‘ಮಾತೃಭೂಮಿ ರಕ್ಷಣೆಯಷ್ಟೇ ನಮ್ಮ ಗುರಿಯಾಗಿರುತ್ತದೆ. ನಮಗೇನಾದರೂ ಆದಲ್ಲಿ ನಮ್ಮ ಕುಟುಂಬಕ್ಕೆ ನೆರವಾಗುವ ಮಾನವೀಯ ಗುಣವಿರುವ ಸಮಾಜ ನಮ್ಮದು’ ಎಂದು ಬಿಎಸ್ಎಫ್ ಯೋಧ ಸುರೇಶ್ ತಿಳಿಸಿದರು.
ತಾಲ್ಲೂಕಿನ ಜೆ.ವೆಂಕಟಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಗ್ರಾಮ ಪಂಚಾಯಿತಿ, ಎಂ.ಪಿ.ಸಿ.ಎಸ್ ಹಾಗೂ ಸಾಯಿ ಸೇವಾ ಸಂಘದ ವತಿಯಿಂದ ಆಚರಿಸಿದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾವಿಗೆ ಅಂಜಿ ಬದುಕಬಾರದು. ಸಾವೇ ನಮ್ಮನ್ನು ಕಂಡು ಅಂಜುವ ರೀತಿಯಲ್ಲಿ ಬದುಕಬೇಕು. ಎಷ್ಟು ಕಾಲ ಬದುಕಿದೆ ಎನ್ನುವುದಕ್ಕಿಂತ ಹೇಗೆ ಬದುಕಿದೆ ಎನ್ನುವುದು ಮುಖ್ಯವಾಗುತ್ತದೆ. ದೇಶಪ್ರೇಮ ಪ್ರತಿಯೊಬ್ಬರಲ್ಲೂ ಇರಬೇಕು. ನಮ್ಮ ಸಮಾಜಕ್ಕೆ ಉಪಯುಕ್ತರಾಗುವ ರೀತಿಯಲ್ಲಿ ನಾವು ಜೀವನವನ್ನು ನಡೆಸಬೇಕು. ಪ್ರಕೃತಿಯಲ್ಲಿ ಪ್ರತಿಯೊಂದು ಜೀವಿಯೂ ಪರೋಪಕಾರಿಯೇ. ಹಾಗಾಗಿ ಬುದ್ಧಿಶಕ್ತಿಯಿರುವ ಮನುಷ್ಯರಾದ ನಾವು ಕೂಡ ಪ್ರಯೋಜನಕಾರಿಯಾಗಬೇಕು ಎಂದು ಹೇಳಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ದೇಶದ ಆಗುಹೋಗುಗಳ ಕುರಿತು ನಾವು ಸದಾ ಜಾಗೃತವಾಗಿರಬೇಕು. ಅನ್ಯಾಯ, ಅತ್ಯಾಚಾರ, ದೇಶದ್ರೋಹಿ ಪ್ರಸಂಗಗಳು ಕಂಡುಬಂದರೆ ಸೈನಿಕನ ಮನೋಭಾವದಂತೆ ಪ್ರತಿಭಟಿಸಬೇಕು, ತಡೆಯಬೇಕು. ನಮ್ಮೆಲ್ಲರ ಸಂರಕ್ಷಣೆಗಾಗಿ ಪ್ರಕೃತಿಯ ವೈಪರೀತ್ಯಗಳನ್ನು ಎದುರಿಸುತ್ತಾ ಕಾದು ನಿಂತಿರುವ ಸೈನಿಕರನ್ನು ಸದಾ ನೆನಪಿಟ್ಟಿರಬೇಕು. ಅವರ ಕುಟುಂಬದ ಸದಸ್ಯರ ಮನಸ್ಥಿತಿಯನ್ನು ಯೋಚಿಸಬೇಕು. ಮುಖ್ಯವಾಗಿ ಗೌರವಿಸುವುದನ್ನು ಕಲಿಯಬೇಕು. ಪ್ರತಿಯೊಬ್ಬರೂ ಸೈನಿಕರಂತೆ ದೇಶಕ್ಕಾಗಿ ಬದುಕಬೇಕು ಎಂದು ಹೇಳಿದರು.
ಯೋಧ ಸುರೇಶ್ ಅವರನ್ನು ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು. ಹಾಲಿನ ಡೈರಿ ವತಿಯಿಂದ ಎಲ್ಲರಿಗೂ ಸಿಹಿ ವಿತರಿಸಲಾಯಿತು. ಸಾಯಿ ಸೇವಾ ಸಂಘದವರು ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳು ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷ ರಘುನಾಥ್, ಉಪಾಧ್ಯಕ್ಷ ಚಂದ್ರೇಗೌಡ , ಪಿಡಿಒ ಪ್ರಶಾಂತ್, ನಾಗೇಶ್, ಹರೀಶ್, ಗ್ರಾಮ ಪಂಚಾಯತಿ ಸದಸ್ಯರು, ಶಿಕ್ಷಕರು , ಸೂಲಿಬೆಲೆ ಸಾಯಿ ಸೇವಾ ಸಂಸ್ಥೆಯ ವಿನಯ್ ಕುಮಾರ್ , ಅಂಬರೀಶ್ , ಮುರುಳಿ , ಭರತ್ , ರಮೇಶ್ , ಪ್ರೀತಂ , ಮುನೇಗೌಡ , ಶಶಿ ಕುಮಾರ್, ವೆಂಕಟೇಶ್ ಮೂರ್ತಿ, ರವಿ ಕುಮಾರ್, ಸುರೇಶ್, ಶ್ರೀನಿವಾಸ್, ಪಾಪರಾಜ್, ವೇಣು, ಪಶು ವೈದ್ಯ ಅರುಣ್ ಹಾಜರಿದ್ದರು.
- Advertisement -
- Advertisement -
- Advertisement -
- Advertisement -