Sidlaghatta : ನಾವು ಪಡೆಯುವ ಶಿಕ್ಷಣ, ಜ್ಞಾನ, ಸಂಸ್ಕಾರವು ನಮ್ಮ ಬದುಕನ್ನು ಸಮಾಜಮುಖಿಯಾಗಿ ಬೆಳೆಸುತ್ತದೆ. ಸಮಾಜ ನಮ್ಮನ್ನು ಗೌರವಿಸುವ, ಪ್ರೀತಿ ಅಕ್ಕರೆಯಿಂದ ಕಾಣುವ ಸ್ಥಾನ ಮಾನವನ್ನು ನೀಡುತ್ತದೆ ಎಂದು ಆದಿಚುಂಚನಗಿರಿ ಮಹಾಪೀಠದ ಚಿಕ್ಕಬಳ್ಳಾಪುರ ಶಾಖೆಯ ಶ್ರೀಮಂಗಳನಾಥಸ್ವಾಮೀಜಿ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳದ ಕೆವಿ ಭವನದಲ್ಲಿ ಸೋಮವಾರ ನಡೆದ ಬಿಜಿಎಸ್ ಶಾಲೆಯ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಜ್ಞಾನಾಂಕುರ ಅಕ್ಷರಾಭ್ಯಾಸ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಮಕ್ಕಳು ಶಾಲೆ ಕಾಲೇಜುಗಳಲ್ಲಿ ಕಲಿಯುವುದಕ್ಕಿಂತಲೂ ಮನೆಯಲ್ಲಿ, ಸುತ್ತ ಮುತ್ತಲ ಪರಿಸರದಲ್ಲಿ ಕಲಿಯುವುದೆ ಹೆಚ್ಚು. ತಾಯಿ ಜತೆ ಕಳೆಯುವಷ್ಟು ಸಮಯ ಮತ್ತಾರ ಬಳಿಯೂ ಕಳೆಯುವುದಿಲ್ಲ. ಹಾಗಾಗಿ ಮಗುವಿನ ಮೊದಲ ಪಾಠ ಶಾಲೆ ಮನೆಯೆ ಆಗಿರುವುದರಿಂದ ಹೆತ್ತವರು ಮಕ್ಕಳಿಗೆ ಮಾದರಿಯಾದ ಬದುಕನ್ನು ನಡೆಸಬೇಕೆಂದರು.
ಮಕ್ಕಳು ಕೇಳಿಸಿಕೊಂಡಿದ್ದನ್ನು, ಹೇಳಿಕೊಟ್ಟಿದ್ದನ್ನು ಕಲಿಯುವುದಕ್ಕಿಂತಲೂ ನೋಡಿದ್ದು ಹೆಚ್ಚು ಪರಿಣಾಮ ಬೀರುತ್ತದೆ ಮತ್ತು ಅದನ್ನೆ ಹೆಚ್ಚು ಕಲಿಯುತ್ತದೆ. ಆದ್ದರಿಂದ ತಂದೆ ತಾಯಿ ಅಣ್ಣ ತಮ್ಮ ಅಕ್ಕ ತಂಗಿಯರು ಮಕ್ಕಳ ಮುಂದೆ ಉತ್ತಮ ನಡೆ ನುಡಿ ಉತ್ತಮವಾಗಿರುವಂತೆ ನಡೆದುಕೊಳ್ಳಿ ಎಂದು ಮನವಿ ಮಾಡಿದರು.
ತಹಶೀಲ್ದಾರ್ ಎನ್.ಗಗನಸಿಂಧು ಮಾತನಾಡಿ, ಯಾವ ಮಗು ಏನು ಸಾಧನೆ ಮಾಡಲಿದೆಯೋ ಯಾರಿಗೂ ತಿಳಿಯದು. ಆದರೆ ಮಗುವಿಗೆ ಉತ್ತಮ ಶಿಕ್ಷಣ ನೀಡಿ ಅವರ ಪ್ರತಿಭೆಗೆ ಅನುಗುಣವಾಗಿ ಅವಕಾಶಗಳನ್ನು ಒದಗಿಸಿಕೊಡುವ ಕೆಲಸ ಸರ್ಕಾರ, ಸಂಘ ಸಂಸ್ಥೆ ಮತ್ತು ಸಮುದಾಯದಿಂದ ಆಗಬೇಕಿದೆ ಎಂದರು.
ಮಕ್ಕಳ ಪೋಷಕರು ಪಂಚೆ ಷರ್ಟು, ಸೀರೆ ಉಟ್ಟು ಸಾಂಪ್ರದಾಯಿಕ ಉಡುಗೆ ತೊಟ್ಟು ಬಂದಿದ್ದರು. ಮಕ್ಕಳಿಗೆ ಓಂಕಾರ ಹೇಳಿಕೊಟ್ಟು ಅಕ್ಷರಾಭ್ಯಾಸವನ್ನು ಮಾಡಿಸಲಾಯಿತು. ಮಠದ ಭಕ್ತರು ಮಠಕ್ಕೆ ಅಕ್ಕಿ ಬೇಳೆಯನ್ನು ಕಾಣಿಕೆಯಾಗಿ ನೀಡಿದರು.
ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಆಡಳಿತಾಧಿಕಾರಿ ಡಾ.ಎನ್.ಶಿವರಾಮರೆಡ್ಡಿ, ಬಿಜಿಎಸ್ ಶಾಲೆಯ ಪ್ರಿನ್ಸಿಪಲ್ ಕೆ.ಮಹದೇವ್, ಕೆವಿ ಟ್ರಸ್ಟ್ ನ ಉಪಾಧ್ಯಕ್ಷ ಬಿಳಿಶಿವಾಲೆ ರವಿ, ಟ್ರಸ್ಟ್ ನ ಖಜಾಂಚಿ ಮುನಿಶಾಮಿಗೌಡ ಸೇರಿದಂತೆ ಹಲವರು ಹಾಜರಿದ್ದರು.
In English: Sri Mangalanathaswamiji of Adichunchanagiri Mahapeetha’s Chikkaballapur branch spoke at a Jnanankura Aksharabhyasa (initiation-to-letters) program for BGS School pre-primary children at Handiganala, Sidlaghatta taluk, emphasizing that education and values shape children into socially responsible individuals, with parents’ own conduct as the first lesson.








