ವಾರ್ಡುಗಳಲ್ಲಿರುವ ಕುಡಿಯುವ ನೀರಿನ ಸಮಸ್ಯೆ, ನಗರದ ಸ್ವಚ್ಚತೆ ಹಾಗೂ ಬೀದಿ ದೀಪಗಳ ಸಮಸ್ಯೆ ಪರಿಹರಿಸಲು ನಗರಸಭೆ ಅಧಿಕಾರಿಗಳು ಕೂಡಲೇ ಕ್ರಮ ಜರುಗಿಸಬೇಕು ಎಂದು ನಗರಸಭೆ ಸಾಮಾನ್ಯ ಸಭೆಯಲ್ಲಿ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು.
ನಗರದ ನಗರಸಭೆ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷ ಅಫ್ಸರ್ಪಾಷ ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಸಾಮಾನ್ಯಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಸದಸ್ಯರು ನಗರದಲ್ಲಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ನಗರಸಭೆ ಪೌರಾಯುಕ್ತರಾಗಿರುವ ಚಲಪತಿ ಸರ್ಕಾರಿ ಅಧಿಕಾರಿಯಂತೆ ವರ್ತಿಸದೇ ಯಾವುದೋ ಒಂದು ಪಕ್ಷದ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ. ಮಹಿಳಾ ಸದಸ್ಯರ ಪರವಾಗಿ ಕಚೇರಿಗೆ ಬರುವ ಅವರ ಪತಿ ಅಥವ ಮಕ್ಕಳು ಇವರನ್ನೇನಾದರೂ ಪ್ರಶ್ನಿಸಿದರೆ ‘ನೀನ್ಯಾರು ನನ್ನನ್ನು ಕೇಳಲು ಸದಸ್ಯರಾಗಿರುವವರನ್ನು ಕಳುಹಿಸು’ ಎಂದು ಅವಮಾನ ಮಾಡಿ ಕಳುಹಿಸುತ್ತಾರೆ ಎಂದು ಸದಸ್ಯರು ದೂರಿದರು.
ನಗರದ ೮ ನೇ ವಾರ್ಡಿನಲ್ಲಿ ನಿರ್ಮಿಸಲಾಗಿದ್ದ ಶುದ್ದ ಕುಡಿಯುವ ನೀರಿನ ಘಟಕದ ಉದ್ಘಾಟನೆಯನ್ನು ನೆರವೇರಿಸಿಕೊಳ್ಳುವಂತೆ ಸದಸ್ಯರಿಗೆ ಹೇಳಿದ್ದ ಪೌರಾಯುಕ್ತ ಚಲಪತಿ ಉದ್ಘಾಟನೆಯಾದ ನಂತರ ಅದೇ ಶುದ್ದ ಕುಡಿಯುವ ನೀರಿನ ಘಟಕದ ಗಾಜುಗಳನ್ನು ಒಡೆಯಲು ಕಾಂಗ್ರೆಸ್ ಕಾರ್ಯಕರ್ತರಿಗೆ ಹೇಳಿದ್ದಾರೆ. ಸಾಲದು ಎಂಬಂತೆ ಉದ್ಘಾಟನೆಯಾದ ಘಟಕವನ್ನು ನಗರಸಭೆಯ ಯಾವುದೇ ಸದಸ್ಯರಿಗೆ ಆಹ್ವಾನ ನೀಡದೇ ಮತ್ತೊಮ್ಮೆ ಶಾಸಕರು ಮತ್ತು ಅವರ ಕಾರ್ಯಕರ್ತರನ್ನು ಮಾತ್ರ ಇಟ್ಟುಕೊಂಡು ಉದ್ಘಾಟನೆ ಮಾಡಿಸಿದ್ದಾರೆ. ರಾಜಕೀಯ ಮಾಡಲು ಅಷ್ಟು ಇಷ್ಟವಿದ್ದರೆ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಜನರ ಮುಂದೆ ಬಂದು ಚುನಾವಣೆಯಲ್ಲಿ ಸ್ಪರ್ಧಿಸಲಿ. ಘಟಕದ ಉದ್ಘಾಟನೆ ಮಾಡಿಕೊಳ್ಳುವಂತೆ ನಮಗೆ ಅವರು ಹೇಳಿದ ಸಾಕ್ಷಿಯಾಗಿ ದೂರವಾಣಿ ಸಂಭಾಷಣೆಯ ಆಡಿಯೋ ಇದೆ ಎಂದು ೮ ನೇ ವಾರ್ಡ್ ಸದಸ್ಯೆ ಸುಮಿತ್ರ ರಮೇಶ್ಆ ರೋಪಿಸಿದರು.
ನಗರಸಭೆ ವ್ಯಾಪ್ತಿಯಲ್ಲಿನ ಘೋಷಿತ ಕೊಳಚೆ ಪ್ರದೇಶಗಳಲ್ಲಿನ ಆಸ್ತಿ ಹಕ್ಕುದಾಖಲೆಗಳನ್ನು ನಿರ್ವಹಿಸುವ ಕುರಿತು ಚರ್ಚೆ ನಡೆಸುವ ಸಂದರ್ಭದಲ್ಲಿ ಸದಸ್ಯ ರಾಘವೇಂದ್ರ ಮಾತನಾಡಿ, ನಗರವ್ಯಾಪ್ತಿಯಲ್ಲಿರುವ ಎಲ್ಲರಿಗೂ ಹಕ್ಕು ಬದಲಾವಣೆ ಹಾಗೂ ಖಾತೆಗಳನ್ನು ನ್ಯಾಯಯುತವಾಗಿ ಮಾಡಿಕೊಡಿ. ನಗರಸಭೆಯ ಆದಾಯ ಹೆಚ್ಚಿಸುವ ಉದ್ದೇಶದಿಂದ ೫ ಕಿ.ಮೀ.ವ್ಯಾಪ್ತಿಯಲ್ಲಿ ಕಾನೂನು ಬದ್ಧವಾಗಿರುವ ಎಲ್ಲಾ ನಿವೇಶನಗಳನ್ನು ನಗರಸಭೆಗೆ ಸೇರಿಸಿಕೊಳ್ಳಿ. ಹಳೇ ನಗರದಲ್ಲಿ ಸಾಕಷ್ಟು ಮಂದಿಯ ಮನೆಗಳು, ನಿವೇಶನಗಳಿಗೆ ಈವರೆಗೂ ಖಾತೆ ಮಾಡಿಕೊಟ್ಟಿಲ್ಲ. ಈ ಬಗ್ಗೆ ಜನರೇ ನೇರವಾಗಿ ಕಚೇರಿಗೆ ಬಂದಾಗ ಅವರಿಗೆ ಸ್ಪಂದಿಸಿ ನಿಗಧಿತ ಶುಲ್ಕ ಕಟ್ಟಿಸಿಕೊಂಡು ಮಾಡಿಕೊಡಿ ಎಂದರು.
ನಗರಸಭೆ ಸದಸ್ಯರಾದ ನಮ್ಮ ಅವಧಿ ಇನ್ನು ಕೇವಲ ನಾಲ್ಕು ತಿಂಗಳಿದೆ. ಸಭೆಗಳಲ್ಲಿ ನಾವು ಹೇಳಿದ ಮಾತಿಗೆ ಬೆಲೆಕೊಡುತ್ತಿಲ್ಲ. ಜನರಿಗೆ ಕುಡಿಯುವ ನೀರು ಕೊಡಲಿಕ್ಕೆ ಸಾಧ್ಯವಾಗುತ್ತಿಲ್ಲ, ಸ್ವಚ್ಚತೆ ಕಾಪಾಡಲಿಕ್ಕೆ ಸಾಧ್ಯವಾಗುತ್ತಿಲ್ಲ, ಜನರಿಗೆ ಮೂಲಸೌಕರ್ಯಗಳನ್ನು ಒದಗಿಸಲಿಕ್ಕೆ ಸಾಧ್ಯವಾಗದಿದ್ದ ಮೇಲೆ ಕೌನ್ಸಿಲ್ ಸಭೆ ಮಾಡುವುದರಲ್ಲಿ ಅರ್ಥವಿದೆಯೇ ಎಂದು ಸದಸ್ಯ ಲಕ್ಮಯ್ಯ ಪ್ರಶ್ನಿಸಿದರು.
ನಗರದಲ್ಲಿನ ನಿವೇಶನ ರಹಿತ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ೨೩ ಎಕರೆ ಭೂಮಿಯನ್ನು ಖರೀದಿ ಮಾಡಲಾಗಿದ್ದು, ಅದರಲ್ಲಿ ರಸ್ತೆಗಳ ವಿಂಗಡಣೆ ಸೇರಿದಂತೆ ಎಲ್ಲಾ ಬಗೆಯ ಮೂಲಸೌಕರ್ಯಗಳನ್ನು ಒದಗಿಸಿಕೊಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಟೆಂಡರ್ ಕರೆಯಲಾಗುತ್ತದೆ. ಆಯಾ ವಾರ್ಡುಗಳ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಫಲಾನುಭವಿಗಳ ಸರ್ವೆ ಕಾರ್ಯವನ್ನು ಮಾಡಲಾಗುತ್ತದೆ ಎಂದು ಪೌರಾಯುಕ್ತ ಜಿ.ಎನ್.ಚಲಪತಿ ತಿಳಿಸಿದರು.
‘ಕಳೆದ ಹದಿನೈದು ವರ್ಷಗಳಿಂದ ಸ್ವಾದೀನಾನುಭವದಲ್ಲಿದ್ದು ಸ್ಥಳವನ್ನು ಮಂಜೂರು ಮಾಡುವಂತೆ ಕೋರಿ ನಗರಸಭೆಗೆ ಈವರೆಗೂ ಸಾಕಷ್ಟು ಭಾರಿ ಅರ್ಜಿ ಸಲ್ಲಿಸಿರುವ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಮೊದಲು ಸ್ಥಳವನ್ನು ಖಾತೆ ಮಾಡಿಕೊಡಿ’ ಎಂದು ಸದಸ್ಯೆ ಸುಗುಣ ಲಕ್ಷ್ಮೀನಾರಾಯಣ ಹೇಳಿದಾಗ, ಸದಸ್ಯರಾದ ಎಸ್.ರಾಘವೇಂದ್ರ, ಲಕ್ಮಯ್ಯ, ವೆಂಕಟಸ್ವಾಮಿ ಸೇರಿದಂತೆ ಎಲ್ಲಾ ಸದಸ್ಯರು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿವೇಶನ ಖಾತೆ ಮಾಡಿಕೊಡುವಂತೆ ಸಭೆಯಲ್ಲಿ ಒತ್ತಾಯಿಸಿದರು.
- Advertisement -
- Advertisement -
- Advertisement -