ದಲಿತ ಸಂಘರ್ಷ ಸಮಿತಿಯಿಂದ ಕರಾಳ ದಿನಾಚರಣೆ

- Advertisement -
- Advertisement -

ದಲಿತ ವಿರೋಧಿ ಕೇಂದ್ರ, ರಾಜ್ಯ ಸರ್ಕಾರ ಮತ್ತು ತಾಲ್ಲೂಕು ಆಡಳಿತದ ಅಧಿಕಾರಿಗಳ ವೈಪಲ್ಯತೆ ಮತ್ತು ಭ್ರಷ್ಟಾಚಾರ ಖಂಡಿಸಿ ೭೦ ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದಲಿತರ ಕರಾಳ ದಿನವನ್ನಾಗಿ ಆಚರಿಸುವ ಮೂಲಕ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಸೋಮವಾರ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಕದಸಂಸ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್ ಮಾತನಾಡಿ, ಸುಮಾರು ೩೦೦ ವರ್ಷಗಳ ಬ್ರಿಟೀಷರ ದುರಾಡಳಿತದಿಂದ ರೋಸಿಹೋದ ಭಾರತೀಯರ ತ್ಯಾಗ, ಬಲಿದಾನಗಳಿಂದ ಸ್ವಾತಂತ್ರ್ಯ ಸಿಕ್ಕಿ ೭೦ ವರ್ಷವಾದರೂ ಇಂದಿಗೂ ದೇಶದ ದಲಿತದ ಬದುಕು ಮಾತ್ರ ಇಂದಿಗೂ ಡೋಲಾಯಮಾನವಾಗಿದೆ.
ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ.ಅಂಬೇಡ್ಕರ್ ದೇಶದಲ್ಲಿರುವ ಅಸ್ಪೃಷ್ಯತೆ ಹಾಗು ಅಸಮಾನತೆಯನ್ನು ತಮ್ಮ ಜೀವನದಲ್ಲಿ ಅನುಭವಿಸಿ ಶೋಷಿತ ವರ್ಗದವರಿಗಾಗಿ ಲಿಖಿತ ಸಂವಿಧಾನ ರಚಿಸಿ ದೇಶಕ್ಕೆ ಅರ್ಪಿಸಿ ೬೭ ವರ್ಷಗಳೇ ಆಗಿವೆ. ದೇಶದ ಸಂವಿಧಾನವನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನ ಮಾಡುವಲ್ಲಿ ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿವೆ. ಶಾಸಕಾಂಗ, ನ್ಯಾಯಾಂಗ ಹಾಗೂ ಕಾರ್ಯಾಂಗವನ್ನು ತಮ್ಮ ವ್ಯಾಪ್ತಿಯಲ್ಲಿಟ್ಟುಕೊಂಡು ಎಲ್ಲರಿಗೂ ಸಿಗಬೇಕಾದ ಶಿಕ್ಷಣ, ಅಧಿಕಾರ ಹಾಗು ಆರ್ಥಿಕ ಸಂಪನ್ಮೂಲಗಳನ್ನು ಸಂವಿಧಾನದ ಆಶಯದಂತೆ ಜಾರಿಗೊಳಿಸದೇ ೬೯ ವರ್ಷಗಳ ಕಾಲ ತಮ್ಮ ಸ್ವಾರ್ಥಕ್ಕಾಗಿ ಕಾಲ ಕಳೆದಿರುವುದು ಇತಿಹಾಸವಾಗಿದೆ ಎಂದರು.
ಅಂಬೇಡ್ಕರ್ರ ಆಶಯದಂತೆ ಸಂವಿಧಾನದ ಅನುಚ್ಚೇದ ೩೮, ೩೯ ರಂತೆ ಕಾನೂನು ಜಾರಿ ಮಾಡಿದರೆ ಈ ದೇಶವು ಪ್ರಭುದ್ದ ಭಾರತವಾಗುತ್ತಿತ್ತು ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ರ ಕನಸು ನನಸಾಗುತ್ತಿತ್ತು. ಆದರೆ ಇಂದಿಗೂ ದೇಶಾಧ್ಯಂತ ಬಡತನ, ಹಸಿವು, ದಾರಿದ್ರ್ಯ, ನಿರುದ್ಯೋಗ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ತಾಂಡವವಾಡುತ್ತಿದೆ ಎಂದರು.
ತಾಲ್ಲೂಕು ಸಂಚಾಲಕ ದಡಂಘಟ್ಟ ತಿರುಮಲೇಶ್ ಮಾತನಾಡಿ, ತಾಲ್ಲೂಕಿನಾದ್ಯಂತ ಶೇ. ೩೦ ರಷ್ಟು ಎಸ್ಸಿ, ಎಸ್ಟಿ ಜನಾಂಗದವರಿದ್ದು ಇದರಲ್ಲಿ ಬಹುತೇಕರು ಕೂಲಿ ನಾಲಿ ನಡೆಸಿ ಜೀವನ ನಡೆಸುತ್ತಿದ್ದಾರೆ. ಯಾವುದೇ ನೀರಾವರಿ ಮೂಲಗಳಿಲ್ಲದೇ ಮಳೆಯನ್ನೇ ಅವಲಂಬಿಸಿ ಕೃಷಿ ನಡೆಸುವುದು ಸೇರಿದಂತೆ ವಲಸೆ ಜೀವನ ನಡೆಸುವ ದಲಿತರಿಗೆ ಸರ್ಕಾರದಿಂದ ಸಿಗಬೇಕಾದ ಯಾವುದೇ ಸವಲತ್ತುಗಳು ಸಿಗದೇ ಮೇಲ್ಜಾತಿಯ ಗುಲಾಮರಾಗಿ ಜೀವಿಸುವ ವಾತಾವರಣ ನಿರ್ಮಾಣವಾಗಿದೆ ಎಂದರು.
ಸರ್ಕಾರಿ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುವ ಬಹುತೇಕ ಅಧಿಕಾರಿಗಳು ಜಾತಿವಾದಿಗಳಾಗಿದ್ದು ಭ್ರಷ್ಟಾಚಾರ, ಲಂಚಗುಂಡಿತನ, ಸ್ವಜನ ಪಕ್ಷಪಾತ, ಮೀಸಲಾತಿ ಹಣ ದುರುಪಯೋಗ ಸೇರಿದಂತೆ ಮದ್ಯವರ್ತಿಗಳ ಹಾವಳಿ ಹಾಗೂ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳ ದಲಿತ ಕಾಲೋನಿಗಳಲ್ಲಿ ನಕಲಿ ಮದ್ಯ ಮಾರಾಟ ಯಥೇಚ್ಚವಾಗಿ ನಡೆಯುತ್ತಿದ್ದು ತಡೆಗಟ್ಟುವಲ್ಲಿ ವಿಫಲರಾಗಿರುವ ಅಧಿಕಾರಿಗಳ ವಿರುದ್ದ ಕೂಡಲೇ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಒತ್ತಾಯಗಳು: ತಾಲ್ಲೂಕಿನ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ದಲಿತರಿಗೆ ಪ್ರತ್ಯೇಕ ಸ್ಮಶಾನಕ್ಕೆ ಭೂಮಿ ನೀಡುವುದು ಮತ್ತು ಈಗಾಗಲೇ ಇರುವ ಸ್ಮಶಾನಗಳ ಒತ್ತುವರಿ ತೆರವುಗೊಳಿಸಿ ಬೇಲಿ ಹಾಗು ರಸ್ತೆ ನಿರ್ಮಿಸಿಕೊಡುವುದು. ನಗರ ಹಾಗೂ ಗ್ರಾಮೀಣ ಪ್ರದೇಶಗಳ ದಲಿತ ಕಾಲೋನಿಗಳಲ್ಲಿ ಮದ್ಯ ಮಾರಾಟವನ್ನು ನಿಷೇಧ ಮಾಡುವುದು. ಮಾರಾಟ ಹಾಗು ಸರಬರಾಜು ಮಾಡುವವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿ ಪರವಾನಿಗೆ ರದ್ದು ಮಾಡಬೇಕು.
ನಗರ ಹಾಗು ಗ್ರಾಮೀಣ ಪ್ರದೇಶಗಳ ನಿವೇಶನ ರಹಿತ ದಲಿತರಿಗೆ ನಿವೇಶನ ಮಂಜೂರು ಮಾಡುವುದು ಹಾಗೂ ವಸತಿ ನಿರ್ಮಿಸಿ ಕೊಡಬೇಕು.
ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ದಲಿತರ ಮೀಸಲಾತಿ ಹಣ ದುರ್ಭಳಕೆಯಾಗಿರುವ ಬಗ್ಗೆ ಆರೋಪಗಳಿದ್ದು ದಾಖಲೆಗಳ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕು.
ತಾಲ್ಲೂಕಿನ ದಲಿತ ಸ್ತ್ರೀ ಶಕ್ತಿ ಸಂಘಗಳಿಗೆ ಸಹಾಯ ಧನ ನೀಡಿ ಬ್ಯಾಂಕುಗಳಲ್ಲಿ ಸಾಲ ಮಂಜೂರು ಮಾಡಬೇಕು.
ಎಂದು ಒತ್ತಾಯಿಸಿ ತಹಸೀಲ್ದಾರ್ ಕೆ.ಎಂ.ಮನೋರಮಾ ಅವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಸಂಘಟನಾ ಸಂಚಾಲಕರಾದ ಬೈರಸಂದ್ರ ದೇವರಾಜ್, ದಿಬ್ಬೂರಹಳ್ಳಿ ಮಂಜುನಾಥ್, ಯಣ್ಣಂಗೂರು ಸುಬ್ರಮಣಿ, ಹಿತ್ತಲಹಳ್ಳಿ ದೇವರಾಜ್, ಎಲ್.ಎನ್.ಮುನಿಕೃಷ್ಣಪ್ಪ, ಮಾರಪ್ಪ ಮತ್ತಿತರರು ಹಾಜರಿದ್ದರು.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!