ಸಹಕಾರಿ ಸಂಘಗಳು ಕೇವಲ ಹಾಲಿನ ಉತ್ಪಾದನೆಗಷ್ಟೇ ಸೀಮಿತವಾಗದೆ ವಿವಿಧ ಸೇವಾ ಕಾರ್ಯಗಳ ಮೂಲಕ ರೈತರಿಗೆ ಉಪಯುಕ್ತವಾಗಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ನಗರೇಶ್ವರ ಕಲ್ಯಾಣಮಂಟಪದಲ್ಲಿ ಗುರುವಾರ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ, ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಒಕ್ಕೂಟ, ಸಹಕಾರ ಇಲಾಖೆ, ಪಿ.ಎಲ್.ಡಿ.ಬ್ಯಾಂಕ್ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ ೬೨ ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸಹಕಾರಿ ಸಂಘಗಳ ಮೂಲಕ ಸಹಕಾರಿ ಬೇಸಾಯ, ಸಹಕಾರಿ ಉದ್ದಿಮೆ, ಸಹಕಾರಿ ಮಾರಾಟ ಮತ್ತು ವ್ಯಾಪಾರ, ಸಹಕಾರಿ ಪತ್ತು ಹಾಗೂ ಹಣಕಾಸಿನ ನಿರ್ವಹಣೆ, ಶಿಕ್ಷಣ, ಕೌಶಲ್ಯಾಧಾರಿತ ತರಬೇತಿ, ಪ್ರಚಾರ, ಮಾನವನ ಇತರೇ ಸಹಕಾರಿ ಚಟುವಟಿಕೆಗಳು ಹಾಗೂ ಆರೋಗ್ಯದ ಉದ್ದೇಶಗಳಿಗಾಗಿ ಉತ್ತೇಜನ ನೀಡುವಂತಹ ಕೆಲಸವಾಗಬೇಕು. ಸಹಕಾರಿ ಸಂಘಗಳಿಂದ ಪಡೆಯುವಂತಹ ಸಾಲಗಳನ್ನು ನಾಗರಿಕರು ನಿಗದಿತ ಸಮಯದಲ್ಲಿ ಮರುಪಾವತಿ ಮಾಡುವ ಮೂಲಕ ಸಂಘಗಳನ್ನು ಉಳಿಸಿಕೊಳ್ಳಬೇಕು ಎಂದರು.
ಕೋಚಿಮುಲ್ ನಿರ್ದೇಶಕ ಬಂಕ್ಮುನಿಯಪ್ಪ ಮಾತನಾಡಿ ಯಾವುದೇ ಸಹಕಾರಿ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕಾದರೆ ಸಂಘದಲ್ಲಿರುವ ಷೇರುದಾರರು ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಸಾಲಗಳನ್ನು ಯಾವ ಉದ್ದೇಶಕ್ಕಾಗಿ ಪಡೆಯುತ್ತಾರೊ ಅದೇ ಉದ್ದೇಶಕ್ಕೆ ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ರೈತರು ಕೇವಲ ಕೃಷಿಯನ್ನು ಮಾತ್ರ ಅವಲಂಬಿಸದೆ ಹೈನುಗಾರಿಕೆ, ಮಿನಿಅರಣ್ಯ, ಗುಡಿಕೈಗಾರಿಕೆಗಳ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.
ತೀವ್ರ ನೀರಿನ ಅಭಾವದಿಂದಾಗಿ ಬಯಲುಸೀಮೆ ಭಾಗದ ಜನರು ರೇಷ್ಮೆಯಿಂದ ಸುಧಾರಣೆ ಕಾಣಲು ಸಾಧ್ಯವಾಗುವುದಿಲ್ಲ ಹಾಗಾಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತಹ ಚಟುವಟಿಕೆಗಳ ಕಡೆಗೆ ಹೆಚ್ಚು ಒಲವು ತೋರಿಸಬೇಕು ಎಂದರು.
ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಒಕ್ಕೂಟಗಳ ಅಧ್ಯಕ್ಷ ಎಚ್.ವಿ.ನಾಗರಾಜ್, ಜಿಲ್ಲಾ ಯೂನಿಯನ್ ನಿರ್ದೇಶಕ ರಮೇಶ್, ಸಹಕಾರ ಸಂಘಗಳ ಉಪನಿಬಂಧಕಿ ಮಂಜುಳಾ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಸಿ.ಎಂ.ಗೋಪಾಲ್, ಕೋಚಿಮುಲ್ ಶಿಬಿರ ಘಟಕದ ಉಪವ್ಯವಸ್ಥಾಪಕ ಬಿ.ಎಸ್.ಹನುಮಂತರಾವ್, ಎಂ.ವಿ.ವೆಂಕಟೇಶ್ಮೂರ್ತಿ, ರಾಜಣ್ಣ, ಪಿ.ಡಿ.ಬಲರಾಮ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -