ತಾಲ್ಲೂಕಿನ ತಾತಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತಮ್ಮ ಶಾಲೆಯ ಆವರಣದಲ್ಲಿರುವ ಹೊಂಗೆ ಮರದಿಂದ ಬೀಜಗಳನ್ನು ಸಂಗ್ರಹಿಸಿ ಮಾರುವ ಮೂಲಕ ವ್ಯವಹಾರಿಕ ಬುದ್ದಿಯನ್ನು ಪ್ರದರ್ಶಿಸಿದ್ದಾರೆ.
ತಾತಹಳ್ಳಿಯ ಸರ್ಕಾರಿ ಶಾಲೆಯ ಆವರಣದಲ್ಲಿನ ಹೊಂಗೆ ಮರವು ಪ್ರತಿವರ್ಷವೂ ಭರ್ಜರಿ ಕಾಯಿಗಳನ್ನು ಬಿಡುತ್ತಿತ್ತು. ಯಾರೋ ಹಳ್ಳಿಯವರು ಬಂದು ಅದನ್ನು ಬಿಡಿಸಿಕೊಂಡು ಹೋಗುತ್ತಿದ್ದರು. ಆದರೆ, ಈ ವರ್ಷ ವಿದ್ಯಾರ್ಥಿಗಳು ಶಿಕ್ಷಕರಿಗೆ “ನಾವೇ ಕಾಯಿಗಳನ್ನು ಉದುರಿಸಿ ಸಂಗ್ರಹಿಸೋಣ. ಅದನ್ನು ಮಾರಿ ಬಂದ ಹಣವನ್ನು ಶಾಲೆಗೆ ಬಳಸೋಣ” ಎಂಬುದಾಗಿ ಮನವಿ ಮಾಡಿದ್ದಾರೆ. ಖುಷಿಯಿಂದ ಒಪ್ಪಿದ ಶಿಕ್ಷಕರು ಮಕ್ಕಳ ಜೊತೆಗೂಡಿದ್ದಾರೆ. ಕೆಲ ಗ್ರಾಮಸ್ಥರೂ ಸಹಾಯ ಮಾಡಿದ್ದಾರೆ.
“ಎಲ್ಲರೂ ಒಗ್ಗೂಡಿ ಹೊಂಗೆ ಕಾಯಿಗಳನ್ನು ಸಂಗ್ರಹಿಸಿದೆವು. ನಾಲ್ಕೂವರೆ ಮೂಟೆಯಷ್ಟು ಸಿಕ್ಕಿತು. ನಮ್ಮ ಹಳ್ಳಿಯವರೊಬ್ಬರು ಅದನ್ನು ಮಿಲ್ ಮಾಡಿಸಿ, ಗುಲಾಬಿ ಗಿಡಗಳಿಗೆ ಗೊಬ್ಬರವಾಗಿ ಬಳಸುವುದಾಗಿ ತಿಳಿಸಿ ಒಂದೂವರೆ ಸಾವಿರ ರೂ ನೀಡಿ ಖರೀದಿಸಿದರು. ಮಕ್ಕಳ ಅಭಿಲಾಷೆಯಂತೆ ಶಾಲೆಗೆ ಉಪಯುಕ್ತವಾಗುವಂತೆ ಹಣವನ್ನು ಬಳಸಲಾಗುವುದು. ಇದರಿಂದ ಮಕ್ಕಳಿಗೆ ಬೀಜ ಸಂಗ್ರಹಣೆ, ವಾಣಿಜ್ಯ, ಹೊಂಗೆಯ ಬೀಜದ ಉಪಯುಕ್ತತೆಗಳು, ಶ್ರಮಜೀವನ, ಸ್ವಾಭಿಮಾನ ಮುಂತಾದ ಪಾಠಗಳು ಕಲಿಯುವಂತಾದುದು ಮರೆಯಲಾಗದು” ಎಂದು ಮುಖ್ಯ ಶಿಕ್ಷಕಿ ಎಚ್.ಎಂ.ಸರಸ್ವತಮ್ಮ ತಿಳಿಸಿದರು.
ಶಿಕ್ಷಕರಾದ ಎಂ.ದೇವರಾಜ್, ಎಚ್.ಆರ್.ಮಂಜುನಾಥ್, ಡಿ.ಎಸ್.ಶ್ರೀಕಾಂತ್, ಕೆ.ನಾಗರಾಜ್ ಹಾಜರಿದ್ದರು.
- Advertisement -
- Advertisement -
- Advertisement -







