ನಗರದ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಶುಕ್ರವಾರ ಮಕ್ಕಳ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿ ಶಿಕ್ಷಣ ಸಂಯೋಜಕ ಭಾಸ್ಕರ್ ಗೌಡ ಮಾತನಾಡಿದರು.
ಮಕ್ಕಳೇ ನಟಿಸಿರುವ ಚಲನಚಿತ್ರಗಳಲ್ಲಿ ಸಂಸ್ಕಾರ, ಪರಿಸರ, ಸಾಮಾಜಿಕ ಕಾಳಜಿಯನ್ನು ಮನರಂಜನೆ ಜತೆ ಪ್ರದರ್ಶಿಸುವುದರಿಂದ ಮಕ್ಕಳು ಸಮಾಜಮುಖಿಗಳಾಗಲು ಸಹಕಾರಿ. ಅದಕ್ಕಾಗಿ ಒಂದು ವಾರ ನಗರದಲ್ಲಿ ಮಕ್ಕಳ ಚಿತ್ರೋತ್ಸವವನ್ನು ಆಯೋಜಿಸಿರುವುದಾಗಿ ಅವರು ತಿಳಿಸಿದರು.
“ಪುಟಾಣಿ ಸಫಾರಿ” ಎಂಬ ಮಕ್ಕಳ ಚಲನಚಿತ್ರವನ್ನು ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ನಗರದ ವೆಂಕಟೇಶ್ವರ ಚಿತ್ರಮಂದಿರ, ಮಯೂರ ಚಿತ್ರಮಂದಿರ ಮತ್ತು ಎಚ್.ಕ್ರಾಸ್ ವೆಂಕಟೇಶ್ವರ ಚಿತ್ರಮಂದಿರಗಳಲ್ಲಿ ಪ್ರತಿದಿನ ಬೆಳಗ್ಗೆ ೮ ರಿಂದ ೧೦ ಗಂಟೆಯವರೆಗೆ ತೋರಿಸಲಾಗುತ್ತದೆ. ಸುಮಾರು ೫ ರಿಂದ ೬ ಸಾವಿರ ವಿದ್ಯಾರ್ಥಿಗಳು ಈ ಚಲನಚಿತ್ರವನ್ನು ವೀಕ್ಷಿಸಲಿದ್ದಾರೆ. ಚಲನಚಿತ್ರವು ಮಕ್ಕಳನ್ನು ಬೇಗ ಆಕರ್ಷಿರುತ್ತದೆ. ಅದರಿಂದಲೂ ಅವರಿಗೆ ಜ್ಞಾನಾರ್ಜನೆಯಾಗಲಿ ಎಂಬುದು ನಮ್ಮ ಉದ್ದೇಶ ಎಂದರು.
ನಮ್ಮದು ಒತ್ತಡದ ಬದುಕು. ಮಕ್ಕಳ ಬಗ್ಗೆ ಕಾಳಜಿ ಕಡಿಮೆ. ಸಾಫ್ಟ್ ವೇರ್ ದಂಪತಿಯ ಮಗನೊಬ್ಬ ಓದಿನಲ್ಲಿ ತುಂಬಾ ಜಾಣ. ಆದರೆ, ಅವನಿಗೆ ಅಪ್ಪ ಅಮ್ಮನ ಪ್ರೀತಿ ಸಿಗುವುದಿಲ್ಲ. ಅವನಿಗೆ ಕಾಡಿನಲ್ಲಿ ಸಫಾರಿ ಮಾಡುವ ಆಸೆ. ಇನ್ನೊಂದೆಡೆ ಅನಕ್ಷರಸ್ಥ ದಂಪತಿಯ ಮಗನಲ್ಲಿ ಕಾಡಿನ ಜ್ಞಾನ ಭಂಡಾರವೇ ಇರುತ್ತದೆ. ಇಬ್ಬರೂ ಕಾಡಿನಲ್ಲಿ ಸಂಧಿಸುತ್ತಾರೆ. ಅಲ್ಲಿ ಅವರು ಏನು ಕಲಿಯುವರು ಎಂಬುದೇ ಚಿತ್ರಕಥೆಯ ತಿರುಳು. ವಿದ್ಯಾರ್ಥಿಗಳಿಗೆ ಈ ಸಫಾರಿಯ ಮೂಲಕ ಕಲಿಕೆಯೂ ಆಗಲಿದೆ ಎಂದು ಅವರು ವಿವರಿಸಿದರು.
ಗರುಡಾದ್ರಿ ಶಾಲೆಯ ಮುಖ್ಯಶಿಕ್ಷಕ ಶ್ರೀನಿವಾಸ್, ವೆಂಕಟೇಶ್ವರ ಚಿತ್ರಮಂದಿರದ ವ್ಯವಸ್ಥಾಪಕ ಕಾರ್ತಿಕ್, ಗರುಡಾದ್ರಿ ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.
- Advertisement -
- Advertisement -
- Advertisement -