ವಾರಸುದಾರರು ಯಾರೂ ಇಲ್ಲದೆ ಅನಾಥವಾಗಿದ್ದ ವೃದ್ಧೆಯನ್ನು ನಾಗರಿಕರು ಹಾಗೂ ಪತ್ರಕರ್ತರು ಮಾನವೀಯತೆಯಿಂದ ಜಿಲ್ಲಾ ಹಿರಿಯ ನಾಗರಿಕ ಸಹಾಯವಾಣಿ ಅವರ ಮೂಲಕ ವೃದ್ಧಾಶ್ರಮಕ್ಕೆ ಗುರುವಾರ ಸೇರಿಸಿದರು.
ಕಳೆದ ನಾಲ್ಕೈದು ದಿನಗಳಿಂದ ನಗರದ ಸಿದ್ಧಾರ್ಥ ನಗರದಲ್ಲಿ ಒಬ್ಬಂಟಿಯಾಗಿದ್ದ ವೃದ್ಧೆ ಗೌರಮ್ಮ ಅವರ ಚಿತ್ರವನ್ನು ಮೊಬೈಲ್ ನಲ್ಲಿ ಕ್ಲಿಕ್ಕಿಸಿದ ಸ್ಥಳೀಯ ಯುವಕ ಸುರೇಶ್, “ಈ ಅಜ್ಜಿಗೆ ಯಾರೂ ಇಲ್ಲ. ಸುತ್ತಮುತ್ತಲಿನ ಜನರು ಮಾನವೀಯತೆಯಿಂದ ಊಟ ನೀಡುತ್ತಿದ್ದಾರೆ. ಇವರನ್ನು ನಿರಾಶ್ರಿತೆ ಕೇಂದ್ರಕ್ಕೆ ಸೇರಿಸಲು ದಯವಿಟ್ಟು ಪತ್ರಿಕಾ ಮಿತ್ರರು ಸಹಕರಿಸಿ” ಎಂದು ಸಂದೇಶವನ್ನು ವ್ಯಾಟ್ಸಪ್ ಗ್ರೂಪಿನಲ್ಲಿ ಹರಿಬಿಟ್ಟಿದ್ದರು.
ಇದನ್ನು ಕಂಡು ಸ್ಥಳಕ್ಕೆ ಪತ್ರಕರ್ತರು ತೆರಳಿದಾಗ ಸ್ಥಳೀಯ ನಾಗರಿಕರು ಜೊತೆಯಾದರು. ವೃದ್ಧೆ ಗೌರಮ್ಮ ಅವರನ್ನು ಅವರ ಬಂಧುಗಳ ಬಗ್ಗೆ ವಿಚಾರಿಸಿದಾಗ ಆಕೆ, “ನನಗೆ ಆರು ಮಂದಿ ಮಕ್ಕಳು. ಈಗ ಅವರು ಬದುಕಿಲ್ಲ. ಮಗಳ ಮಗಳು ನನ್ನನ್ನು ಪೋಷಿಸುತ್ತಿದ್ದರೆ. ಕಳೆದ ನಾಲ್ಕೈದು ದಿನಗಳ ಹಿಂದೆ ಅವಳು ಬಾಡಿಗೆಗೆ ಇದ್ದ ಮನೆ ಖಾಲಿ ಮಾಡಿಕೊಂಡು ಹೋದಳು. ಎಲ್ಲಿಗೆ ಹೋದಳೋ ತಿಳಿಯದು” ಎಂದು ಹೇಳಿದರು.
ವೃದ್ಧೆ ಗೌರಮ್ಮ ಅವರ ದೂರದ ಸಂಬಂಧಿಗಳನ್ನು ವಿಚಾರಿಸಿದಾಗ ಅವರು ಯಾರೂ ಆಕೆಯ ಪೋಷಣೆಯ ಜವಾಬ್ದಾರಿ ಹೊರಲು ತಯಾರಾಗಲಿಲ್ಲ. ಆಗ ಚಿಕ್ಕಬಳ್ಳಾಪುರದ ಜಿಲ್ಲಾ ಹಿರಿಯ ನಾಗರಿಕರ ಸಹಾಯವಾಣಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಲಾಯಿತು. ಜಿಲ್ಲಾ ಸಂಯೋಜನಾಧಿಕಾರಿ ಶ್ರೀನಿವಾಸರೆಡ್ಡಿ ಆಗಮಿಸಿ ವೃದ್ಧೆ ಗೌರಮ್ಮ ಅವರನ್ನು ಗೌರಿಬಿದನೂರಿನ ಪ್ರೀತಿ ಚಾರಿಟಬಲ್ ಟ್ರಸ್ಟ್ ವೃದ್ಧಾಶ್ರಮಕ್ಕೆ ಕರೆದುಕೊಂಡು ಹೋದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಹಿರಿಯ ನಾಗರಿಕರ ಸಹಾಯವಾಣಿಯ ಸಂಯೋಜನಾಧಿಕಾರಿ ಶ್ರೀನಿವಾಸರೆಡ್ಡಿ, “ಹಿರಿಯ ಅನಾಥ ವಯೋವೃದ್ಧರು ಯಾರೇ ಇದ್ದರೂ ಸಹಾಯವಾಣಿ ೧೦೯೦ ಸಂಖ್ಯೆಗೆ ಕರೆಮಾಡಿ. ನಾವು ಒಂದು ಗಂಟೆಯೊಳಗೆ ಸ್ಥಳಕ್ಕೆ ಆಗಮಿಸಿ ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸಿ ಸುಲ್ತಾನಪೇಟೆ, ಕೈವಾರ, ಬಾಗೇಪಲ್ಲಿ ಮತ್ತು ಚಿಂತಾಮಣಿ ಗಳಲ್ಲಿ ಇರುವ ವೃದ್ಧಾಶ್ರಮಕ್ಕೆ ಸೇರಿಸುತ್ತೇವೆ. ಅವರಿಗೆ ಸರ್ಕಾರದ ವೆಚ್ಚದಲ್ಲಿ ಪುನರ್ವಸತಿ ಕಲ್ಪಿಸಲಾಗುತ್ತದೆ. ಈ ದಿನ ಮಾನವೀಯತೆಯಿಂದ ಈ ವೃದ್ಧೆಯ ಪುನರ್ವಸತಿಗೆ ಸಹಕರಿಸಿದ ಎಲ್ಲರೂ ಅಭಿನಂದನಾರ್ಹರು” ಎಂದು ಹೇಳಿದರು.
- Advertisement -
- Advertisement -
- Advertisement -