ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯನವರ 154 ನೇ ಜನ್ಮದಿನವಿಂದು. ದೇಶದೆಲ್ಲೆಡೆ ಅವರ ಜನ್ಮದಿನವನ್ನು ಎಂಜಿನಿಯರ್ ದಿನವೆಂದೇ ಆಚರಿಸಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಜನಿಸಿದ್ದ ಸರ್.ಎಂ.ವಿ ಅವರಿಗೆ ಗ್ರಾಮೀಣರಿಗೆ ಉದ್ಯೋಗ ಸಿಗುವಂತಹ ಕಾರ್ಖಾನೆಯೊಂದನ್ನು ಸ್ಥಾಪಿಸುವ ಕನಸಿತ್ತು. ಅದಕ್ಕೆಂದೇ 1952ರಲ್ಲಿ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಕಿಸಾನ್ ಸಿಲ್ಕ್ ಇಂಡಸ್ಟ್ರಿ ಎಂಬ ರೇಷ್ಮೆಯ ಕಾರ್ಖಾನೆಯನ್ನು ಸ್ಥಾಪಿಸಿದ್ದಲ್ಲದೆ ಅದನ್ನು ಸರ್.ಎಂ.ವಿ ಅವರೇ ಆಗಮಿಸಿ ಉದ್ಘಾಟಿಸಿದ್ದರು.
ಸುಮಾರು 60 ವರ್ಷಗಳ ಹಿಂದೆಯೇ ದೂರದೃಷ್ಟಿಯುಳ್ಳ ಗ್ರಾಮೀಣ ಪ್ರಗತಿಯ ಯೋಜನೆಯನ್ನು ಸರ್.ಎಂ.ವಿ ಅವರು ರೂಪಿಸಿದ್ದರು. ಇಲ್ಲಿನ ಭೂಮಿ, ಹವಾಗುಣ ರೇಷ್ಮೆ ಗೂಡು ಹಾಗೂ ನೂಲು ತಯಾರಿಕೆಗೆ ಸೂಕ್ತವಾದುದು. ಇಲ್ಲಿನ ಜನರು ಇದರಿಂದ ಆರ್ಥಿಕ ಪ್ರಗತಿ ಕಾಣುವಂತಾಗಲೆಂದು ಅವರು ಕಿಸಾನ್ ಸಿಲ್ಕ್ ಇಂಡಸ್ಟ್ರಿಯನ್ನು ಪ್ರಾರಂಭಿಸಿದ್ದರು.
ಮೇಲೂರಿನಿಂದ ಕಂಬದಹಳ್ಳಿಗೆ ಹೋಗುವ ರಸ್ತೆಯಲ್ಲಿ ಪ್ರಾರಂಭವಾದ ಕಿಸಾನ್ ಸಿಲ್ಕ್ ಇಂಡಸ್ಟ್ರಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಪ್ರಾರಂಭವಾದ ಮೊಟ್ಟಮೊದಲ ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
‘ಆಗ ಗ್ರಾಮವನ್ನೆಲ್ಲಾ ಸಿಂಗರಿಸಿದ್ದೆವು. ದಿವಾನರಾದ ವಿಶ್ವೇಶ್ವರಯ್ಯನವರು ಬರುತ್ತಾರೆಂದರೆ ಸುಮ್ಮನೆ ಮಾತೇ. ಮನೆಗಳ ಮುಂದೆಲ್ಲಾ ರಂಗೋಲಿ ಹಾಕಿ, ತಳಿರು ತೋರಣಗಳಿಂದ ಅಲಂಕರಿಸಿದ್ದೆವು. ಗ್ರಾಮವೆಲ್ಲಾ ಹಬ್ಬದ ಸಡಗರದಿಂದ ಸಂಭ್ರಮಪಟ್ಟಿತ್ತು. ನಾನು ಚಪ್ಪರ ಹಾಕುವುದರಿಂದ ಹಿಡಿದು ತೋರಣ ಕಟ್ಟುವುದರೊಂದಿಗೆ ವೇದಿಕೆಯನ್ನು ಸಿಂಗರಿಸುವಲ್ಲಿ ತೊಡಗಿಸಿಕೊಂಡಿದ್ದೆ. ಅವರ ಮೆರವಣಿಗೆ, ಸಭೆ, ಭಾಷಣ ನೆನೆದರೆ ರೋಮಾಂಚನವಾಗುತ್ತದೆ. ನಮ್ಮ ಗ್ರಾಮದಲ್ಲಿ ಕಾರ್ಖಾನೆಯೊಂದನ್ನು ಸ್ಥಾಪಿಸಿ ನಮಗೆಲ್ಲಾ ಶ್ರಮಜೀವಿಗಳಾಗುವಂತೆ ಕರೆ ಕೊಟ್ಟ ಆ ಮಹಾನುಭಾವರ ಚಿತ್ರ ಇನ್ನೂ ಕಣ್ಣಮುಂದಿದೆ’ ಎಂದು ಹಳೆಯ ದಿನಗಳನ್ನು ಮೆಲುಕು ಹಾಕುತ್ತಾರೆ 92 ವರ್ಷದ ಇಳಿವಯಸ್ಸಿನ ನಿವೃತ್ತ ಉಪಾಧ್ಯಾಯ ಎಂ.ರಾಮಯ್ಯ.
–ಡಿ.ಜಿ.ಮಲ್ಲಿಕಾರ್ಜುನ
ಸರ್.ಎಂ.ವಿ ರವರ ಕೈಗಾರಿಕಾ ಸಾಧನೆಯಲ್ಲಿ ಶಿಡ್ಲಘಟ್ಟದ ಪಾತ್ರ
ಅಮೆರಿಕೆಯಲ್ಲಿ ಮೊಳಗಿದ ಪಿಂಡಿಪಾಪನಹಳ್ಳಿಯ ಮುನಿವೆಂಕಟಪ್ಪ ಮತ್ತು ತಂಡದವರ ತಮಟೆ ವಾದನ
ದೇಸೀಯ ಸೊಗಡು ಮತ್ತು ಸೊಬಗನ್ನು ಆವಾಹಿಸಿಕೊಂಡಿರುವ ಗಂಡುಕಲೆ ತಮಟೆ ವಾದನ ಶಿಡ್ಲಘಟ್ಟ ತಾಲ್ಲೂಕಿನ ಪಿಂಡಿಪಾಪನಹಳ್ಳಿಯಿಂದ ಅಮೆರಿಕೆಗೆ ತೆರಳಿ ಅಲ್ಲಿ ಮೊಳಗಿ ತನ್ನ ಶಬ್ಧ ಮಾಧುರ್ಯದಿಂದ ಅಲ್ಲಿನವರ ಮನಸೂರೆಗೊಂಡಿದೆ.
ಈಚೆಗೆ ಅಮೆರಿಕೆಯ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಆಶ್ರಯದಲ್ಲಿ ಸ್ಯಾನ್ಹೂಸೆ ನಗರದಲ್ಲಿ ನಡೆದ ಎಂಟನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ತಾಲ್ಲೂಕಿನ ಪಿಂಡಿಪಾಪನಹಳ್ಳಿಯ ತಮಟೆ ವಾದಕ ಮುನಿವೆಂಕಟಪ್ಪ ಮತ್ತು ತಂಡದವರು ಭಾಗವಹಿಸಿದ್ದರು. ತಾಲ್ಲೂಕಿನ ತಮಟೆ, ತಾಸು, ಡೋಲು ಮತ್ತು ಡ್ರಮ್ ಅಮೆರಿಕೆಯಲ್ಲಿ ಮಾಡಿದ ಶಬ್ದಕ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಕುಣಿದು ಕುಪ್ಪಳಿಸಿದ್ದಾರೆ. ತಮಟೆ ಬಾರಿಸುತ್ತಲೇ ಕಣ್ಣಿನ ರೆಪ್ಪೆಗಳಿಂದ ನೋಟನ್ನು ಮತ್ತು ಗುಂಡು ಸೂಜಿಯನ್ನು ಮೇಲೆತ್ತುವ ಮುನಿವೆಂಕಟಪ್ಪನವರ ಚಾಕಚಕ್ಯತೆಗೆ ಬೆಕ್ಕಸ ಬೆರಗಾಗಿದ್ದಾರೆ. ಅವರ ತಮಟೆಯ ಗಂಡು ದನಿಗೆ ಮಾರು ಹೋದ ಆಯೋಜಕರು ನಿಮ್ಮ ನೆನಪಿಗಾಗಿ ತಮಟೆಯನ್ನು ಕೊಡಿ ಎಂದು ಕೇಳಿ ಪಡೆದಿದ್ದಾರೆ.
ಪಿಂಡಿಪಾಪನಹಳ್ಳಿಯ ತಮಟೆ ವಾದಕ ನಾಡೋಜ ಮುನಿವೆಂಕಟಪ್ಪ ಅವರೊಂದಿಗೆ ಅವರ ಶಿಷ್ಯರಾದ ಮಧು, ಪ್ರಸನ್ನ, ದೇವರಮಳ್ಳೂರು ಮುನಿಯಪ್ಪ, ದ್ಯಾವಪ್ಪ, ವೆಂಕಟೇಶಪ್ಪ, ಶ್ರೀನಿವಾಸಪುರ ವೆಂಕಟೇಶ, ಕೋಲಾರ ಶ್ರೀನಿವಾಸಯ್ಯ ಅಮೆರಿಕೆಗೆ ಹೋಗಿ ಬಂದಿದ್ದಾರೆ.
ತಮಟೆ ವಾದನ ಬಯಲು ಸೀಮೆಯ ಜನಕ್ಕೆ ಸುಪರಿಚಿತ. ಅಂತಿಮ ಯಾತ್ರೆಯಲ್ಲಿ ಮಸಣದವರೆಗೂ ಜತೆ ನೀಡಿ ವಿದಾಯ ಹೇಳುವುದೂ ತಮಟೆಯ ನಾದದಿಂದಲೇ. ಊರ ಜಾತ್ರೆ, ಮೆರವಣಿಗೆ ಅಥವಾ ಕರಗದಂತಹ ಸಾಂಸ್ಕೃತಿಕ ಉತ್ಸವಗಳಲ್ಲಿ ತಮಟೆ ಸದ್ದು ಕೇಳಿಸಲೇಬೇಕು. ಇಂಥ ನೆಲ ಸಂಸ್ಕೃತಿಯ ಕಲೆಯನ್ನು ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಹೊಸ ಭಾಷ್ಯವನ್ನು ಬರೆದ ಅದ್ಭುತ ಕಲಾವಿದ. ದೇಶ ವಿದೇಶಗಳಲ್ಲಿ ತಮಟೆ ನಾದವನ್ನು ಮೊಳಗಿಸಿ ಕನ್ನಡನಾಡಿಗೆ ಕೀರ್ತಿ ತಂದಿದ್ದಾರೆ. ಪ್ರಶಸ್ತಿಗಳ ಸರಮಾಲೆಯೇ ಇವರ ಕೊರಳನ್ನು ಅಲಂಕರಿಸಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ‘ನಾಡೋಜ’ ಪ್ರಶಸ್ತಿಯೂ ಸಂದಿದೆ. ಜನಪದ ಅಕಾಡೆಮಿಯ ಸದಸ್ಯರೂ ಆಗಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಕುಗ್ರಾಮ ಪಿಂಡಿಪಾಪನಹಳ್ಳಿಯಲ್ಲಿ ಜನಿಸಿದ ಇವರದು ಬಡಕುಟುಂಬ. ತಂದೆ ಪಾಪಣ್ಣ ತಾಯಿ ಮುನಿಗಂಗಮ್ಮ. ಬದಕಿನ ಆಸರೆಗಾಗಿ ತಂದೆಯಿಂದಲೇ ತಮಟೆ ವಾದನದ ಮೊದಲ ಪಾಠ. ನಾಲ್ಕನೇ ಕ್ಲಾಸಿಗೇನೆ ಕಲಿಕೆ ನಿಲ್ಲಿಸಿದ ಮುನಿವೆಂಕಟಪ್ಪ ‘ನಾಡೋಜ’ ಪ್ರಶಸ್ತಿಯವರೆಗೂ ಬೆಳೆದು ನಿಂತದ್ದು ಮಾತ್ರ ಅವರ ಏಕಲವ್ಯ ಸಾಧನೆಯ ಮಹಾನ್ ಯಾತ್ರೆ!
‘1992 ರಲ್ಲಿ ಜಪಾನ್ಗೆ ಸರ್ಕಾರ ಕಳುಹಿಸಿತ್ತು. ಅಲ್ಲಿ ಏಳು ದಿನಗಳ ಕಾಲದ ಕಾರ್ಯಕ್ರಮದಲ್ಲಿ ತಮಟೆಯ ನಾದಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಈಚೆಗೆ ಅಮೆರಿಕೆಗೆ ಹೋಗುವ ಅವಕಾಶ ಒದಗಿ ಬಂದಿತು. ಪಾಸ್ಪೋರ್ಟ್ ಕಳೆದು ಹೋಗಿತ್ತು. ಹೊಸದಾಗಿ ಪಾಸ್ಪೋರ್ಟ್ ಮಾಡಿಸಿ ವೀಸಾ ಮಾಡಿಸುವಷ್ಟರಲ್ಲಿ ಸಾಕುಸಾಕಾಯಿತು. ನನ್ನ ಮಗ, ತಮ್ಮನ ಮಗ ಮತ್ತು ಐದು ಮಂದಿ ಶಿಷ್ಯರೊಂದಿಗೆ ಅಮೆರಿಕೆಯ ಅಕ್ಕ ಸಮ್ಮೇಳನದಲ್ಲಿ ತಮಟೆ, ತಾಸು, ಡೋಲು ಮತ್ತು ಡ್ರಮ್ ಬಾರಿಸಿ ವಿವಿಧ ಚಮತ್ಕಾರಗಳನ್ನು ಪ್ರದರ್ಶಿಸಿದೆವು. ನಮ್ಮ ನಾದಕ್ಕೆ ಅಲ್ಲಿನವರು ಕುಣಿದು ಕುಪ್ಪಳಿಸಿದರು. ಅಲ್ಲಿನ ಗೋಲ್ಡನ್ ಬೇ ಸೇತುವೆ, ಬೀಚ್ ಮುಂತಾದ ಸ್ಥಳಗಳನ್ನು ತೋರಿಸಿ ಆತ್ಮೀಯವಾಗಿ ಉಪಚರಿಸಿದರು. ಕಾರ್ಯಕ್ರಮದ ಆಯೋಜಕರು ಆಸೆ ಪಟ್ಟು ಕೇಳಿದರೆಂದು ತಮಟೆ ಮತ್ತು ಕಡ್ಡಿಗಳನ್ನು ಕೊಟ್ಟು ಬಂದೆ’ ಎಂದು ಅಮೆರಿಕೆಯ ಅನುಭವವನ್ನು 67 ವರ್ಷದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ತಿಳಿಸಿದರು.



ಪ್ರದೇಶ ಜನತಾದಳ(ಜಾತ್ಯಾತೀತ) ಕಾರ್ಮಿಕ ವಿಭಾಗದ ರಾಜ್ಯಮಟ್ಟದ ಪದಾಧಿಕಾರಿಗಳ ಹಾಗೂ ಜಿಲ್ಲಾಧ್ಯಕ್ಷರುಗಳ ಕಾರ್ಯಕಾರಿಣಿ ಸಭೆ
ಅಸಂಘಟಿತ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಿ ಅದನ್ನು ಬಗೆಹರಿಸುವುದು ಜೆಡಿಎಸ್ ಪಕ್ಷದ ಪ್ರಮುಖ ಉದ್ದೇಶಗಳಲ್ಲೊಂದು ಎಂದು ಕರ್ನಾಟಕ ಪ್ರದೇಶ ಜನತಾದಳ(ಜಾತ್ಯಾತೀತ) ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಶ್ರೀರಾಮಯ್ಯ ತಿಳಿಸಿದರು.
ಪಟ್ಟಣದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಕರ್ನಾಟಕ ಪ್ರದೇಶ ಜನತಾದಳ(ಜಾತ್ಯಾತೀತ) ಕಾರ್ಮಿಕ ವಿಭಾಗದ ರಾಜ್ಯಮಟ್ಟದ ಪದಾಧಿಕಾರಿಗಳ ಹಾಗೂ ಜಿಲ್ಲಾಧ್ಯಕ್ಷರುಗಳ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.
ಪಕ್ಷ ಸಂಘಟನೆಗೆ ಒತ್ತು ನೀಡಲಾಗುತ್ತಿದೆ. ಕೈಗಾರಿಕೆಗಳನ್ನು ಸ್ಥಾಪಿಸಿ ನಿರುದ್ಯೋಗ ನಿವಾರಿಸಬೇಕು ಹಾಗೂ ಈ ಭಾಗದ ರೈತರ ಸಮಸ್ಯೆಗಳ ಬಗ್ಗೆ ಪಕ್ಷದ ಮೂಲಕ ಹೋರಾಟ ಮಾಡುವುದರ ಮೂಲಕ ಸರ್ಕಾರದ ಮೇಲೆ ಒತ್ತಡ ತರುತ್ತೇವೆ ಎಂದು ಹೇಳಿದರು.
ಜೆಡಿಎಸ್ ಪ್ರಭಾರಿ ರಾಜ್ಯಾಧ್ಯಕ್ಷ ಎಂ.ಎಸ್.ನಾರಾಯಣರಾವ್ ಮಾತನಾಡಿ, ರಾಷ್ಟ್ರಾದ್ಯಂತ 2000 ಕೋಟಿ ರೂಗಳಷ್ಟು ಹಣ ಮೀಸಲಿದ್ದರೂ ಕೇವಲ 100 ಕೋಟಿ ರೂಗಳಷ್ಟು ಮಾತ್ರ ಖರ್ಚು ಮಾಡಲಾಗಿದೆ. ಅತ್ಯಂತ ಕಷ್ಟದ ಸ್ಥಿತಿಯಲ್ಲಿ ದುಡಿಯುವ ಕಾರ್ಮಿಕರ ಪರವಾಗಿ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಹಲವಾರು ಐಟಿಐ ಫ್ಯಾಕ್ಟರಿಗಳನ್ನು ಮುಚ್ಚುತ್ತಿರುವುದು ದುರದೃಷ್ಟಕರ. ಎಚ್.ಎಂ.ಟಿ ಫ್ಯಾಕ್ಟರಿ ಕೂಡ ಅವಸಾನದತ್ತ ಸಾಗಿರುವುದು ದುರಂತ. ಇವೆಲ್ಲ ಕಾರ್ಮಿಕ ವಿರೋಧಿ ನೀತಿಯ ಉದಾಹರಣೆಗಳಾಗಿವೆ ಎಂದು ನುಡಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ.ನಾಗರಾಜು ಮಾತನಾಡಿ, ಜೆಡಿಎಸ್ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಕಾರ್ಯಕರ್ತರು ನಿಷ್ಠೆಯಿಂದ ಇರುವರು. ನಮ್ಮ ಭಾಗಕ್ಕೆ ಶಾಶ್ವತ ನೀರಾವರಿಯನ್ನು ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಪಕ್ಷವನ್ನು ಸಂಘಟಿಸಿ ಅವರ ಕೈ ಬಲಪಡಿಸಬೇಕು ಎಂದು ಹೇಳಿದರು. ಈಗಿನ ಸಿದ್ಧರಾಮಯ್ಯನವರ ಸರ್ಕಾರ ಯಾಂತ್ರಕವಾಗಿದೆ ಅಷ್ಟೆ. ತಾಂತ್ರಿಕವಾಗಿ ಕೆಲಸ ಮಾಡುತ್ತಿಲ್ಲ. ನೀಡಿದ ಆಶ್ವಾಸನೆಗಳನ್ನು ಮರೆತು ಧೀರ್ಘ ಕಾಲಿಕ ಯೋಜನೆಗಳನ್ನು ರೂಪಿಸದೆ ಜಡವಾಗಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಚ್ಚೇಗೌಡ, ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಜಿಲ್ಲಾ ಪಂಚಾಯತಿ ಸದಸ್ಯೆ ಶಿವಲೀಲಾ ರಾಜಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ, ಜೆಡಿಎಸ್ ಕಾರ್ಮಿಕ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ರಹಮತ್ತುಲ್ಲ ಮಾತನಾಡಿದರು.
ಜೆಡಿಎಸ್ ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷ ಗಂಗುಲಪ್ಪ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ರಫೀ, ಜಿಲ್ಲಾ ಘಟಕದ ಅಧ್ಯಕ್ಷ ಕನಕಪ್ರಸಾದ್, ಜೆಡಿಎಸ್ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಆಯಿಷಾ ಸುಲ್ತಾನ್, ತಾಲ್ಲೂಕು ಪಂಚಾಯತಿ ಸದಸ್ಯೆಯರಾದ ರಾಧಿಕಾ, ಮಂಜುಳ, ನೇತ್ರಾ, ಮುಖಂಡರಾದ ಮುನಿವೆಂಕಟಸ್ವಾಮಿ, ಅಫ್ಸರ್ ಪಾಷ ಮುಂತಾದವರು ಪಾಲ್ಗೊಂಡಿದ್ದರು.
ದಸರಾ ಕ್ರೀಡಾಕೂಟದಲ್ಲಿ ವಿಜೇತರಾಗಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾದ ಚೀಮನಹಳ್ಳಿಯ ಕಬಡ್ಡಿ ತಂಡ
ಶಿಡ್ಲಘಟ್ಟ ತಾಲ್ಲೂಕಿನ ಚೀಮನಹಳ್ಳಿಯ ಕಬಡ್ಡಿ ತಂಡವು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವಿಜೇತರಾಗಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕೋಚ್ ಸಿ.ಕೆ.ರವಿ, ಆಟಗಾರರಾದ ಸಿ.ಆರ್.ನವೀನ್, ಸಿ.ಬಿ.ಹರೀಶ್, ಸಿ.ಎಸ್.ಅನಿಲ್, ಶ್ರೀಕಾಂತ್, ದಿಲೀಪ್, ನಿತಿನ್, ಉನೀತ್, ಸಿ.ಬಿ.ವಿನಯ್, ಶ್ರೀನಾಥ್, ಹರಿ, ಅಭಿ, ಶಿವಕುಮಾರ್ ಇದ್ದಾರೆ.
ನಡಿಪಿನಾಯಕನಹಳ್ಳಿಯ ಕಪಿಲಮ್ಮ ಪದವಿ ಪೂರ್ವ ಕಾಲೇಜಿನ ಶಾಲಾ ಆವರಣದಲ್ಲಿ ಭರ್ಜರಿ ವ್ಯಾಪಾರ
ಅಮ್ಮನ ಕಾಯಿ ಹೋಳಿಗೆ ತಿಂದು ರುಚಿ ನೋಡಿ ಎಂದು ಒಂದೆಡೆ ಕರೆಯುತ್ತಿದ್ದರೆ, ಆಸ್ಮಾನ್ ಚಾಟ್ ಸೆಂಟರ್ ಇದು ಬಗೆಬಗೆಯ ಚಾಟ್ಸ್ ದೊರೆಯುತ್ತದೆ ಬನ್ನಿ ಬನ್ನಿ ಎಂದು ಮತ್ತೊಂದೆಡೆ ತಿನಿಸುಗಳ ಅಂಗಡಿಯ ಬುಲಾವ್ ಕೇಳಿಬರುತ್ತಿತ್ತು.
ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ಕಪಿಲಮ್ಮ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶುಕ್ರವಾರ ವ್ಯಾಪಾರ ದಿನದ ಅಂಗವಾಗಿ ವೈವಿಧ್ಯಮಯ ಅಂಗಡಿಗಳನ್ನು ಶಾಲಾ ಆವರಣದಲ್ಲಿ ತೆರೆದು ಭರ್ಜರಿ ವ್ಯಾಪಾರ ನಡೆಸಿದರು.
ಬಾಯಲ್ಲಿ ನೀರೂರಿಸುವ ಉಪ್ಪು ಖಾರ ಹಚ್ಚಿರುವ ಸೌತೇಕಾಯಿ, ಬಗೆಬಗೆಯ ಶರಬತ್ತುಗಳು, ಪಾನೀಪುರಿ, ಕಾಫಿ ಚಹಾ, ಮನೆಯಲ್ಲಿ ತಯಾರಿಸಿರುವ ಹೋಳಿಗೆ, ಲಡ್ಡು, ವಿವಿಧ ದಿನಬಳಕೆ ವಸ್ತುಗಳು, ತರಕಾರಿ, ಮೊಟ್ಟೆ, ಬೋಟಿ, ಬಿಸ್ಕತ್, ಚಾಕೋಲೇಟ್ಗಳು, ಶಾಂಪೂ ಪೊಟ್ಟಣಗಳು, ಪೆನ್ನು, ಪೆನ್ಸಿಲ್ಗಳು, ರಸ್ಕು, ಬ್ರೆಡ್, ಬನ್ನು, ಗುಲ್ಕನ್ನು, ಎಳೆನೀರು, ಸೀಬೆಹಣ್ಣು, ಪಪ್ಪಾಯ, ಬಿಸಿಬಿಸಿ ಬೋಂಡ, ಬಜ್ಜಿ, ಇಡ್ಲಿ, ವಡೆ ಮುಂತಾದವುಗಳನ್ನು ಮಾರಾಟಕ್ಕಿಡಲಾಗಿತ್ತು.
ತಳ್ಳಿಕೊಂಡು ಹೋಗುವ ಪಾನೀಪುರಿ ಗಾಡಿಗಳನ್ನೇ ಶಾಲಾ ಆವರಣಕ್ಕೆ ತಂದಿಟ್ಟಿದ್ದರು. ವಿದ್ಯಾರ್ಥಿಗಳು ಗ್ರಾಹಕರ ಅನುಕೂಲಕ್ಕಾಗಿ ನೆರಳಿಗಾಗಿ ಟಾರ್ಪಾಲನ್ನು ಕಟ್ಟಿದ್ದರು. ಶಾಲೆಯಲ್ಲಿದ್ದ ವಿದ್ಯಾರ್ಥಿಗಳು ಕೂರುವ ಬೆಂಚುಗಳು ಶಾಲಾ ಆವರಣದಲ್ಲಿ ಗ್ರಾಹಕರು ಅಂಗಡಿಗಳ ಮುಂದೆ ಕುಳಿತುಕೊಳ್ಳುವ ಬೆಂಚುಗಳಾಗಿ ಮಾರ್ಪಾಡಾಗಿದ್ದವು.
ವಿದ್ಯಾರ್ಥಿಗಳೇ ಮೂರು ನಾಲ್ಕು ಮಂದಿ ಗುಂಪುಗಳಾಗಿ ವಿಂಗಡಿಸಿಕೊಂಡು ಒಂದೊಂದು ರೀತಿಯ ಅಂಗಡಿಗಳನ್ನು ತೆರೆದು ವ್ಯಾಪಾರ ನಡೆಸುತ್ತಿದ್ದರು. ಕೆಲವರು ತಮ್ಮಲ್ಲಿ ಮಾರಾಟಕ್ಕಿರುವ ವಸ್ತುಗಳ ಬಗ್ಗೆ ಜೋರಾಗಿ ಕೂಗಿ ಹೇಳುತ್ತಾ ಗ್ರಾಹಕರನ್ನು ಆಕರ್ಷಿಸುತ್ತಿದ್ದರೆ, ಕೆಲವರು ಹಣವನ್ನು ಎಣಿಸಿಕೊಂಡು ಲೆಕ್ಕ ಬರೆದಿಡುವ ಕೆಲಸವಾಗಿತ್ತು.
‘ವಿದ್ಯಾರ್ಥಿಗಳಲ್ಲಿ ವ್ಯವಹಾರಜ್ಞಾನ ಬೆಳೆಸಲು ವ್ಯಾಪಾರ ದಿನವನ್ನು ಆಚರಿಸುತ್ತಿದ್ದೇವೆ. ಅವರೇ ಬಂಡವಾಳ ಹೂಡಿ ವ್ಯಾಪಾರ ನಡೆಸಿ ಲಾಭ ನಷ್ಟದ ಬಗ್ಗೆ ವರದಿ ಸಲ್ಲಿಸುತ್ತಾರೆ. ಗ್ರಾಹಕರ ಮನಸ್ಸನ್ನು ಅರಿತು ಅವರಿಗೆ ಬೇಕಾದ ವಸ್ತುಗಳನ್ನು ನೀಡುವುದಲ್ಲದೆ ಅವರಿಗೆ ಅಗತ್ಯವೆನಿಸುವಂತೆ ವಸ್ತುಗಳನ್ನು ಬಿಂಬಿಸಿ ಮಾರುವ ಕಲೆಯನ್ನೂ ಬೆಳೆಸಿಕೊಳ್ಳಬೇಕು ಎಂಬುದು ನಮ್ಮ ಉದ್ದೇಶ’ ಎಂದು ಶಾಲಾ ಕಾಲೇಜು ಸಂಸ್ಥಾಪಕರಾದ ಕೃಷ್ಣಮೂರ್ತಿ ತಿಳಿಸಿದರು.
ಕಾಲೇಜು ಪ್ರಾಂಶುಪಾಲ ಸುದರ್ಶನ್, ಶಾಲಾ ಮುಖ್ಯಶಿಕ್ಷಕ ಸತ್ಯನಾರಾಯಣ, ಸುಮಾ ಮತ್ತಿತರರು ಇ ಸಂದರ್ಭದಲ್ಲಿ ಹಾಜರಿದ್ದರು.
ತಾಲ್ಲೂಕು ಮಟ್ಟದ ಪ್ರತಿಭಾಕಾರಂಜಿಯ ವಿಜೇತರು
ತಾಲ್ಲೂಕು ಮಟ್ಟದ ಪ್ರತಿಭಾಕಾರಂಜಿಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ವಿಜೇತರ ಫಲಿತಾಂಶ:
ಪ್ರಾಥಮಿಕ ಶಾಲೆ(1 ರಿಂದ 4):
ಕಂಠಪಾಠ (ಕನ್ನಡ): ಕಂಬಾಲಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೆ.ಎಂ.ಗಗನ್,
ಕಂಠಪಾಠ (ಇಂಗ್ಲೀಷ್): ಡಾಲ್ಫಿನ್ ಶಾಲೆಯ ಲುಬ್ನಾ ರೈನಾ,
ಕಂಠಪಾಠ (ಹಿಂದಿ): ಪಿಂಡಿಪಾಪನಹಳ್ಳಿ ಬೃಂದಾ ಶಾಲೆಯ ಚೈತನ್ಯ,
ಕಂಠಪಾಠ (ಉರ್ದು): ಗಾಂಧಿನಗರ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಜೈಬಾಫಾತೀಮಾ,
ಧಾರ್ಮಿಕಪಠಣ ಸಂಸ್ಕೃತ: ವಾಸವಿ ವಿದ್ಯಾಸಂಸ್ಥೆಯ ಎಸ್.ಎಸ್.ರಚನಾ,
ಧಾರ್ಮಿಕಪಠಣ ಅರೇಬಿಕ್: ಜಂಗಮಕೋಟೆ ತೋಟಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅರ್ಬಾಜ್ಪಾಷ,
ಲಘು ಸಂಗೀತ: ಬಶೆಟ್ಟಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪಿ.ಎಂ.ಕಾವ್ಯ.
ಛದ್ಮವೇಷ: ಸೊಣಗಾನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ದರ್ಶಿನಿ,
ಚಿತ್ರಕಲೆ: ಚನ್ನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಿ.ಎಂ.ಅನಿಲ್ಕುಮಾರ್,
ಕಥೆ ಹೇಳುವುದು: ಜೆ.ವೆಂಕಟಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಂ.ಪರಿಮಳ,
ಅಭಿನಯಗೀತೆ: ಚನ್ನಪ್ಪನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನಂದಿನಿ,
ಕ್ಲೇ ಮಾಡೆಲಿಂಗ್: ಚಿಕ್ಕಪಾಪನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುಮಂತ್,
ಜಾನಪದ ನೃತ್ಯ: ಬೈರಗಾನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಪಂದನ ಮತ್ತು ತಂಡ,
ದೇಶಭಕ್ತಿಗೀತೆ: ಕನ್ನಪ್ಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿರೀಷ ಮತ್ತು ತಂಡ,
ಕೋಲಾಟ: ಯಣ್ಣಂಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಚಿತ್ರಾ ಮತ್ತು ತಂಡ,
ಕ್ವಿಜ್: ಮಳ್ಳೂರು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಪ್ರೀತಿ ಮತ್ತು ತಂಡ.
ಹಿರಿಯಪ್ರಾಥಮಿಕ ಶಾಲೆ(5 ರಿಂದ 7):
ಕಂಠಪಾಠ (ಕನ್ನಡ): ಸಾದಲಿಯ ಶಾಲವಿ ಕಾನ್ವೆಂಟ್ ಎನ್.ಮೋಹನ್,
ಕಂಠಪಾಠ (ಇಂಗ್ಲೀಷ್): ರಾಮೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿ.ಬಿ.ಅನಿತಾ,
ಕಂಠಪಾಠ (ಹಿಂದಿ): ಚೊಕ್ಕನಹಳ್ಳಿ ಕ್ರಾಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಿ.ಎಂ.ಅನಿತಾ,
ಕಂಠಪಾಠ (ಉರ್ದು): ಸಂತೋಷ್ನಗರ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮಿಸ್ಬ,
ಕಂಠಪಾಠ(ಸಂಸ್ಕೃತ): ಕುದುಪಗುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಫೀಸಾಕೌಸರ್.
ಧಾರ್ಮಿಕಪಠಣ ಸಂಸ್ಕೃತ: ದಿಬ್ಬೂರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಫ್ಜಲ್.
ಲಘು ಸಂಗೀತ: ಆಶಾಕಿರಣ ಅಂಧಮಕ್ಕಳ ಶಾಲೆಯ ಗಮನಿಕ.
ಛದ್ಮವೇಷ: ಕಂಬಾಲಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ರಜನಿ,
ಚಿತ್ರಕಲೆ: ಮೇಲೂರು ಸೆಂಟ್ ಥಾಮಸ್ ಶಾಲೆಯ ಟಿ.ಚಂದನ್,
ಕಥೆ ಹೇಳುವುದು: ಜೆ.ವೆಂಕಟಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿ.ಅಕ್ಷಯ್,
ಅಭಿನಯಗೀತೆ: ಕೊಂಡಪ್ಪಗಾರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಿಂಧು,
ಕ್ಲೇ ಮಾಡೆಲಿಂಗ್: ತುಮ್ಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತ್ರಿವೇಣಿ,
ಯೋಗಾಸನ: ಮಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಂಜಿತ್ಕುಮಾರ್,
ಜಾನಪದ ನೃತ್ಯ: ಕನ್ನಪ್ಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೀರ್ತಿ ಮತ್ತು ತಂಡ,
ದೇಶಭಕ್ತಿಗೀತೆ: ಕನ್ನಪ್ಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಂದನ ಮತ್ತು ತಂಡ,
ಕೋಲಾಟ: ಯಣ್ಣಂಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅನು ಮತ್ತು ತಂಡ,
ಕ್ವಿಜ್: ಸಾದಲಿ ಶಾಲವಿ ಕಾನ್ವೆಂಟ್ ರೋಹಿತ್ ಮತ್ತು ಹರೀಶ್.
ಪ್ರೌಢಶಾಲೆ(8 ರಿಂದ 10):
ಕನ್ನಡ ಭಾಷಣ: ಮಳ್ಳೂರು ಸ್ವಾಮಿ ವಿವೇಕಾನಂದ ಸಂಸ್ಥೆಯ ಬಿ.ಇಂದುಶ್ರೀ,
ಇಂಗ್ಲಿಷ್ ಭಾಷಣ: ಮಳ್ಳೂರು ಸ್ವಾಮಿ ವಿವೇಕಾನಂದ ಸಂಸ್ಥೆಯ ಎಂ.ನಿಹಾರಿಕಾ,
ಹಿಂದಿ ಭಾಷಣ: ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ಜೆ.ವಿ.ಹರ್ಷಿಯಾ,
ಉರ್ದು ಭಾಷಣ: ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ಶಬರೀನ್,
ಧಾರ್ಮಿಕ ಪಠಣ(ಸಂಸ್ಕೃತ): ಸರಸ್ವತಿ ಕಾನ್ವೆಂಟ್ ವಿ.ಗಂಗಾಧರ,
ಧಾರ್ಮಿಕ ಪಠಣ(ಅರೇಬಿಕ್): ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ಹರ್ಷಿಯಾ,
ಯೋಗಾಸನ: ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ಅರುಣ್,
ಕರ್ನಾಟಕ ಶಾಸ್ತ್ರೀಯ ಸಂಗೀತ: ಬಿ.ಜಿ.ಎಸ್ ಹನುಮಂತಪುರ ತಾಳಂಕಿ ರಚಿತ,
ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ: ಆಶಾಕಿರಣ ಅಂಧ ಮಕ್ಕಳ ಶಾಲೆಯ ಅಮರಜ್ಯೋತಿ,
ಜಾನಪದ ಗೀತೆ: ಭಕ್ತರಹಳ್ಳಿ ಬಿ.ಎಂ.ವಿ. ಪ್ರೌಢಶಾಲೆಯ ಬಿ.ಎನ್.ಪವಿತ್ರ,
ಭಾವಗೀತೆ: ಸಾದಲಿ ಸರ್ಕಾರಿ ಪ್ರೌಢಶಾಲೆಯ ಜ್ಞಾನೇಶ್ವರಿ,
ಭರತನಾಟ್ಯ: ಬಿ.ಜಿ.ಎಸ್ ಹನುಮಂತಪುರ ರುಚಿತಾ ಎನ್.ರಂಜನ್,
ಛದ್ಮವೇಷ: ದೊಡ್ಡತೇಕಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮಂಜುನಾಥ,
ಕ್ಲೇಮಾಡೆಲಿಂಗ್: ಬಶೆಟ್ಟಹಳ್ಳಿ ಸರ್ಕಾರಿ ಪ್ರೌಢಶಾಲೆಯ ವೇಣು,
ಆಶುಭಾಷಣ: ಎಚ್.ಕ್ರಾಸ್ ಸುಮುಖ ಪ್ರೌಢಶಾಲೆಯ ಅರ್ಚನಾ,
ಮಿಮಿಕ್ರಿ: ಮಳ್ಳೂರು ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಪವನ್ಗೌಡ,
ಪ್ರಬಂಧರಚನೆ: ಸುಗಟೂರು ಸರ್ಕಾರಿ ಪ್ರೌಢಶಾಲೆಯ ಎಸ್.ಆರ್.ಮೂರ್ತಿ,
ಚರ್ಚಾಸ್ಪರ್ಧೆ: ಮಳ್ಳೂರು ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಬಿ.ಇಂದೂಶ್ರೀ,
ಚಿತ್ರಕಲೆ: ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ಮುರಳಿ,
ರಂಗೋಲಿ: ಶಾರದಾ ಬಾಲಕಿಯರ ಪ್ರೌಢಶಾಲೆಯ ಸಿ.ಆರ್.ನವ್ಯಾ,
ಗಝಲ್: ಸರ್ಕಾರಿ ಉರ್ದು ಪ್ರೌಢಶಾಲೆಯ ಎಚ್.ಮುಸ್ಖಾನ್,
ಜಾನಪದ ನೃತ್ಯ: ಬಶೆಟ್ಟಹಳ್ಳಿ ಸರ್ಕಾರಿ ಪ್ರೌಢಶಾಲೆಯ ಪ್ರಿಯಾಂಕ ಮತ್ತು ತಂಡ,
ನಾಟಕ: ಭಕ್ತರಹಳ್ಳಿ ಬಿ.ಎಂ.ವಿ.ಪ್ರೌಢಶಾಲೆಯ ಪವಿತ್ರಾ ಮತ್ತು ತಂಡ,
ಕೋಲಾಟ: ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ಚಂದನಾ ಮತ್ತು ತಂಡ,
ಕವ್ವಾಲಿ: ಸರ್ಕಾರಿ ಪ್ರೌಢಶಾಲೆಯ ವಸಿಉಲ್ಲಾ ಮತ್ತು ತಂಡ,
ವಿಜ್ಞಾನ ಮಾದರಿ: ನವೋದಯ ನಡಿಪಿನಾಯಕನಹಳ್ಳಿ ಶಾಲೆಯ ವೈ.ನಿರಂಜನಗೌಡ,
ಕ್ವಿಜ್: ಮಳ್ಳೂರು ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಜಿ.ಎಚ್.ತೇಜಸ್.
ಕನಿಷ್ಠ ಇಬ್ಬರಿಗಾದರೂ ಕಲಿಕೆಯನ್ನು ಕಲಿಸಿ. ಕಲಿತ ಋಣ ಕಲಿಸಿ ತೀರಿಸಿ
ಮರದಿಂದ ಬಿದ್ದ ಬೀಜ, ಎದೆಯಲ್ಲಿ ನಾಟಿದ ಅಕ್ಷರ ಇಂದಲ್ಲ ನಾಳೆ ಫಲ ಕೊಟ್ಟೇ ಕೊಡುತ್ತದೆ. ಕನಿಷ್ಠ ಇಬ್ಬರಿಗಾದರೂ ಕಲಿಕೆಯನ್ನು ಕಲಿಸಿ. ಕಲಿತ ಋಣ ಕಲಿಸಿ ತೀರಿಸಿ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಪಿ.ಕೇಶವರೆಡ್ಡಿ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಈಚೆಗೆ ಏರ್ಪಡಿಸಲಾಗಿದ್ದ ಸಾಕ್ಷರತಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಾಲ್ಲುಕಿನಾದ್ಯಂತ ಅನಕ್ಷರಸ್ಥರು 29,951 ಅನಕ್ಷರಸ್ಥರಿದ್ದಾರೆ. ಈ ವರ್ಷದ ಗುರಿ 16,841 ಇದೆ. 54 ಮಂದಿ ಪ್ರೇರಕರನ್ನು ನಿಯೋಜಿಸಿದ್ದು, 27 ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ. ಅಕ್ಷರ ಕಲಿಸುವ ಜೊತೆಯಲ್ಲಿ ಮನೆಗೊಂದು ಶೌಚಾಲಯ ನಿರ್ಮಾಣದ ಅಗತ್ಯತೆಯನ್ನು ತಿಳಿಸಿ ಎಂದು ಹೇಳಿದರು.
ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ ಮಾತನಾಡಿ ಹಿಂದಿನ ಸ್ಲೇಟು ಬಳಪದ ಕಾಲದಿಂದ ಈಗಿನ ಕಂಪ್ಯೂಟರ್ವರೆಗೂ ಕಾಲದ ಪ್ರವಾಹ ಸಾಗಿದೆ. ಈಗಿನ ಜಗತ್ತಿನ ಬದಲಾವಣೆಯಲ್ಲಿ ಜೀವಿಸಲು ಅಕ್ಷರ ಜ್ಞಾನ ಅತ್ಯಗತ್ಯ. ಸಾಕ್ಷರತೆಯಿಂದಲೇ ಪ್ರಗತಿ ಸಾಧ್ಯ. ಕೇವಲ ಅಧಿಕಾರಿಗಳಷ್ಟೇ ಅಲ್ಲ, ಸಮುದಾಯದ ಭಾಗವಹಿಸುವಿಕೆಯೂ ಇದರಲ್ಲಿ ಮುಖ್ಯ ಎಂದು ನುಡಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೀಣಾಗಂಗುಲಪ್ಪ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಜಿಲ್ಲಾ ಪಂಚಾಯತಿ ಸದಸ್ಯರಾದ ಶಿವಲೀಲಾರಾಜಣ್ಣ, ಸತೀಶ್, ತಾಲ್ಲೂಕು ಪಂಚಾಯತಿ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಗಣಪತಿ ಸಾಕರೆ, ತಾಲ್ಲೂಕು ಲೋಕ ಶಿಕ್ಷಣ ಸಮಿತಿ ಸಂಯೋಜಕರಾದ ಟಿ.ವಿ.ಶ್ರೀನಿವಾಸ್, ಜಿ.ಎನ್.ಕ್ಯಾತಪ್ಪ, ಸಂಪನ್ಮೂಲ ವ್ಯಕ್ತಿ ವಿ.ಕೃಷ್ಣ ಮತ್ತಿತರರು ಹಾಜರಿದ್ದರು.
ಜನಾಂಗೀಯ ಸಂಸ್ಕೃತಿ ದಿನಾಚರಣೆಯ ಅಂಗವಾಗಿ ಜನಾಂಗೀಯ ಸಂಸ್ಕೃತಿ ಪ್ರದರ್ಶಿಸಿದ ಮಕ್ಕಳು
ರಾಗಿ ತೂರುತ್ತಾ, ನೆಲ್ಲು ಕುಟ್ಟುತ್ತಾ, ಕಾಳುಗಳನ್ನು ಒಕ್ಕಣೆ ಮಾಡುತ್ತಾ, ಜನಪದ ಗೀತೆಗಳನ್ನು ಹಾಡುತ್ತಾ ಕಣ ಸಂಸ್ಕೃತಿಯನ್ನು ಮರುಸೃಷ್ಠಿ ಮಾಡಲಾಗಿತ್ತು.
ಪಟ್ಟಣದ ಹೊರವಲಯದ ಬಿ.ಜಿ.ಎಸ್ ಪಬ್ಲಿಕ್ ಶಾಲೆಯ ಜ್ಞಾನ ಸಹ್ಯಾದ್ರಿ ಕ್ಯಾಂಪಸ್ನಲ್ಲಿ ಗುರುವಾರ ನಡೆದ ಜನಾಂಗೀಯ ಸಂಸ್ಕೃತಿ ದಿನಾಚರಣೆಯ ಅಂಗವಾಗಿ ಗ್ರಾಮೀಣ ಜನಜೀವನ, ಜಾನಪದ, ಕೃಷಿ, ಆಚಾರ, ವಿಚಾರ, ವಿಜ್ಞಾನ, ತಂತ್ರಜ್ಞಾನ, ಪರಿಸರವನ್ನು ವಿದ್ಯಾರ್ಥಿಗಳು ಸೃಷ್ಠಿಸಿದ್ದರು. ದೇಶೀಯ ಸಂಸ್ಕೃತಿಯನ್ನು ಬಿಂಬಿಸುವ ವೇಷಭೂಷಣಗಳನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಧರಿಸಿ ಶಾಲೆಯನ್ನು ತಳಿರು ತೋರಣಗಳು ಮತ್ತು ಹೂಗಳಿಂದ ಅಲಂಕರಿಸಿದ್ದರು.
ಕಾಡು ಮನುಷ್ಯರು ಅವರ ಆಚರಣೆಗಳು, ಕಾಡಿನ ಪರಿಸರ, ವನ್ಯ ಜೀವಿಗಳು, ಉಳುವಾ ಯೋಗಿಯಂಥ ರೈತ, ಬಿತ್ತನೆ ಕಾರ್ಯ, ಪೈರು ನಾಟಿ, ಬೆಳೆದ ಪೈರು, ಕೊಯ್ಲು ಮಾಡಿ ಶೇಖರಣೆ, ನಂತರದ ಸುಗ್ಗಿ ನೃತ್ಯ, ಕಣದ ಏರ್ಪಾಡುಗಳು, ಧಾನ್ಯಗಳ ವಿಂಗಡಣೆ, ಶೇಖರಣೆ, ಸಂರಕ್ಷಣೆ, ವಿವಿಧ ಕಾಳು, ಬೇಳೆಗಳ ಮೊಳಕೆಗಳ ಆಹಾರ ಪದಾರ್ಥಗಳು, ಗುಡಿಸಲು, ಮಣ್ಣಿನ ಮನೆ, ಎತ್ತಿನ ಗಾಡಿ, ಹುತ್ತದಲ್ಲಿ ಹಾವು, ಅದರ ವೈರಿ ಮುಂಗುಸಿ, ಬದಲಿ ವಿದ್ಯುತ್ ಮೂಲಗಳಾದ ಗಾಳಿಯಂತ್ರ ಮತ್ತು ಸೋಲಾರ್, ಬ್ಯಾಂಕ್ ನಿರ್ವಹಣೆಯನ್ನು ಪ್ರತಿಬಿಂಬಿಸುವ ಪ್ರತಿಕೃತಿಗಳು, ಮೈಸೂರು ಅರಮನೆ, ವಿವಿಧ ದೇವಾಲಯಗಳು, ಆದಿಚುಂಚನಗಿರಿ ಕ್ಷೇತ್ರದ ಪ್ರತಿಕೃತಿ, ದೇವರ ರಥಗಳು, ಜಲಪಾತ, ಬಣ್ಣಬಣ್ಣದ ರಂಗೋಲಿಗಳು, ಪುರಾತನ ನಾಣ್ಯಗಳು ಮುಂತಾದ ಜನಾಂಗೀಯ ಬದುಕನ್ನು ಬಿಂಬಿಸುವ ಸಂಗತಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದ್ದರು.
‘ನಮ್ಮ ದೇಶೀ ಸಂಸ್ಕೃತಿ, ಆಚಾರ ವಿಚಾರ, ಜನಜೀವನ, ಜಾನಪದ ಮುಂತಾದ ವಿಚಾರಗಳು ಮಕ್ಕಳ ಮನಸ್ಸಿಗೆ ತಲುಪಲು ಅವರೇ ಪರಕಾಯ ಪ್ರವೇಶಿಸಿದಂತೆ ಅನುಭವಿಸಿ ಪ್ರದರ್ಶಿಸುವ ಉದ್ದೇಶದಿಂದ ಜನಾಂಗೀಯ ಸಂಸ್ಕೃತಿ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಶಿಕ್ಷಕರು ಕೂಡ ಮಕ್ಕಳೊಂದಿಗೆ ನಮ್ಮ ದೇಶೀ ಪದ್ಧತಿಯಲ್ಲೇ ಉಡುಗೆ ತೊಡುಗೆಗಳನ್ನು ಧರಿಸಿ ವಿದ್ಯಾರ್ಥಿಗಳೊಂದಿಗೆ ಭಾಗವಹಿಸಿದ್ದೇವೆ. ಮಕ್ಕಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಅವರ ಪ್ರತಿಭೆಯನ್ನು ಗುರುತಿಸಿ ಬಹುಮಾನಗಳನ್ನೂ ವಿತರಿಸಲಿದ್ದೇವೆ. ಅಳಗುಳಿಮನೆ, ಚೌಕಾಬಾರ, ಕಲ್ಲಾಟ ಮುಂತಾದ ಜಾನಪದ ಆಟಗಳು, ಸುಗ್ಗಿ ಹಾಡು, ಪೈರು ಹಾಡು ಮುಂತಾದ ಕೃಷಿ ಸಂಸ್ಕೃತಿಯ ಹಾಡುಗಳನ್ನು ಮಕ್ಕಳು ಪ್ರದರ್ಶಸುತ್ತಿರುವುದು ಸಂತಸ ತಂದಿದೆ’ ಎಂದು ಪ್ರಾಂಶುಪಾಲ ಮಹದೇವಯ್ಯ ತಿಳಿಸಿದರು.
ಬಿಲ್ವಪತ್ರೆ ತಂಬುಳಿ
ಬೇಕಾಗುವ ಸಾಮಾಗ್ರಿ
4 ಪತ್ರೆಸೊಪ್ಪು
1 ಟೀ ಸ್ಪೂನ್ ಜೀರಿಗೆ
5 ಕಾಳುಮೆಣಸು
1 ಕಪ್ಪು ತೆಂಗಿನ ತುರಿ
ಉಪ್ಪು
1 ಟೀ ಸ್ಪೂನ್ ಬೆಲ್ಲ
ಮಾಡುವ ವಿಧಾನ
ಸೊಪ್ಪಿನ ದಂಟನ್ನು ತೆಗೆದುಕೊಳ್ಳಿ, ಬಾಣಲೆಯಲ್ಲಿ ಒಂದು ಚಮಚ ತುಪ್ಪ ಹಾಕಿ ಬಿಸಿ ಆದ ನಂತರ ಅದಕ್ಕೆ ಸೊಪ್ಪು, ಜೀರಿಗೆ ಮತ್ತು ಕಾಳುಮೆಣಸು ಹಾಕಿ ಹುರಿದುಕೊಳ್ಳಿ. ಹುರಿದ ಮಿಶ್ರಣಕ್ಕೆ ಒಂದು ಕಪ್ಪು ತೆಂಗಿನ ತುರಿ, ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ಇದು ಸಾಂಬಾರಿನಷ್ಟು ತೆಳ್ಳಗೆ ಇರಲಿ. ನಂತರ ಇದಕ್ಕೆ ತಪ್ಪದಲ್ಲಿ ಜೀರಿಗೆ ಹಾಕಿ ಒಗ್ಗರಣೆ ಕೊಡಿ. ಇದನ್ನು ಅನ್ನಕ್ಕೆ ಕಲಸಿ ತಿನ್ನಬಹುದು. ಇದೇ ವಿಧಾನದಲ್ಲಿ ಎಲವರಿಗೆಸೊಪ್ಪು, ಸೊರಲೆಸೊಪ್ಪಿನಿಂದಲೂ ಮಾಡಬಹುದು.
ಉಪಯೋಗ
ಇದು ಬೇಸಿಗೆಯ ಬೇಗೆಗೆ ತುಂಬಾ ಉತ್ತಮ ಪದಾರ್ಥ, ಅಲ್ಲದೇ ಪತ್ರೆಸೊಪ್ಪು ಆರೋಗ್ಯಕ್ಕೂ ಒಳ್ಳೆಯದು.
ಪ್ರತಿಯೊಂದು ಕುಟುಂಬವೂ ಶೌಚಾಲಯ ನಿರ್ಮಿಸಿಕೊಳ್ಳಬೇಕು – ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ
ಪ್ರತಿಯೊಂದು ಕುಟುಂಬವೂ ಶೌಚಾಲಯ ನಿರ್ಮಿಸಿಕೊಂಡಾಗ ಗ್ರಾಮದಲ್ಲಿ ನೈರ್ಮಲ್ಯ ಕಾಪಾಡುವುದು ಸೇರಿದಂತೆ ಎಲ್ಲರ ಆರೋಗ್ಯವೂ ಸುಧಾರಿಸುತ್ತದೆ ಎಂದು ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ ಹೇಳಿದರು.
ತಾಲ್ಲೂಕಿನ ಎಸ್.ದೇವಗಾನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವರದಗಾನಹಳ್ಳಿ ಗ್ರಾಮದಲ್ಲಿ ಬುಧವಾರ ನಿರ್ಮಲ ಭಾರತ್ ಅಭಿಯಾನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ನರೇಗಾ ಸೇರಿದಂತೆ ನಿರ್ಮಲ ಭಾರತ ಅಭಿಯಾನ ಯೋಜನೆಯಡಿಯಲ್ಲಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಳ್ಳಲು ಗ್ರಾಮ ಪಂಚಾಯತಿಯ ಮುಖಾಂತರ ಸಹಾಯಧನವನ್ನು ಬಿಡುಗಡೆ ಮಾಡಲಾಗುತ್ತಿದೆ. ಗ್ರಾಮಸ್ಥರು ಹಣದ ಬಿಡುಗಡೆ ವಿಷಯದಲ್ಲಿ ಗೊಂದಲ ಪಡುವುದು ಬೇಡ. ಗ್ರಾಮದಲ್ಲಿರುವ ಎಲ್ಲಾ ಕುಟುಂಬದವರೂ ಕಡ್ಡಾಯವಾಗಿ ಶೌಚಾಲಯಗಳನ್ನು ನಿರ್ಮಿಸಿ ಗ್ರಾಮದ ನೈರ್ಮಲ್ಯ ಕಾಪಾಡಬೇಕು. ಶೌಚಾಲಯ ನಿರ್ಮಿಸಿಕೊಂಡ ಎಲ್ಲಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಹಣ ಸಂದಾಯ ಮಾಡಲಾಗುತ್ತದೆ ಎಂದರು.
ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು ಮಾತನಾಡಿ ಪಂಚಾಯತಿ ವ್ಯಾಪ್ತಿಯ ಪ್ರತಿಯೊಂದು ಹಳ್ಳಿಯಲ್ಲೂ ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಮಾಡಿಕೊಳ್ಳಲು ಗ್ರಾಮ ಪಂಚಾಯತಿ ಸದಸ್ಯರೂ ಸೇರಿದಂತೆ ಅಧಿಕಾರಿಗಳು ಅರಿವು ಮೂಡಿಸುವಲ್ಲಿ ಸಹಕಾರ ನೀಡಬೇಕೆಂದರು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಗಣಪತಿಸಾಕರೆ ಮಾತನಾಡಿ ಸರ್ಕಾರದಿಂದ ಸಹಾಯಧನ ಬಿಡುಗಡೆಯಾಗಿದ್ದು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅಧಿಕಾರಿಗಳು ನಿಮ್ಮ ಗ್ರಾಮಗಳಿಗೆ ಭೇಟಿ ನೀಡಿ ಶೌಚಾಲಯಗಳ ನಿರ್ಮಾಣ ಕಾರ್ಯದ ಬಗ್ಗೆ ಪರಿಶೀಲನೆ ನಡೆಸುವುದರೊಂದಿಗೆ ಶೌಚಾಲಯಗಳು ಸಂಪೂರ್ಣವಾಗಿ ಮುಗಿದಿದ್ದರೆ ನಿಮ್ಮ ಹಣವನ್ನು ನೀಡಲು ಯಾವುದೇ ಕಾರಣಕ್ಕೂ ವಿಳಂಬ ಮಾಡುವುದಿಲ್ಲ. ಸ್ಯಾನಿಟರಿ ಗುಂಡಿಗಳನ್ನು ಅಗೆಯಲು ಸಾಧ್ಯವಾಗದ ಬೆಟ್ಟ ಗುಡ್ಡಗಳ ಪ್ರದೇಶದಲ್ಲಿ ನಗರಗಳಲ್ಲಿ ನಿರ್ಮಾಣ ಮಾಡಿದಂತೆ ಯುಜಿಡಿ ವ್ಯವಸ್ಥೆಯ ರೀತಿ ಪೈಪ್ಗಳನ್ನು ಅಳವಡಿಸಲು ಮೇಲಾಧಿಕಾರಿಗಳ ಬಳಿ ಚರ್ಚೆ ನಡೆಸಲಾಗುತ್ತದೆ. ಮುಂಬರುವ ದಿನಗಳಲ್ಲಿ ಸರ್ಕಾರದ ಯಾವುದೇ ಸೌಲಭ್ಯವನ್ನು ಪಡೆಯಬೇಕಾದರೂ ಶೌಚಾಲಯ ಖಡ್ಡಾಯವಾಗಿದ್ದು ಎಲ್ಲರೂ ಕಡ್ಡಾಯವಾಗಿ ನಿರ್ಮಾಣ ಮಾಡಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ಬಯಲು ಮಲವಿಸರ್ಜನೆಯಿಂದ ಅನೇಕ ರೋಗಗಳು ಹರಡುತ್ತಿರುವ ಬಗ್ಗೆ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡುವುದರೊಂದಿಗೆ ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟಲೂ ಸಾಧ್ಯವಾಗುತ್ತದೆ ಎಂದರು.
ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಕಾರ್ಯನಿರ್ವಾಹಕ ಅಧಿಕಾರಿ ಗಣಪತಿಸಾಕರೆ, ತಾಲ್ಲೂಕು ಪಂಚಾಯತಿ ಸದಸ್ಯರಾದ ನಾರಾಯಣಸ್ವಾಮಿ, ವೇಣುಗೋಪಾಲ್, ಎಸ್.ದೇವಗಾನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಗಂಗಾಧರಪ್ಪ, ಅಶ್ವಥ್ಥರೆಡ್ಡಿ ಮತ್ತಿತರರು ಹಾಜರಿದ್ದರು.
ವಿಭಾಗಮಟ್ಟಕ್ಕೆ ಆಯ್ಕೆಯಾದ ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ಎನ್.ಶಿವಕುಮಾರ್
ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಎನ್.ಶಿವಕುಮಾರ್ ‘ಸುಸ್ಥಿರ ಭವಿಷ್ಯಕ್ಕಾಗಿ ಕೃಷಿಯಲ್ಲಿ ನಾವೀನ್ಯತೆಗಳು, ಅವಕಾಶಗಳು ಮತ್ತು ಸವಾಲುಗಳು’ ವಿಷಯವಾಗಿ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ವಿಚಾರ ಗೋಷ್ಠಿಯಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮುಖ್ಯಶಿಕ್ಷಕ ಶಿವಶಂಕರ್ ಪ್ರಶಸ್ತಿಪತ್ರವನ್ನು ನೀಡಿದರು.
ಅನುದಾನವನ್ನು ಬಿಡುಗಡೆ ಮಾಡದಿರುವುದನ್ನು ಖಂಡಿಸಿ ಅಂಗವಿಕಲರ ಪ್ರತಿಭಟನೆ
ತಾಲ್ಲೂಕು ಪಂಚಾಯತಿ ಅನುದಾನದಲ್ಲಿ ಶೇಕಡಾ 3 ರಷ್ಟು ಅನುದಾನವನ್ನು ಅಂಗವಿಕಲರಿಗೆ ಬಿಡುಗಡೆ ಮಾಡದಿರುವುದನ್ನು ಖಂಡಿಸಿ ಬುಧವಾರ ತಾಲ್ಲೂಕು ಅಂಗವಿಕಲರ ಒಕ್ಕೂಟದ ವತಿಯಿಂದ ತಾಲ್ಲೂಕು ಪಂಚಾಯತಿ ಮುಂದೆ ಪ್ರತಿಭಟನೆಯನ್ನು ನಡೆಸಲಾಯಿತು.
ತಾಲ್ಲೂಕಿನಾದ್ಯಂತ 3342 ಕ್ಕೂ ಮೇಲ್ಪಟ್ಟು ಅಂಗವಿಕಲರಿದ್ದು, ಅವರು ಕನಿಷ್ಠ ಪ್ರಮಾಣದ ಮೂಲಭೂತ ಹಕ್ಕುಗಳಾದ ಆರೋಗ್ಯ, ಶಿಕ್ಷಣ ಮತ್ತು ಆರ್ಥಿಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ತಾಲ್ಲೂಕು ಪಂಚಾಯತಿ ಅನುದಾನದಲ್ಲಿ ಅಂಗವಿಕಲರಿಗೆ ಮೀಸಲಿಡಬೇಕಾದ ಹಣವನ್ನು ಬಿಡುಗಡೆ ಮಾಡದೇ ಅಂಗವಿಕಲರ ಹಕ್ಕನ್ನು ಉಲ್ಲಂಘಿಸಿದ್ದಾರೆ ಎಂದು ತಾಲ್ಲೂಕು ಅಂಗವಿಕಲರ ಒಕ್ಕೂಟದ ಬಿ.ಮುನಿರಾಜು ಆರೋಪಿಸಿದರು.
ಅಂಗವಿಕಲರಿಗೆ ಮೀಸಲಿಡಬೇಕಾದ ಶೇಕಡಾ 3 ರಷ್ಟು ಅನುದಾನ ಈ ಕೂಡಲೇ ಬಿಡುಗಡೆ ಮಾಡಬೇಕು. ಎಲ್ಲಾ ತಾಲ್ಲೂಕುಗಳಂತೆ ಅನುದಾನ ಚೆಕ್ ವಿತರಿಸಬೇಕು. ಗ್ರಾಮ ಪಂಚಾಯತಿಗಳಲ್ಲಿ ಅಂಗವಿಕಲರಿಗೆ ಆಶ್ರಯ ಯೋಜನೆಯಲ್ಲಿ ಸೌಲಭ್ಯ ಸಿಗಬೇಕು. 2012 ರಿಂದ 2014 ರವರೆಗೂ ಅಂಗವಿಕಲರಿಗೆ ಅನುದಾನ ನೀಡದೆ ಸುಳ್ಳು ಭರವಸೆ ನೀಡುತ್ತಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮೇಲೆ ಶಿಸ್ತುಕ್ರಮ ಜರುಗಿಸಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಅಂಗವಿಕಲರು ಘೋಷಣೆಗಳನ್ನು ಕೂಗಿದರು. ಸಂತೋಷ್ಕುಮಾರ್, ಭಾಸ್ಕರ್, ರೂಪ, ಮೋತಿ, ವಿನೋದಮ್ಮ, ಚಿಕ್ಕಮಾರಪ್ಪ, ಮಂಜುನಾಥ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸಂಕಷ್ಟದಲ್ಲಿ ರೈತ; ಭಾರವಾದ ಜಾನುವಾರು, ಎತ್ತಿನ ಬದಲು ಪವರ್ ಟಿಲ್ಲರ್
ಆಧುನಿಕತೆ ಮತ್ತು ತಾಂತ್ರಿಕತೆಯತ್ತ ಕೃಷಿ ವಾಲುತ್ತಿರುವುದು ಒಂದೆಡೆಯಾದರೆ, ಕೃಷಿ ಉಪಕರಣಗಳ ಚಾಲನಾ ಶಕ್ತಿಯಾದ ದನಸಂಪತ್ತುಗಳನ್ನು ಕಳೆದುಕೊಳ್ಳುತ್ತಿರುವುದು ಮತ್ತೊಂದೆಡೆಯಾಗಿ ಸೇರಿಕೊಂಡು ತಾಲ್ಲೂಕಿನಲ್ಲಿ ರಾಗಿ ಹೊಲದಲ್ಲಿ ಗುಂಟವೆ ಹಾಕುವುದಕ್ಕೆ ಪವರ್ ಟಿಲ್ಲರ್ ಬಳಸಲು ಪ್ರಾರಂಭಿಸಿದ್ದಾರೆ.
ರಾಗಿ ಹೊಲದಲ್ಲಿ ಕೈಬಿತ್ತನೆ ಮಾಡುವುದರಿಂದ ಕೆಲವೆಡೆ ಹೆಚ್ಚು ಪೈರು ಬೆಳೆದರೆ ಇನ್ನು ಕೆಲವು ಕಡೆ ಕಡಿಮೆ ಪೈರು ಮೊಳೆತಿರುತ್ತದೆ. ಇವನ್ನು ಸರಿದೂಗಿಸಲು ಹಾಗೂ ಕಳೆಯನ್ನು ಹೋಗಲಾಡಿಸಲು ಗುಂಟವೆ ಹಾಕುತ್ತಾರೆ. ಉದ್ದುದ್ದ ಗುಂಟವೆ ಮತ್ತು ಅಡ್ಡ ಗುಂಟವೆ ಎಂದು ಎರಡು ರೀತಿಯಾಗಿ ಹಾಕುವುದೂ ಉಂಟು. ಇದರಿಂದಾಗಿ ಪೈರು ಚೆನ್ನಾಗಿ ಬೇರು ಬಿಟ್ಟುಕೊಳ್ಳುವುದರಿಂದ ‘ಗುಂಟವೆ ಹಾಕಿದ ಹೊಲ ಚೆನ್ನ…’ ಎಂಬ ಗಾದೆ ಮಾತಿದೆ. ಈ ಕೆಲಸಕ್ಕೆ ಅನುಭವವಿರಲೇ ಬೇಕು.
ಮಳೆ ಬೆಳೆ ಸರಿಯಾಗಿಲ್ಲದೆ ಈಗ ಜಾನುವಾರುಗಳ ಪೋಷಣೆ ಗ್ರಾಮಗಳಲ್ಲಿ ಕಷ್ಟವಾಗತೊಡಗಿದೆ. ವ್ಯವಸಾಯದ ಬದುಕಿನ ಅವಿಭಾಜ್ಯ ಅಮಗವಾಗಿದ್ದ ಎತ್ತುಗಳ ಪೋಷಣೆ ಮೊದಲಿನಷ್ಟು ಸುಲಭವಾಗಿಲ್ಲ. ಬರದ ಕಾರಣ ಕೃಷಿ ಜಾನುವಾರುಗಳನ್ನು ಕಳೆದುಕೊಂಡು ಯಂತ್ರಗಳ ಮೇಲಿನ ಅವಲಂಬನೆ ಅನಿವಾರ್ಯವಾಗಿದೆ.
‘ಎತ್ತುಗಳ ಪಾಲನೆ ಪೋಷಣೆ ಈಗ ರೈತರಿಗೆ ಹೊರೆಯಾಗತೊಡಗಿದೆ. ಅಲ್ಲದೆ ಕೃಷಿ ಯಂತ್ರೋಪಕರಣಗಳಿಗೆ ಸರ್ಕಾರ ಸಹಾಯಧನ ನೀಡುತ್ತಿರುವುದರಿಂದಾಗಿ ಗುಂಟವೆ ಹಾಕಲು ಪವರ್ ಟಿಲ್ಲರ್ ಬಳಸಲು ತಾಲ್ಲುಕಿನ ಕೃಷಿಕರು ಪ್ರಾರಂಭಿಸಿದ್ದಾರೆ. ಪವರ್ ಟಿಲ್ಲರ್ ಬಳಸುವುದರಿಂದ ಮೂರರಿಂದ ನಾಲ್ಕು ಗುಂಟವೆ ಕೋಲುಗಳನ್ನು ಕಟ್ಟಬಹುದು ಮತ್ತು ವೇಗವಾಗಿ ಅಂದರೆ ದಿನಕ್ಕೆ ಮೂರು ಎಕರೆಯಷ್ಟು ಗುಂಟವೆ ಹಾಕಬಹುದಾಗಿದೆ. ಕಾಲಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಯು ಕೃಷಿಕನಿಗೂ ಬಂದೊದಗಿದೆ’ ಎನ್ನುತ್ತಾರೆ ತಲಕಾಯಲಬೆಟ್ಟ ಸಾವಯವ ಕೃಷಿ ಪರಿವಾರದ ಸಂಚಾಲಕ ಬೂದಾಳ ರಾಮಾಂಜಿನಪ್ಪ.
–ಡಿ.ಜಿ.ಮಲ್ಲಿಕಾರ್ಜುನ.
ಅಧಿಕಾರಿಗಳು ವಸ್ತುಸ್ಥಿತಿಯ ಅಧ್ಯಯನ ಮಾಡಿ ಅಂಕಿ ಅಂಶಗಳನ್ನು ನೀಡಬೇಕು – ಜಿಲ್ಲಾ ಪಂಚಾಯತಿ ಅಧ್ಯಕ್ಷ ಪಿ.ಕೇಶವರೆಡ್ಡಿ
ಅಧಿಕಾರಿಗಳು ನೀಡುವ ಅಂಕಿ ಅಂಶಗಳ ಆಧಾರದ ಮೇಲೆ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಅಧಿಕಾರಿಗಳು ವಸ್ತುಸ್ಥಿತಿಯ ಅಧ್ಯಯನ ಮಾಡಿ ಅಂಕಿ ಅಂಶಗಳನ್ನು ನೀಡಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಪಿ.ಕೇಶವರೆಡ್ಡಿ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಾಧ್ಯಂತ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದೆ ಇರುವುದರಿಂದ ಕೆಲವು ಕಡೆ ಬಿತ್ತನೆ ಕಾರ್ಯ ಆಗಿದೆ ಇನ್ನು ಕೆಲವೆಡೆ ಬಿತ್ತನೆ ಕಾರ್ಯವಾಗಿಲ್ಲ. ಹಾಗಾಗಿ ರೈತರು ಸಂಕಷ್ಟಕ್ಕೆ ತುತ್ತಾಗುತ್ತಿದ್ದಾರೆ. ಕೃಷಿ ಇಲಾಖೆಯ ಅಧಿಕಾರಿಗಳು ಹದಿನೈದು ದಿನಗಳಿಗೊಮ್ಮೆ ಕ್ಷೇತ್ರದಲ್ಲಿ ಸಂಚಾರ ನಡೆಸಿ, ವಸ್ತುಸ್ಥಿತಿಯ ಬಗ್ಗೆ ಅಂಕಿ ಅಂಶಗಳನ್ನು ನೀಡಬೇಕು, ಇಲಾಖೆಯ ಮುಖಾಂತರ ರೈತರಿಗೆ ಸಿಗುವಂತಹ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸಬೇಕು, ರೈತರಿಗೆ ವಿತರಣೆಯಾಗುತ್ತಿರುವ ರಸಗೊಬ್ಬರಗಳು ಹಾಗೂ ವಿವಿಧ ಸೌಲಭ್ಯಗಳು ದುರುಪಯೋಗವಾಗುತ್ತಿರುವುದರ ಬಗ್ಗೆ ದೂರುಗಳು ಬರುತ್ತಿದ್ದು ಅವಶ್ಯವಿರುವ ರೈತರಿಗೆ ಮಾತ್ರ ಸೌಲಭ್ಯಗಳನ್ನು ಒದಗಿಸುವಂತೆ ಹೇಳಿದರು.
ತೋಟಗಾರಿಕೆ ಇಲಾಖೆಯಲ್ಲಿ ಈಗಾಗಲೇ ಬಹಳಷ್ಟು ಮಂದಿ ರೈತರು ಪೌಲ್ಟ್ರಿಹೌಸ್ಗಳನ್ನು ನಿರ್ಮಾಣ ಮಾಡಿಕೊಂಡಿದ್ದರೂ ಈವರೆಗೂ ಸಹಾಯಧನ ಬಿಡುಗಡೆಯಾಗಿಲ್ಲ. ಅನುದಾನ ಬಿಡುಗಡೆ ಮಾಡಲು ಅಗತ್ಯವಾಗಿರುವ ಕ್ರಮಗಳನ್ನು ಶೀಘ್ರವಾಗಿ ಕೈಗೊಳ್ಳಲಾಗುತ್ತದೆ ಎಂದರು.
ರೇಷ್ಮೆ ಇಲಾಖೆಯ ಮುಖಾಂತರ ಗೂಡು ಬೆಳೆಯುವಂತಹ ರೈತರಿಗೆ ನೀಡುತ್ತಿರುವ ಪ್ರೋತ್ಸಾಹ ಧನ ಮಿಶ್ರತಳಿಗೆ ೩೦ ರೂಪಾಯಿಗಳು, ದ್ವಿತಳಿ ಗೂಡಿಗೆ ೫೦ ರೂಪಾಯಿಗಳಂತೆ ನಿಗದಿ ಮಾಡಿರುವುದರಿಂದ ರೈತರು ನೇರವಾಗಿ ಬೆಳೆದ ಗೂಡನ್ನು ಮಾರುಕಟ್ಟೆಗೆ ತರುತ್ತಿದ್ದಾರೆ, ಇದರಿಂದ ಬಿಡುಗಡೆಯಾಗುತ್ತಿರುವ ಅನುದಾನಗಳ ಮೊತ್ತ ಕಡಿಮೆಯಾಗಿದ್ದು ಸಕಾಲದಲ್ಲಿ ರೈತರಿಗೆ ಹಣವನ್ನು ಹಂಚಿಕೆ ಮಾಡಲು ಕಷ್ಟಕರವಾಗಿದೆ ಎಂದು ಸಹಾಯಕ ನಿರ್ದೇಶಕ ಚಂದ್ರಪ್ಪ ವಿವರಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಬಿ.ಸಿ.ಎಂ. ಇಲಾಖೆಯ ಅಧಿಕಾರಿಗಳು ವಿಧ್ಯಾರ್ಥಿನಿಲಯಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಬೇಕು, ಹೆಣ್ಣು ಮಕ್ಕಳ ವಿಧ್ಯಾರ್ಥಿನಿಲಯಗಳಲ್ಲಿ ಮಹಿಳಾ ವಾರ್ಡನ್ಗಳನ್ನು ನೇಮಕ ಮಾಡಬೇಕು, ಭದ್ರತೆಯನ್ನು ಒದಗಿಸಬೇಕು, ಗುಣಮಟ್ಟದ ಆಹಾರ ಪದಾರ್ಥಗಳನ್ನು ವಿತರಣೆ ಮಾಡದ ಏಜೆಂಟರುಗಳ ಮೇಲೆ ಕ್ರಮಕ್ಕೆ ಮುಂದಾಗಬೇಕು, ಎಲ್ಲಾ ವಿಧ್ಯಾರ್ಥಿನಿಲಯಗಳಲ್ಲಿ ಖಡ್ಡಾಯವಾಗಿ ಬಿಸಿನೀರು ದೊರೆಯುವಂತೆ ನೋಡಿಕೊಳ್ಳಬೇಕು, ಎಲ್ಲಾ ನಿಲಯಗಳಲ್ಲಿ ಯು.ಪಿ.ಎಸ್.ಗಳನ್ನು ಅಳವಡಿಸಬೇಕು ಎಂದು ಇಲಾಖೆಯ ಅಧಿಕಾರಿ ಪುರುಷೋತ್ತಮ್ ಹಾಗೂ ವಾರ್ಡನ್ ಲಕ್ಷ್ಮೀದೇವಮ್ಮ ಅವರಿಗೆ ಸೂಚಿಸಿದರು.
ಕುಡಿಯುವ ನೀರಿಗಾಗಿ ಕೊರೆಯಿಸಿರುವ ಕೊಳವೆಬಾವಿಗಳಿಗೆ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳ ಸಹಕಾರವನ್ನು ಪಡೆದುಕೊಂಡು ತುರ್ತಾಗಿ ವಿದ್ಯು ತ್ ಸಂಪರ್ಕವನ್ನು ಕಲ್ಪಿಸುವಂತೆ ಬೆಸ್ಕಾಂ ಇಲಾಖೆಯ ಎಇಇ ಬೈರೇಗೌಡ ಅವರಿಗೆ ಸೂಚಿಸಿದರು.
ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಕೈಗಾರಿಕಾ ಇಲಾಖೆ, ಪಶುವೈದ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಲಾನಯನ ಇಲಾಖೆ ಸೇರಿದಂತೆ ಉಳಿದ ಇಲಾಖಾಧಿಕಾರಿಗಳಿಂದ ಮಾಹಿತಿ ಪಡೆದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೀಣಾಗಂಗುಲಪ್ಪ, ತಾಲ್ಲೂಕು ಪಂಚಾಯತಿ್ತಿ ಅಧ್ಯಕ್ಷೆ ಆಂಜಿನಮ್ಮ, ಜಿ.ಪಂ.ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಶಿವಲೀಲಾರಾಜಣ್ಣ, ತಾಲ್ಲೂಕು ಪಂಚಾಯತಿ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಗಣಪತಿ ಸಾಕರೆ ಮತ್ತಿತರರು ಹಾಜರಿದ್ದರು.
ವಿದ್ಯಾರ್ಥಿಗಳು ಆಚರಿಸಿದ ಶಿಕ್ಷಕರ ದಿನಾಚರಣೆ
ತಾಲ್ಲೂಕಿನ ಗುಡಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ವಿಶಿಷ್ಠವಾಗಿ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯನ್ನು ಆಚರಿಸಿದರು.
ವಿದ್ಯಾರ್ಥಿಗಳೇ ರೂಪಿಸಿದ್ದ ಕಾರ್ಯಕ್ರಮದಲ್ಲಿ ಡಾ.ಎಸ್.ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಶಿಕ್ಷಕರಿಗೆ ವಿವಿಧ ಕ್ರೀಡೆಗಳನ್ನು ನಡೆಸಿ ಬಹುಮಾನಗಳನ್ನು ವಿತರಿಸಿದ್ದು ವಿಶೇಷವಾಗಿತ್ತು.
ಮ್ಯೂಸಿಕಲ್ ಚೇರ್ನಲ್ಲಿ ಶಿಕ್ಷಕರಾದ ಬಾಲಚಂದ್ರ(ಪ್ರಥಮ), ಎಂ.ಎನ್.ಲಕ್ಷ್ಮೀ(ದ್ವಿತೀಯ), ಎಂ.ಪರಮೇಶ್ವರಪ್ಪ(ತೃತೀಯ)ರಾದರೆ, ಬಕೆಟ್ಗೆ ಬಾಲ್ ಹಾಕುವುದರಲ್ಲಿ ಎಂ.ಬಾಲಚಂದ್ರ(ಪ್ರಥಮ), ಪರಮೇಶ್ವರಪ್ಪ(ದ್ವಿತೀಯ), ಶ್ರೀರಾಮಪ್ಪ(ತೃತೀಯ)ರಾದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾರ್ಥಿನಿ ಸ್ನೇಹಲತಾ ಮತನಾಡಿ ವರ್ಷಪೂರ್ತಿ ನಮ್ಮನ್ನು ರೂಪಿಸುವ, ತಿದ್ದುವ, ಕಲಿಸುವ ಶಿಕ್ಷಕರ ದಿನಾಚರಣೆಯನ್ನು ವಿದ್ಯಾರ್ಥಿಗಳಾದ ನಾವು ಅವರು ಆಡಿ ನಲಿಯುವಂತೆ ಮಾಡುವ ಮೂಲಕ ಆಚರಿಸಬೇಕೆಂದು ಕಾರ್ಯಕ್ರಮವನ್ನು ರೂಪಿಸಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿಗಳಾದ ನಯನಾ, ರಜನಿ, ಮುತ್ತುರಾಜ್ ಭಾಗವಹಿಸಿದ್ದರು.
ಶೈಕ್ಷಣಿಕ ಬಂದ್ಗೆ ವಿದ್ಯಾರ್ಥಿಗಳ ಬೆಂಬಲ
ವಿದ್ಯಾರ್ಥಿಗಳ ಶೈಕ್ಷಣಿಕ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಎಸ್.ಎಫ್.ಐ ಸಂಘಟನೆಯು ಸೆಪ್ಟೆಂಬರ್ 10 ರಂದು ರಾಜ್ಯಾದ್ಯಂತ ಶೈಕ್ಷಣಿಕ ಬಂದ್ಗೆ ಕರೆ ನೀಡಿದ್ದು, ಈ ಬಗ್ಗೆ ಸೋಮವಾರ ಎಸ್.ಎಫ್.ಐ ವತಿಯಿಂದ ಪಟ್ಟಣದ ಶಾಲಾ ಕಾಲೇಜುಗಳಲ್ಲಿ ಪ್ರಚಾರ ನಡೆಸಿ ಸಹಕಾರ ನೀಡುವಂತೆ ಭಿತ್ತಿಪತ್ರಗಳನ್ನು ಹಂಚಲಾಯಿತು.
ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಪ್ರತಿಭಟನೆ ಕೈಗೊಳ್ಳುತ್ತಿದ್ದೇವೆ. ವಿದ್ಯಾರ್ಥಿನಿಯರ ಮೇಲಿನ ಅತ್ಯಾಚಾರ, ಲೈಂಗಿಕ ಕಿರುಕುಳ ಹಾಗೂ ದೌರ್ಜನ್ಯಗಳನ್ನು ತಡೆಗಟ್ಟಲು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಶಾಲಾ ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿಯನ್ನು ರಚಿಸಬೇಕು. ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಶಿಕ್ಷಣಕ್ಕಾಗಿ ರಾಜ್ಯ ಬಜೆಟ್ನಲ್ಲಿ ಶೇಕಡಾ 30 ಹಾಗೂ ಕೇಂದ್ರ ಬಜೆಟ್ನಲ್ಲಿ ಶೇಕಡಾ 6 ರಷ್ಟು ಹಣವನ್ನು ಮೀಸಲಿಡಬೇಕು. ಪದವಿ ಪಠ್ಯ ಪುಸ್ತಕ ವಿಳಂಬವಾಗಬಾರದು. ಪರಿಶಿಷ್ಠ ಜಾತಿ ಹಾಗೂ ಪಂಗಡ ಮತ್ತು ಒ.ಬಿ.ಸಿ ಹಾಸ್ಟೆಲ್ ವಿದ್ಯಾರ್ಥಿಗಳ ಮಾಸಿಕ ಆಹಾರ ಭತ್ಯೆಯನ್ನು ಹೆಚ್ಚಿಸಬೇಕು. ಅಗತ್ಯ ಮೂಲಭೂತ ಸೌಕರ್ಯಗಳನ್ನು ನೀಡಿ ಉನ್ನತೀಕರಿಸಬೇಕು. ರಾಜ್ಯದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳ ಅನುಮತಿಯನ್ನು ರದ್ದುಪಡಿಸಿ ಸರ್ಕಾರಿ ವಿಶ್ವವಿದ್ಯಾಲಯಗಳನ್ನು ಬಲಪಡಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅಕ್ರಮ ಡೊನೇಷನ್ ವಸೂಲಿ ನಿಲ್ಲಬೇಕು. ಆರ್.ಟಿ.ಇ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಮುಂತಾದ ಬೇಡಿಕೆಗಳನ್ನು ಇಡುತ್ತಿದ್ದೇವೆ. ಎಲ್ಲಾ ವಿದ್ಯಾರ್ಥಿಗಳೂ ಶೈಕ್ಷಣಿಕ ಸುವ್ಯವಸ್ಥೆಗಾಗಿ ಬಂದ್ಗೆ ಸಹಕರಿಸಬೇಕೆಂದು ಕೋರಿದರು.
ಡಿ.ವೈ.ಎಫ್.ಐ ರಾಜ್ಯ ಸಮಿತಿ ಸದಸ್ಯ ಕುಂದಲಗುರ್ಕಿ ಮುನೀಂದ್ರ, ಎಸ್.ಎಫ್.ಐ ಸಂಘಟನೆಯ ಅಂಬರೀಷ್, ನಾಗೇಶ್, ಹರೀಶ್, ಮಂಜುನಾಥ್, ಮುಜಾಹಿದ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಮಕ್ಕಳ ಜೊತೆ ಪ್ರಧಾನಿ ಸಂವಾದ
ಶಿಕ್ಷಕರ ದಿನಾಚರಣೆ ಅಂಗವಾಗಿ ಶುಕ್ರವಾರ ಮಕ್ಕಳ ಜೊತೆ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಸಂವಾದವನ್ನು ತಾಲ್ಲೂಕಿನ ಹಲವಾರು ಶಾಲೆಗಳಲ್ಲಿ ದೂರದರ್ಶನದಲ್ಲಿ ಮಕ್ಕಳು ವೀಕ್ಷಿಸಿದರು.
ಇತ್ತೀಚೆಗೆ ಜಪಾನ್ ದೇಶಕ್ಕೆ ಭೇಟಿ ನೀಡಿದ್ದ ಪ್ರಧಾನಿಯವರು ಅಲ್ಲಿ ತಮ್ಮ ಶಾಲೆಯನ್ನು ಶುಚಿಗೊಳಿಸುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಬಗ್ಗೆ ಹೇಳಿದ್ದು ಮತ್ತು ಪರಿಸರ ಕಾಳಜಿಯ ಬಗ್ಗೆ ಇಷ್ಟವಾಯಿತು ಎಂದು ಕ್ರೆಸೆಂಟ್ ಶಾಲೆಯ ಸುನೀತಾ ರಾವಲ್ ಹೇಳಿದರೆ, ವಿದ್ಯುತ್ ಮತ್ತು ನೀರಿನ ಉಳಿತಾಯದ ಬಗ್ಗೆ ಹೇಳಿದ್ದು ಮತ್ತು ನಿರುದ್ಯೋಗ ನಿವಾರಣೆಗಾಗಿ ಕೌಶಲ್ಯ ಅಭಿವೃದ್ಧಿಗೆ ನೀಡುತ್ತಿರುವ ಪ್ರಾಮುಖ್ಯತೆಯನ್ನು ಕ್ರೆಸೆಂಟ್ ಶಾಲೆಯ ವಿದ್ಯಾರ್ಥಿ ಮೊಹಮ್ಮದ್ ಜಾಯಿದ್ ಮೆಚ್ಚಿದರು.
‘ಇದೊಂದು ವಿನೂತನ ಪ್ರಯೋಗ. ಮಕ್ಕಳಿಗೆ ಪ್ರಧಾನಿಯೊಂದಿಗೆ ಮಾತನಾಡಬಹುದು ಎಂಬ ಸಂಗತಿಯೇ ಅವರಲ್ಲಿ ಉತ್ಸಾಹ ಹಾಗೂ ಪ್ರೇರಣೆ ನೀಡುತ್ತದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ, ಉತ್ತಮ ಶಿಕ್ಷಕರಾಗಲು ಅವರು ಕರೆ ನೀಡಿದ್ದು ಮಹತ್ವದ್ದಾಗಿತ್ತು. ಆಸಕ್ತಿಕರವಾಗಿದ್ದ ಈ ಕಾರ್ಯಕ್ರಮ ಮಕ್ಕಳನ್ನು ಆಲೋಚನೆಗೆ ಹಚ್ಚಿತು’ ಎಂದು ಕ್ರೆಸೆಂಟ್ ಶಾಲೆಯ ಮುಖ್ಯಶಿಕ್ಷಕ ತಮೀಮ್ಪಾಷ ತಿಳಿಸಿದರು.
ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಿಕ್ಷಕರಿಂದ ರಕ್ತದಾನ
ಭಾರತೀಯ ರೆಡ್ಕ್ರಾಸ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್ನ ಬಾಲಾಜಿ ಕಲ್ಯಾಣ ಮಂಟಪದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಸೇರಿದಂತೆ ಸುಮಾರು 65 ಶಿಕ್ಷಕರು ರಕ್ತದಾನ ಮಾಡಿದರು. ಆದರೆ ಸುಮಾರು 1700 ಮಂದಿ ತಾಲ್ಲೂಕಿನ ಶಿಕ್ಷಕರಲ್ಲಿ ಕೇವಲ 65 ಮಂದಿ ರಕ್ತದಾನ ಮಾಡಿದ್ದು ವಿಪರ್ಯಾಸವಾಗಿತ್ತು.
ವ್ಯಕ್ತತ್ವ ರೂಪಿಸುವ ಶಿಕ್ಷಕರ ಪಾತ್ರ ಬಹುಮುಖ್ಯ
ಮನುಷ್ಯನನ್ನು ರೂಪಿಸುವುದೇ ಶಿಕ್ಷಣ. ಮುಗ್ಧ ಮಗುವನ್ನು ಪರಿಪೂರ್ಣ ವ್ಯಕ್ತತ್ವಗಳನ್ನಾಗಿಸುವ ಶಿಕ್ಷಕರ ಪಾತ್ರ ಬಹು ಮುಖ್ಯವಾದದ್ದು ಚಿಕ್ಕಬಳ್ಳಾಪುರ ವಾಪಸಂದ್ರದ ರಾಧಾಕೃಷ್ಣ ವಿವೇಕಾನಂದ ಆಶ್ರಮದ ಪೂರ್ಣಾನಂದಸ್ವಾಮಿ ಆಶೀರ್ವಚನದಲ್ಲಿ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್ನ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಎಸ್.ರಾಧಾಕೃಷ್ಣನ್ ಅವರ ಜನ್ಮದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮೌಲ್ಯಾಧಾರಿತ ಶಿಕ್ಷಣ ಕುಂಠಿತಗೊಳ್ಳುತ್ತಿದೆ. ನಿರಂತರ ಅಧ್ಯಯನ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಶಿಕ್ಷಕರು ವಿದ್ಯಾರ್ಥಿಗಳಿಗೆ ಹೊಸ ಬೆಳಕನ್ನು ಹೊಸ ಹೊಳಹುಗಳನ್ನು ತೋರಿಸಬೇಕಾಗಿದೆ. ಕಲಿಯುತ್ತಾ ಕಲಿಸುತ್ತಾ ಸಾಗುವ ಶಿಕ್ಷಕ ವೃತ್ತಿ ಪವಿತ್ರವಾದದ್ದು. ಗುರು ಎಂಬ ಉನ್ನತ ಸ್ಥಾನಕ್ಕೆ ಧಕ್ಕೆ ಬರದಂತೆ ಸಮಾಜ ಅಭಿವೃದ್ಧಿಗೆ ಪೂರಕವಾದ ಶಿಕ್ಷಣ ನೀಡಬೇಕೆಂದು ಹೇಳಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ ಶಿಲೆಯನ್ನು ಕೆತ್ತಿ ಪೂಜನೀಯ ಶಿಲ್ಪವನ್ನಾಗಿಸುವ ಶಿಲ್ಪಿಯಂಥಹ ವ್ಯಕ್ತಿತ್ವ ರೂಪಿಸುವ ಪವಿತ್ರ ವೃತ್ತಿ ಶಿಕ್ಷಕರದ್ದು. ಬದಲಾಗುತ್ತಿರುವ ತಾಂತ್ರಿಕ ಯುಗದಲ್ಲಿ ಪೈಪೋಟಿ ಎದುರಿಸಬೇಕಾದರೆ ತಾವೂ ಹೊಸದನ್ನು ಕಲಿತು ಮಕ್ಕಳಿಗೂ ಕಲಿಸಬೇಕು. ಸಾಮರಸ್ಯ, ಸಾಮಾಜಿಕ ಕಳಕಳಿ, ಪರಿಸರಪ್ರೇಮ, ಉತ್ತಮ ಹವ್ಯಾಸಗಳನ್ನು ಮಕ್ಕಳಿಗೆ ಕಲಿಸಿ ಎಂದು ನುಡಿದರು.
ಶಿಕ್ಷಕರ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ನಿವೃತ್ತರಾದ 22 ಮಂದಿ ಶಿಕ್ಷಕರು ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಕುಂದಲಗುರ್ಕಿ ಮೃದುಲಾ ಮತ್ತು ಮುತ್ತೂರು ಎ.ಶ್ರೀನಿವಾಸ್ ಅವರನ್ನು ಗೌರವಿಸಲಾಯಿತು.
ಶಿಕ್ಷಕ ನಾಗರಾಜ್ಶೆಟ್ಟಿ ಮಹಾಭಾರತದ ಒಂದು ದೃಶ್ಯವನ್ನು ವೇಷಭೂಷಣಗಳೊಂದಿಗೆ ಏಕಪಾತ್ರಾಭಿನಯ ಪ್ರದರ್ಶಿಸಿದರು. ಬಡ್ತಿ ನೀಡಬೇಕೆಂದು ಪ್ರೌಢಶಾಲಾ ಶಿಕ್ಷಕರು ಶಾಸಕ ಎಂ.ರಾಜಣ್ಣ ಅವರಿಗೆ ಮನವಿಯನ್ನು ಸಲ್ಲಿಸಿದರು.
ತಹಶಿಲ್ದಾರ್ ಜಿ.ಎ.ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ತಾಲ್ಲೂಕು ಪಂಚಾಯತಿ ಪ್ರಭಾರಿ ಕಾರ್ಯನಿರ್ವಾಹಣಾಧಿಕಾರಿ ಗಣಪತಿ ಸಾಕರೆ, ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಸದಸ್ಯ ಡಿ.ಎಸ್.ಎನ್ ರಾಜು, ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ರಾಮಚಂದ್ರಪ್ಪ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ, ಜೆ.ಡಿ.ಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ, ಮುನಿವೆಂಕಟಸ್ವಾಮಿ, ದ್ಯಾವಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ವರ್ಲಿ ಚಿತ್ರಕಲೆಯಿಂದ ಅಲಂಕೃತಗೊಂಡ ವೇದಿಕೆ
ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್ನ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಎಸ್.ರಾಧಾಕೃಷ್ಣನ್ ಅವರ ಜನ್ಮದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆಯ ವೇದಿಕೆಯ ಅಲಂಕಾರ ವಿಶಿಷ್ಟವಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಜಾನಪದ ಲೊಕವನ್ನು ಪ್ರವೇಶಿಸುವಂತೆ ಶಿಡ್ಲಘಟ್ಟ ಮುಖ್ಯ ರಸ್ತೆಯಿಂದಲೇ ಬಿದಿರು ಹಾಗೂ ಬಣ್ಣದ ಬಟ್ಟೆಗಳನ್ನು ಬಳಸಿ ದಾರಿಯುದ್ದಕ್ಕೂ ಸಿಂಗರಿಸಲಾಗಿತ್ತು. ವರ್ಲಿ ಚಿತ್ರಕಲೆಯಿಂದ ವೇದಿಕೆಯ ಮುಂಭಾಗದಲ್ಲಿ ವಿವಿಧ ವಾದ್ಯಗಳು, ನೃತ್ಯ, ಶಾಲೆಗೆ ಹೋಗುವ ಬಾಲಕರನ್ನು ಚಿತ್ರಿಸಲಾಗಿತ್ತು. ಅಲ್ಲಲ್ಲಿ ಬಿಡಿಸಿದ್ದ ಬಣ್ಣಬಣ್ಣದ ರಂಗೋಲಿಗಳು, ಚಿತ್ತಾರಗಳಿರುವ ಮಡಕೆಗಳು, ಹೂಗಳು ಅಂದವನ್ನು ಹೆಚ್ಚಿಸಿದ್ದರೆ, ವೇದಿಕೆಯ ಮೇಲಿನ ಬ್ಯಾನರ್ ಗುರು ಮತ್ತು ಶಿಷ್ಯರ ಆರೋಗ್ಯಕರ ಸಂಬಂಧದ ಪ್ರತೀಕವಾಗಿ ರೂಪಿತವಾಗಿತ್ತು. ಸುತ್ತ ಶಿಕ್ಷಣಕ್ಕೆ ಸಂಬಂಧಿಸಿದ ಗಾಂಧೀಜಿ, ಐನ್ಸ್ಟೈನ್, ಅಬ್ದುಲ್ ಕಲಾಂ ಮುಂತಾದವರ ಶಿಕ್ಷಣಕ್ಕೆ ಸಂಬಂಧಿಸಿದ ಸೂಕ್ತಿಗಳು ಶಿಕ್ಷಣ ದಿನಾಚರಣೆಗೆ ಅನ್ವರ್ಥಕವಾಗಿದ್ದವು.
‘ಗುರು ಪಠ್ಯ ಪುಸ್ತಕಗಳ ಮಿತಿಯನ್ನು ಮೀರಿ ಶಿಕ್ಷಣವನ್ನು ನೀಡಬೇಕು ಎಂಬುದನ್ನು ಸಾರುವ ಉದ್ದೇಶದಿಂದ ಕ್ರಿಯಾಶೀಲವಾಗಿ ವೇದಿಕೆ ಹಾಗೂ ಕಾರ್ಯಕ್ರಮದ ಸ್ಥಳವನ್ನು ದೇಶೀ ಪದ್ಧತಿಯಲ್ಲಿ ಅಲಂಕರಿಸಿದೆವು. ಕನ್ನಮಂಗಲ, ತಾತಹಳ್ಳಿ ಮತ್ತು ಗುಡಿಹಳ್ಳಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಾದ ಕಲಾಧರ್, ನಾರಾಯಣಸ್ವಾಮಿ, ಬಾಲಚಂದ್ರ, ನಾಗರಾಜ್, ಟಿ.ಮಂಜುನಾಥ್ ಮತ್ತು ಸುರೇಶ್ ವೇದಿಕೆ ಹಾಗೂ ಕಾರ್ಯಕ್ರಮದ ಸಿಂಗಾರಕ್ಕೆ ಶ್ರಮಿಸಿದ್ದಾರೆ’ ಎಂದು ಶಿಕ್ಷಕ ದೇವರಾಜ್ ತಿಳಿಸಿದರು.
ಕೆಟ್ಟ ನಡತೆಯಿರುವ ವಾಟರ್ಮನ್ ಬದಲಿಸಲು ಒತ್ತಾಯ
ಗ್ರಾಮದ ಮಹಿಳೆಯರನ್ನು ಅವಾಚ್ಯವಾಗಿ ಮಾತನಾಡುವ ಕೆಟ್ಟ ನಡತೆಯಿರುವ ವಾಟರ್ಮನ್ ನನ್ನು ಕೆಲಸದಿಂದ ತೆಗೆದು ಬೇರೆಯವರನ್ನು ನಿಯುಕ್ತಿಗೊಳಿಸುವಂತೆ ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ಗ್ರಾಮಸ್ಥರು ಒತ್ತಾಯಿಸಿದರು.
ಮುತ್ತೂರು ಗ್ರಾಮದಲ್ಲಿ ಗುರುವಾರ ಗ್ರಾಮಸ್ಥರು ಸಭೆ ಸೇರಿ ವಾಟರ್ಮನ್ ನಿಂದಾಗುತ್ತಿರುವ ತೊಂದರೆಗಳ ಬಗ್ಗೆ ಚರ್ಚಿಸಿದರು. ವಾಟರ್ಮನ್ ಸಂತೋಷ್ ಬದಲಿಗೆ ಆತನ ತಂದೆ ಕುಪ್ಪಪ್ಪ ಸುಮಾರು ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಸುಮಾರು ಒಂದೂವರೆ ವರ್ಷಗಳಿಂದ ಕುಡಿತದ ಚಟಕ್ಕೆ ಬಲಿಯಾಗಿ ಮಹಿಳೆಯರನ್ನು ಲೈಂಗಿಕ ಆಸಕ್ತಿಯಿಂದ ಮಾತನಾಡಿಸುವುದು, ಹಿರಿಯರನ್ನು ಅವಾಚ್ಯ ಶಬ್ದಗಳನ್ನು ಬಳಸಿ ಮಾತನಾಡುವುದೂ ರೂಢಿಸಿಕೊಂಡಿದ್ದಾನೆ. ಹಲವಾರು ಬಾರಿ ಎಚ್ಚರಿಸಿದ್ದರೂ ತನ್ನ ದುರಭ್ಯಾಸವನ್ನು ಆತ ಬಿಡದ ಕಾರಣ ಆತನನ್ನು ಆ ಕೆಲಸದಿಂದ ತೆಗೆಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರಾದ ವೆಂಕಟರಾಜೇಗೌಡ ಮತ್ತು ವೇಣುಗೋಪಾಲ್ ಈ ಬಗ್ಗೆ ಪಂಚಾಯತಿಯಲ್ಲಿ ತುರ್ತು ಸಭೆ ಸೇರಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
‘ಅತ್ಯಂತ ಸುಸಂಸ್ಕೃತ ಜನರಿರುವ ನಮ್ಮ ಗ್ರಾಮ ಸಾಮರಸ್ಯಕ್ಕೆ ಹೆಸರಾದುದು. ಚುನಾವಣೆ ಬಿಟ್ಟರೆ ಮಿಕ್ಕೆಲ್ಲಾ ಸಮಯದಲ್ಲೂ ಒಗ್ಗಟ್ಟಿನಿಂದಿರುವ ನಮ್ಮ ಗ್ರಾಮದಲ್ಲಿ ಎಲ್ಲಾ ಜನಾಂಗದವರೂ ಅಣ್ಣತಮ್ಮಂದಿರಂತೆ ವಾಸಿಸುತ್ತಿದ್ದೇವೆ. ನೀರಿನ ಹಂಚಿಕೆಯಲ್ಲೂ ಯಾರಿಗೂ ಸಮಸ್ಯೆಯಾಗದಂತೆ ಸಮನಾಗಿ ಹಂಚಿಕೆ ಮಾಡುತ್ತಾ ಬಂದಿದ್ದೇವೆ. ಆದರೆ ಕುಡಿತಕ್ಕೆ ದಾಸನಾಗಿರುವ ವಾಟರ್ಮನ್ ಗ್ರಾಮದ ಮಹಿಳೆಯರು ಹಾಗೂ ಹಿರಿಯರೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಿರುವುದರಿಂದ ನಾವೆಲ್ಲಾ ಒಗ್ಗಟ್ಟಿನಿಂದ ಆತನನ್ನು ಬದಲಿಸಲು ತೀರ್ಮಾನಿಸಿದ್ದೇವೆ. ಈ ಬಗ್ಗೆ ಗ್ರಾಮ ಪಂಚಾಯತಿ ಕಾರ್ಯದರ್ಶಿ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೂ ದೂರು ನೀಡುತ್ತೇವೆ’ ಎಂದು ಗ್ರಾಮದ ಮುಖಂಡ ಎ.ಎಸ್.ಚಂದ್ರೇಗೌಡ ತಿಳಿಸಿದರು.
ಗ್ರಾಮದ ಗೋಪಾಲಪ್ಪ, ಮುರಳಿ, ಸೂರ್ಯನಾರಾಯಣಪ್ಪ, ರಾಮರೆಡ್ಡಿ, ಬೈರೇಗೌಡ, ನಾರಾಯಣಸ್ವಾಮಿ, ಶ್ರೀನಿವಾಸ್, ವೀರೇಗೌಡ, ಮುನಿನಾರಾಯಣ, ಗಜೇಂದ್ರ, ಬೈರಾರೆಡ್ಡಿ, ರವಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

