ಜನಪದ ಕಲೆಗಳು ಗ್ರಾಮೀಣ ಭಾರತದ ಜೀವಾಳ. ನಮ್ಮ ನಾಡಿನ ಸಂಸ್ಕೃತಿಯನ್ನು ಪರಿಚಯಿಸುವ ಗ್ರಾಮೀಣ ಭಾಗದ ಕಲೆಗಳನ್ನು ಬಳಸಿದಷ್ಟು ಅದರ ಹೊಳಪು ಹೆಚ್ಚಾಗುತ್ತದೆ. ನಮ್ಮ ಬದುಕಿಗೆ ಹತ್ತಿರವಾಗಿರುವ ಜಾನಪದ ಕಲೆಗಳು ನಿತ್ಯ ನೂತನವಾಗಿವೆ ಎಂದು ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಸ್.ವೆಂಕಟಾಚಲಪತಿ ತಿಳಿಸಿದರು.
ತಾಲ್ಲೂಕಿನ ಕೊತ್ತನೂರು ಗ್ರಾಮದ ಈಶ್ವರ ದೇವಾಲಯದ ಆವರಣದಲ್ಲಿ ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕಲಾಜ್ಯೋತಿ ಜಾನಪದ ಕಲಾ ಸಂಸ್ಥೆ ಸಹಯೋಗದಲ್ಲಿ ನಡೆದ ಕಲಾಜ್ಯೋತಿ ಜಾನಪದ ಕಲಾಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶೀಯ ಕಲೆ, ಸಂಸ್ಕೃತಿಗಳನ್ನು ಮರೆತರೆ ಬದುಕಿನ ಸತ್ವವನ್ನು ಕಳೆದುಕೊಂಡಂತೆ. ಜನಪದ ನಮ್ಮ ಸಂಸ್ಕೃತಿಯ ತಾಯಿಬೇರು. ಜಾಗತೀಕರಣ, ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ ಮತ್ತಿತರ ಕಾರಣಗಳಿಂದ ಜನಪದ ಕಲೆಗಳು ಮರೆಯಾಗುತ್ತಿವೆ.
ನಮ್ಮ ಜನಪದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅದರ ಮೂಲಕವೇ ನಮ್ಮ ಹಿರಿಯರು ಬದುಕು ಕಟ್ಟಿಕೊಂಡು ಬೆಳೆದವರು. ಬದಲಾದ ಜೀವನ ಶೈಲಿ, ಮಾಧ್ಯಮಗಳ ಪ್ರಭಾವದಿಂದ ನಮ್ಮ ಕಲೆ ಸಂಸ್ಕೃತಿ ಉಳಿಸುವಲ್ಲಿ ನಾವು ಹಿಂದೆ ಬಿದ್ದಿದ್ದೆೀವೆ. ಮುಂದೊಂದು ದಿನ ಜಗತ್ತಿನ ಸಂಪನ್ಮೂಲಗಳೆಲ್ಲ ಮುಗಿದಾಗ ಮತ್ತೆ ನಾವು ಹಳೆಯ ಜೀವನ ಶೈಲಿಗೆ ಮರುಳಬೇಕಾಗಿ ಬರಬಹುದು ಎಂದರು.
ಕಲಾಜ್ಯೋತಿ ಜನಪದ ಕಲಾಮೇಳದಲ್ಲಿ ವೀರಗಾಸೆ, ನಾಸಿಕ್ ಡೋಲ್, ತಮಟೆ, ಕೀಲುಕುದುರೆ, ಜನಪದ ಗೊಂಬೆ ಕುಣಿತ, ಡೊಳ್ಳು ಕುಣಿತ, ಜನಪದ ಗಾಯನ, ಭಕ್ತಿ ಗೀತೆಗಳ ಕಾರ್ಯಕ್ರಮ, ತತ್ವಪದ ಗಾಯನ, ಪರಿಸರ ಗೀತೆಗಳ ಕಾರ್ಯಕ್ರಮ ನಡೆಯಿತು.
ಕಲಾವಿದರನ್ನು ಕಲಾಜ್ಯೋತಿ ಜಾನಪದ ಕಲಾ ಸಂಸ್ಥೆ ವತಿಯಿಂದ ಗೌರವಿಸಲಾಯಿತು.
ಕಲಾಜ್ಯೋತಿ ಜನಪದ ಕಲಾ ಸಂಸ್ಥೆಯ ಕೊತ್ತನೂರು ಗಂಗಾಧರ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪಿ.ಎನ್.ರಾಧಾ ರವಿಚಂದ್ರ, ಉಪಾಧ್ಯಕ್ಷೆ ಶಿವಮ್ಮ, ಸದಸ್ಯ ಜ್ಞಾನೇಶ್, ಕಾರ್ಯದರ್ಶಿ ಅಶ್ವತ್ಥಪ್ಪ, ಸಮಾಜ ಸೇವಕ ಕೊತ್ತನೂರು ಪಂಚಾಕ್ಷರಿ ರೆಡ್ಡಿ, ನವೀನ್ಕುಮಾರ್, ಕೊತ್ತನೂರು ರವಿಚಂದ್ರ, ಮುನಿರಾಜು, ರಾಜಗೋಪಾಲ್, ಶಾಲೆಯ ಮುಖ್ಯ ಶಿಕ್ಷಕಿ ಕುಮುದಾ ಹಾಜರಿದ್ದರು.
- Advertisement -
- Advertisement -
- Advertisement -