ಶಿವಯೋಗಿ ಸಿದ್ದರಾಮೇಶ್ವರ ಅವರ ತತ್ವಗಳನ್ನು ಒಂದು ಜಾತಿ ಅಥವಾ ವರ್ಗಕ್ಕೆ ಸಮೀತಗೊಳಿಸುವುದನ್ನು ಬಿಟ್ಟು ಮಾನವನ ಬದುಕು ಸಾಕಾರಗೊಳ್ಳಲು ಅವರ ವಚನ ಸಾಹಿತ್ಯವನ್ನು ಪ್ರಚಾರಪಡಿಸಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಆಯೋಜನೆ ಮಾಡಲಾಗಿದ್ದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ೩ ನೇ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
೧೨ ನೇ ಶತಮಾನದಲ್ಲಿ ಜಾತಿ ಪದ್ದತಿಯಿಂದಾಗಿ ಸಮಾಜದಲ್ಲಿ ತಲೆದೋರಿದ್ದ ಅಶಾಂತಿಯನ್ನು ತೊಡೆದುಹಾಕುವ ಸಲುವಾಗಿ ವಚನಕಾರ ಸಿದ್ದರಾಮೇಶ್ವರ ಅವರು ಅನುಭವ ಮಂಟಪದಲ್ಲಿ ತನ್ನ ವಚನಸಾಹಿತ್ಯಗಳ ಮೂಲಕ ಜನರನ್ನು ಜಾಗೃತರನ್ನಾಗಿ ಮಾಡುವ ಕೆಲಸ ಮಾಡಿದ್ದರು. ಸಮಾಜದ ಏಳಿಗೆಗಾಗಿ ನಿರಂತರವಾಗಿ ಶ್ರಮಿಸಿದಂತಹ ಅಂಬೇಡ್ಕರ್, ಬುದ್ದ, ಬಸವಣ್ಣ, ವಾಲ್ಮೀಕಿ, ಕನಕದಾಸರು ಸೇರಿದಂತೆ ಹಲವಾರು ಮಂದಿ ದಾರ್ಶನಿಕರನ್ನು ಕೆಲವು ಜಾತಿಗಳ ಸಮುದಾಯಗಳಿಗೆ ಸೀಮಿತಗೊಳಿಸಿಕೊಳ್ಳುತ್ತಿರುವುದು ದುಃಖಕರವಾದ ಸಂಗತಿಯಾಗಿದೆ, ೧೨ ನೇ ಶತಮಾನದಲ್ಲಿ ಜಾತಿ ಪದ್ದತಿ ತಾಂಡವಾಡುತ್ತಿದ್ದರೂ ಕೂಡಾ ವಚನಕಾರ ಬಸವಣ್ಣನವರು ಸ್ಥಾಪನೆ ಮಾಡಿದ್ದಂತಹ ಅನುಭವ ಮಂಟಪದಲ್ಲಿ ಸಿದ್ದರಾಮೇಶ್ವರ ಅವರಿಗೆ ನೀಡಿದ್ದ ಅವಕಾಶಗಳನ್ನು ಗಮನಿಸಿದಾಗ ಜಾತಿ ಪದ್ದತಿ ನಿರ್ಮೂಲನೆಗೆ ಶರಣರು ನೀಡಿದ್ದ ಪ್ರಾಶಸ್ತ್ಯವು ತಿಳಿಯುತ್ತದೆ. ಪ್ರತಿಯೊಂದು ಜನಾಂಗದವರನ್ನು ಪ್ರೀತಿಸುವ ಮೂಲಕ, ಸಾಮರಸ್ಯದಿಂದ ಬದುಕಿ ಬಾಳಬೇಕಾಗಿದೆ. ಎಲ್ಲಾ ಮಕ್ಕಳಿಗೂ ಗುಣಮಟ್ಟದ ಶಿಕ್ಷಣವನ್ನು ನೀಡಿದಾಗ ಮಾತ್ರ ಜಾತಿವ್ಯವಸ್ಥೆಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಾಗುತ್ತದೆ ಎಂದರು.
ತಹಶೀಲ್ದಾರ್ ಕೆ.ಎಂ.ಮನೋರಮಾ ಮಾತನಾಡಿ, ಸಮಾಜದಲ್ಲಿನ ಪ್ರತಿಯೊಂದು ವರ್ಗದ ಜನರು ಸಹೋದರತೆಯಿಂದ, ಜಾತಿ, ಮತ, ಬೇದಗಳನ್ನು ಬದಿಗೊತ್ತಿ, ಸಾಮರಸ್ಯದ ಜೀವನ ನಡೆಸಬೇಕು ಎಂಬ ಪರಿಕಲ್ಪನೆಯನ್ನು ಹೊಂದಿದ್ದ ಶರಣರ ಮಾರ್ಗದರ್ಶನ ಹಾಗೂ ಅವರ ದೂರದೃಷ್ಟಿಯನ್ನು ಅರಿತುಕೊಂಡು ಎಲ್ಲಾ ವರ್ಗದ ಜನರು, ಸಾಮರಸ್ಯ ಬದುಕನ್ನು ರೂಪಿಸಿಕೊಂಡು ಹೋಗಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಲ್.ಶ್ರೀನಿವಾಸಮೂರ್ತಿ, ತಾಲ್ಲೂಕು ಬೋವಿ ಸಂಘದ ಅಧ್ಯಕ್ಷ ಚಿಕ್ಕನರಸಿಂಹಪ್ಪ, ನರಸಪ್ಪ, ಎನ್.ರಾಜಣ್ಣ, ಕೆ.ವಿ.ಚಲಪತಿ, ಎಂ.ಶ್ರೀನಿವಾಸ್, ಗ್ರೇಡ್-೨ ತಹಶೀಲ್ದಾರ್ ವಾಸುದೇವಮೂರ್ತಿ, ಶಿರಸ್ತೆದಾರ ಲಕ್ಷ್ಮೀಕಾಂತಮ್ಮ, ರಾಜಸ್ವ ನಿರೀಕ್ಷಕ ಸುಭ್ರಮಣಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಗುರುರಾಜರಾವ್, ಮೋಹನ್ಕುಮಾರ್, ಗ್ರಾಮಲೆಕ್ಕಾಧಿಕಾರಿಗಳಾದ ಲಾರೆನ್ಸ್, ಆನಂದ್, ಜಿ.ವಿ.ದೇವರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -







