Muttur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಅಂತಿಮ ವರ್ಷದ ಬಿ.ಎಸ್ಸಿ(ಕೃಷಿ), ಬಿ.ಎಸ್ಸಿ(ಆನರ್ಸ್), ಕೃಷಿ ವ್ಯವಹಾರ ನಿರ್ವಹಣೆ ಮತ್ತು ಬಿ.ಟೆಕ್(ಕೃಷಿ ಎಂಜಿನಿಯರಿಂಗ್) ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವದ ಕಾರ್ಯಕ್ರಮದ ಅಂಗವಾಗಿ ಬುಧವಾರ “ಕೃಷಿ ಸಿಂಚನ” – ಕೃಷಿಮೇಳ, ವಸ್ತುಪ್ರದರ್ಶನ ಮತ್ತು ವಿಚಾರ ಗೋಷ್ಠಿಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮೇಲೂರಿನ ಪ್ರಗತಿಪರ ರೈತ ಬಿ.ಎನ್.ಸಚಿನ್ ಮಾತನಾಡಿ, “ಸರ್ಕಾರ ಬೇಡಿಕೆಗನುಗುಣವಾಗಿ ರೈತರಿಗೆ ಬೆಳೆ ಮಾರ್ಗಸೂಚಿ ನೀಡಿ ನಷ್ಟವನ್ನು ತಪ್ಪಿಸಬಹುದು, ನಿಗದಿತ ಬೆಲೆಗೆ ರೈತರ ಉತ್ಪನ್ನ ಖರೀದಿಸಿ ಮಾರುವ ಮೂಲಕ ಆದಾಯ ಗಳಿಕೆ, ಉದ್ಯೋಗ ನೀಡುವುದು ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಬಹುದು” ಎಂದು ಹೇಳಿದರು.
“ಪ್ರತಿಯೊಂದು ಗ್ರಾಮ ಪಂಚಾಯಿಯಲ್ಲೂ ಆಯಾ ವ್ಯಾಪ್ತಿಯ ರೈತರು ತಾವು ಬೆಳೆಯುವ ಬೆಳೆಯನ್ನು ಧೃಡೀಕರಿಸಿ ಧೃಡೀಕರಣ ಪತ್ರವನ್ನು ಪಡೆಯುವಂತಾಗಬೇಕು. ಪ್ರತಿಯೊಂದು ಪಂಚಾಯಿತಿಯ ಮಾಹಿತಿ ಪಡೆಯುವ ಮೂಲಕ ತಾಲ್ಲೂಕು ಮತ್ತು ಜಿಲ್ಲೆಗಳಲ್ಲಿ ಯಾವ ಯಾವ ಬೆಳೆ ಎಷ್ಟೆಷ್ಟು ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತದೆ. ಇದರಿಂದ ಬಹಳಷ್ಟು ಜನ ಒಂದೇ ಬೆಳೆ ಬೆಳೆದು ಹಣ ಕಳೆದುಕೊಳ್ಳುವುದು ತಪ್ಪುತ್ತದೆ. ಹೊಸದಾಗಿ ಬೆಳೆ ಬೆಳೆಯುವವರಿಗೆ ಈ ಮಾಹಿತಿಯಿಂದ ಬೆಳೆಯ ಆಯ್ಕೆ ಸುಲಭವಾಗುತ್ತದೆ. ಈ ಕೆಲಸ ಸರ್ಕಾರದಿಂದ ಆದಾಗ ಬೆಲೆ ಕುಸಿಯುವುದು ತಪ್ಪುತ್ತದೆ. ತಂತ್ರಜ್ಞಾನ ಬಳಸಿ ಮೊಬೈಲ್ ಮೂಲಕವೂ ಮಾಹಿತಿ ನೀಡಬಹುದು” ಎಂದು ಹೇಳಿದರು.
ಕೃಷಿಕ ಸಮಾಜದ ನಿರ್ದೇಶಕ ಎಂ.ಟಿ.ಕೆಂಪೇಗೌಡ ಮಾತನಾಡಿ, “ಎಂಬತ್ತರ ದಶಕದಲ್ಲಿ ದಿ.ಸಂಜಯ್ ದಾಸ್ ಗುಪ್ತ ಅವರು ಕೋಲಾರ ಜಿಲ್ಲಾಧಿಕಾರಿಯಾಗಿದ್ದಾಗ ರಾಜ್ಯದ ಮೊಟ್ಟ ಮೊದಲ ಕೃಷಿ ಮೇಳವನ್ನು ಮುತ್ತೂರಿನಲ್ಲಿ ಆಯೋಜಿಸಲಾಗಿತ್ತು. ರಾಜ್ಯದ ಮೂಲೆಮೂಲೆಗಳಿಂದ ಲಕ್ಷಾಂತರ ಜನರು ಮುತ್ತೂರಿಗೆ ಬಂದಿದ್ದರು” ಎಂದು ಹೇಳಿದರು.
ಪ್ರಗತಿಪರ ರೈತ ಎಚ್.ಜಿ.ಗೋಪಾಲಗೌಡ ಮಾತನಾಡಿ, ಕೃಷಿಯನ್ನು ಶ್ರದ್ಧೆ, ಬುದ್ಧಿ, ತಾಂತ್ರಿಕತೆಯಿಂದ ಮಾಡಿದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದರು.
ಸಮಗ್ರ ಕೃಷಿ, ಸುಧಾರಿತ ತಳಿಗಳು ಮತ್ತು ಬಿತ್ತನೆ ಬೀಜಗಳು, ನಾನಾ ಬೆಳೆಗಳ ಕೃಷಿ ವಿಧಾನ, ನೀರಿನ ಸಂರಕ್ಷಣೆ ಮತ್ತು ಸಮರ್ಪಕ ಬಳಕೆ ಸೇರಿದಂತೆ ಕೃಷಿಗೆ ಸಂಬಂಧಿಸಿದಂತೆ ಹಲವು ವಿಷಯಗಳ ಬಗ್ಗೆ ಪ್ರಾತ್ಯಕ್ಷಿಕೆಗಳ ಮೂಲಕ ವಸ್ತು ಪ್ರದರ್ಶನದಲ್ಲಿ ರೈತರಿಗೆ ಮಾಹಿತಿ ನೀಡಿದರು. ಹಲವಾರು ಬೆಳೆಗಳನ್ನು ವಿದ್ಯಾರ್ಥಿಗಳು ಬೆಳೆದು ಮಾಹಿತಿ ಫಲಕಗಳನ್ನು ಪ್ರದರ್ಶಿಸಿದ್ದರು.
ಶಾಸಕ ಬಿ.ಎನ್.ರವಿಕುಮಾರ್, ಕೃಷಿ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ಡಾ.ಬಿ.ವಿ.ವೆಂಕಟೇಶಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಲಕ್ಷ್ಮೀನಾರಾಯಣ, ಸದಸ್ಯರಾದ ಸೂರ್ಯನಾರಾಯಣಪ್ಪ, ಭೈರೇಗೌಡರು, ಮಮತ ನವೀನ್, ಪವಿತ್ರಾ ದೇವರಾಜ್, ಮುನಿಶ್ಯಾಮಪ್ಪ, ಕೃಷಿ ಅಧಿಕಾರಿ ಶಿವಕುಮಾರ್, ಎಂ.ಜಿ.ಸುರೇಶ್, ಮುನಿಕೃಷ್ಣಪ್ಪ, ಪ್ರಾಧ್ಯಾಪಕರಾದ ಡಾ.ಎಂ.ಎನ್.ವೆಂಕಟರಮಣ, ಡಾ.ಮಂಜುನಾಥ್, ಡಾ.ವೈ.ಎನ್.ಶಿವಲಿಂಗಯ್ಯ, ಡಾ.ಎಂ.ಎ.ಯಶಸ್ವಿನಿ, ವೇಣುಗೋಪಾಲ ಕೃಷ್ಣಮಾಚಾರ್, ಪಶುವೈದ್ಯ ಅರುಣ್ ಕುಮಾರ್ ಹಾಜರಿದ್ದರು.