Home News ಬಜೆಟ್ ನಲ್ಲಿ ರೇಷ್ಮೆಗೆ ಹೆಚ್ಚು ಒತ್ತು ನೀಡಲು ಮನವಿ

ಬಜೆಟ್ ನಲ್ಲಿ ರೇಷ್ಮೆಗೆ ಹೆಚ್ಚು ಒತ್ತು ನೀಡಲು ಮನವಿ

0
Karntaka Budget Silk Industry Development

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಜೆಟ್ ಗೆ ಸಂಬಂಧಿಸಿದಂತೆ ನಡೆಸಿದ ಸಭೆಯಲ್ಲಿ ರೇಷ್ಮೆ ಬೆಳೆಗಾರರು, ರೀಲರುಗಳ ಜೊತೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ವಿಕಾಸಸೌಧದಲ್ಲಿ ಪೂರ್ವಭಾವಿ ಸಭೆ ನಡೆಸಿದರು. ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪ್ರಗತಿಪರ ರೇಷ್ಮೆ ಕೃಷಿಕ ಮತ್ತು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಉಪಾಧ್ಯಕ್ಷ ಮಳ್ಳೂರು ಹರೀಶ್ ಭಾಗವಹಿಸಿ ಕೆಲವಾರು ಸಲಹೆ ಮತ್ತು ಬೇಡಿಕೆಗಳ ಮನವಿಯನ್ನು ಸಲ್ಲಿಸಿದರು.

ರೇಷ್ಮೆ ಕೃಷಿ 3 ಲಕ್ಷ ಕೋಟಿ ಬಂಡವಾಳ ಹೊಂದಿರುವ ಉದ್ಯಮವಾಗಿದೆ. 53 ಕೋಟಿ ಮಾನವ ದಿನಗಳನ್ನು ಸೃಷ್ಟಿಸುವ ಉದ್ಯಮ. ಸುಮಾರು 50 ಸಾವಿರ ಕೋಟಿ ರೂಪಾಯಿನಷ್ಟು ಜಿಡಿಪಿಗೆ ಕೊಡುಗೆ ನೀಡುತ್ತಿದೆ. ರೇಷ್ಮೆ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕು, ಮೂಲ ತಳಿಯನ್ನು ಉಳಿಸಿಕೊಳ್ಳಬೇಕು. ಸಿ.ಎಸ್.ಬಿ ಕಾಯ್ದೆಯನ್ನು(2006) ತಿದ್ದುಪಡಿ ಮಾಡಿ. ನೂಲು ಬಿಚ್ಚಾಣಿಕೆದಾರರಿಗೆ 250 ಕೋಟಿ ರಿವಾಲ್ವಿಂಗ್ ಫಂಡ್ ನೀಡಬೇಕು. ಓಕುಳಿಪುರಂನಲ್ಲಿ ಕಚ್ಚಾ ರೇಷ್ಮೆ ಮಾರುಕಟ್ಟೆ ಮಾಡಬೇಕು.

ಸ್ಪೆಷಲ್ ಸೆರಿಕಲ್ಚರ್ ಎಕಾನಮಿಕ್ ಜೋನ್ ಘೋಷಣೆ ಮಾಡಬೇಕು. ಬಸವರಾಜ್ ಸಮಿತಿ ವರದಿಯಂತೆ ರೇಷ್ಮೆಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಕರ್ನಾಟಕದ ನಾಲ್ಕು ಭಾಗಗಳಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಿಸಬೇಕು. ನಾಲ್ಕು ಭಾಗದಲ್ಲಿ ರೇಷ್ಮೆ ಕೋಲ್ಡ್ ಸ್ಟೋರೇಜ್ ನಿರ್ಮಿಸಬೇಕು. ರೇಷ್ಮೆ ತೋಟ ಉಳುಮೆಗೆ ಮಿನಿ ಟ್ರ್ಯಾಕ್ಟರ್, ರೇಷ್ಮೆ ಬೆಳೆಗಾರರಿಗೆ ವಿಮೆ ಬೇಕಿದೆ. ರೇಷ್ಮೆ ಮಂಡಿಗಳಿಗೆ ಕಡಿವಾಣ ಹಾಕಬೇಕು. ರೇಷ್ಮೆಬೆಳೆಗೆ ತಗಲುವ ರೋಗಗಳನ್ನು ನಿಯಂತ್ರಿಸಬೇಕು. ಬೈವೋಲ್ಟಿನ್ ರೇಷ್ಮೆ ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹ ನೀಡಬೇಕು. ರೀಲರುಗಳಿಗೆ ಸಾಲ ಯೋಜನೆ ರೂಪಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟರು.

3 ಲಕ್ಷ ಕೋಟಿ ಬಂಡವಾಳ ಹೊಂದಿರುವ ರೇಷ್ಮೆ ಕೃಷಿ-ಉದ್ಯಮ ರಕ್ಷಣೆಗೆ ಬದ್ದ ಎಂದು ಪೂರ್ವಭಾವಿ ಸಭೆಯಲ್ಲಿ ಸಚಿವ ಡಾ.ನಾರಾಯಣಗೌಡ ತಿಳಿಸಿದರು. ಬಜೆಟ್ ಹಿನ್ನೆಲೆಯಲ್ಲಿ ರೇಷ್ಮೆ ಇಲಾಖೆಗೆ ಸಂಬಂಧಿಸಿದಂತೆ ಕರೆದಿದ್ದ ಸಭೆಯಲ್ಲಿ ಹಲವರು ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ತಿಳಿಸಿ, ಹಲವು ಸಲಹೆಗಳನ್ನು ‌ನೀಡಿದ್ದಾರೆ. ರೇಷ್ಮೆ ಇಲಾಖೆಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ. ಈ ಬಾರಿಯ ಬಜೆಟ್‌ನಲ್ಲೂ ಉತ್ತಮ ಅನುದಾನ ಸಿಗುವ ನಿರೀಕ್ಷೆಯಿದ್ದು, ಮತ್ತಷ್ಟು ಶಕ್ತಿ ಬರಲಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version