ದೇಶ ಕಾಯುವ ಸೈನಿಕ, ಅನ್ನ ಕೊಡುವ ರೈತನನ್ನು ಸರ್ಕಾರ ಮರೆಯಬಾರದು ಎಂದು ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಹೇಳಿದರು.
ತಾಲ್ಲೂಕಿನ ಯಣ್ಣಂಗೂರಿನ ಯೋಧ ಗಂಗಾಧರ್ ಅವರ ಮನೆಗೆ ಭಾನುವಾರ ಭೇಟಿ ನೀಡಿದ ಅವರು, ಗಂಗಾಧರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ಅವರ ಪತ್ನಿ, ಮಗ, ಅಪ್ಪ ಅಮ್ಮ ಹಾಗೂ ಸೋದರ ಸೈನಿಕ ರವಿಕುಮಾರ್ ಅವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.
ಮಗನನ್ನು ಕಳೆದುಕೊಂಡು ಹೆತ್ತವರ ಕಣ್ಣೀರು ಒರೆಸಲು ನಮ್ಮಿಂದ ಸಾಧ್ಯವಿಲ್ಲ. ಆದರೆ ನಾವು ನಿಮ್ಮೊಂದಿಗೆ ಇದ್ದೇವೆ. ನಾವೆಲ್ಲರೂ ನಿಮ್ಮ ಮಕ್ಕಳೆ ಎಂದು ಭಾವಿಸಿ ಧೈರ್ಯವಾಗಿ ಇರಿ ಎಂದು ಗಂಗಾಧರ್ ಅವರ ಹೆತ್ತವರು, ಪತ್ನಿಗೆ ಧೈರ್ಯ ತುಂಬಿದರು.
ಸರ್ಕಾರದಿಂದ ಸಿಗಬೇಕಾದ ನ್ಯಾಯಯುತವಾದ ಎಲ್ಲ ರೀತಿಯ ಸವಲತ್ತುಗಳನ್ನು ಕುಟುಂಬಕ್ಕೆ ಒದಗಿಸಿಕೊಡುವುದಾಗಿ ತಿಳಿಸಿದರು.
ಗಂಗಾಧರ್ ಅವರ ಪತ್ನಿಯು ಆಯುಷ್ ವೈದ್ಯಕೀಯ ಪದವಿ ಪಡೆದಿದ್ದು ಈ ಬಗ್ಗೆ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರೊಂದಿಗೆ ಮಾತನಾಡಿ ಕಾನೂನು ಚೌಕಟ್ಟಿನಲ್ಲಿ ಸರ್ಕಾರಿ ನೌಕರಿ ಕೊಡಿಸುವ ಭರವಸೆ ನೀಡಿದರು.
ಇತರೆ ಸವಲತ್ತು ಹಾಗೂ ಸೌಲಭ್ಯಗಳಿಗೆ ಕೇಂದ್ರ ಸಚಿವ ಅನಂತ್ ಕುಮಾರ್ ಅವರೊಂದಿಗೆ ಚರ್ಚಿಸಿ ಅವರ ಮೂಲಕ ಕೇಂದ್ರದ ರಕ್ಷಣಾ ಸಚಿವರಿಗೂ ಮನವಿ ಸಲ್ಲಿಸಿ, ಕುಟುಂಬದ ಸಧ್ಯದ ಪರಿಸ್ಥಿತಿಗಳನ್ನು ಮನವರಿಕೆ ಮಾಡಿಕೊಟ್ಟು ನೆರವು ಕೊಡಿಸುವುದಾಗಿ ತಿಳಿಸಿದರು.
ಬಿಜೆಪಿ ಮುಖಂಡ ಡಿ.ಆರ್.ಶಿವಕುಮಾರ್ ಗೌಡ ತಮ್ಮ ಹುಟ್ಟು ಹಬ್ಬದ ಅಂಗವಾಗಿ ಗಂಗಾಧರ್ ಅವರ ಕುಟುಂಬಕ್ಕೆ ೧ ಲಕ್ಷ ರೂ. ಚೆಕ್ ನೀಡಿದರಲ್ಲದೆ, ತಾಲ್ಲೂಕಿನ ವಿವಿಧ ಕಡೆಯಿಂದ ಆಗಮಿಸಿದ್ದ ೧೦೦ಕ್ಕೂ ಹೆಚ್ಚು ಅಂಧ ಮಕ್ಕಳಿಗೆ ಸ್ಟೆಟರ್, ಬ್ಯಾಗು, ಲೇಖನಿ ಸಾಮಗ್ರಿ ಮುಂತಾದ ಪರಿಕರಗಳನ್ನು ವಿತರಿಸಿದರು.
ಕರ್ಣಶ್ರೀ ಚಾರಿಟಬಲ್ ಟ್ರಸ್ಟ್ನಿಂದ ‘ಯೋಧರ ಬಗ್ಗೆ ನಿಮಗೆಷ್ಟು ಗೊತ್ತು’ ವಿಷಯವಾಗಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ್ದು ಉತ್ತಮವಾಗಿ ಪ್ರಬಂಧವನ್ನು ಬರೆದ ವಿದ್ಯಾರ್ಥಿಗಳಿಗೆ ಟ್ರಸ್ಟ್ನ ಅಧ್ಯಕ್ಷ ಡಿ.ಆರ್.ಶಿವಕುಮಾರ್ಗೌಡ ಬಹುಮಾನವನ್ನು ವಿತರಿಸಿದರು.
ಗಂಗಾಧರ್ ಅವರ ಸಹೋದರ ಯೋಧ ರವಿಕುಮಾರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರಗೌಡ, ಕೊತ್ತನೂರು ರವಿಕುಮಾರ್, ಕೃಷ್ಣೇಗೌಡ, ಹುತಾತ್ಮ ಯೋಧ ಗಂಗಾಧರ್ ಅವರ ಪತ್ನಿ, ತಂದೆ, ತಾಯಿ, ಮಗ ಹಾಗೂ ಕುಟುಂಬದ ಸದಸ್ಯರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -