ರಸಗೊಬ್ಬರಗಳನ್ನು ಮಾರಾಟಮಾಡುವಂತಹ ಯಾವುದೇ ಅಂಗಡಿಗಳಲ್ಲಿ ಎಂ.ಆರ್.ಪಿ. ದರಕ್ಕಿಂತ ಹೆಚ್ಚಾಗಿ ಹಣವನ್ನು ಪಡೆದುಕೊಂಡರೆ, ಇಲ್ಲವೇ ರಸಗೊಬ್ಬರಗಳಿದ್ದರೂ ವಿತರಣೆ ಮಾಡದಿರುವವರ ವಿರುದ್ಧ ದೂರು ನೀಡಿದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ದೇವೇಗೌಡ ಹೇಳಿದರು.
ನಗರದ ಕೃಷಿ ಸಹಾಯಕ ನಿರ್ದೇಶಕ ಕಚೇರಿಯಲ್ಲಿ ಬುಧವಾರ ಎಲ್ಲಾ ಹೋಬಳಿಗಳ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿಗೆ ಆಯೋಜನೆ ಮಾಡಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನಾಧ್ಯಂತ ಎಲ್ಲಾ ರೈತರುಗಳು ಮುಂಗಾರು ಪೂರ್ವ ಮಳೆಯಲ್ಲಿ ಮಾಗಿ ಉಳುಮೆಯನ್ನು ಮಾಡಿಕೊಂಡಿದ್ದು, ರೈತರುಗಳ ಅಗತ್ಯಕ್ಕೆ ತಕ್ಕಂತೆ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರಗಳು ವಿತರಣೆಯಾಗುವಂತೆ ಎಲ್ಲಾ ರೈತ ಸಂಪರ್ಕ ಕೇಂದ್ರಗಳ ಸಿಬ್ಬಂದಿ ಕ್ರಮವಹಿಸಬೇಕು. ರಸಗೊಬ್ಬರಗಳ ಮಾರಾಟದ ಅಂಗಡಿಗಳಲ್ಲಿ ಯೂರಿಯಾ ಸೇರಿದಂತೆ ರಸಗೊಬ್ಬರಗಳಿಗೆ ನಿಗದಿತ ಬೆಲೆಗಿಂತಲೂ ಹೆಚ್ಚಿನ ಬೆಲೆಯನ್ನು ತೆಗೆದುಕೊಳ್ಳುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿತ್ತು, ಈ ಬಾರಿ ಅಂತಹ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಲಾಗುತ್ತದೆ, ರೈತರು ಕೂಡಾ ಅಂತಹ ಅಂಗಡಿಗಳ ವಿರುದ್ಧ ದೂರು ನೀಡಬಹುದಾಗಿದೆ.
ಇಲಾಖೆಯಿಂದ ರೈತರಿಗೆ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ರೈತ ಸಂಪರ್ಕ ಕೇಂದ್ರಗಳ ಮುಖಾಂತರ ದೊರಕಿಸಿಕೊಡಲು ಸಿಬ್ಬಂದಿ ಜವಾಬ್ದಾರಿಯಿಂದ ಕೆಲಸ ಮಾಡಬೇಕು, ಬಿತ್ತನೆ ಬೀಜಗಳು, ರಸಗೊಬ್ಬರಗಳನ್ನು ನಿಗದಿತ ಸಮಯದಲ್ಲಿ ಎಲ್ಲಾ ರೈತರಿಗೂ ಸಿಗುವಂತೆ ರೈತರಲ್ಲಿ ಸ್ಥಳೀಯವಾಗಿ ಜಾಗೃತಿಮೂಡಿಸಬೇಕು. ರೈತರು ಇಲಾಖೆಯಿಂದ ಸಿಗುವಂತೆ ಜಿಂಕ್, ಬೋರಾನ್, ಜಿಪ್ಸಂ, ಮುಂತಾದ ರಸಗೊಬ್ಬರಗಳನ್ನೂ ಪಡೆದುಕೊಂಡು ಭೂಮಿಗೆ ಹಾಕಿ ಫಲವತ್ತತೆಯನ್ನು ಹೆಚ್ಚಿಸಬೇಕು. ರಾಗಿ, ನೆಲೆಗಡಲೆ, ಮುಸುಕಿನಜೋಳ, ತೊಗರಿ, ಮುಂತಾದ ಬೆಳೆಗಳನ್ನು ಬೆಳೆಯಲು ರೈತರು ಸಿದ್ದತೆ ಮಾಡಿಕೊಂಡಿದ್ದು, ಈ ಬಾರಿ ಉತ್ತಮ ಗುಣಮಟ್ಟದ ಬೆಳೆಗಳನ್ನು ನಿರೀಕ್ಷಿಸಲಾಗಿದೆ. ಇಲಾಖೆಯ ಸಿಬ್ಬಂದಿಗಳು ಕಾಲ ಕಾಲಕ್ಕೆ ರೈತರುಗಳಿಗೆ ಅಗತ್ಯವಾಗಿರುವ ಮಾರ್ಗದರ್ಶನ ಹಾಗೂ ಸಲಹೆಗಳನ್ನು ನೀಡಬೇಕು ಎಂದರು.
ರೈತ ಸಂಪರ್ಕ ಕೇಂದ್ರಗಳ ಸಿಬ್ಬಂದಿಯಾದ ರಾಮಾಂಜಿನಪ್ಪ, ನಾಗೇಶ್, ಕೋನಪ್ಪರೆಡ್ಡಿ, ರಮೇಶ್, ಚಿಕ್ಕರೆಡ್ಡಿ, ಚಿನ್ನಾರೆಡ್ಡಿ, ವೆಂಕಟೇಶಪ್ಪ, ಲೊಕೇಶ್, ಲಕ್ಷ್ಮೀಪತಿ, ಶಂಕರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -