23.1 C
Sidlaghatta
Wednesday, February 18, 2026

ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಬೆಂಬಲಿಗರ ಅಸಮಾಧಾನ

- Advertisement -
- Advertisement -

ನಗರದ ಕಾಂಗ್ರೆಸ್ ಭವನದಲ್ಲಿ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರ ಪರವಾಗಿ ಮತಯಾಚನೆ ಮಾಡಲು ಬುಧವಾರ ಆಯೋಜಿಸಿದ್ದ ಚುನಾವಣಾ ಪ್ರಚಾರದ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಅವರ ಬೆಂಬಲಿಗರ ಅಸಮಾಧಾನವು ಸಚಿವ ಡಿ.ಕೆ.ಶಿವಕುಮಾರ್ ಮತ್ತು ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರಿಗೆ ಮುಜುಗರವನ್ನುಂಟುಮಾಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್, “ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ೨೦ ಕ್ಕೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕಾಗಿದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಿನ್ನಮತ ಮರೆತು ಮೈತ್ರಿ ಅಭ್ಯರ್ಥಿಯ ಗೆಲುವಿಗಾಗಿ ಕೆಲಸ ಮಾಡಬೇಕು ಎಂದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ, “ಕಾಂಗ್ರೆಸ್ ಪಕ್ಷವನ್ನು ಉಳಿಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಂಸದರು ನಮ್ಮನ್ನು ಕಡೆಗಣಿಸಿಬಿಟ್ಟರು. ಅವರದೇ ಒಂದು ಗುಂಪು ಆಗಿಬಿಟ್ಟಿದೆ. ಕಳೆದ ೭ ಚುನಾವಣೆಗಳಲ್ಲಿ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಅವರನ್ನು ಬೆಂಬಲಿಸಿದ್ದೇನೆ. ಕಾಂಗ್ರೆಸ್ ಪಕ್ಷ ಯಾರ ಜೇಬನಲ್ಲಿ ಇಲ್ಲ, ಇರಬಾರದು. ನಾನು ನಿಮ್ಮ ಹಂಗಿನಲ್ಲಿ ಇಲ್ಲ” ಎಂದು ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
“ನನಗೆ ದೇವರಂತಿದ್ದ ಮಾಜಿ ಲೋಕಸಭಾ ಸದಸ್ಯ ದಿ.ಕೃಷ್ಣರಾವ್ ಅವರೊಂದಿಗಿದ್ದ ಉತ್ತಮ ಸಂಬಂಧವನ್ನು ನೀವು ಉಳಿಸಿಕೊಳ್ಳಲಿಲ್ಲ. ನಿಮ್ಮ ಕಡೆಯ ಚುನಾವಣೆಯಾದರೆ ಹೇಳಿಬಿಡಿ, ಕಾಂಗ್ರೆಸ್‌ಗೆ ಓಟ್ ಹಾಕಿ ಸುಮ್ಮನಾಗಿ ಬಿಡುತ್ತೇವೆ. ನಿಮ್ಮ ನಡುವಳಿಕೆಗಳಿಂದ ಕಣ್ಣಲ್ಲಿ ರಕ್ತ ಬಂದಿದೆ. ನಮಗಿಂತ ಮುಂಚೆ ಜೆಡಿಎಸ್‌ನವರು ಪ್ರಚಾರದಲ್ಲಿ ತೊಡಗಿದ್ದಾರೆ. ನೀವು ಕಾಂಗ್ರೆಸ್ ನಾಯಕರೋ ಜೆಡಿಎಸ್ ನಾಯಕರೋ ಗೊತ್ತಾಗುತ್ತಿಲ್ಲ. ನಮ್ಮ ಕ್ಷೇತ್ರದ ಆರ್ಥಿಕ ಅಭಿವೃದ್ಧಿಗೆ ತೊಂದರೆ ಮಾಡಿದ್ದೀರಿ” ಎಂದು ಕೆ.ಎಚ್.ಮುನಿಯಪ್ಪ ಅವರ ಮೇಲೆ ಬೇಸರ ವ್ಯಕ್ತಪಡಿಸಿದರು.
ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿ, “ಮೊದಲ ಬಾರಿ ಲೋಕಸಭೆಗೆ ಟಿಕೆಟ್ ಕೊಡಿಸಿದ್ದು ನೀವೇ, ಎರಡನೇ ಬಾರಿಗೆ ಚುನಾವಣೆಯಲ್ಲಿ ನೀವೇ ಖರ್ಚು ಮಾಡಿ ಗೆಲ್ಲಿಸಿದ್ದೀರಿ ಈ ಕೀರ್ತಿ ನಿಮಗೆ ಸಲ್ಲಬೇಕು. ನಿಮ್ಮನ್ನು ಚುನಾವಣೆಯಲ್ಲಿ ಸೋಲಿಸಲಿಕ್ಕೆ ನಾನು ಎಂದೂ ಕೆಲಸ ಮಾಡಿದವನಲ್ಲ. ಈ ಬಗ್ಗೆ ಪ್ರಮಾಣ ಕೂಡ ಮಾಡಿದ್ದೆ. ವಿ. ಮುನಿಯಪ್ಪನವರಿಗೆ ಓಟ್ ಹಾಕಬೇಡಿ ಎಂದು ಎಲ್ಲೂ ಹೇಳಿಲ್ಲ. ಒಂದು ವೇಳೆ ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿಯಾಗುತ್ತೇನೆ, ಎಂದು ವಿ.ಮುನಿಯಪ್ಪ ಅವರ ಅಸಮಾಧಾನಕ್ಕೆ ಉತ್ತರಿಸಿದ ಅವರು, ನೀವು ನನ್ನ ತಪ್ಪುಗಳನ್ನು ಹೇಳಿ ನಂತರ ದೆಹಲಿಗೆ ಹೋಗಬೇಕಾಗಿತ್ತು. ನೀವು ತಪ್ಪು ಮಾಡಿದಿರಿ” ಎಂದರು.
ಚಿಲಕಲನೇರ್ಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಶಶಿಧರ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಮುನಿರಾಜು, ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಸುಬ್ರಮಣಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!