ಎಲ್ಲರೂ ಶುದ್ಧ ನೀರನ್ನು ಉಪಯೋಗಿಸಿ ರೋಗಗಳಿಂದ ದೂರವಿರಿ. ನೀರನ್ನು ಮಿತವಾಗಿ ಬಳಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಲಕ್ಷ್ಮೀದೇವಮ್ಮ ತಿಳಿಸಿದರು.
ನಗರದ ಸ್ತ್ರೀಶಕ್ತಿ ಭವನದ ಸಭಾಂಗಣದಲ್ಲಿ ಸೋಮವಾರ ಐನಾ ಟ್ರಸ್ಟ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಎಂಬ ವಿಷಯವಾಗಿ ನಡೆದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಕುಡಿಯುವ ನೀರನ್ನು 20 ನಿಮಿಷಗಳ ಕಾಲ ಕುದಿಸಿ ಆರಿಸಿ ಬಳಸಬೇಕು. ನೀರನ್ನು ಶೇಖರಿಸುವ ಪಾತ್ರೆ ಅಥವಾ ಬಿಂದಿಗೆಗಳನ್ನು ಮುಚ್ಚಿಡಬೇಕು. ಸ್ವಚ್ಛತೆಗೆ ಆದ್ಯತೆಯನ್ನು ನೀಡಬೇಕು. ಕಸ ಹಾಗೂ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡದೆ, ಪ್ರತ್ಯೇಕವಾಗಿ ಶೇಖರಿಸಿ ಪ್ರತಿದಿನ ಅದನ್ನು ತ್ಯಾಜ್ಯ ಗುಂಡಿಗಳಿಗೆ ಹಾಕಬೇಕು. ಅಂಗನಾಡಿಗಳಲ್ಲಿ ಮಕ್ಕಳಿಗೆ ತಿನ್ನಿಸುವ ಮುನ್ನ ಕೈಗಳನ್ನು ಸಾಬೂನನ್ನು ಬಳಸಿ ಸ್ವಚ್ಛಗೊಳಿಸಿಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಬೇಕು. ಪೋಷಕರೂ ಕೂಡ ಈ ಅಭ್ಯಾಸ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಶೌಚಾಲಯ ಬಳಸುವ ಅಭ್ಯಾಸ ರೂಢಿಸಬೇಕು ಎಂದು ಹೇಳಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್ಕುಮಾರ್ ಮಾತನಾಡಿ, ಹಿಂದೆ ಇದ್ದ ಅಪೌಷ್ಠಿಕತೆಯಿಂದ ಬಳಲುತ್ತಿದ್ದ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಇದಕ್ಕೆ ಅಂಗನವಾಡಿ ಕಾರ್ಯಕರ್ತೆಯರ ಶ್ರಮ ಕಾರಣವಾಗಿದೆ. ಇನ್ನಷ್ಟು ಈ ಬಗ್ಗೆ ಶ್ರಮ ವಹಿಸಿ ಅರಿವು ಮೂಡಿಸಿದ್ದಲ್ಲಿ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳ ಸಂಖ್ಯೆಯನ್ನು ಶೂನ್ಯಕ್ಕೆ ಇಳಿಸಬಹುದಾಗಿದೆ. ಸ್ವಚ್ಛತೆಯು ಖಾಯಿಲೆಯಿಂದ ದೂರವಿಡುವ ಬಹು ದೊಡ್ಡ ಮುಂಜಾಗೃತಾ ಕ್ರಮವಾಗಿದೆ. ಮಹಿಳೆಯರು ಮನೆಗಳ ಸುತ್ತ ಮುತ್ತ ನೀರು ನಿಲ್ಲಲು ಆಸ್ಪದ ನೀಡದೆ, ವಾರಕ್ಕೊಮ್ಮೆ ನೀರು ಶೇಖರಿಸುವ ಡ್ರಮ್ಮುಗಳನ್ನು ಒಣಗಿಸಿಟ್ಟು ಲಾರ್ವ ಬೆಳೆಯದಂತೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಐನಾ ಸಂಸ್ಥೆಯ ವತಿಯಿಂದ ಮನೆಯಲ್ಲಿ ಮಹಿಳೆಯರ, ಅಂಗನವಾಡಿ ಕಾರ್ಯಕರ್ತೆಯರ ಕರ್ತವ್ಯ ಕುರಿತಂತೆ ಅರಿವು ಮೂಡಿಸುವ ನೃತ್ಯ ರೂಪಕವನ್ನು ಹಾಗೂ ನಾಟಕವನ್ನು ಮಕ್ಕಳು ಪ್ರದರ್ಶಿಸಿದರು.
ಆರೋಗ್ಯ ಇಲಾಖೆಯ ಎ.ಜಿ.ಸುಧಾಕರ್, ವಿಂದ್ಯಾ, ಕಿರಣ್ ಕುಮಾರ್, ಸಿ.ಡಿ.ಪಿ.ಒ ಇಲಾಖೆಯ ಮೇಲ್ವಿಚಾರಕಿ ಗಿರಿಜಾಂಬಿಕೆ, ಎಂ.ರಾಧಮ್ಮ, ಶಾಂತಾ ಬಿ.ಜಿಂದ್ರಾಳೆ, ಸರೋಜಮ್ಮ, ಮೇರಿ ಚಲ್ಲಾ ದೊರೈ, ವೆರೋಣಿಕಾ ಡೇವಿಡ್, ಜಯಶ್ರೀ, ಸಿಂದೂ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -