LPG ಇಂಧನ ಉಳಿಸುವ ನಿಟ್ಟಿನಲ್ಲಿ ತಾಲ್ಲೂಕಿನ ಎರಡು ಸರ್ಕಾರಿ ಪ್ರೌಢಶಾಲೆಗಳು ಅಸ್ತ್ರ ಒಲೆಗಳನ್ನು ನಿರ್ಮಿಸಿಕೊಂಡಿವೆ.
ನಿತ್ಯಜೀವನಕ್ಕೆ ಉಪಯುಕ್ತವಾದ ವೈಜ್ಞಾನಿಕ ಸಾಧನಗಳನ್ನು ಹಳ್ಳಿಗಳಲ್ಲಿ ಪ್ರಾಯೋಗಿಕವಾಗ ತರಲು ಪ್ರೊ.ಸತೀಶ್ ಧವನ್ ನಿರ್ದೇಶಕರಾಗಿದ್ದ ಅವಧಿಯಲ್ಲಿ ಎ.ಕೆ.ಎನ್.ರೆಡ್ಡಿ, ಮಾಧವ ಗಾಡ್ಗೀಳ್, ರೊದ್ದಂ ನರಸಿಂಹ ಮುಂತಾದ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ವಿಜ್ಞಾನಿಗಳು ಅಸ್ತ್ರ(ಸೆಂಟರ್ ಫಾರ್ ಅಪ್ಲಿಕೇಷನ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಫಾರ್ ರೂರಲ್ ಏರಿಯಾಸ್) ಎಂಬ ಕೇಂದ್ರವನ್ನು ಪ್ರಾರಂಭಿಸಿದ್ದರು. ಕಡಿಮೆ ಸೌದೆ ಬಳಸಿ ಹೆಚ್ಚು ಶಾಖವನ್ನು ಉತ್ಪಾದಿಸುವ ಮಾಲಿನ್ಯರಹಿತ ಒಲೆಗಳು ಅವರ ಕೊಡುಗೆಯಾಗಿದ್ದು, ಅವು ಅಸ್ತ್ರ ಒಲೆಗಳೆಂದೇ ಪ್ರಸಿದ್ಧಿಯಾಗಿವೆ.
ದಿ.ಸಂಜಯ್ದಾಸ್ಗುಪ್ತರ ನೆನಪಿನಲ್ಲಿ ನಡೆಸುವ ‘ನಮ್ಮ ಮುತ್ತೂರು’ ಸಂಸ್ಥೆಯ ವತಿಯಿಂದ ಆಗಮಿಸಿದ್ದ ರಮೇಶ್ ಕಿಕ್ಕೇರಿ ತಾಲ್ಲೂಕಿನ ಎರಡೂ ಶಾಲೆಗಳಲ್ಲಿ ಅಸ್ತ್ರ ಒಲೆಗಳನ್ನು ಕಟ್ಟಿದ ನಂತರ ವಿದ್ಯಾರ್ಥಿಗಳಿಗೆ ಬಿಸಿಯೂಟ ತಯಾರಿಕೆಯಲ್ಲಿ ಈ ಹೊಸ ಒಲೆಯಿಂದ ಶೇಕಡಾ 50 ರಷ್ಟು ಇಂಧನ ಉಳಿತಾಯ ಮಾಡಬಹುದು, ಶಾಖದ ಸದುಪಯೋಗ ಮಾಡಿಕೊಳ್ಳುತ್ತಾ ಒಂದೆಡೆ ಅಡುಗೆ ಮತ್ತೊಂದೆಡೆ ಬಿಸಿ ನೀರನ್ನು ಪಡೆಯಬಹುದು, ಕಡಿಮೆ ಇಂಧನದಿಂದ ತಯಾರಾಗುವ ಶೀಘ್ರ ಅಡುಗೆಯ ಬಗ್ಗೆ ವಿವರಿಸಿದರು. ಎಲ್ಪಿಜಿ ಗ್ಯಾಸ್ ಉಳಿತಾಯ ಹಾಗೂ ಭೂಮಿಯಿಂದ ಬಗೆದು ಉಪಯೋಗಿಸುತ್ತಿರುವ ಇಂಧನಗಳ ಉಳಿತಾಯದ ಅಗತ್ಯತೆಯ ಬಗ್ಗೆ ತಿಳಿಸಿದರು.
ಹೊಗೆಯಿಂದಾಗಿ ಆರೋಗ್ಯ ಹಾಳಾಗುತ್ತದೆ. ಕ್ಯಾನ್ಸರ್, ಟಿಬಿ, ಅಸ್ತಮಾ ಹೀಗೆ ನೂರಾರು ರೋಗಗಳಿಗೆ ಸೌದೆ ಒಲೆಗಳೇ ತೌರುಮನೆ. ಈ ಅಸ್ತ್ರ ಒಲೆಗಳಲ್ಲಿ ಯಾವುದೇ ಕೃಷಿತ್ಯಾಜ್ಯಗಳನ್ನು ಇಂಧನವಾಗಿ ಬಳಸಬಹುದು. ಇವು ಪ್ರತ್ಯಕ್ಷವಾಗಿ ಕಟ್ಟಿಗೆ ಉಳಿಸುತ್ತವೆ. ಮರಗಿಡಗಳನ್ನು ಕಡಿಯುವುದು ಕಡಿಮೆಯಾಗುತ್ತದೆ. ಹೀಗೆ ಒಂದರ ಹಿಂದೊಂದು ಸರಪಳಿ ಉಪಯೋಗಗಳಿವೆ. ಅಸ್ತ್ರ ಒಲೆಗಳು ಗ್ರಾಮೀಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕಟ್ಟಿಗೆಗಾಗಿ ವ್ಯರ್ಥವಾಗುತ್ತಿದ್ದ ಇಡೀ ದಿನದ ಸಮಯದ ಉಳಿತಾಯದಿಂದ ಆರೋಗ್ಯದವರೆಗೂ ಉಪಯುಕ್ತ. ಇದು ಮಹಿಳೆಯರಿಗೆ ಅತ್ಯಂತ ಸಹಾಯಕ. ಒಲೆಯೊಂದು ಬದುಕನ್ನೇ ಬದಲಿಸುತ್ತದೆ ಎಂದು ಹೇಳಿದರು.
- Advertisement -
- Advertisement -
- Advertisement -
- Advertisement -