ಶಿಡ್ಲಘಟ್ಟ ತಾಲ್ಲೂಕಿನ ಬೆಳ್ಳೂಟಿ ಗ್ರಾಮದಲ್ಲಿ ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಜನಪರ ಜಾನಪದ ಕಲೋತ್ಸವ ಸಂಭ್ರಮದ ವಾತಾವರಣವನ್ನು ಸೃಷ್ಟಿಸಿತ್ತು. ಸ್ಥಳೀಯ ಕಲಾವಿದರು ಸೇರಿದಂತೆ 19 ಕಲಾ ತಂಡಗಳು ಭಾಗವಹಿಸಿ ಕಲಾ ಪ್ರದರ್ಶನವನ್ನು ನಡೆಸಿಕೊಟ್ಟವು.
ನಾಡೊಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಮತ್ತು ತಂಡದಿಂದ ತಮಟೆ ವಾದನ, ಗೊಲ್ಲಹಳ್ಳಿ ಶಿವಪ್ರಸಾದ್ ಮತ್ತು ತಂಡದ ಜನಪದ ಗಾಯನ, ಗನಾ ಅಶ್ವತ್ಥ್ ಅವರ ಸುಗಮ ಸಂಗೀತ, ಮುನಿರೆಡ್ಡಿ ಮತ್ತು ತಂಡದ ಕೊಂಡಮಾಮನ ಪದಗಳು, ಈಧರೆ ಪ್ರಕಾಶ್ ಮತ್ತು ತಂಡದಿಂದ ಗೀಗೀ ಪದ, ದೇವರಮಳ್ಳೂರು ಮಹೇಶ್ ಮತ್ತು ತಂಡದಿಂದ ಜನಪದ ಗಾಯನ, ಜಂಬೆ ಬಾಲು ಮತ್ತು ತಂಡದಿಂದ ಜಂಬೆ ಜಲಕ್, ಯಶ್ವಂತ್ ಡಾನ್ಸ್ ಅವರಿಂದ ಜಾನಪದ ನೃತ್ಯ, ಸಿಂಧೂರ ನೃತ್ಯ ಕಲಾ ಅಕಾಡೆಮಿಯಿಂದ ಜಾನಪದ ನೃತ್ಯ, ಕವಿತ ಮತ್ತು ತಂಡದಿಂದ ಸಮೂಹ ನೃತ್ಯ, ಎಂ.ಸಿ.ಜ್ಯೋತಿ ಅವರಿಂದ ಜನಪದ ಗೀತೆ, ಎನ್.ಎಂ.ನಾರಾಯಣಪ್ಪ ಅವರಿಂದ ಜನಪದ ಗೀತೆ, ರಾಜಪ್ಪ ಮತ್ತು ತಂಡದಿಂದ ಹರಿಕಥೆ, ಗೊಟ್ಲಕುಂಟೆ ಗ್ರಾಮೀಣ ಕಲಾ ತಂಡದಿಂದ ನಾಸಿಕ್ ಡೊಳ್ಳು, ಆರ್.ಡಿ.ಮಂಜುನಾಥ್ ಮತ್ತು ತಂಡದಿಂದ ಕರಗ ನೃತ್ಯ, ಮುನಿಕೃಷ್ಣಪ್ಪ ಮತ್ತು ತಂಡದಿಂದ ಕೀಲು ಕುದುರೆ, ವೈ.ಟಿ.ಪ್ರಸನ್ನ ಮತ್ತು ತಂಡದಿಂದ ಡೊಳ್ಳು ಕುಣಿತ, ಆಂಜಿನಪ್ಪ ಮತ್ತು ತಂಡದಿಂದ ತಮಟೆ ವಾದನ, ನರಸಿಂಹಮೂರ್ತಿ ಮತ್ತು ತಂಡದಿಂದ ಅರೆ ವಾದ್ಯ ಪ್ರದರ್ಶನಗಳು ನಡೆದವು.
ಶಾಸಕ ವಿ ಮುನಿಯಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಗ್ರಾಮ ಪಂಚಾಯಿತಿ ಪಿಡಿಒ ಕಾತ್ಯಾಯಿನಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರವತಿ, ಸದಸ್ಯರಾದ ಪ್ರೇಮ, ಸಂತೋಷ್, ದೇವರಾಜು, ಗ್ರಾಮದ ಮುಖಂಡರು ಮುನಿಕೆಂಪಣ್ಣ, ಮುನೇಗೌಡ, ರಾಮಕೃಷ್ಣ, ಚನ್ನಪ್ಪ ಹಾಜರಿದ್ದರು.
ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಗುರುವಾರ ಮಹಾಶಿವರಾತ್ರಿ ಆಚರಣೆ ಅಂಗವಾಗಿ ಎಲ್ಲಾ ಶಿವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ಶಿವ ದೇವಾಲಯಗಳಲ್ಲಿ ಭಕ್ತರು ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಎಲ್ಲೆಡೆ ದೇವಾಲಯಗಳಲ್ಲಿ ಪೂಜೆ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.
ಭಕ್ತರು ಪಂಚಲಿಂಗಗಳಾದ ಅಶೋಕ ರಸ್ತೆಯಲ್ಲಿರುವ ಕೋಟೆ ಸೋಮೇಶ್ವರ ಮತ್ತು ಪೇಟೆ ನಗರೇಶ್ವರ, ಕಾಶಿ ವಿಶ್ವನಾಥೇಶ್ವರ, ಅಗ್ರಹಾರ ಬೀದಿಯ ಜಲಕಂಠೇಶ್ವರ ಮತ್ತು ಏಕಾಂಬರೇಶ್ವರ ದೇವಾಲಯಗಳನ್ನು ದರ್ಶಿಸಿ ಎರಡು ಕಿಮೀ ದೂರವಾದರೂ ನಡೆದುಕೊಂಡೇ ವೀರಾಪುರದ ಗವಿಗಂಗಾಧರೇಶ್ವರ ಮತ್ತು ಬೂದಾಳದ ಮಲೆಮಲ್ಲೇಶ್ವರ ದೇವಾಲಯಗಳನ್ನು ಸಂದರ್ಶಿಸುತ್ತಿದ್ದುದು ವಿಶೇಷವಾಗಿತ್ತು.
ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರಿನ ಸಾಯಿಬಾಬಾ ಮಂದಿರದಲ್ಲಿ ಜಲಕಂಠೇಶ್ವರಸ್ವಾಮಿ, ಶಿವರಾತ್ರಿಯಂದು ಬೆಳಗ್ಗೆ ಸೂರ್ಯಕಿರಣ ಲಿಂಗವನ್ನು ಸ್ಪರ್ಶಿಸುವ ಚೌಡಸಂದ್ರದ ಸೋಮೇಶ್ವರ ದೇಗುಲ, ರಾಮ ಮತ್ತು ಈಶ್ವರ ಒಂದೆಡೆ ನೆಲೆಸಿರುವ ರಾಮಲಿಂಗೇಶ್ವರ ಬೆಟ್ಟ ಮುಂತಾದೆಡೆ ವಿಶೇಷ ಪೂಜೆಗಳು ನಡೆದವು.
ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಬುಧವಾರ ರಾಷ್ಟ್ರೀಯ ನಾಡ ಹಬ್ಬಗಳ ಆಚರಣ ಸಮಿತಿ ವತಿಯಿಂದ ಆಚರಿಸಿದ ದಲಿತ ವಚನಕಾರರ ಜಯಂತಿ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಬಿ.ಎಸ್ ರಾಜೀವ್ ಮಾತನಾಡಿದರು.
ದಲಿತ ವಚನಕಾರರು ಸಮಾಜದಲ್ಲಿ ತಳವೂರಿದ ಅನೇಕ ಸಮಸ್ಯೆಗಳ ಜೊತೆಗೆ ಅಸಮಾನತೆ ಮತ್ತು ತಾರತಮ್ಯವನ್ನು ತೊಡೆದುಹಾಕಲು ಶ್ರಮಿಸಿದರು. ಆದರ್ಶ ವ್ಯಕ್ತಿಗಳು, ಸಮಾಜ ಸುಧಾರಕರು, ಶರಣರ ವಚನಗಳನ್ನು ಪಾಲಿಸುವ ಮೂಲಕ ಉತ್ತಮ ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕಿದೆ ಎಂದು ಅವರು ತಿಳಿಸಿದರು.
ದಲಿತ ಮುಖಂಡ ಮೇಲೂರು ಮಂಜುನಾಥ ಮಾತನಾಡಿ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಇಂದಿಗೂ ಹಳ್ಳಿಗಳಲ್ಲಿ ಬಡವರು, ಅಸಮಾನತೆಯಲ್ಲಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಅಸಮಾನತೆ ವಿರುದ್ದ ನಿರಂತರ ಶ್ರಮಿಸಿದ ಹಿರಿಯರನ್ನು ಗುರುತಿಸಿ ಅವರನ್ನು ಸೇರಿಸಿಕೊಂಡು ಇಂತಹ ಕಾರ್ಯಕ್ರಮಗಳನ್ನು ಮಾಡಿದಾಗ ಅರ್ಥಪೂರ್ಣವಾಗುತ್ತದೆ. ಈ ನಿಟ್ಟಿನಲ್ಲಿ ವಿಶೇಷವಾಗಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಜವಬ್ದಾರಿಯಿಂದ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.
ದಲಿತ ಮುಖಂಡ ವೆಂಕಟೇಶ್ ಮಾತನಾಡಿ, ದಲಿತ ವಚನಕಾರರು ಯಾವುದೇ ಜಾತಿ ಮತ್ತು ಸಮುದಾಯಕ್ಕೆ ಸೀಮಿತವಾಗಿಲ್ಲ. ಸಮಾಜಮುಖಿಯಾಗಿದ್ದರು. ಅಂತಹವರ ಜಯಂತಿಗಳು ತಾಲ್ಲೂಕಿನ ಎಲ್ಲಾ ಇಲಾಖಾ ಅಧಿಕಾರಿಗಳು ಪಾಲ್ಗೊಳ್ಳಬೇಕೆಂದು ಹೇಳಿದರು.
ಪ್ರೊಬೆಷನರಿ ತಹಶೀಲ್ದಾರ್ ಅರ್ಚನಾ ಭಟ್, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಹಕ್ಕುದಾಖಲೆ ಶಿರಸ್ತೆದಾರ್ ಮಂಜುನಾಥ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮೂರ್ತಿ, ರಾಜಸ್ವ ನಿರೀಕ್ಷಕ ಪ್ರಶಾಂತ್, ವೇಣು, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ರಂಗನಾಥ್, ಸಮಾಜ ಕಲ್ಯಾಣ ಇಲಾಖೆಯ ವಾರ್ಡನ್ ನಾರಾಯಣಸ್ವಾಮಿ, ಕಂದಾಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.
ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಪ್ರೌಢಶಾಲಾ ಮುಖ್ಯಶಿಕ್ಷಕರ ಸಮಾಲೋಚನಾ ಸಭೆಯಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಎಂ.ಜಯರಾಂರೆಡ್ಡಿ ಮಾತನಾಡಿದರು.
ಕೋವಿಡ್ ನಡುವೆಯೂ ಶೈಕ್ಷಣಿಕ ಚಟುವಟಿಕೆಗಳು ಯಶಸ್ವಿಯಾಗಿ ನಡೆಯುತ್ತಿದ್ದು ಮಕ್ಕಳಲ್ಲಿ ಕಲಿಕಾ ಕಂದರ ಸೃಷ್ಟಿಯಾಗದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಮಕ್ಕಳ ಕಲಿಕೆಯ ನಿರಂತರತೆಯನ್ನು ಕಾಯ್ದುಕೊಳ್ಳಲಾಗುತ್ತಿದೆ. ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಯಾವುದೇ ವಿದ್ಯಾರ್ಥಿ ಅನುತ್ತೀರ್ಣರಾಗದಂತೆ ಪ್ರತಿಶತ ನೂರರಷ್ಟು ಉತ್ತೀರ್ಣತೆಯ ಪ್ರಮಾಣವನ್ನು ಸಾಧಿಸುವ ಗುರಿಯನ್ನು ಹೊಂದಲಾಗಿದೆ ಎಂದು ಅವರು ತಿಳಿಸಿದರು.
ನಿಗದಿತ ವೇಳೆಯೊಳಗೆ ವಿಷಯವಾರು ಶಿಕ್ಷಕರು ತಮ್ಮ ಚಟುವಟಿಕೆಯುತವಾದ ಬೋದನೆ ಮೂಲಕ ಪಠ್ಯವನ್ನು ಪೂರ್ಣಗೊಳಿಸಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು. ಮುಖ್ಯಶಿಕ್ಷಕರು ಆಗಿಂದಾಗ್ಗೆ ಶಿಕ್ಷಕರ ಸಭೆ ಕರೆದು ವಿಷಯವಾರು ಪೂರ್ಣಗೊಂಡಿರುವ ಪಠ್ಯ, ಉಳಿಕೆಯಾಗಿರುವ ಪಠ್ಯವನ್ನು ಪೂರ್ಣಗೊಳಿಸಬೇಕಾದ ಬಗ್ಗೆ ಸಮಾಲೋಚಿಸಬೇಕು. ಮುಂಬರುವ ಏಪ್ರಿಲ್ ಮೊದಲ ವಾರದೊಳಗೆ ವಿಷಯವಾರು ಪಠ್ಯ ಪಾಠಬೋಧನೆಯನ್ನು ಮುಗಿಸಿ ಪುನರಾವರ್ತನೆ ಕೈಗೊಳ್ಳಬೇಕು ಎಂದರು.
ನೊಂದಣಿ ಕಡ್ಡಾಯ: ಎಸ್ಸೆಸ್ಸೆಲ್ಸಿಯಲ್ಲಿ ಕಲಿಯುತ್ತಿರುವ ಎಲ್ಲಾ ಮಕ್ಕಳನ್ನೂ ಕಡ್ಡಾಯವಾಗಿ ಮುಖ್ಯಪರೀಕ್ಷೆಗೆ ನೊಂದಣಿ ಮಾಡಿಸಬೇಕು. ಶಿಕ್ಷಕರ ಕೊರತೆಯಿದ್ದು ಅಗತ್ಯವಿರುವ ಶಾಲೆಗಳಿಗೆ ಈಗಾಗಲೇ ಅತಿಥಿಶಿಕ್ಷಕರ ನೇಮಕ ಮಾಡಿಕೊಳ್ಳಲು ತಿಳಿಸಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸೂಕ್ತ ಕ್ರಮಕೈಗೊಳ್ಳಲಾಗಿದೆ. ಅನಿವಾರ್ಯ ಕಾರಣಗಳಿಂದಾಗಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದುರಾಗಿದ್ದರೆ ನಿಯೋಜನೆ, ಮತ್ತಿತರ ಪರ್ಯಾಯ ಕ್ರಮಗಳ ಮೂಲಕ ಅನುಕೂಲ ಕಲ್ಪಿಸಲಾಗಿದೆ ಎಂದರು.
ಮುಖ್ಯಶಿಕ್ಷಕರು ಕಡ್ಡಾಯವಾಗಿ ವಾರದಲ್ಲಿ ಕನಿಷ್ಟ 12 ಅವಧಿಗಳ ಬೋಧನೆ ಮಾಡುವುದು. ಹಾಜರಾತಿಯನ್ನು ಪ್ರತಿದಿನವೂ ಎಸ್ಎಟಿಎಸ್ ತಂತ್ರಾಂಶದ ಮೂಲಕ ಶಾಲಾಲಾಗಿನ್ನಲ್ಲಿ ದಾಖಲಿಸಬೇಕು. ಪ್ರಸಕ್ತ ಸಾಲಿಗೆ ಅಳವಡಿಸಿಕೊಳ್ಳಬಹುದಾದ ಮೌಲ್ಯಮಾಪನ, ಪರೀಕ್ಷೆಗಳು, ಪಠ್ಯವಸ್ತು, ಶಾಲೆಬಿಟ್ಟ ಮಕ್ಕಳ ಮಾಹಿತಿ, ಸ್ಟೂಡೆಂಟ್ ಪ್ರೊಫೈಲ್ ನಿರ್ವಹಣೆ ಮತ್ತಿತರ ಇಲಾಖಾದೇಶಗಳನ್ವಯ ಕ್ರಮಕೈಗೊಳ್ಳಬೇಕು ಎಂದರು.
ಕ್ಷೇತ್ರಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಔಪಚಾರಿಕ ತರಗತಿಗಳು ತಡವಾಗಿ ಆರಂಭವಾಗಿದ್ದರೂ ಈಗಾಗಲೇ ವಿದ್ಯಾಗಮದಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳ ಕಲಿಕೆಯನ್ನು ಪ್ರೋತ್ಸಾಹಿಸಲಾಗಿದೆ. ಜನವರಿಯಿಂದ ತರಗತಿಗಳು ಆರಂಭವಾಗಿದ್ದು ಮೇ ಮಾಹೆವರೆಗೆ ಕಾಲಾವಕಾಶವಿದೆ. ಎಸ್ಸೆಸ್ಸೆಲ್ಸಿ ಮಕ್ಕಳನ್ನು ಪರೀಕ್ಷೆಗೆ ತಯಾರಿಮಾಡಬೇಕಾದ ಜವಾಬ್ದಾರಿ ಶಿಕ್ಷಕರ ಮೇಲಿದೆ. ಅಂತೆಯೇ 8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳೂ ಕಲಿಕೆಯ ನಿರಂತರತೆಯನ್ನು ಕಾಯ್ದುಕೊಳ್ಳಲು ಶಿಕ್ಷಕರು ಶ್ರಮಿಸಬೇಕು ಎಂದರು.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಪಾಸಿಂಗ್ ಪ್ಯಾಕೇಜ್ ಕಿರು ಹೊತ್ತಿಗೆಗಳನ್ನು ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ವತಿಯಿಂದ ಬಿಡುಗಡೆಮಾಡಲಾಯಿತು. ಉಪನಿರ್ದೇಶಕರಾದ ಕೆ.ಎಂ.ಜಯರಾಮರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ಶಾಲಾವಾರು ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾಫಲಿತಾಂಶ, ವಿದ್ಯಾರ್ಥಿಗಳ ಹಾಜರಾತಿ, ಮತ್ತಿತರ ವಿಷಯಗಳ ಕುರಿತು ಚರ್ಚಿಸಲಾಯಿತು.
ತಾಲ್ಲೂಕು ಅಕ್ಷರದಾಸೋಹ ಸಹಾಯಕ ನಿರ್ದೇಶಕ ಆಂಜನೇಯ, ಉಪನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕಿ ಕೃಷ್ಣಕುಮಾರಿ, ಶಿಕ್ಷಣ ಸಂಯೋಜಕ ಇ.ಭಾಸ್ಕರಗೌಡ, ಖಾಸಗಿ ಶಾಲಾ ಶಿಕ್ಷಕರ ಒಕ್ಕೂಟದ ಅಧ್ಯಕ್ಷ ಗೋಪಿನಾಥ್, ತಾಲ್ಲೂಕು ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಗೋಪಿನಾಥ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ, ಕಾರ್ಯದರ್ಶಿ ಎಲ್.ವೆಂಕಟರೆಡ್ಡಿ, ಸಹಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ, ಎಂ.ಶಿವಕುಮಾರ್, ಮುಖ್ಯಶಿಕ್ಷಕ ಶಿವಶಂಕರ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ರಂಗನಾಥ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ,ಮುನಿರಾಜು, ತಾಲ್ಲೂಕಿನ ವಿವಿಧ ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಹಾಜರಿದ್ದರು.
ನಗರದಲ್ಲಿ ಬುಧವಾರ ರಾಜ್ಯ ಸರ್ಕಾರ ಮಂಡಿಸಿರುವ 2021-22 ಸಾಲಿನ ಬಜೆಟ್ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ವೀಕ್ಷಕ ಮೇಲೂರು ಬಿ.ಎನ್.ರವಿಕುಮಾರ್ ಮಾತನಾಡಿದರು.
ರಾಜ್ಯ ಸರ್ಕಾರ ಮಂಡಿಸಿರುವ 2021-22 ಸಾಲಿನ ಬಜೆಟ್ ನಮ್ಮ ಅವಳಿ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಪಾಲಿಗೆ ಸಾಕಷ್ಟು ನಿರಾಸೆ ಮೂಡಿಸಿದೆ. ನೀರಿಗಾಗಿ ಪರಿತಪಿಸುತ್ತಿರುವ ಬಯಲು ಸೀಮೆಯ ನಮ್ಮ ಜಿಲ್ಲೆಗೆ ನೀರಿನ ಕುರಿತಾದ ದೂರದೃಷ್ಟಿ ಯೋಜನೆಯನ್ನು ಸರ್ಕಾರ ರೂಪಿಸಬಹುದಾಗಿತ್ತು. ನೈಸರ್ಗಿಕವಾಗಿ ಲಭ್ಯವಿರುವ ನೀರನ್ನು ಸಣ್ಣ ಅಣೆಕಟ್ಟು, ಚೆಕ್ ಡ್ಯಾಂ ನಿರ್ಮಿಸಿ ಶೇಖರಿಸಿಕೊಳ್ಳುವ ಯೋಜನೆಗೆ ಒತ್ತು ನೀಡುವ ಕೆಲಸವನ್ನು ಕೂಡ ಸರ್ಕಾರ ಮಾಡಿಲ್ಲ.
ತೀವ್ರ ನೀರಿನ ಅಭಾವ ಎದುರಿಸುತ್ತಿರುವ ನಮ್ಮ ಜಿಲ್ಲೆಯ ಜನತೆಗೆ ನೀರಿನ ಬವಣೆಯನ್ನು ನೀಗಿಸುವ ಯಾವ ಪ್ರಯತ್ನವನ್ನು ಸರ್ಕಾರ ಮಾಡಿಲ್ಲ. ಕೃಷ್ಣಾ ನದಿಯ ನೀರನ್ನು ಬಯಲುಸೀಮೆಯ ಜಿಲ್ಲೆಗಳಿಗೆ ಬಳಸಿಕೊಳ್ಳುವ ಅವಕಾಶವಿದ್ದರೂ ( ಎನ್.ಡಬ್ಲೂ.ಡಿ.ಎ ವರದಿಯ ಅನುಸಾರ) ಈ ನಿಟ್ಟಿನಲ್ಲಿ ಯಾವುದೇ ಚಿಂತನೆಯನ್ನು ಸರ್ಕಾರ ನಡೆಸಿಲ್ಲ ಎಂದು ಅವರು ತಿಳಿಸಿದರು.
ಕೆರೆಗಳಲ್ಲಿ ಹೂಳೆತ್ತುವುದು, ರಾಜಕಾಲುವೆಗಳ ಒತ್ತುವರಿ ತೆರವು ಮಾಡಿ ಅಭಿವೃದ್ಧಿಗೊಳಿಸಬೇಕು, ವಿಫಲವಾಗಿರುವ ಕೊಳವೆ ಬಾವಿಗಳ ಪುನಶ್ಚೇತನಕ್ಕೆ ವಿಶೇಷ ಪ್ಯಾಕೆಜ್ ನೀಡುವ ಮೂಲಕ ಅಂತರ್ಜಲ ಅಭಿವೃದ್ಧಿಗೆ ಒತ್ತು ನೀಡಬಹುದಿತ್ತು ಆದರೆ ಸರ್ಕಾರ ಈ ನಿಟ್ಟಿನಲ್ಲಿ ಯೋಚಿಸಿಯೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲೇ ಅತಿ ಹೆಚ್ಚು ರೇಷ್ಮೆ ಬೆಳೆಯುವ ನಮ್ಮ ಶಿಡ್ಲಘಟ್ಟದಲ್ಲಿ “ಸಿಲ್ಕ್ ಕ್ಲಸ್ಟರ್” ಸ್ಥಾಪಿಸಿ ಸ್ಥಳೀಯವಾಗಿ ಉದ್ಯೋಗ ಸೃಷ್ಠಿಸಬಹುದಿತ್ತು ಮತ್ತು ಇದರಿಂದ ನಮ್ಮ ರೈತರು ಬೆಳೆಯುವ ರೇಷ್ಮೆಯ ಮಾರುಕಟ್ಟೆಯನ್ನು ಸಹ ವಿಸ್ತರಿಸಬಹುದಿತ್ತು. ರೇಷ್ಮೆ ಹಾಗು ಹಾಲಿಗೆ ಹೆಸರುವಾಸಿಯಾದ ನಮ್ಮ ಜಿಲ್ಲೆಗೆ ಬೇಡಿಕೆಗನುಣವಾಗಿ ಕಾರ್ಖಾನೆಗಳ ಅವಶ್ಯಕತೆ ಕಡೆ ಗಮನ ಹರಿಸಿಲ್ಲವಾದ್ದರಿಂದ ಐದು ರೈತ ವಿರೋಧಿ ಬಜೆಟ್ ಆಗಿದೆ ಎಂದರು.
ವಾಣಿಜ್ಯ ಬೆಳೆಗಳಿಗೆ ಹೆಸರುವಾಸಿಯಾಗಿರುವ ಅವಳಿ ಜಿಲ್ಲೆಯಲ್ಲಿ ಸುಸ್ಸಜ್ಜಿತವಾದ ಸಂಯೋಜಿತ ಅಧ್ಯಯನ ಕೇಂದ್ರ ಸ್ಥಾಪಿಸಿ ರೈತರಿಗೆ ಬೆಳೆಗಳ ನಿರ್ವಹಣೆ ಬಗ್ಗೆ ಅಗತ್ಯ ಮಾಹಿತಿಯನ್ನು ಒದಗಿಸಿ ರೈತರನ್ನು ಆರ್ಥಿಕವಾಗಿ ಸಬಲಗೊಳಿಸುವ ಕೆಲಸ ಮಾಡಬಹುದಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯ ದ್ರಾಕ್ಷಿ ಬೆಳೆಯು ದೇಶ ಹಾಗೂ ವಿದೇಶಗಳಲ್ಲಿ ಬಹಳಷ್ಟು ಬೇಡಿಕೆಯಿದೆ. ದ್ರಾಕ್ಷಿ ರಫ್ತಿಗೆ ಅವಕಾಶ ಕಲ್ಪಸಬಹುದಿತ್ತು. ಸುಮಾರು ಐವತ್ತು ವರ್ಷಗಳಿಂದ ದ್ರಾಕ್ಷಿ ಬೆಳೆಗಳಲ್ಲಿ ಹೆಸರುವಾಸಿಯಾದಂತಹ “ಬೆಂಗಳೂರು ಬ್ಲೂ” ದ್ರಾಕ್ಷಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾದಾಗ ಸಂಕಷ್ಟದಲ್ಲಿ ಸಿಲುಕಿರುವ ರೈತರ ಅನುಕೂಲಕ್ಕಾಗಿ ವೈನ್ ಯಾರ್ಡ್ ಕಾರ್ಖಾನೆ ಒತ್ತು ನೀಡಿದ್ದರೆ ರೈತರಿಗೆ ಶಾಶ್ವತ ಅನುಕೂಲ ಕಲ್ಪಿಸಿದಂತಾಗುತ್ತಿತ್ತು ಎಂದು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಕೀಲರ ಸಂಘದ ಸಹಯೋಗದಲ್ಲಿ ನಡೆಸಿದ “ಕೋಟ್ಪಾ -2003” ರ ಕಾಯ್ದೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ತಂಬಾಕು ನಿಂಯತ್ರಣ ಘಟಕದ ಮಂಜುನಾಥ್ ಮಾತನಾಡಿದರು.
ತಂಬಾಕು ಸೇವನೆಯ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ, ತಂಬಾಕು ಉತ್ಪನ್ನಗಳ ಸೇವನೆ, ಉತ್ಪಾದನೆ ಮತ್ತು ಪೂರೈಕೆಯನ್ನು ಕಡಿಮೆ ಮಾಡುವುದು. ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ(ಕೋಟ್ಪಾ)2003 ರನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವುದು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ನಗರದ ವಿವಿಧ ಅಂಗಡಿ ಮುಂಗಟ್ಟುಗಳು, ಶಾಲಾ ಕಾಲೇಜುಗಳ ಬಳಿ ಅಂಗಡಿ ಮಾಲೀಕರಿಗೆ “ಕೋಟ್ಪಾ -2003” ರ ಕಾಯ್ದೆ ಕುರಿತು ವಿವರಿಸಿದ್ದೇವೆ. ತಂಬಾಕು ನಿಯಂತ್ರಣ ಕಾಯ್ದೆ ಅನ್ವಯ ಯಾವುದೇ ಶಾಲೆ, ಕಾಲೇಜು ಶಿಕ್ಷಣ ಸಂಸ್ಥೆ ಆವರಣದಿಂದ 100 ಗಜ ಅಂತರದಲ್ಲಿ ಸಿಗರೇಟ್, ಬೀಡಿ ಅಥವಾ ಇತರೆ ಯಾವುದೇ ಬಗೆಯ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದ್ದು, ಉಲ್ಲಂಘನೆಯಾದಲ್ಲಿ ಅದು ಶಿಕ್ಷಾರ್ಹ ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ಕ್ರಮ ವಹಿಸಬೇಕು ಎಂದು ಹೇಳಿದರು.
ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ದೇವರಾಜು, ಕೀರ್ತಿ, ರುಚಿತ, ಹಿನಾ ಹಾಜರಿದ್ದರು.
ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟದ ಬಳಿ ಸೋಮವಾರ ಸಂಜೆ ಚಿರತೆ ಕಾಣಿಸಿಕೊಂಡಿದ್ದು, ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕವನ್ನು ಉಂಟುಮಾಡಿತ್ತು. ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ಅರಣ್ಯ ಇಲಾಖೆಯ ಸಿಬ್ಬಂದಿ ಮಂಗಳವಾರ ಸ್ಥಳಕ್ಕೆ ಧಾವಿಸಿ ಚಿರತೆಯನ್ನು ಹಿಡಿಯಲು ಬೋನನ್ನ ಇರಿಸಿದ್ದಾರೆ.
ಮಾಧ್ಯಮಗಳಲ್ಲಿ ಪ್ರಸಾರವಾದ ವಿಡಿಯೋ ಆಧರಿಸಿ ಚಿರತೆ ಕಾಣಿಸಿಕೊಂಡ ಸ್ಥಳದ ಹತ್ತಿರ ಇಂದು ಒಂದು ಬೋನು ಇಡಲಾಗಿದ್ದು, ಬುಧವಾರ ಮತ್ತೊಂದು ಬೋನನ್ನು ಚಿಂತಾಮಣಿಯಿಂದ ತರಿಸಿ ಇಡಲಾಗುವುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ sc/st/ಸಾಮಾನ್ಯ ವರ್ಗದ ರೈತರು ತುಂತುರು ನೀರಾವರಿ ಘಟಕ ಹಾಗೂ ಕೃಷಿ ಯಾಂತ್ರೀಕರಣಕ್ಕೆ ಕೃಷಿ ಇಲಾಖೆಯಿಂದ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ.
ಆಧಾರ್ ಕಾರ್ಡ್
ಪಹಣಿ – ಕನಿಷ್ಠ 2 ಎಕರೆ ಕಡ್ಡಾಯವಾಗಿ
NOC – ತೋಟಗಾರಿಕೆ /ರೇಷ್ಮೆ ಇಲಾಖೆಯಿಂದ
ಫೋಟೋ
ಬ್ಯಾಂಕ್ ಪಾಸ್ ಪುಸ್ತಕ
ಬೆಳೆ /ನೀರಿನ ಲಭ್ಯತೆ ದೃಡೀಕರಣ
20 ರೂ ಛಾಪಾಕಾಗದ
ಆಸಕ್ತಿಯುಳ್ಳ ರೈತರು ಮೇಲೆ ತಿಳಿಸಿದ ದಾಖಲಾತಿಗಳನ್ನು ಕೃಷಿ ಇಲಾಖೆಗೆ ಸಲ್ಲಿಸತಕ್ಕದು ಮತ್ತು ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ, ಕೃಷಿ ಇಲಾಖೆಯನ್ನು ಸಂಪರ್ಕಿಸಲು ಕೋರಲಾಗಿದೆ.
ಜಮೀನು ಒತ್ತುವರಿಯಿಂದಾಗಿ ನಗರದ 12, 17, 15 ಮತ್ತು 24 ನೇ ವಾರ್ಡ್ ಗಳ ಜನರು ಓಡಾಡಲು ತೊಂದರೆಯಾಗುತ್ತಿದೆ. ಈ ಬಗ್ಗೆ ಬೋದಗೂರಿನಲ್ಲಿ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ಆರ್.ಲತಾ ಅವರಿಗೆ ಮನವಿಯನ್ನು ಸಲ್ಲಿಸಿದ್ದೆವು. ಅವರು ತಕ್ಷಣ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದ್ದರು. ಆದರೆ ಇದುವರೆಗೂ ಈ ಬಗ್ಗೆ ಸ್ಥಳ ಪರಿಶೀಲನೆಯಾಗಲೀ, ಕ್ರಮ ವಹಿಸುವುದಾಗಲೀ ಆಗಿಲ್ಲ ಎಂದು ನಗರಸಭಾ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಅಫ್ಸರ್ ಪಾಷ ತಿಳಿಸಿದರು.
ನಗರದಲ್ಲಿ ಅವರು ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ತಾಲ್ಲೂಕಿನ ಕಸಬಾ ಹೋಬಳಿ ಸರ್ವೆ ನಂ 29 ರಿಂದ 37 ಮತ್ತು 77 ರಿಂದ 85 ರವರೆಗೆ ಹಾಗೂ ಇದ್ಲೂಡು ಗ್ರಾಮಸರ್ವೆ ನಂ 26 ರಿಂದ 28 ಮತ್ತು 36 ರಿಂದ 38 ರವರೆಗೆ, 41 ರಿಂದ 45 ರವರೆಗೆ ಮತ್ತು ಪಟ್ರೇನಹಳ್ಳಿ ಗ್ರಾಮದ ಸರ್ವೆ ನಂ 5 ರಲ್ಲಿ ಸಾರ್ವಜನಿಕರು ಓಡಾಡುವ ರಸ್ತೆ ಇದೆ. ಈ ಭಾಗದಲ್ಲಿ ಜಮೀನುದಾರರು ರಸ್ತೆಯನ್ನು ಒತ್ತುವರಿ ಮಾಡಿಕೊಂಡು ನಿವೇಶನಗಳಾಗಿ ಮಾಡಿ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ನಗರದ 12, 17, 15 ಮತ್ತು 24 ನೇ ವಾರ್ಡ್ ಗಳ ಜನರು ಓಡಾಡಲು ಆಗದೇ, ಸರಕು ಸಾಗಣೆ ಮಾಡಲು ಸಹ ಆಗದಂತಾಗಿದೆ. ಅಧಿಕಾರಿಗಳು ನಿಷ್ಪಕ್ಷಪಾತಿಗಳಾಗಿ ಒತ್ತುವರಿ ತೆರವುಗೊಳಿಸಬೇಕು ಎಂದರು.
ತಾಲ್ಲೂಕು ಕಚೇರಿಯಲ್ಲಿ ಜನಸಾಮಾನ್ಯರ ಕೆಲಸಗಳು ಸಮರ್ಪಕವಾಗಿ ಆಗುತ್ತಿಲ್ಲ. ತಹಶೀಲ್ದಾರ್ ಅವರು ಕಚೇರಿಯಲ್ಲಿ ಇರುವುದಿಲ್ಲ. ಸಎವೆ ಇಲಾಖೆ ಕಚೇರಿಯಲ್ಲಿ ಸಾರ್ವಜನಿಕರು ಹಣ ನೀಡಿದರೆ ಮಾತ್ರ ಕೆಲಸ, ಇಲ್ಲವಾದರೆ ಇಲ್ಲ ಎಂಬಂತಾಗಿದೆ. ಕೂಡಲೆ ಜಿಲ್ಲಾಧಿಕಾರಿಗಳು ಕ್ರಮ ಜರುಗಿಸಿ ಭ್ರಷ್ಟ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕಾಗಿ ಅವರು ಒತ್ತಾಯಿಸಿದರು.
ನಗರಸಭಾ ಸದಸ್ಯ ಮೌಲಾ ಮಾತನಾಡಿ, ನಗರದ ವಾರ್ಡ್ 12 ರಲ್ಲಿನ 3 ನೇ ಕಾರ್ಮಿಕನಗರ, ಗಾಂಧಿನಗರ ಮತ್ತು ರಹಮತ್ ನಗರ ತೀರಾ ಹಿಂದುಳಿದಿವೆ. ಇಲ್ಲಿ ಸರ್ಕಾರಿ ಶಾಲೆ, ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿಲ್ಲ. ಇಲ್ಲಿ ಸರ್ಕಾರಿ ಖರಾಬಿ 20 ಗುಂಟೆ ಜಮೀನನ್ನು ಉದ್ಯಮಿ ಬಿ.ನಾರಾಯಣಸ್ವಾಮಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಅವರು ಸರ್ಕಾರಿ ಜಮೀನನ್ನು ಲಪಟಾಯಿಸಿ ನಿವೇಶನಗಳನ್ನಾಗಿ ಮಾಡಿ ಮಾರಾಟ ಮಾಡಲು ಮುಂದಾಗಿದ್ದಾರೆ. ನಗರಸಭೆಯ ಚರಂಡಿಯನ್ನು ಒಡೆದು ನೀರನ್ನು ಶೇಖರಿಸಿ ಜಮೀನುಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಈ ದುರ್ವಾಸನೆಯಿಂದ ಈ ಭಾಗದ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ಬಗ್ಗೆ ನಾವು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ತಕ್ಷಣ ಸರ್ಕಾರಿ ಜಮೀನನ್ನು ವಶಪಡಿಸಿಕೊಂಡು ಸಾರ್ವಜನಿಕರಿಗೆ ಅನುಕೂಲವಾಗುವ ಶಾಲೆ ಅಥವಾ ಅಂಗನವಾಡಿಯನ್ನು ನಿರ್ಮಾಣ ಮಾಡಬೇಕೆಂದು ಅವರು ಆಗ್ರಹಿಸಿದರು.
ನಗರದಲ್ಲಿ ಮಂಗಳವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅಶ್ವಿನಿ ಗೋವರ್ಧನ ಚಾರಿಟಬಲ್ ಟ್ರಸ್ಟ್ ವತಿಯಿಂದ ಶ್ರೀ ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯದಲ್ಲಿ ಗಂಗಾಪೂಜೆ ಸಲ್ಲಿಸಿ ತಾಲ್ಲೂಕಿನ ವಿವಿಧ ಈಶ್ವರ ದೇವಾಲಯಗಳಿಗೆ ಗಂಗಾಜಲ ವಿತರಿಸಿ ತಾಲ್ಲೂಕು ಕಸಾಪ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಮುಕ್ತಿ ದೊರೆಯಲು ಗಂಗೆಯ ಒಂದು ತೊಟ್ಟು ಸಾಕು. ಗಂಗಾ ಸ್ನಾನ ತುಂಗಾ ಪಾನ. ಪವಿತ್ರ ಗಂಗೆ ಸೇವನೆಯಿಂದ ಸಕಲ ಪಾಪಗಳು ನಾಶವಾಗುತ್ತವೆ. ಅಲ್ಲದೆ ಇದಕ್ಕೆ ಔಷಧ ಗುಣಗಳಿವೆ. ಈ ರೀತಿಯ ಪವಿತ್ರವಾದ ಜಲದಿಂದ ಜನರ ಕಷ್ಟಗಳು ದೂರವಾಗಲಿ, ಕರೋನ ಸಂಕಷ್ಟ ಕಾಲದಲ್ಲಿ ಎಲ್ಲರಿಗೂ ಆರೋಗ್ಯವನ್ನು ಶಿವ ದಯಪಾಲಿಸಲಿ ಹಾಗೂ ಮಳೆ ಬೆಳೆ ಚೆನ್ನಾಗಿ ಆಗಲಿ ಎಂಬ ಉದ್ದೇಶದಿಂದ ಗಂಗಾಜಲವನ್ನು ವಿತರಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ಈ ಭಾಗದಲ್ಲಿ ಗಂಗಾಜಲ ಸಿಗುವುದಿಲ್ಲ, ಈ ಜಲವು ಹರಿದ್ವಾರ ಹಾಗೂ ಕಾಶಿಯಲ್ಲಿ ಮಾತ್ರ ಸಿಗುವ ಕಾರಣ ಹತ್ತು ದಿನಗಳ ಪ್ರಯತ್ನದಲ್ಲಿ ಬೆಂಗಳೂರಿಗೆ ಬಂದಿದ್ದು ಅಲ್ಲಿಂದ ನಾವು ತರಸಿದ್ದೇವೆ. ಈ ಗಂಗಾಜಲದಿಂದ ಶಿವನಿಗೆ ಅಭಿಷೇಕ ಮಾಡಿದರೆ ನಾಡಿಗೆ ಮಳೆ ಬೆಳೆಯಾಗಿ ನಮ್ಮ ನಾಡು ಸುಭೀಕ್ಷೆಯಿಂದ ಇರುತ್ತದೆ ಎಂದು ಹಿರಿಯರ ಮಾತಿದೆ ಶಿವರಾತ್ರಿಯನ್ನು ವಿಶೇಷವಾಗಿ ಆಚರಣೆ ಮಾಡಿ ಎಲ್ಲರೂ ಆ ದೇವರ ಕೃಪೆಗೆ ಪಾತ್ರರಾಗೊಣ ಎಂದು ಜನತೆಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ನಗರ ಮತ್ತು ತಾಲ್ಲೂಕಿನ ಎಲ್ಲಾ ಈಶ್ವರ ದೇವಾಲಯಗಳಿಗೆ ಗಂಗಾಜಲ ವಿತರಿಸಲಾಯಿತು.
ಕಸಾಪ ಸಂಘ ಸಂಸ್ಥೆಗಳ ಪ್ರತಿನಿಧಿ ಶಂಕರ್, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಎಸ್. ನಾಗರಾಜ್, ನಾಮದೇವ್, ಬಸವರಾಜ್ ಸ್ವಾಮಿ, ರಾಜಶೇಖರ, ಗುರುರಾಜರಾವ್, ಮಂಜುನಾಥ್, ಗೋಪಿ, ಅಶೋಕ, ರಘು ಮತ್ತು ಹರೀಶ್ ಹಾಜರಿದ್ದರು.
ತಾಲ್ಲೂಕಿನ ಕಾಕಚೊಕ್ಕೊಂಡಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ತನುಜಾಕ್ಷಿ ಅವರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಅನುಪಮಾ ಸೇವಾ ಪ್ರಶಸ್ತಿ ಸಂದಿದೆ.
ಮಹಿಳಾ ದಿನಾಚರನೆಯ ಅಂಗವಾಗಿ 34 ಶೈಕ್ಷಣಿಕ ಜಿಲ್ಲೆಗಳಿಂದಲೂ ಪ್ರಾಥಮಿಕ ಶಿಕ್ಷಣದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಶಿಕ್ಷಕಿಯರನ್ನು ಗುರ್ತಿಸಿ ಸಂಘವು ಸನ್ಮಾನಿಸಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಿಂದ ತನುಜಾಕ್ಷಿ ಅವರಿಗೆ ಪ್ರಶಸ್ತಿ ಸಂದಿದೆ.
ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪಡೆದ ಶಿಕ್ಷಕಿ ತನುಜಾಕ್ಷಿ ಅವರನ್ನು ಕ್ಷೇತ್ರಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್, ಬಿಆರ್ಸಿ ಸಮನ್ವಯಾಧಿಕಾರಿ ತ್ಯಾಗರಾಜು, ಶಿಕ್ಷಣಸಂಯೋಜಕ ಭಾಸ್ಕರಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ.ಮುನಿರಾಜು, ನಿರ್ದೇಶಕಿ ಕೆ.ಸುಮಾ, ಅರುಣ, ಸಂಘದ ನಿರ್ದೇಶಕರು, ಸಿಆರ್ಪಿ ನರಸಿಂಹರಾಜು, ಶಿಕ್ಷಕ ಎಂ.ರಾಜಣ್ಣ, ಎನ್,ಸರಿತಾ ಅಭಿನಂದಿಸಿದ್ದಾರೆ.
ತಾಲ್ಲೂಕು ಟೈಲರ್ಸ್ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶ್ರೀ ಕಾಳಿಕಾಂಬ ಕಮಠೇಶ್ವರ ಸಮುದಾಯ ಭವನದಲ್ಲಿ ಭಾನುವಾರ ನಡೆದ ಟೈಲರ್ಸ್ ದಿನಾಚರಣೆ ಹಾಗೂ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಟೈಲರ್ ವರ್ಗದವರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ಅರಿವು ಕಾರ್ಯಕ್ರಮದಲ್ಲಿ ಕಾರ್ಮಿಕ ನಿರೀಕ್ಷಕಿ ಆರ್. ವರಲಕ್ಷ್ಮಿ ಮಾತನಾಡಿದರು.
ಅಸಂಘಟಿತ ವಲಯದ ವ್ಯಾಪ್ತಿಗೆ ಬರುವ ಟೈಲರುಗಳಿಗೆ ಸರ್ಕಾರದ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಸ್ಮಾರ್ಟ್ ಕಾರ್ಡ್ ನೀಡಲು ಕ್ರಮಕೈಗೊಂಡಿದೆ. ಇದರೊಂದಿಗೆ ಸರ್ಕಾರದ ವಿವಿಧ ಸವಲತ್ತುಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.
ವಿಶೇಷ ಸಾಧನೆ ಮಾಡಿದ ಕಾರ್ಮಿಕರನ್ನು ಗುರುತಿಸಿ, ಕಾರ್ಮಿಕರಿಗೆ “ಶ್ರಮ ಸಮ್ಮಾನ ಪ್ರಶಸ್ತಿ” ಹಾಗೂ “ವಿಶೇಷ ಪುರಸ್ಕಾರ” ನೀಡಲಾಗುತ್ತಿದೆ. ಶ್ರಮ ಸಮ್ಮಾನ ಪ್ರಶಸ್ತಿಯು 10 ಸಾವಿರ ರೂಗಳ ನಗದು ಮೌಲ್ಯ, ಸ್ಮರಣಿಕೆ ಹಾಗೂ ಪ್ರಶಂಸಾಪತ್ರ ಒಳಗೊಂಡಿದೆ ಮತ್ತು ವಿಶೇಷ ಪುರಸ್ಕಾರವು ಒಂದು ಸಾವಿರ ರೂಗಳ ನಗದು ಮೌಲ್ಯ, ಸ್ಮರಣಿಕೆ ಹಾಗೂ ಪ್ರಶಂಸಾಪತ್ರ ಒಳಗೊಂಡಿದೆ. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ದೃಷ್ಠಿಯಿಂದ ವಂತಿಕೆ ಆಧಾರಿತ ಭವಿಷ್ಯನಿಧಿ ಸೌಲಭ್ಯವನ್ನು ಒದಗಿಸಲು ಉದ್ದೇಶಿಸಲಾಗಿದೆ ಎಂದು ವಿವರಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಆರ್ಥಿಕ ಸಂಕಷ್ಟದಲ್ಲಿ ಕೆಲಸ ಮಾಡುತ್ತಿರುವ ಟೈಲರ್ಗಳ ಸಂಖ್ಯೆ ಹೆಚ್ಚಿದೆ. ಟೈಲರುಗಳಲ್ಲಿ ಮಹಿಳೆಯರೇ ಹೆಚ್ಚು. ಸರ್ಕಾರವು ಟೈಲರುಗಳು ಹಾಗೂ ಅವರ ಕುಟುಂಬದವರಿಗೆ ಹೆಚ್ಚಿನ ಸವಲತ್ತು ಗಳನ್ನು ಒದಗಿಸಿಕೊಡಬೇಕೆಂದು ಹೇಳಿದರು.
ಟೈಲರ್ಸ್ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಆರ್.ರಮಣ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ಎಸ್.ಎಫ್.ಸಿ.ಎಸ್. ಅಧ್ಯಕ್ಷ ಬಿ.ನಾರಾಯಣಸ್ವಾಮಿ ಹಾಜರಿದ್ದರು.
ತಾಲ್ಲೂಕಿನ ಜೆ.ವೆಂಕಟಾಪುರ ಗ್ರಾಮದ ವಿಎಲ್ಪಿ ಯೋಗಿತಾ ಫಾರಂ ನರ್ಸರಿಗೆ ಭೇಟಿನೀಡಿದ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಂದರ್ಲಾಲ್ ಬಹುಗುಣ ಇಕೋಕ್ಲಬ್ನ ಸದಸ್ಯಮಕ್ಕಳೊಂದಿಗೆ ಪರಿಸರ ಸಂರಕ್ಷಣೆ ಕುರಿತ ಸಂವಾದದಲ್ಲಿ ಪಾಲ್ಗೊಂಡು ಜೆ.ವೆಂಕಟಾಪುರ ಗ್ರಾಮದ ವಿಎಲ್ಪಿ ಯೋಗಿತಾ ನರ್ಸರಿ ಫಾರಂನ ನಿರ್ದೇಶಕ ಪಾಪರಾಜು ಮಾತನಾಡಿದರು.
ಪ್ರಕೃತಿಯಲ್ಲಿ ಹೆಚ್ಚುತ್ತಿರುವ ಅಸಮತೋಲನ ಮತ್ತು ಅಕಾಲಿಕ ಘಟನೆಗಳ ನಿವಾರಣೆಗೆ ಕಡ್ಡಾಯವಾಗಿ ಮರಗಿಡಗಳನ್ನು ಬೆಳೆಸಿ ಪರಿಸರ ಉಳಿಸುವುದೊಂದೇ ಅನಿವಾರ್ಯವಾದ ಮಾರ್ಗವಾಗಿದೆ. ಪರಿಸರ ಸಂರಕ್ಷಣೆಯು ದಿನನಿತ್ಯದ ಚಟುವಟಿಕೆಯಂತಾಗಿ ಎಲ್ಲರಲ್ಲಿಯೂ ಪರಿಸರದ ಕಾಳಜಿ ಪ್ರತಿ ಮನೆಯಿಂದಲೂ ಆರಂಭವಾಗಬೇಕು ಎಂದು ಅವರು ತಿಳಿಸಿದರು.
ಪೂರ್ವಜರಿಗೆ ತಾಂತ್ರಿಕತೆಯ ಅರಿವಿಲ್ಲದ್ದರಿಂದ ಪರಿಸರ ಸಂರಕ್ಷಣೆಯ ಜ್ಞಾನಹೊಂದಿದ್ದರು. ಬುದ್ದಿವಂತರಾದಂತೆಲ್ಲಾ ಪರಿಸರದ ಮೇಲಿನ ದಬ್ಬಾಳಿಕೆ ಹೆಚ್ಚುವಂತಾಗಿದೆ. ಪರಿಸರವನ್ನು ದೇವರ ರೂಪದಲ್ಲಿ ನೋಡುತ್ತಿದ್ದ ಪುರಾತನರ ಗುಣವು ಅನುಕರಣೀಯವಾದುದು. ದಿನೇ ದಿನೇ ಹೆಚ್ಚುತ್ತಿರುವ ಅರಣ್ಯನಾಶದಿಂದಾಗಿ ವಾತಾವರಣದಲ್ಲಿ ತಾಪಮಾನ ಹೆಚ್ಚುತ್ತಿದೆ. ಪ್ರಕೃತಿಯ ವೈಪರಿತ್ಯದಿಂದಾಗಿ ಆಗುತ್ತಿರುವ ವಿಕೋಪಗಳಿಗೆ ಮುಗ್ದ ಜನರು, ಅನೇಕ ಪ್ರಾಣಿಗಳು ಬಲಿಯಾಗುತ್ತಿವೆ ಎಂದರು.
ಸುಂದರಲಾಲ್ ಬಹುಗುಣ ಇಕೋಕ್ಲಬ್ನ ಸಂಯೋಜಕ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಮಾನವನು ಅತಿಯಾಸೆಯಿಂದ ಮಾಡುತ್ತಿರುವ ದುಷ್ಕೃತ್ಯಗಳು ಪ್ರಕೃತಿಯ ಮೇಲೆ ನಡೆಸುತ್ತಿರುವ ದಬ್ಬಾಳಿಕೆ ದೌರ್ಜನ್ಯಗಳಾಗಿವೆ, ಅನೇಕ ಪ್ರಾಣಿ, ಪಕ್ಷಿ ಸಂಕುಲಗಳು ವಿನಾಶದ ಅಂಚಿನಲ್ಲಿವೆ. ಆಮ್ಲಜನಕ, ನೀರನ್ನು ಕೊಂಡು ಬಳಸುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಗಳು ಪರಿಸರ ಸಂರಕ್ಷಣೆಗೆ ಗಂಭೀರವಾದ ಯೋಜನೆಗಳನ್ನು ಕಡ್ಡಾಯಗೊಳಿಸಬೇಕಿದೆ ಎಂದರು.
ನರ್ಸರಿ ಫಾರಂನ ಸಂಪನ್ಮೂಲವ್ಯಕ್ತಿ ಮದನ್ ಮಾತನಾಡಿ, ಮನೆಗಳ ಮೇಲೆ ಟೆರಾಸ್ ಮೇಲೆ ಗಿಡಗಳನ್ನು ಬೆಳೆಸಬಹುದು. ಬೇಸಿಗೆ ಹೆಚ್ಚುತ್ತಿರುವುದರಿಂದ ಪ್ರಾಣಿಪಕ್ಷಿಗಳಿಗೆ ನೀರುಣಿಸಲು ಅಗತ್ಯ ಕ್ರಮಕೈಗೊಳ್ಳಬೇಕು. ಗಿಡಗಳನ್ನು ಸ್ವಂತಮಕ್ಕಳಂತೆ ಪೋಷಿಸಬೇಕು. ಶುಭಸಮಾರಂಭಗಳ ವೇಳೆ ಸಸಿಗಳನ್ನು ನೆಡುವ, ವಿತರಿಸುವ ಹವ್ಯಾಸ ಅನುಸರಣೆಯಾಗಬೇಕು ಎಂದರು.
ವಿವಿಧ ಜಾತಿ, ಪ್ರಭೇಧದ ಗಿಡಗಳ ಹೆಸರು, ವೈಜ್ಞಾನಿಕ ಹೆಸರು, ಬೆಳೆಸಿ ಸಂರಕ್ಷಿಸುವ ವಿಧಾನಗಳನ್ನು ವಿವರಿಸಲಾಯಿತು. ವಿದ್ಯಾರ್ಥಿಗಳು ಸ್ಥಳೀಯ ಗೋಶಾಲೆಗೆ ಭೇಟಿನೀಡಿ ಮಾಹಿತಿ ಪಡೆದರು.
ನಗರದ ಕೆ.ಎಚ್.ಬಿ ಕಾಲೋನಿಯ ನಿವೃತ್ತ ಶಿಕ್ಷಕ ಸುಂದರನ್ ಅವರ ಶ್ರೀನಿಲಯದಲ್ಲಿ ಭಾನುವಾರ ತಾಲ್ಲೂಕಿನ ಮೊಟ್ಟ ಮೊದಲ “ಸೈನ್ಸ್ ಫೋರಂ”, “ಆರೋಹಿ ಸೈನ್ಸ್ ಕ್ಲಬ್” ಅನ್ನು ಹಾಗೂ ಅದರ ಬ್ಲಾಗ್ ಅನ್ನು ಉದ್ಘಾಟಿಸಿ ನಾಗಾರ್ಜುನ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಂತೋಷ್ ಮಾತನಾಡಿದರು.
ಮಕ್ಕಳು ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಯಾಕೆ, ಹೇಗೆ, ಎಲ್ಲಿ, ಯಾವಾಗ ಮುಂತಾದ ಪ್ರಶ್ನೆಗಳು ಮನದಲ್ಲಿ ಮೂಡುತ್ತಿದ್ದರೆ, ಉತ್ತರಕ್ಕಾಗಿ ಹುಡುಕಾಟ ನಡೆಸಿದಾಗ ವಿಜ್ಞಾನದ ಕೌತುಕಗಳು ಕಣ್ಮುಂದೆ ತೆರೆದುಕೊಳ್ಳುತ್ತವೆ. ಅದುವೇ ವಿಜ್ಞಾನದ ರಹದಾರಿ ಎಂದು ಅವರು ತಿಳಿಸಿದರು.
ಈಗಿನ ಮಕ್ಕಳು ಪ್ರತಿಭಾವಂತರಿದ್ದಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ಬೇಕಿದೆ. ವಿಜ್ಞಾನದ ಪ್ರಯೋಗಗಳನ್ನು ಮಕ್ಕಳೇ ಸ್ವತಃ ಮಾಡುವ ವಾತಾವರಣವನ್ನು ರೂಪಿಸಬೇಕು. ಆಗ ಮಕ್ಕಳು ವಿಜ್ಞಾನವನ್ನು ಸಂತಸದಿಂದ ತಮ್ಮ ಬದುಕಿನ ಭಾಗವಾಗಿ ಸ್ವೀಕರಿಸುವರು ಎಂದರು.
ತಾಲ್ಲೂಕು ಕೇಂದ್ರದಲ್ಲಿ “ಸೈನ್ಸ್ ಫೋರಂ” ಪ್ರಾರಂಭವಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಎಳೆಯರನ್ನು ವಿಜ್ಞಾನದೆಡೆಗೆ ಆಕರ್ಷಿಸುವ ಕೆಲಸವಾಗಲಿ. ವಿಜ್ಞಾನದ ಸಾಧಕರನ್ನು ಮಕ್ಕಳಿಗೆ ಪರಿಚಯಿಸುವ ಮೂಲಕ ಅವರಲ್ಲಿ ಜ್ಞಾನದ ಕಿಡಿಯನ್ನು ಹೊತ್ತಿಸಿ ವಿಜ್ಞಾನದ ಒಲಂಪಿಕ್ ಓಟಕ್ಕೆ ಯುವಪೀಳಿಗೆಯನ್ನು ಮುನ್ನಡೆಸಿ ಎಂದರು.
ವರದನಾಯಕನಹಳ್ಳಿ ಸರ್ಕಾರಿ ಶಾಲೆಯ ವಿಜ್ಞಾನ ಶಿಕ್ಷಕ ಎಂ.ಎ.ರಾಮಕೃಷ್ಣ ಮಾತನಾಡಿ, ಬೆಳಗ್ಗೆಯಿಂದ ಸಂಜೆವರೆಗೂ ನಮ್ಮ ದಿನಚರಿ ಹಾಗೂ ಸುತ್ತಲಿನ ಪ್ರಕೃತಿಯಲ್ಲಿ ವಿಜ್ಞಾನ ಹಾಸುಹೊಕ್ಕಾಗಿರುತ್ತದೆ. ವಿದ್ಯಾರ್ಥಿಗಳಿಗೆ ಅದರೆಡೆಗೆ ಆಕರ್ಷಿಸುವುದು ನಾವು ಮಾಡಬೇಕಾದ ಕೆಲಸ. “ಆರೋಹಿ ಸೈನ್ಸ್ ಕ್ಲಬ್” ಮೂಲಕ ಈ ಕೆಲಸವಾಗಲಿ ಎಂದರು.
“ಆರೋಹಿ ಸೈನ್ಸ್ ಕ್ಲಬ್” ಸಂಚಾಲಕ ಓಂ ದೇಶಮುದ್ರೆ ಮಾತನಾಡಿ, ವಿಜ್ಞಾನವನ್ನು ಸಂವಹನ ಮಾಧ್ಯಮಗಳ ಮೂಲಕ ಎಲ್ಲೆಡೆ ಪಸರಿಸುವ ಹಾಗೂ ವಿಜ್ಞಾನದೊಂದಿಗೆ ಒಂದಾಗುವ ಕಾರ್ಯವನ್ನು ಮಾಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದರು.
“ಆರೋಹಿ ಸೈನ್ಸ್ ಕ್ಲಬ್” ಸಹಸಂಚಾಲಕ ಅಜಿತ್ ಕೌಂಡಿನ್ಯ ಮಾತನಾಡಿ, ಜ್ಞಾನದಿಂದ ವಿಜ್ಞಾನದೆಡೆಗೆ ಸಾಗೋಣ ಎಂಬ ಮಾತಿನಂತೆ, ವಿಜ್ಞಾನಕ್ಕೆ ಸಂಬಂಧಿಸಿದಂತೆ ವಿವಿಧ ಚಟುವಟಿಕೆಗಳನ್ನು ಮಾಡುವ ಉದ್ದೇಶದಿಂದ “ಆರೋಹಿ ಸೈನ್ಸ್ ಕ್ಲಬ್” ಎಂಬ “ಸೈನ್ಸ್ ಫೋರಂ” ಪ್ರಾರಂಭಿಸಿದ್ದೇವೆ. ಇದರ ಬ್ಲಾಗ್ ಪ್ರಾರಂಭಿಸಿದ್ದು, ಶಾಲಾ ಮಕ್ಕಳು ಬರೆಯುವ ವಿಜ್ಞಾನದ ಲೇಖನಗಳನ್ನು ಪ್ರಕಟಿಸಲಾಗುವುದು. ನಾಲ್ಕು ಪುಟಗಳ ಇ ಪುಸ್ತಕ ಕೂಡ ಹೊರತರಲಾಗುವುದು. ಶಾಲೆಗಳಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಮಾಡಿ, ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಹುಟ್ಟಿಸುವ ಪ್ರಯತ್ನ ಮಾಡುತ್ತೇವೆ.
ನಿವೃತ್ತ ಶಿಕ್ಷಕ ಸುಂದರನ್, ಕ್ರೆಸೆಂಟ್ ವಿದ್ಯಾಸಂಸ್ಥೆ ಕಾರ್ಯದರ್ಶಿ ತಮೀಮ್ ಅನ್ಸಾರಿ, ಶಿಕ್ಷಕ ಪ್ರಕಾಶ್, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಶಿಕ್ಷಕ ನಾಗಭೂಷಣ್, ಗೌಡನಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.
ತಾಲ್ಲೂಕಿನ ಹಿತ್ತಲಹಳ್ಳಿ ಗೇಟ್ ಬಳಿ ಇರುವ ನಗರಸಭೆಯ ಕಸ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿದ್ದ 11 ನೇ ವಾರ್ಡಿನ ಮಹಿಳೆಯರಿಗೆ ಕಸ ವಿಲೇವಾರಿ ಕುರಿತು ಮಾಹಿತಿ ನೀಡಿ ನಗರಸಭೆ ಪೌರಾಯುಕ್ತ ಶ್ರೀನಿವಾಸ್ ಮಾತನಾಡಿದರು.
ನಗರದ ಹನ್ನೊಂದನೇ ವಾರ್ಡನ್ನು ಪೈಲಟ್ ವಾರ್ಡ್ ಆಗಿ ಆರಿಸಿಕೊಂಡಿದ್ದು, ತ್ಯಾಜ್ಯ ವಿಲೇವಾರಿಯಿಂದ ಪ್ರಾರಂಭಗೊಂಡಂತೆ ಪ್ರತಿಯೊಂದು ರೀತಿಯಲ್ಲೂ ಮಾದರಿಯಾಗಿರುವಂತೆ ರೂಪಿಸಲಾಗುವುದು. ಸಾರ್ವಜನಿಕರು ನಗರಸಭೆಯವರೊಂದಿಗೆ ಸಹಕರಿಸುವ ಮೂಲಕ ನಗರವನ್ನು ಸುಂದರವಾಗಿಸಲು ನೆರವಾಗಬೇಕು ಎಂದು ಅವರು ತಿಳಿಸಿದರು.
ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಲು ಪೌರಕಾರ್ಮಿಕರಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ನಿಮ್ಮ ಮನೆ ಅಥವಾ ಅಂಗಡಿಗಳ ತ್ಯಾಜ್ಯವನ್ನು ರಸ್ತೆಯಲ್ಲಿ ಸುರಿಯಬಾರದು. ಅಡುಗೆ ಮನೆಯಲ್ಲಿ ಒಣ ಮತ್ತು ಹಸಿ ತ್ಯಾಜ್ಯಗಳಿಗೆ ಪ್ರತ್ಯೇಕ ಬಿನ್ಗಳನ್ನು ಇರಿಸಿಕೊಳ್ಳಬೇಕು. ಮನೆಯ ಉಳಿದ ಗೃಹ ತ್ಯಾಜ್ಯಗಳನ್ನು ಸಂಗ್ರಹಿಸಿಡಲು, ಅಂದರೆ ಕಾಗದ, ಪ್ಲಾಸ್ಟಿಕ್ ಇತ್ಯಾದಿಗಳಿಗೆ ಎರಡು ಚೀಲಗಳನ್ನು ಇರಿಸಿಕೊಳ್ಳಬೇಕು. ಅಡುಗೆ ಮನೆಯಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ವಚ್ಛವಾಗಿರಿಸಿ, ಒಣಗಿಸಿ, ನಂತರ ಒಣ ತ್ಯಾಜ್ಯ ಬಿನ್ಗೆ ಹಾಕಿ. ಗಾಜು, ಪ್ಲಾಸ್ಟಿಕ್ ಪಾತ್ರೆಗಳಿಂದ ಆಹಾರ ಪದಾರ್ಥವನ್ನು ತೊಳೆದಿಡಿ. ಹಸಿ ತ್ಯಾಜ್ಯವನ್ನು ಪ್ರತಿನಿತ್ಯ ಮನೆಯಿಂದ ಹೊರಕ್ಕೆ ಕಳುಹಿಸಿ. ಒಣ ತ್ಯಾಜ್ಯವನ್ನು ಮನೆಯಲ್ಲಿ ಶೇಖರಿಸಿಕೊಂಡು ವಾರಕ್ಕೊಮ್ಮೆ ವಿಲೇವಾರಿ ಮಾಡಿ. ಸ್ಯಾನಿಟರಿ ತ್ಯಾಜ್ಯವನ್ನು ವಿಲೇವಾರಿ ಮಾಡಲು ಕಾಗದದ ಚೀಲ ಇರಿಸಿಕೊಳ್ಳಿ. ಒಣ ತ್ಯಾಜ್ಯಗಳಾದ ಕಾಗದ, ಪ್ಲಾಸ್ಟಿಕ್, ಲೋಹ, ಗಾಜು, ರಬ್ಬರ್, ಥರ್ಮೋಕೋಲ್, ಬಟ್ಟೆ, ಚರ್ಮ, ರೆಕ್ಸಿನ್, ಮರ- ಇಂತಹ ದೀರ್ಘಕಾಲದವರೆಗೆ ಕೊಳೆಯದೆ ಇರುವಂತಹ ವಸ್ತುಗಳನ್ನು ಒಣಗಿಸಿ ಒಂದು ವಾರಗಳ ಮನೆಯಲ್ಲಿ ಶೇಖರಿಸಿ ಇಟ್ಟರೆ ದುರ್ನಾತ ಬರುವುದಿಲ್ಲ. ಹಾಲು, ಮೊಸರು, ಎಣ್ಣೆ, ಇಡ್ಲಿ ಹಿಟ್ಟು, ಆಹಾರ ಪದಾರ್ಥಗಳಿರುವ ಪ್ಲಾಸ್ಟಿಕ್ ಪಾಕೆಟ್ಗಳನ್ನು ತೊಳೆದು, ಒಣಗಿಸಿ, ನಂತರ ಒಣ ತ್ಯಾಜ್ಯ ಚೀಲಕ್ಕೆ ಹಾಕಿ. ಆಗ ಅವುಗಳಿಂದ ದುರ್ನಾತ ಬರುವುದಿಲ್ಲ ಎಂದು ವಿವರಿಸಿದರು.
ವ್ಯವಸ್ಥಾಪಕ ಸತ್ಯನಾರಾಯಣ್ ಮಾತನಾಡಿ, ಮನೆಗಳಲ್ಲಿ ಕಸ ವಿಂಗಡಣೆ ತುಂಬಾ ಸುಲಭ. ಮೊದ ಮೊದಲು ಸ್ವಲ್ಪ ಕಷ್ಟ ಎನಿಸಬಹುದು. ನೀವು ಮೊದಲ ಒಂದು ತಿಂಗಳು ಸ್ಚಲ್ಪ ಪ್ರಯತ್ನ ಹಾಕಿದರೆ, ನಂತರ ಅದು ನಿಮಗೆ ಒಂದು ಅಭ್ಯಾಸವಾಗಿಬಿಡುತ್ತದೆ. ಇದು ನಮ್ಮ ಊರನ್ನು ಉಳಿಸುವ ಒಂದು ಒಳ್ಳೆಯ ಅಭ್ಯಾಸ. ಎಡೆಬಿಡದ ಜಾಗೃತಿಯಿಂದ ಅಲ್ಲಿನ ನಾಗರಿಕರಿಗೆ ಅವರು ಉತ್ಪಾದಿಸುವ ಕಸದ ಮೇಲೆ ಹೆಚ್ಚಿನ ಅರಿವು ಬೆಳೆದಿದ್ದರಿಂದ. ಇಂದೋರ್ ಹಾಗೂ ಮೈಸೂರು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಾದರೂ ಸ್ವಚ್ಛ ನಗರಿಗಳೆಂದು ಹೆಸರಾಗಿವೆ. ನಾವುಗಳು ಕೂಡ ಅವರಂತೆ ಪ್ಲಾಸ್ಟಿಕ್ಗಳ ಬಳಕೆಯನ್ನು ಕಡಿಮೆ ಮಾಡೋಣ ಎಂದರು.
ನಗರ ಸಭೆ ಸದಸ್ಯ ಎಲ್.ಅನಿಲ್ ಕುಮಾರ್ ಮಾತನಾಡಿ, ಸಾರ್ವಜನಿಕರೆಲ್ಲರು ಸಹಕಾರ ನೀಡಿದಾಗ ಮಾತ್ರ ನಗರವನ್ನು ಸ್ವಚ್ಛ ಮತ್ತು ಸುಂದರವಾಗಿಸಲು ಸಾಧ್ಯವಿದೆ. ನಿಮ್ಮ ಮನೆಗಳ ಬಳಿ ವಿಂಗಡಿಸಿದ ಕಸವನ್ನು ತೆಗೆದುಕೊಂಡು ಹೋಗಲು ಪ್ರತಿದಿನ ನಗರಸಭೆಯ ವಾಹನ ಬರುತ್ತದೆ. ಬರದಿದ್ದರೆ ನಮ್ಮನ್ನು ಸಂಪರ್ಕಿಸಿ ಎಂದು ಹೇಳಿದರು.
ನಗರ ಸಭೆ ಆರೋಗ್ಯ ನಿರೀಕ್ಷಕಿ ಶೋಭಾ ಅವರು ಮಹಿಳೆಯರಿಗೆ ತ್ಯಾಜ್ಯ ವಿಲೇವಾರಿ ಘಟಕದ ಕಾರ್ಯನಿರ್ವಹಣೆಯ ಬಗ್ಗೆ ವಿವರಿಸಿದರು.
ತಾಲ್ಲೂಕಿನ ಜಂಗಮಕೋಟೆ ರೇಷ್ಮೆ ಬೆಳೆಗಾರರ ಹಾಗೂ ರೈತರ ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ಗ್ರಾಮದ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳ ಗೋವಿಂದಗೌಡ ಮಾತನಾಡಿದರು.
ಮಹಿಳಾ ಸ್ವಸಹಾಯ ಸಂಘಗಳಿಗೆ ಆರ್ಥಿಕ ಚೈತನ್ಯ ತುಂಬುವುದು ಹಾಗೂ ಖಾಸಗಿ ವ್ಯಕ್ತಿಗಳ ಬಡ್ಡಿ ಕಿರುಕುಳವನ್ನು ತಪ್ಪಿಸುವ ಉದ್ದೇಶದಿಂದ ಡಿಸಿಸಿ ಬ್ಯಾಂಕ್ ಮೂಲಕ ನೀಡುತ್ತಿರುವ ಬಡ್ಡಿರಹಿತ ಸಾಲದ ಉಪಯೋಗವನ್ನು ಎಲ್ಲಾ ಮಹಿಳೆಯರು ಪಡೆದುಕೊಳ್ಳಬೇಕು ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಅವರು ಹೇಳಿದರು.
ಹಣ ಡ್ರಾ ಮಾಡಲು ಮೊಬೈಲ್ ಬ್ಯಾಂಕಿಂಗ್ ವಾಹನ ನಿಮ್ಮ ಮನೆ ಬಾಗಿಲಿಗೆ ಬರುವ ವ್ಯವಸ್ಥೆ ಕಲ್ಪಿಸಲಾಗಿದೆ. ಯಾರೂ ಬೇರಾವುದೇ ಎಟಿಎಂಗೆ ಹೋಗುವ ಅವಶ್ಯಕತೆಯಿಲ್ಲ. ಮುಂಬರುವ ದಿನಗಳಲ್ಲಿ ಪ್ರತಿಯೊಬ್ಬರಿಗೂ ತಲಾ ಒಂದೊಂದು ಲಕ್ಷ ಸಾಲ ನೀಡುವುದಾಗಿ ಹೇಳಿದರು.
ತಾಯಂದಿರು ತಮ್ಮ ಉಳಿತಾಯದ ಹಣವನ್ನು ಸಹಕಾರ ಸಂಘದಲ್ಲಿಯೇ ಠೇವಣಿ ಇಡಬೇಕು. ಡಿಸಿಸಿ ಬ್ಯಾಂಕ್ ಬಡವರ ಹಾಗೂ ಮಹಿಳೆಯರ ಪರವಾಗಿದೆ ಎಂದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಸರ್ಕಾರ ಬರೀ ಆಶ್ವಾಸನೆಗಳಿಗೆ ಮಾತ್ರ ಸೀಮಿತವಾಗಿದೆಯೇ ಹೊರತು ಇದರಿಂದ ಯಾವೊಬ್ಬರಿಗೂ ಉಪಯೋಗವಾಗಿಲ್ಲ. ಕೇಂದ್ರ ಸರ್ಕಾರ ಪ್ರತಿಯೊಬ್ಬ ಮತದಾರರಿಗೂ ತಲಾ ಹದಿನೈದು ಲಕ್ಷ ಹಣ ನೀಡುತ್ತೇವೆ ಎಂದು ಹೇಳಿದ್ದ ಆಶ್ವಾಸನೆ ಬರೀ ಆಶ್ವಾಸನೆಯಾಗಿಯೇ ಉಳಿದಿದೆ ಎಂದರು.
ಈ ಸಂದರ್ಭದಲ್ಲಿ ಜಂಗಮಕೋಟೆ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ವತಿಯಿಂದ ಸುಮಾರು 50 ಸ್ವಸಹಾಯ ಸಂಘಗಳಿಗೆ 2 ಕೋಟಿ 26 ಲಕ್ಷ, 63 ಸಾವಿರ ಸಾಲ ವಿತರಿಸಲಾಯಿತು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಆನಂದ್, ಜಂಗಮಕೋಟೆ ಬೆಳೆಗಾರರ ಹಾಗೂ ರೈತರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ಮಂಜುಳಮ್ಮ, ಮಾಜಿ ಅಧ್ಯಕ್ಷ ಗಣೇಶ್, ನಿರ್ದೇಶಕರಾದ ಹನುಮಂತಪ್ಪ, ಮುನಿರಾಜು, ಎಚ್.ಎಂ.ಮಂಜುನಾಥಗೌಡ, ಶ್ರೀನಿವಾಸ್, ಅಶ್ವತನಾರಾಯಣ, ಮುನೇಗೌಡ, ಶ್ರೀನಿವಾಸ್, ದೇವರಾಜು, ಪರಮೇಶ್ ಹಾಜರಿದ್ದರು.