Sidlaghatta : ಕೃಷಿ ಮಹಾವಿದ್ಯಾಲಯದ ಎರಡನೇ ವರ್ಷದ BSc ಪದವಿಯ 100 ಮಂದಿ ವಿದ್ಯಾರ್ಥಿಗಳು ಹೆಚ್ಚಿನ ತಿಳಿವಳಿಕೆಗಾಗಿ ಅಧ್ಯಯನ ಪ್ರವಾಸ ಕೈಗೊಂಡಿದ್ದು, ಸೋಮವಾರ ತಾಲ್ಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್.ಜಿ.ಗೋಪಾಲಗೌಡ ಅವರ ಹಿಪ್ಪುನೇರಳೆ ತೋಟ, ಹುಳು ಸಾಕಾಣಿಕೆ ಮನೆ ಹಾಗೂ ಸಮಗ್ರ ಕೃಷಿ ತೋಟಕ್ಕೆ ಭೇಟಿ ನೀಡಿ ರೈತರೊಂದಿಗೆ ಸಂವಾದಿಸಿ, ಮಾಹಿತಿ ಪಡೆದರು.
ಸಮಗ್ರ ಕೃಷಿಯ ಜೊತೆಯಲ್ಲಿ ಕುರಿ, ಕೋಳಿ, ಹಸು, ಎಮ್ಮೆ, ಜೇನು, ಮೀನು ಮುಂತಾದ ಸಾಕಾಣಿಕೆಗಳ ಬಗ್ಗೆ ತಿಳಿವಳಿಕೆ ಪಡೆದು, ರೈತರು ಇಷ್ಟೆಲ್ಲಾ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾ ಎಂದು ಅಚ್ಚರಿಗೊಂಡರು.
“ಕೆಲಸಕ್ಕೆ ಸೇರಿಕೊಂಡು ಬೇರೆಯವರ ಕೈಕೆಳಗೆ ಬದುಕಬೇಡಿ. ನಿಮ್ಮಲ್ಲಿ ಕನಿಷ್ಠ ಒಂದು ಹೆಕ್ಟೇರ್ ಜಮೀನಿದ್ದರೂ ಸಾಕು, ಸಮಗ್ರ ಕೃಷಿ ಮಾಡಿ. ಒಬ್ಬ ಸರ್ಕಾರಿ ಅಧಿಕಾರಿಗಿಂತ ಹೆಚ್ಚಿನ ಸಂಪಾದನೆ ಮಾಡಬಹುದು” ಎಂದು ರೈತ ಎಚ್.ಜಿ.ಗೋಪಾಲಗೌಡ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ರೈತರಾದ ಎಚ್.ಕೆ.ಸುರೇಶ್, ಪುಟ್ಟೇಗೌಡ, ಸಹಾಯಕ ಪ್ರಾಧ್ಯಾಪಕ ಡಾ.ವಿನೋದ ಹಾಜರಿದ್ದರು.
Sidlaghatta : ವಿದ್ಯಾವಂತ ಕೆಡಬಹುದು ಆದರೆ ಸಂಸ್ಕಾರವಂತ ಕೆಡುವುದಿಲ್ಲ. ಹಾಗಾಗಿ ಮಕ್ಕಳಿಗೆ ಮನೆಯಿಂದಲೇ ಸಂಸ್ಕಾರ ಕಲಿಸುವ ಕೆಲಸ ಪೋಷಕರಿಂದ ಆಗಬೇಕಿದೆ ಎಂದು ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ ಹೇಳಿದರು.
ನಗರದ ಹೊರವಲಯದ ಹಂಡಿಗನಾಳದ ಕೆ.ವಿ.ಭವನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಜ್ಞಾನಾಂಕುರ-2025 ಕಾರ್ಯಕ್ರಮದಲ್ಲಿ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಶಾಲೆಯಲ್ಲಿ ಸಿಗುವ ಪಠ್ಯ ಶಿಕ್ಷಣದ ಜತೆಗೆ ಮನೆಯಲ್ಲಿ ಪಾಲಕರು ಕಲಿಸುವ ಸಂಸ್ಕಾರದ ಶಿಕ್ಷಣ ಅತಿ ಮುಖ್ಯ, ಮಕ್ಕಳು ದೇಶದ ಆಸ್ತಿಯಾಗಿದ್ದು ಅವರ ಭವಿಷ್ಯ ರೂಪಿಸುವ ಆಸೆ ಎಲ್ಲ ಪಾಲಕರಿಗಿರುತ್ತದೆ. ಅದಕ್ಕೆ ಪೂರಕವಾಗಿ ಆಧುನಿಕ ಜಗತ್ತಿನ ಪ್ರವೇಶಕ್ಕೆ ಮಕ್ಕಳನ್ನು ಪ್ರಾಥಮಿಕ ಹಂತದಲ್ಲಿಯೇ ಅಣಿಗೊಳಿಸುವುದು ಶ್ರೀಮಠದ ಉದ್ದೇಶವಾಗಿದೆ. ಹುಟ್ಟಿದ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಮೂಲಕ ಸಮಾಜದ ಉತ್ತಮ ಪ್ರಜೆಗಳನ್ನಾಗಿ ಮಾಡಬೇಕಿದೆ ಎಂದರು.
ಮಕ್ಕಳು ಶಾಲೆಯಲ್ಲಿ ಗುರುಗಳು ಹೇಳಿದ್ದನ್ನು ಕೇಳುವುದಕ್ಕಿಂತ ಹೆಚ್ಚಾಗಿ ಪೋಷಕರನ್ನು ಅನುಕರಣೆ ಮಾಡಿ ಕಲಿಯುವುದು ಹೆಚ್ಚು ಹಾಗಾಗಿ ಪ್ರತಿಯೊಬ್ಬ ಪೋಷಕರು ಮಕ್ಕಳ ಮುಂದೆ ಸಂಸ್ಕಾರಯುತವಾಗಿ ನಡೆದುಕೊಳ್ಳಬೇಕು ಎಂದರು.
ಬಿಜಿಎಸ್ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಡಾ.ಎನ್.ಶಿವರಾಮರೆಡ್ಡಿ ಮಾತನಾಡಿ, ಯಾವುದೇ ಕಾರಣಕ್ಕೂ. ಮನೆಯಲ್ಲಿರುವ ಮಕ್ಕಳಲ್ಲಿ ಗಂಡು ಹೆಣ್ಣು ಎಂಬ ತಾರತಮ್ಯ ಮಾಡದೇ ಎಲ್ಲಾ ಸಮಯದಲ್ಲಿ ಎಲ್ಲಾ ಕೆಲಸಗಳನ್ನು ಎಲ್ಲಾ ಮಕ್ಕಳ ಕೈಯ್ಯಲ್ಲಿ ಮಾಡಿಸಬೇಕು. ಮಕ್ಕಳನ್ನು ಅವರ ಸಮಸ್ಯೆಗಳಿಗೆ ಅವರೇ ಪರಿಹಾರ ಕಂಡುಕೊಳ್ಳುವ ರೀತಿ ಬೆಳೆಸಬೇಕು. ಒಂದು ಮಗು ಪದವಿ ಪಡೆಯಬೇಕಾದರೆ ಸುಮಾರು 19 ವರ್ಷ ಶಾಲಾ, ಕಾಲೇಜುಗಳಲ್ಲಿ ಕಲಿಯಬೇಕಿದೆ. ಹಾಗಾಗಿ ಪೋಷಕರು ತಿಂಗಳಿಗೊಮ್ಮೆಯಾದರೂ ಮಗು ಓದುತ್ತಿರುವ ಶಾಲೆಗೆ ಭೇಟಿ ನೀಡಿ ಶಿಕ್ಷಕರೊಂದಿಗೆ ಮಾತುಕತೆ ನಡೆಸುವುದನ್ನು ರೂಡಿಸಿಕೊಳ್ಳಬೇಕು ಎಂದರು.
ನಗರದ ಬಿಜಿಎಸ್ ಪಬ್ಲಿಕ್ ಶಾಲೆ ಹಾಗೂ ತಾಲ್ಲೂಕಿನ ದಿಬ್ಬೂರಹಳ್ಳಿಯ ಬಿಜಿಎಸ್ ಇಂಗ್ಲೀಷ್ ಮಾಧ್ಯಮ ಶಾಲೆಯ ಮಕ್ಕಳಿಗೆ ಶ್ರೀಗಳು ಅಕ್ಷರಭ್ಯಾಸ ಮಾಡಿಸಿದರು.
ಶ್ರೀಕೆಂಪಣ್ಣಸ್ವಾಮಿ ಶ್ರೀವೀರಣ್ಣಸ್ವಾಮಿ ದೇವಾಲಯ ಟ್ರಸ್ಟ್ ನ ಉಪಾಧ್ಯಕ್ಷ ಬಿಳಿಶಿವಾಲೆ ರವಿ, ಕಾರ್ಯದರ್ಶಿ ಅಶ್ವತ್ಥಯ್ಯ, ಚಿತ್ರ ನಿರ್ಮಾಪಕ ಶಂಕರೇಗೌಡ, ಬಿಜಿಎಸ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಆರ್.ಮಹದೇವ್, ಜೆ.ಎಸ್.ವೆಂಕಟಸ್ವಾಮಿ ಹಾಜರಿದ್ದರು.
Sidlaghatta : ಯಾವುದೆ ರೀತಿಯ ಸಾಂಕ್ರಾಮಿಕ ಅಥವಾ ಅಸಂಕ್ರಾಮಿಕ ರೋಗಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು, ಆರೋಗ್ಯ ಕುರಿತು ವಯುಕ್ತಿಕವಾಗಿ ಮುನ್ನೆಚ್ಚರಿಕೆ ಅಗತ್ಯ ಇರಬೇಕಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಆಶ್ರಯದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ “ಮಲೇರಿಯಾ ವಿರೋಧಿ ಮಾಸಾಚರಣೆ ಜೂನ್-2025”ರ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಇದೀಗ ಮಳೆಗಾಲವಾದ್ದರಿಂದ ಸಹಜವಾಗಿ ಮಳೆ ನೀರು ಪರಿಸರದಲ್ಲಿ ನಿಲ್ಲುವುದರಿಂದ ಸೊಳ್ಳೆಗಳ ಉತ್ಪತ್ತಿಯೂ ಹೆಚ್ಚು, ಸೊಳ್ಳೆಗಳ ಕಡಿತದಿಂದ ನಾನಾ ರೀತಿಯ ಜ್ವರ, ರೋಗಗಳೂ ಹೆಚ್ಚು ಕಾಡುತ್ತವೆಯಾದ್ದರಿಂದ ಹೆಚ್ಚು ಜಾಗ್ರತೆಯಿಂದ ಇರಬೇಕೆಂದರು.
ಮಲೇರಿಯಾ ವಿರೋಧಿ ಮಾಸಾಚರಣೆ ನಡೆಸುತ್ತಿದ್ದು ಮಲೇರಿಯಾ ರೋಗದ ವಿರುದ್ದ ನಾವು ಹೋರಾಡಬೇಕಿದೆ. ರೋಗ ಬರದಂತೆ ಮುಂಜಾಗ್ರತೆ ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಕೆಲಸವನ್ನು ಇಲಾಖೆಯಿಂದ ಮಾಡಲಾಗುತ್ತಿದೆ ಎಂದರು.
ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ಖಾಸಗಿ ಆಸ್ಪತ್ರೆ, ಕ್ಲಿನಿಕ್, ಪಾಲಿ ಕ್ಲಿನಿಕ್, ಡಯಾಗೋಸ್ಟಿಕ್ ಲ್ಯಾಬೊರೇಟರಿಗಳ ವೈದ್ಯರು, ಪ್ರಯೋಗಶಾಲಾ ತಂತ್ರಜ್ಞರು, ಆರ್. ಎಂ. ಪಿ, ಆಯುಷ್, ಹೋಮಿಯೋಪಥಿ, ಸಿದ್ದ , ನ್ಯಾಚುರೋಪಥಿ ಸೇರಿದಂತೆ ಇತರ ತಜ್ಞರು ಮಲೇರಿಯಾ ಕಾರ್ಯಕ್ರಮದ ಅಡ್ವೊಕೆಸಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್ ಮೂರ್ತಿ, ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಧಿಕಾರಿ ಡಾ. ಪ್ರಕಾಶ್, ನಗರಸಭೆ ಪೌರಾಯುಕ್ತ ಮೋಹನ್ ಕುಮಾರ್, ರಾಜ್ಯಮಟ್ಟದ ಮೇಲ್ವಿಚಾರಕ ರೇಣುಕಾ ಸ್ವಾಮಿ, ಡಾ. ಸತ್ಯನಾರಾಯಣರಾವ್, ಜಿಲ್ಲಾ ಮೇಲ್ವಿಚಾರಕ ಶಶಿಕುಮಾರ್, ತಾಲ್ಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್. ದೇವರಾಜ್, ಎಪಿಡೆಮಾಲಜಿಸ್ಟ್ ಅಪೇಕ್ಷ, ಶಿಡ್ಲಘಟ್ಟ ನಗರ ಮತ್ತು ತಾಲೂಕಿನ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್ ನ ಪ್ರಯೋಗಶಾಲೆಯ ವೈದ್ಯರು ಮತ್ತು ಸಿಬ್ಬಂದಿ ಹಾಜರಿದ್ದರು.
Yannanguru, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಯಣ್ಣಂಗೂರು ಗ್ರಾಮದಲ್ಲಿ, ಹುತಾತ್ಮ ಯೋಧ ಎಂ.ಗಂಗಾಧರ್ ಅವರ 8 ನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ವಿಜಯಪುರ ಜೇಸಿಐ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿತ್ತು. 40 ಯೂನಿಟ್ ರಕ್ತವನ್ನು ಸಂಗ್ರಹ ಮಾಡಿದರು.
ಹುತಾತ್ಮ ಯೋಧನ ಸಮಾಧಿಗೆ ತೆರಳಿದ ಗ್ರಾಮಸ್ಥರು ಹಾಗೂ ಅವರ ಅಭಿಮಾನಿಗಳು ಸಮಾಧಿಗೆ ಪೂಜೆ ಸಲ್ಲಿಸಿದ ನಂತರ ರಕ್ತದಾನ ಶಿಬಿರ ಆರಂಭಿಸಿದರು.
ಹುತಾತ್ಮ ಯೋಧ ಎಂ.ಗಂಗಾಧರ್ ಅವರ ತಮ್ಮ ಯೋಧ ರವಿಕುಮಾರ್ ಮಾತನಾಡಿ, ದೇಶ ಸೇವೆ ಮಾಡುವಂತಹ ಅವಕಾಶ ಪ್ರತಿಯೊಬ್ಬರಿಗೂ ಇದೆ. ಆದರೆ, ಅದನ್ನು ಸದುಪಯೋಗ ಮಾಡಿಕೊಳ್ಳುವವರು ಕೆಲವರು ಮಾತ್ರ. ನನ್ನ ಸಹೋದರ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿ, ಹುತಾತ್ಮನಾಗಿರುವುದು, ನಮ್ಮೆಲ್ಲರಿಗೂ ಹೆಮ್ಮೆಯಿದೆ. ನಾನೂ ಸಹಾ ಸೇನೆಯಲ್ಲಿದ್ದೇನೆ. ಕಳೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ವೇಳೆ ಗಾಯಗೊಂಡಿದ್ದ ನಾನು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದೇನೆ. ದೇಶಕ್ಕಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದಾಗ ಯಾರೂ ಅದನ್ನು ಕಳೆದುಕೊಳ್ಳಬಾರದು. ಯೋಧರಿಗೆ ಜನರು ತೋರಿಸುವ ಪ್ರೀತಿ, ವಿಶ್ವಾಸ, ಅವರು ತುಂಬಿಸುವ ಆತ್ಮಸ್ಥೈರ್ಯವೇ ಹೆಚ್ಚು ಶಕ್ತಿ ಕೊಡುತ್ತದೆ ಎಂದರು.
ಜೇಸಿಐ ವಿಜಯಪುರ ವಲಯ-14 ರ ಅಧ್ಯಕ್ಷೆ ಶೀಲಾಬೈರೇಗೌಡ, ಅವರು ಮಾತನಾಡಿ, ದೇಶವನ್ನು ಕಾಯುವಂತಹ ಸೈನಿಕರ ಶ್ರಮದಿಂದ ನಾವಿನ್ನೂ ನೆಮ್ಮದಿಯಾಗಿದ್ದೇವೆ. ಅವರ ಸೇವೆಯನ್ನು ನಾವ್ಯಾರು ಮರೆಯಬಾರದು. ರಕ್ತದ ಕೊರತೆಯಿಂದಾಗಿ ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ರಕ್ತವನ್ನು ಎಲ್ಲಿಯೂ ತಯಾರಿಸಲು ಸಾಧ್ಯವಿಲ್ಲ. ಅದನ್ನು ಆರೋಗ್ಯವಂತರಿಂದ ಪಡೆಯಲು ಅವಕಾಶವಿದೆ. ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದರು. ಜೇಸಿಐ ಸಂಸ್ಥೆಯ 20 ಕ್ಕೂ ಹೆಚ್ಚು ಮಂದಿ ಪದಾಧಿಕಾರಿಗಳು ರಕ್ತದಾನ ಮಾಡಿದರು.
ಜೇಸಿಐ ವಲಯ ಅಧಿಕಾರಿ ಬೈರೇಗೌಡ, ಕಾರ್ಯದರ್ಶಿ ಲೋಕೇಶ್, ಜನಾರ್ಧನ, ಕಾರ್ತಿಕ್ ಕುಮಾರ್, ಮಾಜಿ ಅಧ್ಯಕ್ಷ ಮುನಿವೆಂಕಟರಮಣಪ್ಪ, ಮಾಜಿ ಕಾರ್ಯದರ್ಶಿ ರತ್ನಮ್ಮ, ಎಸ್.ರವಿಕುಮಾರ್, ವಿ.ಕೃಷ್ಣಮೂರ್ತಿ ಪ್ರಶಾಂತ್ ಹಾಗೂ ಗ್ರಾಮಸ್ಥರು ಹಾಜರಿದ್ದರು.
Kothanur, Sidlaghatta : ರಾಜ್ಯ ಸರ್ಕಾರ ಹೈನುಗಾರರಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು 5 ರೂಗಳಿಂದ 10 ರೂಗಳಿಗೆ ಹೆಚ್ಚಿಸುವ ಮೂಲಕ ರಾಜ್ಯದಲ್ಲಿ ಹಾಲು ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸಲು ನೆರವಾಗಬೇಕು ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ ಹಾಗು ಗ್ರಾಮದ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸುಮಾರು 7 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿ 1 ಕೋಟಿ 5 ಲಕ್ಷ ಲೀ ಹಾಲು ಮಾತ್ರ ಉತ್ಪಾದನೆಯಾಗುತ್ತಿದ್ದ ಜನಸಂಖ್ಯೆಗನುಗುಣವಾಗಿ ಹಾಲಿನ ಉತ್ಪಾದನೆಯಾಗುತ್ತಿಲ್ಲ. ವೈಜ್ಞಾನಿಕವಾಗಿ ಪ್ರತಿಯೊಬ್ಬರಿಗೂ ದಿನವೊಂದಕ್ಕೆ 250-300 ಮಿ.ಲೀ ಹಾಲಿನ ಅಗತ್ಯವಿದ್ದು ಸರ್ಕಾರ ಹೈನುಗಾರರಿಗೆ ಹೆಚ್ಚಿನ ಪ್ರೋತ್ಸಾಹಧನ ನೀಡಿದ್ದೇ ಆದಲ್ಲಿ ಮತ್ತಷ್ಟು ಹಾಲಿನ ಉತ್ಪಾದನೆಯಾಗಲಿದೆ ಎಂದರು.
ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಗಳ ಆಡಳಿತ ಮಂಡಳಿಗೆ ಬರುವ ಲಾಭಾಂಶದಲ್ಲಿ ಹೆಚ್ಚಿನ ಬೋನಸ್ನ್ನು ಹಾಲು ಉತ್ಪಾದಕರಿಗೆ ನೀಡಬೇಕು ಎಂದರು.
ಕೋಚಿಮುಲ್ ಮಾಜಿ ನಿರ್ದೇಶಕ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ ಮಾತನಾಡಿ, ಹಾಲು ಉತ್ಪಾದಕರು ಗುಣಮಟ್ಟದ ಹಾಲು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕು. ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಸಹಕಾರ ಸಂಸ್ಥೆಯನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕೆಂದು ಹೇಳಿದರು.
ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ.ಪಿ.ಮಂಜುನಾಥ್, ಉಪಾಧ್ಯಕ್ಷ ಉತ್ತನಳ್ಳಪ್ಪ, ಮುಖಂಡರಾದ ಹುಜಗೂರು ರಾಮಣ್ಣ, ಆನೂರು ವಿಜಯೇಂದ್ರ, ನಾಗಮಂಗಲ ಶ್ರೀನಿವಾಸಗೌಡ, ಕೆ.ಎನ್ ಸುಬ್ಬಾರೆಡ್ಡಿ ಸೇರಿದಂತೆ ಸಮಘದ ನಿರ್ದೇಶಕರು ಹಾಗೂ ಸಿಬ್ಬಂದಿ ಹಾಜರಿದ್ದರು.
Sidlaghatta : ಇನ್ನು ಮುಂದೆ ಪಕ್ಷದ ಒಳಕ್ಕೆ ಬರಲು ಅಡ್ಡಿಯಾಗಿ ಯಾವುದೇ ಕೋಟೆ ಕಂದಕಗಳಿರುವುದಿಲ್ಲ. ಸ್ವಾರ್ಥವಿಲ್ಲದೆ, ತನು ಮನ ಧನ ಅರ್ಪಿಸಿ ಬಿಜೆಪಿಯನ್ನು ಕಟ್ಟಿ ಬೆಳೆಸಲು ಬರುವವರು ಅನೇಕರಿದ್ದಾರೆ. ಸಕ್ರಿಯರಾಗಿಲ್ಲದ ಹಲವು ಹಿರಿಯ ಕಾರ್ಯಕರ್ತರು ಮತ್ತು ಪಕ್ಷ ಪ್ರೀತಿ ಇರುವ ಎಲ್ಲ ನಾಯಕರನ್ನು ಭೇಟಿ ಮಾಡಿ ಪಕ್ಷಕ್ಕೆ ಕರೆ ತರುವ ಕೆಲಸ ಮಾಡುತ್ತೇನೆ ಎಂದು ಬಿಜೆಪಿ ಜಿಲ್ಲಾ ನೂತನ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.
ಬಿಜೆಪಿಯ ಜಿಲ್ಲಾಧ್ಯಕ್ಷರಾದ ನಂತರ ಬಿಜೆಪಿ ಕಾರ್ಯಕರ್ತರು ಶಿಡ್ಲಘಟ್ಟದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನಗರದಲ್ಲಿ ಮೆರವಣಿಗೆ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಿಜೆಪಿ ಪಕ್ಷವನ್ನು ಈ ನಾಡಿನ, ಈ ಜಿಲ್ಲೆಯ ಅನೇಕರು ಕಟ್ಟಿ ಬೆಳೆಸಿದ್ದಾರೆ. ಇಂದು ಜಗತ್ತಿನಲ್ಲಿಯೆ ಅತ್ಯಂತ ಹೆಚ್ಚು ಸದಸ್ಯತ್ವವುಳ್ಳ ಪಕ್ಷವಾಗಿ ಹೊರಹೊಮ್ಮಿದೆ. ಪಕ್ಷ ಸಂಘಟನೆಯ ಹಿಂದೆ ಅನೇಕರ ತನು ಮನ ಧನದ ಅರ್ಪಣೆ ಅಡಗಿದೆ. ಪಕ್ಷದ ಆಂತರಿಕ ಗೊಂದಲಗಳ ನಿವಾರಣೆ ಹಾಗೂ ಎಲ್ಲರನ್ನೂ ಒಳಗೊಳ್ಳುವಿಕೆಯ ಆಶಯ ನಮ್ಮದು ಎಂದರು.
ಪಕ್ಷಕ್ಕೆ ನೆಲೆ ಇಲ್ಲದ ಶಿಡ್ಲಘಟ್ಟದಲ್ಲಿ ಪಕ್ಷವನ್ನು ಕಟ್ಟುವ ಕೆಲಸಕ್ಕೆ ಬಂದಿದ್ದೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಕೆಲಸವನ್ನ ಮಾಡಿದ್ದೇನೆ, ಹೆಚ್ಚಿನ ಸದಸ್ಯತ್ವವನ್ನು ಮಾಡಿದ್ದೇನೆ. ಇದೆಲ್ಲವನ್ನೂ ಗಮನಿಸಿದ ರಾಷ್ಟ್ರ, ರಾಜ್ಯ, ಜಿಲ್ಲಾ ನಾಯಕರು ನನ್ನನ್ನು ಜಿಲ್ಲಾಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು.
ಇದು ಪದವಿ ಎಂದು ಭಾವಿಸದೆ ಪಕ್ಷವನ್ನು ಕಟ್ಟುವ ಕೆಲಸ ಎಂದು ಭಾವಿಸಿ ಜಿಲ್ಲೆಯಲ್ಲಿನ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಬಣಗಳು ಇಲ್ಲದ ವಾತಾವರಣ ನಿರ್ಮಿಸಿ ಪಕ್ಷವನ್ನು ಕಟ್ಟುವ ಕೆಲಸ ಮಾಡುತ್ತೇನೆ, ನಿಮ್ಮೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ ಮತ್ತು ಜಿಲ್ಲಾಧ್ಯಕ್ಷ ಸ್ಥಾನ ದೊರೆತಿದ್ದು ನಿಮ್ಮೆಲ್ಲರಿಂದ ಈ ಶ್ರೇಯಸ್ಸು ನಿಮಗೆ ಸಲ್ಲಬೇಕು ಎಂದರು.
ಶಿಡ್ಲಘಟ್ಟದ ಇತಿಹಾಸದಲ್ಲಿ ಬಿಜೆಪಿಯ ಜಿಲ್ಲಾಧ್ಯಕ್ಷಸ್ಥಾನ ಇದೆ ಮೊದಲ ಬಾರಿಗೆ ದೊರೆತಿದೆ. ಇಷ್ಟಕ್ಕೆ ತೃಪ್ತಿ ಪಡದೆ ಮುಂದಿನ ದಿನಗಳಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಶಿಡ್ಲಘಟ್ಟದಲ್ಲಿ ಬಿಜೆಪಿ ಬಾವುಟ ಹಾರಾಡುವಂತೆ ಮಾಡಬೇಕೆಂದು ಹೇಳಿದರು.
ಶಿಡ್ಲಘಟ್ಟದ ಗಡಿಭಾಗ ಹಂಡಿಗನಾಳದಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಸೀಕಲ್ ರಾಮಚಂದ್ರಗೌಡ ಅವರನ್ನು ಭಾರಿ ಗಾತ್ರದ ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮದೊಂದಿಗೆ ಸ್ವಾಗತಿಸಿದರು. ನಂತರ ಸಾರಿಗೆ ಬಸ್ ನಿಲ್ದಾಣದಿಂದ ಕೋಟೆ ವೃತ್ತದ ಮೂಲಕ ಬಿಜೆಪಿ ಸೇವಾಸೌಧ ಕಚೇರಿವರೆಗೂ ಮೆರವಣಿಗೆ ನಡೆಸಿದರು. ಕೋಟೆ ಆಂಜನೇಯಸ್ವಾಮಿ, ವಾಸವಿ ರಸ್ತೆಯ ಶ್ರೀವೆಂಕಟೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಅಭಿನಂದಿಸಿದರು.
ಬಿಜೆಪಿ ಮಾಜಿ ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ, ಗ್ರಾಮಾಂತರ ಅಧ್ಯಕ್ಷ ಸೀಕಲ್ ಆನಂದಗೌಡ, ನಗರ ಘಟಕದ ಅಧ್ಯಕ್ಷ ನರೇಶ್, ಅನೆಮಡಗು ಮುರಳಿ, ಅರಿಕೆರೆ ಮುನಿರಾಜು, ನಗರಸಭೆ ಸದಸ್ಯ ನಾರಾಯಣಸ್ವಾಮಿ, ಆಂಜನೇಯಗೌಡ, ಸೋಮಶೇಖರ್, ಕನ್ನಪನಹಳ್ಳಿ ಲಕ್ಷ್ಮೀನಾರಾಯಣ್, ಡಾ.ಸತ್ಯನಾರಾಯಣರಾವ್, ನರ್ಮದಾರೆಡ್ಡಿ, ಚಾತುರ್ಯ ಹಾಜರಿದ್ದರು.
Sidlaghatta : ದಿನನಿತ್ಯ ಯೋಗಾಭ್ಯಾಸ ಮಾಡುವುದರಿಂದ ದೈಹಿಕವಾಗಿ ಸಮತೋಲನ ಕಾಪಾಡಿಕೊಳ್ಳುವುದರ ಜೊತೆಗೆ, ಮಾನಸಿಕವಾಗಿ ನೆಮ್ಮದಿಯನ್ನು ಕಾಣಲು ಸಾಧ್ಯವಾಗುತ್ತದೆ. ಕ್ರೀಯಾಶೀಲತೆ ಹಾಗೂ ದಿನನಿತ್ಯ ಚಟುವಟಿಕೆಯಿಂದ ಇರಲು ಯೋಗ ಸಹಕಾರಿಯಾಗಿರುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ತಿಳಿಸಿದರು.
ನಗರದ ನ್ಯಾಯಾಲಯದ ಆವರಣದಲ್ಲಿ ಶನಿವಾರ ತಾಲ್ಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯೋಗಾಭ್ಯಾಸವೆಂಬುದು ಕೇವಲ ಆಸನ ಅಥವಾ ಪ್ರಾಣಾಯಾಮಗಳಿಗೆ ಮೀಸಲಾಗದೇ ಭೌದ್ಧಿಕ ಮತ್ತು ಅಧ್ಯಾತ್ಮಿಕ ಬೆಳವಣಿಗೆಯ ಹಾದಿಯಾಗಿದೆ. ಆರೋಗ್ಯವಂತ ಸಮಾಜಕ್ಕಾಗಿ ಪ್ರತಿಯೊಬ್ಬರೂ ತಮ್ಮ ಜೀವನದುದ್ದಕ್ಕೂ ಯೋಗವನ್ನು ಒಂದು ಹವ್ಯಾಸವನ್ನಾಗಿ ಮಾಡಿಕೊಳ್ಳುವ ಮೂಲಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸುಕನ್ಯಾ.ಸಿ.ಎಸ್., ಹೆಚ್ಚುವರಿ ಸಿವಿಲ್ ನ್ಯಾಯಾದೀಶರಾದ ರಂಜಿತಾ.ಎಸ್., ಯೋಗ ಶಿಕ್ಷಕ ರಾಜಮೋಹನ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಭಾಸ್ಕರ್, ನ್ಯಾಯಾಲಯ ಸಿಬ್ಬಂದಿ ಹಾಗೂ ವಕೀಲರು ಹಾಜರಿದ್ದರು.