ತಾಲ್ಲೂಕಿನಲ್ಲಿ ಪೈರು ಒಣಗಿದ, ಕೆರೆ ಬಿರುಕು ಬಿಟ್ಟ ಚಿತ್ರಣವು ಈಗ ಬದಲಾಗಿದೆ. ನೀರು ತುಂಬಿರುವ ಕೆರೆಗಳು, ಹಚ್ಚ ಹಸಿರ ಪೈರುಗಳು ಕಂಡುಬರುತ್ತವೆ. ಕಳೆದ ಕೆಲ ದಿನಗಳ ಹಿಂದ ಬಿದ್ದ ಮಳೆಯು ರೈತರಲ್ಲಿ ಉಲ್ಲಾಸ ಹಾಗೂ ಉತ್ಸಾಹವನ್ನು ಮೂಡಿಸಿದೆ.
ಈ ಬಾರಿ ತಾಲ್ಲೂಕಿನಲ್ಲಿ 16,763 ಹೆಕ್ಟೇರ್ ಪ್ರದೇಶದಲ್ಲಿ ರಾಗಿ, ನೆಲಗಡಲೆ, ಹುರಳಿ ಮುಂತಾದ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಇದೀಗ ರಾಗಿ ಕಾಳುಗಳು ತೆನೆ ತುಂಬಿ ನಿಂತಿವೆ. ತಾಲ್ಲೂಕಿನಲ್ಲಿ ಇದುವರೆಗೂ 568.3 ಮಿ.ಮೀ ಮಳೆಯಾಗಿದ್ದು, ಉತ್ತಿ ಬಿತ್ತಿದ ಹೊಲಗಳೆಲ್ಲಾ ಹಸಿರಿನಿಂದ ಕಂಗೊಳಿಸುತ್ತಿವೆ.
ಬೆಳೆ ಕೈಗೆ ಬಂದ ಖುಷಿಯೊಂದಿಗೆ ಜಾನುವಾರುಗಳ ಮೇವಿಗೂ ಕೊರತೆಯಿಲ್ಲದಿರುವುದರಿಂದ ರೈತರು ಸಂತುಷ್ಟರಾಗಿದ್ದಾರೆ. ಇದುವರೆಗೂ ಬಿದ್ದ ಮಳೆಗೆ ಭೂಮಿಯಲ್ಲಿ ತಣುವಿದ್ದು, ಬೆಳೆ ಕೈಗೆ ಬರುವ ಎಲ್ಲಾ ಲಕ್ಷಣಗಳಿವೆ. ನಂತರ ಬೀಳುವ ಕಡೆಯ ಮಳೆಗಳು ಕೂಡ ರೈತರಿಗೆ ವರದಾನವಾಗಲಿದೆ. ಮಳೆ ಉತ್ತಮವಾಗಿ ಬಂದಿದ್ದರಿಂದ ಬೆಳೆಗಳು ನಳನಳಿಸುತ್ತಿವೆ. ರಾಗಿಯ ಬೆಳೆಯಂತೂ ನೋಡಲು ಆನಂದವಾಗಿದೆ.
ರೈತರು ರಾಗಿ ಹೊಲಗಳಲ್ಲಿ ಕಳೆ ಕೀಳುವ ಕಾರ್ಯದಲ್ಲಿ ನಿರತರಾಗಿದ್ದು ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದಾರೆ.
‘ತಾಲ್ಲೂಕಿನಲ್ಲಿ 11,289 ಹೆಕ್ಟೇರ್ ಪ್ರದೇಶದಲ್ಲಿ ರಾಗಿ, 2,285 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ, 793 ಹೆಕ್ಟೇರ್ ಪ್ರದೇಶದಲ್ಲಿ ನೆಲಗಡಲೆ, ಸಾಸಿವೆ, ಹುಚ್ಚೆಳ್ಳು ಮುಂತಾದ ಎಣ್ಣೆ ಕಾಳುಗಳನ್ನು, 2,210 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, ಅಲಸಂದೆ, ಅವರೆ ಮುಂತಾದ ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡಿದ್ದು ಬಹುತೇಕ ಎಲ್ಲೆಡೆ ಬೆಳೆಗಳು ಚೆನ್ನಾಗಿ ಆಗಿವೆ. ಕೆಲ ಸೂಕ್ತ ಕ್ರಮಗಳನ್ನು ತಜ್ಞರಿಂದ ಪಡೆದು ರೈತರು ಅಳವಡಿಸಿಕೊಂಡಲ್ಲಿ ಬೆಳೆಗೆ ಹಾನಿಯಾಗದು’ ಎಂದು ಕೃಷಿ ಸಹಾಯಕ ನಿರ್ದೇಶಕ ಬಿ.ಸಿ.ದೇವೇಗೌಡ ತಿಳಿಸಿದ್ದಾರೆ.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -