ಕೊರೊನಾ ಸೋಂಕಿತರ ಸಂಖ್ಯೆ ತಾಲ್ಲೂಕಿನಲ್ಲಿ ಇಳಿಮುಖವಾಗಿದೆ. ಆದರೂ ಸೋಂಕಿತರ ಸರಪಣಿ ಬೆಳೆಯದಂತೆ ನೋಡಿಕೊಳ್ಳಲು ನಗರ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಖುದ್ದಾಗಿ ತಾವೇ ತೆರಳಿ ಸ್ವಾಬ್ ಪರೀಕ್ಷೆ ನಡೆಸುತ್ತಿರುವುದಾಗಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ತಿಳಿಸಿದರು.
ನಗರದ ಹೊಸಮನೆ ಬೀದಿಯಲ್ಲಿ ಭಾನುವಾರ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಯಿಂದ ಸಾರ್ವಜನಿಕರ ಸ್ವಾಬ್ ಪರೀಕ್ಷೆ ನಡೆಸುತ್ತಿರುವೆಡೆ ತೆರಳಿ ಪರೀಕ್ಷಿಸಿದ ಅವರು ಸಾರ್ವಜನಿಕರಿಗೆ ಅರಿವು ಮೂಡಿಸುತ್ತಾ ಮಾತನಾಡಿದರು.
ಸಮುದಾಯದಲ್ಲಿ ಕೋವಿಡ್ ಹರಡದಂತೆ ಎಚ್ಚರವಹಿಸಲಾಗುತ್ತಿದೆ. ಅದಕ್ಕಾಗಿಯೇ ನಾವುಗಳೇ ಖುದ್ದಾಗಿ ತೆರಳಿ ಪರೀಕ್ಷೆ ನಡೆಸುತ್ತಿದ್ದೇವೆ. ಜನರು ಸಹಕಾರ ನೀಡಬೇಕು. ಯಾವುದೇ ರೀತಿಯ ಅನುಮಾನಗಳಿದ್ದರೂ ಪರಿಹರಿಸಿಕೊಳ್ಳಿ, ಸ್ವಾಬ್ ಪರೀಕ್ಷೆಗೆ ಒಳಪಡುವ ಮೂಲಕ ಸೋಂಕು ಇದೆಯೋ ಇಲ್ಲವೋ ದೃಢಪಡಿಸಿಕೊಳ್ಳಿ. ಮಾಸ್ಕ್ ಧರಿಸುವುದು, ಅಂತರ ಕಾಪಾಡಿಕೊಳ್ಳುವುದು ಹಾಗೂ ಸ್ವಚ್ಛತೆ ರೂಢಿಸಿಕೊಳ್ಳುವುದು ಬಹಳ ಮುಖ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಹಾಜರಿದ್ದರು.