29.1 C
Sidlaghatta
Saturday, March 25, 2023

ಶಾಶ್ವತ ನೀರಾವರಿ ಹೋರಾಟ ಸಮಿತಿ ವತಿಯಿಂದ ಸಹಿ ಸಂಗ್ರಹ ಅಭಿಯಾನ

- Advertisement -
- Advertisement -

ಕೆರೆಗಳ ಡಿನೋಟಿಫೈ ಮಾಡಲು ಸರ್ಕಾರ ‘ಕರ್ನಾಟಕ ಭೂ ಕಂದಾಯ ಕಾಯ್ದೆ–1964’ರ ಕಲಂ 68ಕ್ಕೆ ತಿದ್ದುಪಡಿ ತರುವ ತಯಾರಿ ನಡೆಸಿದೆ. ದಿನೇ ದಿನೇ ಪಾತಾಳಕ್ಕೆ ಕುಸಿಯುತ್ತಿರುವ ಅಂತರ್ಜಲ ಪುನಶ್ಚೇತನಗೊಳಿಸುವ ಕೆಲಸ ಬಿಟ್ಟು, ಜನಹಿತಕ್ಕೆ ಗಂಭೀರ ಪೆಟ್ಟು ನೀಡುವಂತಹ ಕೆಲಸಕ್ಕೆ ಮುಂದಾಗಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ಆಂಜನೇಯರೆಡ್ಡಿ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಸೋಮವಾರ ರಾಜ್ಯದಲ್ಲಿ ಬತ್ತಿಹೋದ ಕೆರೆ, ಕಟ್ಟೆ ಹಾಗೂ ಹಳ್ಳಗಳನ್ನು ಡಿನೋಟಿಫೈ ಮಾಡುವ ಕಂದಾಯ ಇಲಾಖೆಯ ಪ್ರಸ್ತಾವ ವಿರೋಧಿಸಿ, ಕೆರೆಗಳ ಪುನಶ್ಚೇತನಕ್ಕೆ ಆಗ್ರಹಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡ ಬಯಲುಸೀಮೆಯ ಸಾರ್ವಜನಿಕರ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಅಭಿಯಾನ ಯಶಸ್ವಿಗೊಳಿಸಿ ಜನಹಿತ ಮರೆತ ಸರ್ಕಾರಕ್ಕೆ ಸರಿಯಾಗಿ ಪಾಠ ಕಲಿಸಬೇಕಿದೆ. ತಪ್ಪು ನಿರ್ಧಾರದಿಂದ ಹಿಂದೆ ಸರಿದು ಕ್ಷಮೆ ಕೇಳುವಂತೆ ಮಾಡಬೇಕು. ಮನುಷ್ಯನ ಜೀವನ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅವಲಂಬಿತವಾಗಿದೆ. ಅವುಗಳನ್ನು ರಕ್ಷಿಸಬೇಕಾದ ಸಿದ್ದರಾಮಯ್ಯ ಅವರ ಸರ್ಕಾರವೇ ಭೂಮಾಫಿಯಾದವರ ಕೈಗೆ ಕೊಡುವ ಹುನ್ನಾರ ನಡೆಸಿದೆ. ಇದನ್ನು ಪ್ರತಿಭಟಿಸುವುದು ನಮ್ಮ ಆದ್ಯ ಕರ್ತವ್ಯ. ಜನ ಮತ್ತು ಸಂವಿಧಾನ ವಿರೋಧಿ ಈ ಕ್ರಮದ ವಿರುದ್ಧ ನಾವೆಲ್ಲ ಪ್ರಬಲ ಪ್ರತಿಭಟನೆ ಮಾಡಿ, ರಾಜ್ಯದಾದ್ಯಂತ ಪರಿಣಾಮಕಾರಿ ಜನಾಭಿಪ್ರಾಯ ರೂಪಿಸಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಕೃಷಿ ಪ್ರಧಾನವಾದ ದೇಶದಲ್ಲಿ ಸರ್ಕಾರ ಕೃಷಿಗೆ ಪೂರಕವಾದ ಜಲಮೂಲಗಳ ಸಂರಕ್ಷಿಸಬೇಕು. ಅದನ್ನು ಬಿಟ್ಟು ಅವೈಜ್ಞಾನಿಕ ನಿರ್ಧಾರಗಳ ಮೂಲಕ ವ್ಯತಿರಿಕ್ತ ನಿರ್ಧಾರ ತೆಗೆದುಕೊಳ್ಳುವುದು ಮುಂದಿನ ಪೀಳಿಗೆಗಳ ದೃಷ್ಟಿಯಿಂದ ಅಪಾಯಕಾರಿ. ಸರ್ಕಾರ ಕೂಡಲೇ ಈ ಆಘಾತಕಾರಿ ನಿರ್ಧಾರದಿಂದ ಹಿಂದೆ ಸರಿಯಬೇಕು’ ಎಂದು ಅವರು ಒತ್ತಾಯಿಸಿದರು.

ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಸೋಮವಾರ ರಾಜ್ಯದಲ್ಲಿ ಬತ್ತಿಹೋದ ಕೆರೆ, ಕಟ್ಟೆ ಹಾಗೂ ಹಳ್ಳಗಳನ್ನು ಡಿನೋಟಿಫೈ ಮಾಡುವ ಕಂದಾಯ ಇಲಾಖೆಯ ಪ್ರಸ್ತಾವ ವಿರೋಧಿಸಿ, ಕೆರೆಗಳ ಪುನಶ್ಚೇತನಕ್ಕೆ ಆಗ್ರಹಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿ ವತಿಯಿಂದ ಸಾರ್ವಜನಿಕರ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.

ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾ ಉಪಾಧ್ಯಕ್ಷ ಮಳ್ಳೂರು ಹರೀಶ್‌ ಮಾತನಾಡಿ, ಜನ ಜಾನುವಾರು, ಪಶು–ಪಕ್ಷಿಗಳ ಜೀವನ ಕೆರೆಗಳ ನೀರಿನ ಮೇಲೆ ಅವಲಂಬಿತವಾಗಿದೆ. ಅಂತೆಯೇ ನೆಲ, ಜಲ, ಅರಣ್ಯ ಮತ್ತು ದೇಶಿ ಬೀಜಗಳನ್ನು ಸಂರಕ್ಷಣೆ ಮಾಡಬೇಕಿದೆ. ಜನಹಿತ ಮರೆತು ಸಂವಿಧಾನ ಬದ್ಧ ಚೌಕಟ್ಟನ್ನು ಮೀರಿ ಕೆಲಸ ಮಾಡುತ್ತಿರುವ ಸರ್ಕಾರವನ್ನು ಎಚ್ಚರಿಸುವ ಕೆಲಸಕ್ಕೆ ನಾವೆಲ್ಲ ಮುಂದಾಗಬೇಕಿದೆ ಎಂದು ಹೇಳಿದರು.
ಒಂದೆಡೆ ರಾಜ್ಯ ಸರ್ಕಾರ ಕೆರೆಗಳ ಹೂಳೆತ್ತಿ ನೀರು ತುಂಬಿಸಲು ಸಾವಿರಾರು ಕೋಟಿ ಹಣ ವ್ಯಯ ಮಾಡಿ ಯೋಜನೆಯನ್ನು ರೂಪಿಸುತ್ತಿದ್ದರೆ, ಇನ್ನೊಂದೆಡೆ ಕೆರೆಗಳನ್ನು ಡಿನೋಟಿಫೈ ಮಾಡುವ ಮೂಲಕ ದ್ವಂದ್ವ ನೀತಿಯನ್ನು ಅನುಸರಿಸುತ್ತಿರುವುದು ಸಮಂಜಸವಲ್ಲ ಎಂದರು.
‘ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಬಯಲುಸೀಮೆಯ ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಈ ಅಭಿಯಾನ ನಡೆಸಲಾಗುತ್ತದೆ. ಸರ್ಕಾರದ ತೀರ್ಮಾನದ ವಿರುದ್ಧ ಸಾರ್ವಜನಿಕರಿಂದ ಸಹಿ ಸಂಗ್ರಹಿಸಿ, ರಾಜ್ಯಪಾಲರಿಗೆ ದೂರು ಸಲ್ಲಿಸಲಾಗುತ್ತದೆ’ ಎಂದು ಹೇಳಿದರು.
ಆನೂರು ದೇವರಾಜ್‌, ನಾಗದೇನಹಳ್ಳಿ ನಾರಾಯಣಸ್ವಾಮಿ, ವೆಂಕಟಸ್ವಾಮಿ, ಹಿತ್ತಲಹಳ್ಳಿ ಗೋಪಾಲಗೌಡ, ವಿ.ಸಿ.ಮಂಜುನಾಥ್‌, ಕುಚ್ಚಣ್ಣ ಅನಂತು, ಅಬ್ಲೂಡು ಆರ್‌.ದೇವರಾಜ್‌, ಹಿತ್ತಲಹಳ್ಳಿ ಸುರೇಶ್‌, ರಾಮಚಂದ್ರಪ್ಪ, ಮಂಜುನಾಥ್‌, ರೈತಸಂಘದ ರವಿಪ್ರಕಾಶ್‌, ಮಂಜುನಾಥ್‌, ಪ್ರತೀಶ್‌, ಮದನ್‌, ದರ್ಶನ್‌, ಎ.ಎಂ.ತ್ಯಾಗರಾಜ್‌, ಮುನಿರಾಜು, ಮುರಳಿ, ಲಕ್ಷ್ಮಣ, ಶ್ರೀನಿವಾಸ್‌, ನವೀನ್‌ ಅಭಿಯಾನದಲ್ಲಿ ಭಾಗವಹಿಸಿದ್ದರು.
 

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!