುರಿದೆ.
‘ಒಂದು ಕತ್ತೆಯು ದಿನವೊಂದಕ್ಕೆ ಸುಮಾರು 300 ಎಂ.ಎಲ್. ನಿಂದ ಅರ್ಧ ಲೀಟರ್ ಹಾಲು ನೀಡುತ್ತದೆ. ಕತ್ತೆಮರಿಗಳಿಗಳು ಕುಡಿದು ಬಿಟ್ಟಿದ್ದನ್ನು ನಾವು ಹಳ್ಳಿ ಹಳ್ಳಿ ತಿರುಗಿ ಮಾರಾಟ ಮಾಡಬೇಕು. ಹೆಚ್ಚೆಂದರೆ ದಿನಕ್ಕೆ 600 ರಿಂದ 800ರೂ ಸಂಪಾದಿಸುತ್ತೇವೆ. ಸದಾ ಇದನ್ನೇ ನಂಬುವುದೂ ಕಷ್ಟ. ಒಂದೊಂದು ಪ್ರದೇಶದಲ್ಲಿ ಬೀಡುಬಿಟ್ಟು ಸುತ್ತಲಿನ ಹಳ್ಳಿಗಳಲ್ಲಿ ಸುತ್ತಾಡಿ ನಂತರ ವಾಪಸ್ ನಮ್ಮ ಸ್ಥಳಗಳಿಗೆ ತೆರಳುತ್ತೇವೆ’ ಎನ್ನುತ್ತಾರೆ ಕತ್ತೆಯ ಮಾಲೀಕ ಎಚ್.ಕ್ರಾಸ್ ಬಳಿಯಿಂದ ಬಂದ ಮುನಿಯಪ್ಪ.
‘ಕಾರ್ಯವಾಸಿ ಕತ್ತೆಕಾಲು ಹಿಡಿ’ ಎಂಬ ಹಳೆಗಾದೆಯನ್ನು ಈಗ ‘ಕಾಯಿಲೆ ವಾಸಿಗೆ ಕತ್ತೆ ಹಾಲು ಕುಡಿ’ ಎಂದು ಬದಲಾಯಿಸಿಕೊಳ್ಳುವಂತೆ ಕತ್ತೆಹಾಲು ಮಾರಾಟವಾಗುತ್ತಿದೆ. ಇತ್ತ 25 ರೂಗಳಿಗೆ ಒಂದು ಲೀಟರ್ ಹಸುವಿನ ಹಾಲು ಕೊಡುತ್ತೀವಿ ಎಂದರೂ ಮುಖ ಹಾಯಿಸದ ಜನರು ಕತ್ತೆಹಾಲಿಗೆ ಮುಗಿಬಿದ್ದಿರುವುದು ಸೋಜಿಗ ತಂದಿದೆ’ ಎಂದು ಅಪ್ಪೇಗೌಡನಹಳ್ಳಿಯ ತ್ಯಾಗರಾಜ್ ತಿಳಿಸಿದರು.
–ಡಿ.ಜಿ.ಮಲ್ಲಿಕಾರ್ಜುನ.
ಕಾಯಿಲೆ ವಾಸಿಗೆ ಕತ್ತೆ ಹಾಲು ಕುಡಿ
ಅಂಗನವಾಡಿ ನೌಕರರನ್ನು ಸರ್ಕಾರ ಕಡೆಗಣಿಸಿದೆ – ಸಿ.ಐ.ಟಿ.ಯು ಜಿಲ್ಲಾ ಕಾರ್ಯದರ್ಶಿ ಲಕ್ಷ್ಮೀದೇವಮ್ಮ
ಗ್ರಾಮೀಣ ಮಟ್ಟದಲ್ಲಿ ಎಲ್ಲಾ ಸರ್ಕಾರಿ ಯೋಜನೆಗಳನ್ನು ಜಾರಿಗೊಳಿಸಲು ಅಂಗನವಾಡಿ ನೌಕರರನ್ನು ಬಳಸಿಕೊಳ್ಳುತ್ತಾರೆ. ಆದರೆ, ಅವರಿಗೆ ಮಾತ್ರ ಸಮಾನ ವೇತನ ನೀಡದೆ ಸರ್ಕಾರ ಕಡೆಗಣಿಸಿದೆ ಎಂದು ಸಿ.ಐ.ಟಿ.ಯು ಜಿಲ್ಲಾ ಕಾರ್ಯದರ್ಶಿ ಲಕ್ಷ್ಮೀದೇವಮ್ಮ ಆರೋಪಿಸಿದರು.
ಪಟ್ಟಣದ ವಾಸವಿ ಕಲ್ಯಾಣಮಂಟಪದಲ್ಲಿ ಶನಿವಾರ ನಡೆದ ಅಂಗನವಾಡಿ ನೌಕರರ ಸಂಘದ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಐ.ಸಿ.ಡಿ.ಎಸ್ ಯೋಜನೆಯನ್ನು ಬಲಪಡಿಸಬೇಕೆಂದು ಅನೇಕ ಬಾರಿ ಒತ್ತಾಯಿಸಿದ್ದರೂ ಸಹ ಆ ಯೋಜನೆಯನ್ನು ದುರ್ಬಲಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಅಂಗನವಾಡಿ ನೌಕರರು ಜನಗಣತೆ, ದನಕರುಗಳಗಣತಿ, ಚುನಾವಣಾ ಕೆಲಸ, ಸ್ತ್ರೀಶಕ್ತಿ ಸಂಘ ಮುಂತಾದ ಹತ್ತು ಹಲವು ಸರ್ಕಾರಿ ಯೋಜನೆಗಳು ಹಾಗೂ ಮಾಹಿತಿ ಸಂಗ್ರಹಣೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಅಂಗನವಾಡಿ ಕೆಲಸವನ್ನು ಬಿಟ್ಟು ಬೇರೆ ಯಾವ ಕೆಲಸ ಕಾರ್ಯಗಳಲ್ಲಿ ಭಾಗಿಯಾಗದೆ ಹೋರಾಟ ಮಾಡುವ ಅಗತ್ಯವಿದೆ ಎಂದು ಹೇಳಿದರು.
ಸರ್ಕಾರ ಅಂಗನವಾಡಿ ಕೇಂದ್ರಗಳನ್ನು ಖಾಸಗೀಕರಣ ಮಾಡಲು ಹೊರಟಿರುವುದು ದುರದೃಷ್ಟಕರ. ಎನ್.ಜಿ.ಒ ಗಳ ಮುಖಾಂತರ ಕಾರ್ಯಕರ್ತೆಯರಿಗೆ ಕಿರುಕುಳ ಕೊಡುವ ಮುಖಾಂತರ ಮಹಿಳೆಯರ ಮೇಲೆ ದೌರ್ಜನ್ಯವೆಸಗಲಾಗುತ್ತಿದೆ. ಕನಿಷ್ಠ ವೇತನ 10 ಸಾವಿರ ರೂಗಳು ನಿಗದಿಪಡಿಸಬೇಕು. ಬೆಲೆ ಏರಿಕೆ ಆಗುತ್ತಿರುವ ಈ ಸಂದರ್ಭದಲ್ಲಿ ದಿನೇ ದಿನೇ ಅಗತ್ಯವಸ್ತುಗಳ ಬೆಲೆ ಗಗನಕ್ಕೇರುತ್ತಿವೆ. ಆದರೆ ವೇತನ ಮಾತ್ರ ಶ್ರಮಕ್ಕೆ ತಕ್ಕಂತೆ ನೀಡುತ್ತಿಲ್ಲ. ಯಾವುದೇ ಸೇವಾ ಭದ್ರತೆಯಿಲ್ಲದೆ ದುಡಿಯುತ್ತಿರುವ ನಮ್ಮನ್ನು ಸರ್ಕಾರ ಖಾಯಂಗೊಳಿಸಬೇಕೆಂದು ಒತ್ತಾಯಿಸಿದರು.
ಡಿ.ವೈ.ಎಫ್.ಐ ರಾಜ್ಯ ಮುಖಂಡ ಕುಂದಲಗುರ್ಕಿ ಮುನೀಂದ್ರ, ವಿಸ್ಡಂ ನಾಗರಾಜ್, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಅಶ್ವತ್ಥಮ್ಮ, ಕಾರ್ಯದರ್ಶಿ ಮಂಜುಳಾ, ಖಜಾಂಚಿ ಗುಲ್ಜಾರ್, ಉಪಾಧ್ಯಕ್ಷೆ ಭಾಗ್ಯಮ್ಮ, ಶಾಂತಮ್ಮ, ಅರುಣಾ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಸರ್ಕಾರ ಕಣ್ಣು ತೆರೆಯದಿದ್ದಲ್ಲಿ ನಮ್ಮ ಹೋರಾಟದಿಂದ ಕಣ್ತೆರೆಸುತ್ತೇವೆ
ವಿಷಪೂರಿತ ನೀರನ್ನು ಕುಡಿಯುತ್ತಾ ನರಳುತ್ತಿರುವ ಜಿಲ್ಲೆಗೆ ಸರ್ಕಾರ ಶಾಶ್ವತ ನೀರನ್ನು ಕಲ್ಪಿಸದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮುಖಂಡ ಮಳ್ಳೂರು ಹರೀಶ್ ಎಚ್ಚರಿಕೆ ನೀಡಿದರು.
ತಾಲ್ಲೂಕಿನ ನಾಗಮಂಗಲ, ತೊಟ್ಲಗಾನಹಳ್ಳಿ, ತಾದೂರು, ಬಸವಾಪಟ್ಟಣ, ಮಳಮಾಚನಹಳ್ಳಿ, ಭಕ್ತರಹಳ್ಳಿ, ಮೇಲೂರು, ಚೌಡಸಂದ್ರ, ಮಳ್ಳೂರು ಗ್ರಾಮಗಳಲ್ಲಿ ಜಲಜಾಗೃತಿ ಪಾದಯಾತ್ರೆಯನ್ನು ಕೈಗೊಂಡು ಶನಿವಾರ ಅವರು ಮಾತನಾಡಿದರು.
ವಿಷಯುಕ್ತ ಫ್ಲೋರೈಡ್ ನಿಂದಾಗಿ ಜಾನುವಾರುಗಳು ಕೃಷವಾಗಿವೆ. ತಾಯಿಯ ಹಾಲು, ಹಣ್ಣು, ತರಕಾರಿಗಳಲ್ಲೂ ಫ್ಲೋರೈಡ್ ಇರುವುದು ಪತ್ತೆಯಾಗಿದೆ. ತುರ್ತಾಗಿ ನೀರಾವರಿ ಯೋಜನೆ ರೂಪಿಸದಿದ್ದಲ್ಲಿ ನಮ್ಮ ಭಾಗದ ಜನರಿಗೆ ಭವಿಷ್ಯವಿಲ್ಲ. ಒಂದೋ ವಲಸೆ ಹೋಗಬೇಕು, ಇಲ್ಲವಾದಲ್ಲಿ ಖಾಯಿಲೆ ಬಂದು ಸಾಯಬೇಕು. ಜನರಿಗೆ ನಮ್ಮ ಸಂದಿಗ್ಧ ಸ್ಥಿತಿಯ ಮನವರಿಕೆ ಮಾಡಿಕೊಡುತ್ತಿದ್ದೇವೆ. ಸರ್ಕಾರ ಕಣ್ಣು ತೆರೆಯದಿದ್ದಲ್ಲಿ ನಮ್ಮ ಹೋರಾಟದಿಂದ ಕಣ್ತೆರೆಸಬೇಕಾಗುತ್ತದೆ ಎಂದು ಹೇಳಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಮಾತನಾಡಿ, ಕೋಲಾರ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ಕೃಷಿಗಾಗಿ ನೀರಾವರಿ ಯೋಜನೆಗೆ ಆಗ್ರಹಿಸಿ ಅಕ್ಟೋಬರ್ 2 ರ ಗಾಂಧಿ ಜಯಂತಿಯ ದಿನದಿಂದ ಪ್ರಾರಂಭಿಸಿ ಜನಜಾಗೃತಿ ಮತ್ತು ಜಲಜಾಗೃತಿ ಪಾದಯಾತ್ರೆ ನಡೆಸುತ್ತಿದ್ದೇವೆ. ರೈತರೊಂದಿಗೆ ನಗರಪ್ರದೇಶದ ವಿದ್ಯಾವಂತ ಯುವಸಮೂಹ, ಹಾಲು ಉತ್ಪಾದಕರ ಸಹಕಾರಿಗಳು, ಸ್ತ್ರೀಶಕ್ತಿ ಸಂಘಗಳು ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಬಯಲುಸೀಮೆಯ ಪ್ರತೊಯೊಂದು ಕುಟುಂಬವೂ ಹೋರಾಟದಲ್ಲಿ ಭಾಗಿಯಾದಾಗ ಮಾತ್ರ ನಮ್ಮ ನೀರಿನ ಹಕ್ಕನ್ನು ಪಡೆಯಲು ಸಾಧ್ಯ. ಈಗ ನಾವು ಹೋರಾಡದಿದ್ದಲ್ಲಿ ಮುಂದಿನ ಪೀಳಿಗೆಗೆ ಭವಿಷ್ಯವಿಲ್ಲದಂತಾಗುತ್ತದೆ. ಪ್ರತಿಯೊಬ್ಬರೂ ಜಾತ್ಯಾತೀತವಾಗಿ ಪಕ್ಷಾತೀತವಾಗಿ ನೀರಿಗಾಗಿ ಹೋರಾಡುವ ಅಗತ್ಯತೆಯಿದೆ ಎಂದು ಹೇಳಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮುಖಂಡ ಯಲುವಳ್ಳಿ ಸೊಣ್ಣೇಗೌಡ ಮಾತನಾಡಿ ಅಂತರ್ಜಲ ಕುಸಿಯುತ್ತಿರುವ ಪರಿಣಾಮ ಕೃಷಿಯಾಧಾರಿತ ನಮ್ಮ ಜೆಲ್ಲೆಗಳು ಬಂಜರಾಗುತ್ತಿವೆ. ರೈತರು ಸಾಲಗಾರರಾಗುತ್ತಿದ್ದಾರೆ. ನೀರನ್ನು ಕೊಂಡು ಬೇಸಾಯ ಮಾಡುತ್ತಿದ್ದಾರೆ. ಇಂಥಹ ಸ್ಥಿತಿಯನ್ನು ತಲುಪಿರುವ ನಮ್ಮ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸಿರುವುದು ಖಂಡನೀಯ. ಕೃಷಿಕರು ತಮ್ಮ ಮಕ್ಕಳನ್ನು ನಗರಕ್ಕೆ ಕಳುಹಿಸುತ್ತಿರುವ ದುರಂತದ ಬದುಕನ್ನು ನಡೆಸುವಂತಾಗಿದೆ ಎಂದು ನುಡಿದರು.
ರೈತಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾದೂರು ರಮೇಶ್, ತಾದೂರು ಮಂಜುನಾಥ್, ತಮ್ಮಣ್ಣ, ರಾಮೇಗೌಡ, ಕೋದಂಡಪ್ಪ, ಚಂದ್ರಪ್ಪ, ವೆಂಕಟರಾಜು, ಮುನಿರಾಜು, ಟಿ.ವಿ.ಕೃಷ್ಣಪ್ಪ, ಚನ್ನಪ್ಪ, ಮುನಿನಾರಾಯಣಪ್ಪ, ಕನಕರಾಜು, ಪಿಳ್ಳಚಂದ್ರೇಗೌಡ, ಉಮೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸಮಾಜದ ಚಲನಶೀಲ ಬಂಧು; ಪೋಸ್ಟ್ಮ್ಯಾನ್
ಸಣ್ಣ ಊರು ಅಥವಾ ಗ್ರಾಮಗಳಲ್ಲಿ ಪೋಸ್ಟ್ಮ್ಯಾನ್ ಅಥವಾ ಅಂಚೆಯಣ್ಣ ಕೇವಲ ಟಪಾಲು ಬಟವಾಡೆಯ ವೃತ್ತಿಯವನಾಗಿರುವುದಿಲ್ಲ. ಮದುವೆ, ಹೆರಿಗೆ, ಫಲಿತಾಂಶ, ಕೋರ್ಟು ವಾರಂಟು, ಸಾವು, ರೋಗ, ವೃದ್ಧಾಪ್ಯವೇತನ ಎಲ್ಲವನ್ನೂ ಮನೆಮನೆಗೆ ಹಂಚುವ ಅಂತರಂಗದ ಸದಸ್ಯ. ಕಾಗದಗಳ ಕಟ್ಟನ್ನು ಕ್ಯಾರಿಯರಿಗೆ ಸಿಕ್ಕಿಸಿಕೊಂಡು ಬೆವರೊರೆಸಿಕೊಳ್ಳುತ್ತಾ ಸೈಕಲ್ ತುಳಿಯುವ ಈತ ಸಮಾಜದ ಚಲನಶೀಲ ಬಂಧು.
ತಾಲ್ಲೂಕಿನ ಹನುಮಂತಪುರದ ವಾಸಿ ಎಚ್.ಕೆ.ರಮೇಶ್ ಇಂಥ ಚಲನಶೀಲ ಪೋಸ್ಟ್ಮ್ಯಾನ್ಗಳಲ್ಲೊಬ್ಬರು. ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ಅವರು ಹೆಸರಿಗಷ್ಟೇ ಬ್ರಾಂಚ್ ಪೋಸ್ಟ್ ಮಾಸ್ಟರ್. ಆದರೆ ಟಪಾಲು ಸ್ವೀಕಾರ, ಠಸ್ಸೆ ಹೊಡೆಯುವುದು, ರವಾನೆ, ಹಂಚಿಕೆ ಎಲ್ಲವೂ ಅವರೇ ಮಾಡಬೇಕು. ಜೊತೆಯಲ್ಲಿ ಕವರ್, ಕಾರ್ಡ್, ಸ್ಟಾಂಪ್, ಎಸ್ಬಿ, ಆರ್ಡಿ, ಪಿಎಲ್ಐ, ಎಂಓ, ಸ್ಪೀಡ್ಪೋಸ್ಟ್, ರಿಜಿಸ್ಟರ್ಪೋಸ್ಟ್ ಕೂಡ ನಿರ್ವಹಿಸಿ ಲೆಕ್ಕ ಪತ್ರಗಳ ಸಮೇತ ಬ್ಯಾಗ್ ತಯಾರಿಸಬೇಕು.
ಅವರ ಕಾರ್ಯವ್ಯಾಪ್ತಿಗೆ ಕುಂದಲಗುರ್ಕಿ, ದೊಡ್ಡದಾಸೇನಹಳ್ಳಿ, ಚಿಕ್ಕದಾಸೇನಹಳ್ಳಿ, ಚಿಕ್ಕಪಾಪನಹಳ್ಳಿ, ಬಸವನಪರ್ತಿ, ಗೊಲ್ಲಹಳ್ಳಿ, ಸಿದ್ದಾಪುರ, ಗಂಗಾಪುರ ಮತ್ತು ರೊಪ್ಪಾರ್ಲಹಳ್ಳಿ ಬರುತ್ತವೆ. ಬೆಳಿಗ್ಗೆ ಶಿಡ್ಲಘಟ್ಟದ ಕಚೇರಿಯಲ್ಲಿ ಟಪಾಲುಗಳನ್ನು ಪಡೆದು ಕುಂದಲಗುರ್ಕಿಗೆ ಹೋಗಿ ಅಲ್ಲಿಂದ ಸೈಕಲ್ ಏರಿ ತಮ್ಮ ೧೦ ಕಿಮೀ ವ್ಯಾಪ್ತಿಯ ಹಳ್ಳಿಗಳಿಗೆ ತೆರಳಿ ಪತ್ರ ರವಾನಿಸಬೇಕು.
‘೩೦೦ ರೂಗಳಿಗೆ ಒಪ್ಪಂದದ ಮೇರೆಗೆ ೧೯೮೬ರಲ್ಲಿ ಕೆಲಸಕ್ಕೆ ಸೇರಿದೆ. ಈಗ ೩,೦೦೦ ರೂ ಸಂಬಳ ಬರುತ್ತಿದೆ. ತಾತ್ಕಾಲಿಕವಾಗಿ ನೇಮಿಸಿರುವುದರಿಂದ ಇತರೆ ಯಾವುದೇ ಸೌಲಭ್ಯವಿಲ್ಲ. ಅನೇಕ ಮುಷ್ಕರಗಳು ದೇಶದಾದ್ಯಂತ ನಡೆದರೂ ಪರಿಣಾಮಕಾರಿ ಬದಲಾವಣೆಗಳಾಗಿಲ್ಲ. ಮೊಬೈಲ್ ಬಳಕೆಯಿಂದಾಗಿ ಇತ್ತೀಚೆಗೆ ಟೆಲಿಗ್ರಾಂ ಮತ್ತು ಕ್ಷೇಮಸಮಾಚಾರದ ಪತ್ರಗಳು ಕಡಿಮೆಯಾಗಿವೆಯಷ್ಟೆ’ ಎಂದು ರಮೇಶ್ ಹೇಳಿದರು.
‘ಒಮ್ಮೆ ದೊಡ್ಡದಾಸೇನಹಳ್ಳಿಯ ಶಶಿಕಲಾ ಮತ್ತು ಮಂಜುನಾಥ್ ಎಂಬುವವರಿಗೆ ರಿಜಿಸ್ಟರ್ಪೋಸ್ಟ್ ಬಂದಿತ್ತು. ಮಧ್ಯಾಹ್ನ ಟಪಾಲು ಪಡೆದು ಹೋಗಿ ಅವರಿಗೆ ತಲುಪಿಸುವಷ್ಟರಲ್ಲಿ ಸಂಜೆಯಾಗಿತ್ತು. ಮಾರನೇ ದಿನವೇ ಅವರಿಗೆ ಸಂದರ್ಶನವಿತ್ತು. ಇಬ್ಬರೂ ಈಗ ಸಾರಿಗೆ ನಿರ್ವಾಹಕರು. ಅವರು ಸಿಕ್ಕಾಗೆಲ್ಲಾ ನನ್ನ ಕೆಲಸವನ್ನು ಹೊಗಳುವರು’ ಎಂದು ತನ್ನೆಲ್ಲಾ ಕಷ್ಟಗಳ ನಡುವೆಯೂ ನಡೆದಿರುವ ಸಂತಸದ ಸಂಗತಿಯನ್ನು ಅವರು ವಿವರಿಸುತ್ತಾರೆ.
‘ಹತ್ತಾರು ಕಿಮೀ ಸೈಕಲ್ ತುಳಿದು ಹಳ್ಳಿ ಹಳ್ಳಿಗೂ ಪತ್ರ ರವಾನಿಸಿ ಹಿಂತಿರುಗಿ ಬರುವಷ್ಟರಲ್ಲಿ ಕತ್ತಲಾಗಿರುತ್ತದೆ. ಊರಿಗೆ ಬರುವ ಬಸ್ ತಪ್ಪಿದರೆ ಸರಹೊದ್ದಿನಲ್ಲಿ ಹಳ್ಳಿಯಲ್ಲಿರುವ ಮನೆಗೆ ನಡೆದು ಬರಬೇಕು. ಅವರ ಕಷ್ಟ ನೋಡಿದರೆ ಯಾರಿಗೂ ಈ ವೃತ್ತಿ ಕೈಗೊಳ್ಳಲು ಇಷ್ಟವಾಗದು. ಸರ್ಕಾರ ಇಂಥವರಿಗೆ ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಕೊಡುವ ಸೌಲಭ್ಯಗಳನ್ನೇ ನೀಡಬೇಕು’ ಎನ್ನುತ್ತಾರೆ ಹನುಮಂತಪುರದ ನಾಗಭೂಷಣ್.
–ಡಿ.ಜಿ.ಮಲ್ಲಿಕಾರ್ಜುನ
ತಾಲ್ಲೂಕು ಕೂಲಿ ಸಂಘದ ವತಿಯಿಂದ ಪ್ರತಿಭಟನಾ ಮೆರವಣಿಗೆ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲ್ಲೂಕು ಕೂಲಿ ಸಂಘದ ವತಿಯಿಂದ ಶುಕ್ರವಾರ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು.
ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಗೋಶಾಲೆಗಳನ್ನು ತೆರೆದು ಜಾನುವಾರುಗಳ ರಕ್ಷಣೆ ಮಾಡಬೇಕು. ಮಳೆಯ ವೈಫಲ್ಯದಿಂದ ಬೆಳೆ ನಷ್ಟ ಪರಿಹಾರವನ್ನು ನೀಡಬೇಕು. ಪ್ರತಿ ಗ್ರಾಮಕ್ಕೊಂದು ನ್ಯಾಯಬೆಲೆ ಅಂಗಡಿಯನ್ನು ತೆರೆಯಬೇಕು. ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಬೇಕು. 2013–14ನೇ ಸಾಲಿನ ಪಡಿತರಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೆ ಕೂಡಲೇ ಪಡಿತರ ಚೀಟಿ ವಿತರಿಸಬೇಕು. ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸಬೇಕು. 2011–12 ನೇ ಸಾಲಿನ ತಾಲ್ಲೂಕಿನ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಕಡ್ಡಾಯವಾಗಿ ಪಿ.ಡಿ.ಒ ಮತ್ತು ಕಾರ್ಯದರ್ಶಿಗಳನ್ನು ನೇಮಿಸಬೇಕು ಹಾಗೂ ಅವರು ಕೇಂದ್ರ ಸ್ಥಾನದಲ್ಲಿ ವಾಸವಾಗುವಂತೆ ಆದೇಶಿಸಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟಿಸಿ ಶಿರಸ್ತೆದಾರರಿಗೆ ಮನವಿ ಸಲ್ಲಿಸಿದರು.
ವೆಂಕಟನರಸಪ್ಪ, ವೆಂಕಟರಾಯಪ್ಪ, ಕೆ.ಕೃಷ್ಣಾರೆಡ್ಡಿ, ಅನೀತಾ, ಎಂ.ವೆಂಕಟೇಶ್, ಪುಷ್ಪ. ಕಾಂತರಾಜ್, ಮುನಿರಾಜ್, ನಾಗಾರ್ಜುನ, ನಾರಾಯಣಸ್ವಾಮಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ನಮ್ಮ ಕೆರೆಗಳಿಗೆ ನೀರು ಹರಿಯದೇ, ಅಂತರ್ಜಲ ವೃದ್ಧಿಸದಿದ್ದಲ್ಲಿ ನಮಗೆ ಉಳಿಗಾಲವಿಲ್ಲ
ಫ್ಲೋರೈಡ್ ಅಂಶವಿದೆಯೆಂಬ ಕಾರಣಕ್ಕೆ ನಮ್ಮ ಭಾಗದ ಪ್ರಸಿದ್ಧ ಮಾವು ವಿದೇಶಕ್ಕೆ ರಫ್ತಾಗದಂತೆ ತಿರಸ್ಕಾರಗೊಂಡಿರುವುದು ನಮ್ಮ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ತಿಳಿಸಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಜನಜಾಗೃತಿ ಮತ್ತು ಜಲಜಾಗೃತಿ ಪಾದಯಾತ್ರೆಯ ಮೂಲಕ ಚಿಕ್ಕಬಳ್ಳಾಪುರ ಕೋಲಾರ ಜಿಲ್ಲೆಗಳಲ್ಲಿ ಸುಮಾರು 200 ಕಿ.ಮೀ ಕ್ರಮಿಸಿ ಚೀಮಂಗಲಕ್ಕೆ ಆಗಮಿಸಿದ ಅವರು ಜನರನ್ನುದ್ದೇಶಿಸಿ ಮಾತನಾಡಿದರು.
ಎಲ್ಲೆಲ್ಲೂ ಈಗ ವಿಷಯುಕ್ತ ಫ್ಲೋರೈಡ್ ಅಂಶ ಕಾಣಿಸಿಕೊಳ್ಳುತ್ತಿದೆ. ಬಯಲುಸೀಮೆಯ ಜನ ಈ ದುರಂತಮ ಸ್ಥಿತಿಯಲ್ಲಿದ್ದರೆ, ಅತ್ತ ಬೆಂಗಳೂರಿನ ಜನಕ್ಕೆ 2050 ರ ಹೊತ್ತಿಗೆ ಎಷ್ಟು ನೀರು ಬೇಕಾಗಬಹುದು, ಅದಕ್ಕಾಗಿ ಏನೇನು ಕ್ರಮ ಕೈಗೊಳ್ಳಬೇಕೆಂದು ವರದಿ ರೂಪಿಸಲು ಸರ್ಕಾರ ತ್ಯಾಗರಾಜನ್ ಸಮಿತಿಯನ್ನು ನೇಮಿಸಿದೆ. ಅಲ್ಲಿನ ಜನಕ್ಕೆ ಕುಡಿಯಲು ಬೇಕಾಗುವ 88 ಟಿ.ಎಂ.ಸಿ ನೀರನ್ನೊದಗಿಸಲು ಕ್ರಮ ಕೈಗೊಳ್ಳಲು ಮುಂದಾಗುವ ಸರ್ಕಾರ ನಮ್ಮ ಈಗಿನ ದುಸ್ಥಿತಿ ಕೊಂಚವೂ ತಲೆಕೆಡಿಸಿಕೊಳ್ಳುತ್ತಿಲ್ಲ. ನಗರಗಳಿಗೆ ಹಣ್ಣು, ಹಾಲು, ತರಕಾರಿ ಬೆಳೆದು ಒದಗಿಸಬಲ್ಲ ಫಲವತ್ತಾದ ಭೂಮಿ, ಶಕ್ತ ಜನರು ನೀರಿಲ್ಲದೆ ಗುಳೆ ಹೋಗುವ ಹಾಗೂ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಲ್ಲಿದ್ದೇವೆ. ನಮ್ಮ ಹೋರಾಟವನ್ನು ದಿಕ್ಕುತಪ್ಪಿಸಲೆಂದು ಗುತ್ತಿಗೆದಾರರ ಅನುಕೂಲಕ್ಕಾಗಿ ಎತ್ತಿನಹೊಳೆ ಯೋಜನೆಯನ್ನು ರೂಪಿಸಿ ನಮಗೆ ಸರ್ಕಾರ ಮೋಸ ಮಾಡಿದೆ. ನಮ್ಮ ಕೆರೆಗಳಿಗೆ ನೀರು ಹರಿಯದೇ ಅಂತರ್ಜಲ ವೃದ್ಧಿಸದಿದ್ದಲ್ಲಿ ನಮಗೆ ಉಳಿಗಾಲವಿಲ್ಲ ಎಂದು ಹೇಳಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾ ಮುಖಂಡ ಮಳ್ಳೂರು ಹರೀಶ್ ಮಾತನಾಡಿ, ಇದುವರೆಗೂ ನಮ್ಮನ್ನಾಳಿದ ಯಾವುದೇ ಸರ್ಕಾರ ಬಯಲು ಸೀಮೆ ಪ್ರದೇಶದ ಬಗ್ಗೆ ಕಾಳಜಿ ವಹಿಸದೆ ನೀರಾವರಿ ಯೊಜನೆಗಳನ್ನು ಮಾಡದ ಕಾರಣ ನಾವೆಲ್ಲಾ ಜಾಗೃತರಾಗುವ ಅಗತ್ಯ ಉಂಟಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರೂ ಒಗ್ಗೂಡಿ ದೊಡ್ಡ ಮಟ್ಟದ ಹೋರಾಟ ಮಾಡಿ ಸರ್ಕಾರವನ್ನು ಜಾಗೃತಗೊಳಿಸಬೇಕಿದೆ. ನಾವೆಲ್ಲರೂ ಮತ ಹಾಕುತ್ತೇವೆ ಮತ್ತು ತೆರಿಗೆ ಕಟ್ಟುತ್ತೇವೆ. ಆದರೆ ಸರ್ಕಾರಗಳು ಮಾತ್ರ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಸವರುವ ನೀತಿ ಅನುಸರಿಸುತ್ತಿವೆ. ಉತ್ತರ ಕರ್ನಾಟಕದ ಜನರಿಗಾಗಿ 750 ಟಿ.ಎಂ.ಸಿ ನೀರಿನ ಯೋಜನೆ, ಮೈಸೂರಿನ ಭಾಗದ ಜನರಿಗಾಗಿ 250 ಟಿ.ಎಂ.ಸಿ.ನೀರಿನ ಯೋಜನೆ ರೂಪಿಸಿದ್ದಾರೆ. ಆದರೆ ನಾವು ಬಯಲುಸೀಮೆಯ ಜನ ಯಾವ ಪಾಪವನ್ನು ಮಾಡಿದ್ದೇವೆಂದು ನಮಗಾಗಿ ಯಾವ ಯೋಜನೆಗಳೂ ರೂಪುಗೊಳ್ಳುತ್ತಿಲ್ಲ. ಚುನಾವಣೆಗೆ ಮುಂಚೆ ನೀಡಿದ ಆಶ್ವಾಸನೆಗಳೆಲ್ಲ ಏನಾದವು ಎಂದು ಪ್ರಶ್ನಿಸಿದರು.
ಹಲವು ವರ್ಷಗಳ ಹಿಂದೆ ಕೆರೆಗಳಿಂದ ನೀರನ್ನು ಬಳಸುತ್ತಿದ್ದೆವು. ಆದರೆ ಈಗ ಕೆರೆಗಳೆಲ್ಲ ಒಣಗಿವೆ. ಬಾವಿಗಳನ್ನು ತೋಡಿಸಲು ಹಣ ಖರ್ಚು ಮಾಡಿದೆವು. ಬಾವಿಗಳಲ್ಲಿ ಗರಂಡ ಕಟ್ಟಿದೆವು. ಅದು ಕೂಡ ವ್ಯರ್ಥವಾಯಿತು. ಭೂಮಿಯನ್ನು ಬಗೆದು 250 ರಿಂದ 300 ಅಡಿ ಆಳದವರೆಗೂ ಕೊಳವೆ ಬಾವಿಗಳನ್ನು ತೋಡಿದ್ದು, ವಿದ್ಯುತ್ ಅಭಾವದಿಂದ ಕಟ್ಟಿದ ಕಲ್ಲಿನ ತೊಟ್ಟಿಗಳು ಎಲ್ಲ ವ್ಯರ್ಥವಾಗಿ 1000 ದಿಂದ ಸಾವಿರದೈನೂರು ಅಡಿ ಆಳದವರೆಗೂ ಕೊಳವೆ ಬಾವಿಗಳನ್ನು ಕೊರೆದು ಹನಿನೀರಾವರಿಯ ಪೈಪುಗಳನ್ನು ಅಳವಡಿಸಿದ್ದರೂ ನೀರಿಲ್ಲದೆ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ದುಸ್ಥಿತಿ ರೈತರದ್ದಾಗಿದೆ. ನೀರಿಗಾಗಿ ಬಯಲು ಸೀಮೆಯ ಜನರು ಮಾಡಿರುವ ಖರ್ಚಿನಲ್ಲಿ ಎರಡು ನೀರಾವರಿ ಯೋಜನೆಗಳನ್ನು ರೂಪಿಸಬಹುದಾಗಿತ್ತು ಎಂದು ನುಡಿದರು.
ಪ್ರತಿದಿನ 25 ರಿಂದ 30 ಕಿ.ಮೀ ಪಾದಯಾತ್ರೆ ನಡೆಸುತ್ತಾ ಬಯಲು ಸೀಮೆಯ 153 ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಸುಮಾರು 55 ರಿಂದ 60 ದಿನಗಳ ಕಾಲ ಜಲ ಜಾಗೃತಿ ಮತ್ತು ಜನ ಜಾಗೃತಿಯನ್ನು ಶಾಶ್ವತ ನೀರಾವರಿ ಹೋರಾಟಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ನೀರಿಗಾಗಿ ಹೋರಾಟದಲ್ಲಿ ಭಾಗಿಯಾದಾಗ ಮಾತ್ರ ನಮಗೆ ನೀರು ಬರುತ್ತದೆ ಎಂದರು.
ರೈತಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಸರ್ಕಾರದ ವರದಿಯ ಪ್ರಕಾರ ಎತ್ತಿನಹೊಳೆ ಯೋಜನೆಯಿಂದ ನಮ್ಮ ಭಾಗಕ್ಕೆ ಬರುವುದು ಕೇವಲ ಎರಡೂವರೆ ಟಿ.ಎಂ.ಸಿ ನೀರು ಮಾತ್ರ. ಜಿಲ್ಲೆಯ 2,15,360 ಹೆಕ್ಟೇರ್ ಕೃಷಿ ಭೂಮಿ, ಸಾವಿರಾರು ದನಕರುಗಳು, ಲಕ್ಷಾಂತರ ಜನ, 3,800 ಕೆರೆ ಕುಂಟೆಗಳಿಗೆ ಎಷ್ಟು ನೀರು ಬೇಕೆಂಬ ಮಾಹಿತಿ ಸರ್ಕಾರದ ಬಳಿಯಿಲ್ಲ. ನಾವೀಗ ರಾಜಕಾರಣಿಗಳನ್ನು ನೆಚ್ಚಿ ಕೂರುವಂತಿಲ್ಲ. ಮರಳು ಮಾಫಿಯಾ ತಡೆಯುವಲ್ಲಿ ಪೊಲೀಸ್ ಇಲಾಖೆ ಮತ್ತು ಜಿಲ್ಲಾಢಳಿತ ವಿಫಲವಾಗಿದೆ. ಪ್ರತಿ ಕುಟುಂಬದವರೂ ಆಲ, ಬೇವು, ಹಾಗೂ ಹಣ್ಣಿನ ಮರಗಳನ್ನು ಮಕ್ಕಳಂತೆ ಬೆಳೆಸಿ ಪ್ರಕೃತಿ ಮಳೆಯ ರೂಪದಲ್ಲಿ ವರವನ್ನು ನೀಡುತ್ತದೆ. ಗುಂಡು ತೋಪುಗಳನ್ನು ಉಳಿಸಿಕೊಳ್ಳಿ ಎಂದು ಹೇಳಿದರು.
ರಾಜಣ್ಣ, ರಂಗನರಸಿಂಹಯ್ಯ, ನಿವೃತ್ತ ತಹಶಿಲ್ದಾರ್ ವೆಂಕಟೇಶ್, ಈಶ್ವರ್, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಮುನಿರಾಜು, ನಾಗಪ್ಪ, ಕೃಷ್ಣಪ್ಪ, ವೆಂಕಟ್, ರಾಮಕೃಷ್ಣಪ್ಪ, ಮಂಜುನಾಥ್, ವೇಣು, ಛಲಪತಿ, ನಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಗಂಗಾದೇವಿ ದೇವಾಲಯದಲ್ಲಿ ವಿಮಾನಗೋಪುರದ ಕುಂಭಾಭಿಷೇಕ ಪೂಜಾ ಮಹೋತ್ಸವ
ತಾಲ್ಲೂಕಿನ ಮೇಲೂರು ಗ್ರಾಮದ ಪುರಾಣ ಪ್ರಸಿದ್ಧ ಗಂಗಾದೇವಿ ದೇವಾಲಯದಲ್ಲಿ ಬುಧವಾರ ವಿಮಾನಗೋಪುರದ ಕುಂಭಾಭಿಷೇಕ ಪೂಜಾ ಮಹೋತ್ಸವವನ್ನು ಬುಧವಾರ ವಿಜೃಂಭಣೆಯಿಂದ ನೆರವೇರಿಸಲಾಯಿತು.
ತಾಲ್ಲೂಕಿನ ಮೇಲೂರು ಗ್ರಾಮದ ಗಂಗಾದೇವಿ ದೇವಾಲಯದಲ್ಲಿ ನೂತನವಾಗಿ 25 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ವಿಮಾನಗೋಪುರದ ಕುಂಭಾಭಿಷೇಕ ಪೂಜಾ ಮಹೋತ್ಸವ ಅಂಗವಾಗಿ ದೇವಾಲಯದಲ್ಲಿ ಬೆಳಗ್ಗೆ ೪ ಗಂಟೆಯಿಂದಲೇ ವಿಶೇಷ ಕಾರ್ಯಗಳನ್ನು ಆಯೋಜಿಸಲಾಗಿತ್ತು.

ಮೇಲೂರು, ಮಳ್ಳೂರು, ಚೌಡಸಂದ್ರ, ಗಂಗನಹಳ್ಳಿ, ಕಂಬದಹಳ್ಳಿ, ಭಕ್ತರಹಳ್ಳಿ, ಮುತ್ತೂರು, ಕೊಂಡೇನಹಳ್ಳಿ, ಅಪ್ಪೇಗೌಡನಹಳ್ಳಿ, ಕೇಶವಪುರ ಸೇರಿದಂತೆ ಸುತ್ತಲಿನ ಗ್ರಾಮಗಳಿಂದ ಭಕ್ತಾದಿಗಳು ಪೂಜಾ ಕಾರ್ಯಗಳಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಮವನ್ನೆಲ್ಲಾ ವಿಶೇಷವಾಗಿ ಅಲಂಕರಿಸಲಾಗಿತ್ತು. ಪ್ರಮುಖ ಬೀದಿಗಳನ್ನು ಹಾಗೂ ದೇವಾಲಯದ ಸುತ್ತಮುತ್ತ ವಿದ್ಯುತ್ ದೀಪಗಳಿಂದ ಮತ್ತು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಮಹಿಳೆಯರು ಕಳಶ ಹೊತ್ತು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ದೇವರಿಗೆ ಪೂಜೆ ಸಲ್ಲಿಸಿದರು.
ಚಿಕ್ಕಬಳ್ಳಾಪುರದ ಆದಿಚುಂಚನಗಿರಿ ಮಠದ ಮಂಗಳಾನಂದ ಸ್ವಾಮೀಜಿ, ವಿಜಯಪುರದ ಬಸವಕಲ್ಯಾಣ ಮಠದ ಮಹದೇವಸ್ವಾಮಿ, ಶಾಸಕ ಎಂ.ರಾಜಣ್ಣ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಯಲುವಳ್ಳಿ ರಮೇಶ್, ಮಾಜಿ ನಿರ್ದೇಶಕ ಸದಾಶಿವರೆಡ್ಡಿ, ಜಿಲ್ಲಾ ಪಂಚಾಯತಿ ಸದಸ್ಯೆ ಶಿವಲೀಲಾ ರಾಜಣ್ಣ, ದೇವಾಲಯದ ಧರ್ಮದರ್ಶಿ ಜೆ.ಜೆ.ಗೌಡ, ರಾಮಕೃಷ್ಣಪ್ಪ, ಅಶ್ವತ್ಥಪ್ಪ, ಶ್ರೀನಿವಾಸರೆಡ್ಡಿ, ಭೀಮಣ್ಣನವರ ನಾರಾಯಣಸ್ವಾಮಿ, ಸೂರ್ಯನಾರಾಯಣಗೌಡ, ಕೆ.ಮಂಜುನಾಥ್, ರವಿಕುಮಾರ್, ಉಮೇಶ್, ಕೆ.ಎಸ್.ಮಂಜುನಾಥ್, ಎಚ್.ಟಿ.ನಾರಾಯಣಸ್ವಾಮಿ, ಎಂ.ಜೆ.ಶ್ರೀನಿವಾಸ್, ಆಗಮೀಕ ನಾಗಪ್ರಸಾದಶರ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಆಚರಣೆ
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಚೆಂಗಲರಾಯರೆಡ್ಡಿ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು.
ಹಂಡಿಗನಾಳ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ವಾಲ್ಮೀಕಿ ಜಯಂತಿ ಆಚರಣೆ
ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಬುಧವಾರ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಕೆ.ಪಿ.ಸಿ.ಸಿ.ಉಪಾಧ್ಯಕ್ಷ ವಿ.ಮುನಿಯಪ್ಪ ಪೂಜೆ ಸಲ್ಲಿಸಿದರು. ಗ್ರಾಮ ಪಂಚಾಯತಿ ಅಧ್ಯಕ್ಷೆ ಅಂಬುಜಮ್ಮ, ಉಪಾಧ್ಯಕ್ಷ ಮುನಿನಾರಾಯಣಪ್ಪ, ಮಾಜಿ ಅಧ್ಯಕ್ಷ ಅಶ್ವಥ್ಥಬಾಬು, ಸದಸ್ಯರಾದ ಕಾಂತರಾಜು, ಪಿಳ್ಳಮುನಿಯಪ್ಪ, ಶ್ರೀನಿವಾಸಯ್ಯ, ವೆಂಕಟೇಶಯ್ಯ, ನಾಗಮ್ಮ, ಭಾಗ್ಯಮ್ಮ ಹಾಜರಿದ್ದರು.
ವಾಲ್ಮೀಕಿ ಮಹರ್ಷಿ ಜಯಂತಿ ಮಹೋತ್ಸವ
ತಾಲ್ಲೂಕಿನಾದ್ಯಂತ ಬುಧವಾರ ವಾಲ್ಮೀಕಿ ಮಹರ್ಷಿ ಜಯಂತಿ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ತಾಲ್ಲೂಕಿನ ಮಸ್ತಕಾಚಲ, ತಲಕಾಯಲಬೆಟ್ಟ, ತಲೆಕಾಯ್ದಬೆಟ್ಟ, ತಲಕಾಚಿನಕೊಂಡ ಮುಂತಾದ ಹೆಸರಿನಿಂದ ಕರೆಯಲ್ಪಡುವ ತಲಕಾಯಲಬೆಟ್ಟದಲ್ಲಿಯೇ ಪುರಾತನ ಕಾಲದಲ್ಲಿ ರಾಮಾಯಣ ಮಹಾಕಾವ್ಯ ಬರೆದ ವಾಲ್ಮೀಕಿ ಮಹರ್ಷಿ ಜನಿಸಿದ ಹಾಗೂ ಬಾಲ್ಯ ಯೌವನವನ್ನು ಕಳೆದನೆಂಬ ಪ್ರತೀತಿಯಿದೆ. ತಲಕಾಯಲಬೆಟ್ಟದಲ್ಲಿರುವ ವಾಲ್ಮೀಕಿ ಮಹರ್ಷಿಯ ಗುಹೆ ಮತ್ತು ಮೂರ್ತಿಗೆ ಪೂಜೆ ಸಲ್ಲಿಸಿದ ನಂತರ ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿರುವ ವಾಲ್ಮೀಕಿ ಮಹರ್ಷಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಶಾಸಕ ಎಂ.ರಾಜಣ್ಣ ಚಾಲನೆ ನೀಡಿದರು.
‘ಪ್ರಪಂಚವಿರುವವರೆಗೂ ಉಳಿಯುವಂತಹ ಮಹಾಕಾವ್ಯ ರಾಮಾಯಣ. ಮಹರ್ಷಿ ವಾಲ್ಮೀಕಿ ರಚಿಸಿರುವ ಈ ಮಹಾಕಾವ್ಯದಲ್ಲಿರುವ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಶಾಸಕ ಎಂ.ರಾಜಣ್ಣ ಈ ಸಂದರ್ಭದಲ್ಲಿ ತಿಳಿಸಿದರು.
ಮಯೂರ ವೃತ್ತದ ಬಳಿಯಿರುವ ವಾಲ್ಮೀಕಿ ದೇವಾಲಯದಲ್ಲಿ ಪೂಜೆಯನ್ನು ನೆರವೇರಿಸಿದ ನಂತರ ಪ್ರಮುಖ ಬೀದಿಗಳಲ್ಲಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರದೊಂದಿಗೆ ಮೆರವಣಿಗೆಯನ್ನು ನಡೆಸಲಾಯಿತು.
[lightbox thumb=”http://www.sidlaghatta.com/wp-content/uploads/2014/10/8oct2.jpg”]ತಾಲ್ಲೂಕಿನ ನಾನಾ ಗ್ರಾಮಗಳಿಂದ ಆಗಮಿಸಿದ್ದ ಟ್ರಾಕ್ಟರ್ ಮತ್ತು ಟೆಂಪೋಗಳಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರವನ್ನು ಹೂಗಳಿಂದ ಅಲಂಕರಿಸಿ ಪ್ರಮುಖ ಬೀದಿಗಳಲ್ಲಿ ಸಾಗಿದರು. ಮಕ್ಕಳು ಮತ್ತು ದೊಡ್ಡವರು ವಾಲ್ಮೀಕಿ, ಸೀತೆ, ರಾಮ, ಲಕ್ಷ್ಮಣ, ಲವ, ಕುಶ ಮುಂತಾದ ವಿವಿಧ ಪೌರಾಣಿಕ ವೇಷಧಾರಿಗಳಾಗಿ ಎಲ್ಲರನ್ನೂ ಆಕರ್ಷಿಸಿದರು. ಗಾರಡಿ ಬೊಂಬೆಗಳು, ಮಹಿಳಾ ಡೊಳ್ಳು ಕುಣಿತದ ತಂಡ ಮತ್ತಿತರ ವೇಷಧಾರಿಗಳು ಜನರನ್ನು ರಂಜಿಸಿದರು.
ಜಿಲ್ಲಾ ವಾಲ್ಮೀಕಿ ಸಭಾ ಅಧ್ಯಕ್ಷ ಬಂಕ್ ಮುನಿಯಪ್ಪ, ತಾಲ್ಲೂಕು ಅಧ್ಯಕ್ಷ ಕೃಷ್ಣಪ್ಪ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಪ್ರಭಾರಿ ಗಣಪತಿ ಸಾಕರೆ, ಸಿ.ಡಿ.ಪಿ.ಒ ಲಕ್ಷ್ಮೀದೇವಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎನ್.ಮುನಿಯಪ್ಪ, ರಾಜೇಂದ್ರ, ಮಂಜುನಾಥ್, ಓ.ಟಿ.ಕೃಷ್ಣಪ್ಪ, ನಾರಾಯಣಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

