ಗ್ರಾಮೀಣ ಭಾಗದ ಆರ್ಥಿಕ ಪುನಶ್ಚೇತನಕ್ಕೆ ಕಾರಣವಾದ ಜಾನುವಾರಗಳಿಗೆ ಯಾವುದೇ ತರಹದ ಕಾಯಿಲೆ ಕಂಡುಬಂದಲ್ಲಿ ಕೂಡಲೇ ಪಶುಪಾಲನಾ ಇಲಾಖೆಯ ವೈದ್ಯರಿಗೆ ವರದಿ ಮಾಡಿ ರೋಗ ನಿರೋಧಕ ಲಸಿಕೆ ಹಾಕಿಸುವಂತೆ ಶಾಸಕ ಎಂ.ರಾಜಣ್ಣ ರೈತರಲ್ಲಿ ಮನವಿ ಮಾಡಿದರು.
ತಾಲ್ಲೂಕಿನ ಆನೂರು ಹುಣಸೇನಹಳ್ಳಿ ಗ್ರಾಮದಲ್ಲಿ ಸೋಮವಾರ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಏಳನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾಲುಬಾಯಿ ಜ್ವರವು ಮತ್ತೊಂದು ರೋಗಗ್ರಸ್ಥ ರಾಸುವಿನ ನೇರ ಸಂಪರ್ಕದಿಂದ ಅಥವ ಗಾಳಿಯಿಂದ ಸಾಂಕ್ರಾಮಿಕವಾಗಿ ಹರಡುತ್ತದೆ. ಈ ರೋಗದ ಲಕ್ಷಣಗಳಾದ ಅತಿಯಾದ ಜ್ವರ, ಬಾಯಿಯಲ್ಲಿ ನೀರ ಗುಳ್ಳೆ ಜೊಲ್ಲು ಸುರಿಸುವುದು, ಕಾಲು ಕುಂಟುವುದು ಸೇರಿದಂತೆ ಇನ್ನಿತರ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಪಶುವೈದ್ಯರಿಗೆ ಮಾಹಿತಿ ನೀಡಿ ರಾಸುವಿಗೆ ಲಸಿಕೆ ಹಾಕಿಸುವುದರೊಂದಿಗೆ ತಪಾಸಣೆಗೊಳಪಡಿಸಬೇಕು ಎಂದರು.
ಬಯಲುಸೀಮೆ ಪ್ರದೇಶವಾದ ಕೋಲಾರ ಚಿಕ್ಕಬಳ್ಳಾಫುರ ಜಿಲ್ಲೆಗಳಲ್ಲಿ ಸಕಾಲಕ್ಕೆ ಮಳೆಗಳಾಗದೇ ಅಂತರ್ಜಲ ಪಾತಾಳಕ್ಕೆ ಇಳಿದಿದ್ದು ೧೨೦೦ ಅಡಿ ಕೊರೆದರೂ ನೀರು ಸಿಗುತ್ತಿಲ್ಲವಾದರೂ ಇಲ್ಲಿನ ಜನರ ಜೀವನಾಡಿಯಾಗಿರುವ ರೇಷ್ಮೆ ಹಾಗೂ ಹೈನುಗಾರಿಕೆಯಲ್ಲಿ ಈ ಭಾಗದ ಜನ ಖ್ಯಾತಿ ಹೊಂದಿದ್ದಾರೆ. ಈ ಭಾಗದ ಜನರು ಹಾಲು ಉತ್ಪಾದನೆಯಲ್ಲಿಯೇ ಜೀವನ ನಡೆಸುತ್ತಿದ್ದು ಅಂತಹ ಹಾಲು ನೀಡುವ ಮೂಕ ರಾಸುಗಳ ಆರೋಗ್ಯದ ಕಡೆಗೂ ರೈತರು ಹೆಚ್ಚಿನ ಗಮನವಹಿಸಬೇಕು ಎಂದರು.
ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ ಕಳೆದ ವರ್ಷ ಕಾಲುಬಾಯಿ ಜ್ವರದಿಂದ ತಾಲ್ಲೂಕಿನ ಸುಮಾರು ೨೭೦ ರಾಸುಗಳು ಮೃತಪಟ್ಟಿದ್ದು ಅತಿ ಚಿಕ್ಕ ಗ್ರಾಮಗಳಲ್ಲೊಂದಾದ ಆನೂರು ಹುಣಸೇನಹಳ್ಳಿ ಗ್ರಾಮದಲ್ಲಿಯೂ ಹಲವು ರಾಸುಗಳು ಮೃತಪಟ್ಟಿದ್ದವು. ಇಂತಹ ಪುಟ್ಟ ಗ್ರಾಮದ ಶೇಕಡಾ ೯೦ ರಷ್ಟು ಜನ ಹಾಲಿನ ಉತ್ಪಾದನೆಯಲ್ಲಿಯೇ ಜೀವನ ನಡೆಸುತ್ತಿದ್ದು ಪ್ರತಿನಿತ್ಯ ೮೫೦ ರಿಂದ ೯೦೦ ಲೀ ಹಾಲಿನ ಉತ್ಪಾದನೆ ಮಾಡುತ್ತಿದೆ. ರಾಸುಗಳಿಗೆ ಯಾವುದಾದರೂ ಕಾಯಿಲೆ ಬಂದು ಮೃತಪಟ್ಟರೆ ಇಲ್ಲಿನ ಜನರ ಜೀವನ ನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆಯಾದ್ದರಿಂದ ರಾಸುಗಳಿಗೆ ಸಕಾಲದಲ್ಲಿ ರೋಗ ನಿಯಂತ್ರಕ ಲಸಿಕೆ ಹಾಕಿಸುವುದರೊಂದಿಗೆ ರೋಗ ಹರಡದಂತೆ ನಿಯಂತ್ರಿಸಲು ರೈತ ಸಮುದಾಯ ತಮ್ಮ ಮನೆಯಲ್ಲಿನ ದನ, ಕರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸುವುದು ಮತ್ತು ಪ್ರತಿಯೊಂದು ರಾಸುವಿಗೂ ವಿಮೆ ಮಾಡಿಸುವಂತೆ ಮನವಿ ಮಾಡಿದರು.
ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮದಡಿ ತಾಲ್ಲೂಕಿನಾಧ್ಯಂತ ೧೫ ದಿನಗಳ ಕಾಲ ರಾಸುಗಳಿಗೆ ಉಚಿತ ಲಸಿಕೆ ನೀಡಲು ೨೦ ವೈದ್ಯರ ತಂಡ ಕರ್ತವ್ಯ ನಿರ್ವಹಿಸುತ್ತಿದ್ದು ತಾಲ್ಲೂಕಿನ ಎಲ್ಲಾ ೫೨ ಸಾವಿರ ರಾಸುಗಳಿಗೂ ಕಾಲುಬಾಯಿ ಜ್ವರ ಲಸಿಕೆ ಹಾಕಲು ರೈತರು ಸಹಕರಿಸಬೇಕು ಎಂದು ಪಶುವೈದ್ಯ ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಮುನಿನಾರಾಯಣರೆಡ್ಡಿ ಹೇಳಿದರು.
ಕೋಚಿಮುಲ್ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಈಶ್ವರಯ್ಯ ಮಾತನಾಡಿ ಕಾಯಿಲೆ ಬರುವ ಮುಂಚೆಯೇ ರಾಸುಗಳಿಗೆ ಲಸಿಕೆ ಹಾಕಿಸಬೇಕೆಂದರು. ಹೀಗೆ ಲಸಿಕೆ ಹಾಕಿಸುವುದರಿಂದ ರಾಸುವೂ ಆರೋಗ್ಯವಾಗಿರುವುದರೊಂದಿಗೆ ಹಾಲಿನ ಗುಣಮಟ್ಟವೂ ಉತ್ತಮವಾಗಿರುತ್ತದೆ. ಶಿಡ್ಲಘಟ್ಟ ತಾಲ್ಲೂಕಿನ ಹಾಲಿನ ಗುಣಮಟ್ಟ ಜಿಲ್ಲೆಯಲ್ಲಿಯೇ ಎರಡನೇ ಸ್ಥಾನದಲ್ಲಿದೆ ಹಾಗಾಗಿ ಹಾಲಿನ ಗುಣಮಟ್ಟ ಇನ್ನಷ್ಟು ಕಾಪಾಡಿಕೊಳ್ಳುವುದರೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನಕ್ಕೆ ಬರಬೇಕು. ಆದ್ದರಿಂದ ತಾಲೂಕಿನ ಎಲ್ಲ ರೈತರು ತಮ್ಮ ತಮ್ಮ ರಾಸುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಬಿ.ಕೆ.ಶಿವರಾಂ, ತಾಲ್ಲೂಕು ಪಂಚಾಯಿತಿ ಇಓ ಗಣಪತಿಸಾಕ್ರೆ, ಪಶುವೈದ್ಯ ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಮುನಿನಾರಾಯಣರೆಡ್ಡಿ, ಕೋಚಿಮುಲ್ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಈಶ್ವರಯ್ಯ, ಗೋಪಾಲ್ ರಾವ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -