ತಾಲ್ಲೂಕಿನಾದ್ಯಂತ ಬೀಳುತ್ತಿರುವ ಮಳೆ ರೈತರಿಗೆ ಹಾಗೂ ನಾಗರಿಕರಿಗೆ ಸಂತಸ ಹಾಗೂ ನೋವು ಎರಡನ್ನೂ ಒಟ್ಟಿಗೇ ತಂದಿದೆ. ಕೆರೆಗಳು ತುಂಬುತ್ತಿರುವುದು ಅಂತರ್ಜಲ ವೃದ್ಧಿಗೆ ಕಾರಣವಾಗುವುದರಿಂದ ಗಂಗಮ್ಮನನ್ನು ಪೂಜಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಸಾದಲಿ ಹೊಸಕೆರೆ ಸುಮಾರು 8 ವರ್ಷಗಳ ನಂತರ ಕೋಡಿ ಹರಿದಿದ್ದರಿಂದ ಸೋಮವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಕಳೆದ 15 ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ಸಾದಲಿ ಹೊಸಕೆರೆ ಸುಮಾರು 8 ವರ್ಷಗಳ ನಂತರ ತುಂಬಿ ಹರಿದಿದೆ. ಉತ್ತಾರ ಪೆನ್ನಾರ್ ನದೀ ಕಣಿವೆ ಪ್ರದೇಶದಲ್ಲಿರುವ ಸಾದಲಿ ಹೊಸಕೆರೆ ಅಚ್ಚುಕಟ್ಟು 45 ಹೆಕ್ಟೇರ್ಗಳಷ್ಟಿದೆ. ಈ ಕೆರೆಯ ನೀರಿನ ಶೇಖರಣೆ ಪ್ರದೇಶ 4.21 ಹೆಕ್ಟೇರ್ಗಳಷ್ಟಿದೆ. ಈ ಪ್ರದೇಶದಲ್ಲಿ ರೈತರಿಗಿದು ವರದಾನವಾಗಿದೆ ಎಂದು ಹೇಳಿದರು.
ತಾಲ್ಲೂಕಿನ ಸಾದಲಿ ಮತ್ತು ಎಸ್.ದೇವಗಾನಹಳ್ಳಿ ಪಂಚಾಯತಿ ವ್ಯಾಪ್ತಿಗೆ ಬರುವ ಹಲವು ಕೆರೆಗಳು ತುಂಬಿದ್ದು ಈ ಭಾಗದ ಜನರ ಹರ್ಷಕ್ಕೆ ಕಾರಣವಾಗಿವೆ. ಎಸ್.ದೇವಗಾನಹಳ್ಳಿ ಪಂಚಾಯತಿಯ ಇರಗಪ್ಪನಹಳ್ಳಿ ಕೆರೆಯೂ ತುಂಬಿದೆ. ಈ ಭಾಗದ ಅಕ್ಕಯ್ಯಗಾರು ಕೆರೆ ಮತ್ತು ಎಸ್.ಗೊಲ್ಲಹಳ್ಳಿ ಕೆರೆಗಳು ತುಂಬಿ ಕೋಡಿ ಹರಿದು ಸಾದಲಿ ಹೊಸಕೆರೆಗೆ ನೀರು ಹರಿದು ಬಂದು ಈಗ ಈ ಕೆರೆಯೂ ತುಂಬಿ ಕೋಡಿ ಹರಿದಿದೆ. ಸಾದಲಿ ಹೊಸಕೆರೆ ತುಂಬಿ ಹರಿಯುವ ನೀರು ಸಾದಲಿ ಸಾದಲಮ್ಮನಕೆರೆಗೆ ಹರಿಯುತ್ತದೆ, ಅಲ್ಲಿಂದ ಮುಂದೆ ರಾಮಸಮುದ್ರದ ಕಡೆಗೆ ನೀರು ಹರಿದುಹೋಗುತ್ತದೆ. ರಾಮಸಮುದ್ರ ಕೆರೆ ಅತ್ಯಂತ ದೊಡ್ಡದಾಗಿದ್ದು ತುಂಬಲು ಇನ್ನೂ 14 ಅಡಿ ಬಾಕಿಯಿದೆ. ಈ ಕೆರೆಯೂ ತುಂಬಲಿ ಎಂದು ಹೇಳಿದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಗೋವಿಂದರಾಜು, ಜಿಲ್ಲಾ ಪಂಚಾಯತಿ ಸದಸ್ಯೆ ಶೋಭಾ ಜಯಪ್ರಕಾಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -