Sidlaghatta : ಶಿಡ್ಲಘಟ್ಟ ನಗರದಲ್ಲಿ ವಾಹನ ಸಂಚಾರ ಸುರಕ್ಷತೆ ದೃಷ್ಠಿಯಿಂದ ಸೋಮವಾರ ನಗರಠಾಣೆ ಪಿಎಸ್ಸೈ ವೇಣುಗೋಪಾಲ್ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸಿ ವಿಮೆ ಇಲ್ಲದ ದ್ವಿ ಚಕ್ರ ವಾಹನಗಳಿಗೆ ಸ್ಥಳದಲ್ಲೇ ವಿಮೆ ಮಾಡಿಸಲಾಯಿತು.
ಈ ಸಂದರ್ಭದಲ್ಲಿ ಪಿಎಸ್ಸೈ ವೇಣುಗೋಪಾಲ್ ಮಾತನಾಡಿ, ದ್ವಿ ಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಬೇಕು. ಜೊತೆಗೆ ವಾಹನದ ಎಲ್ಲಾ ದಾಖಲೆಗಳು ಸೇರಿದಂತೆ ವಾಹನದ ವಿಮೆ ಕಡ್ಡಾಯವಾಗಿ ಮಾಡಿಸಬೇಕು. ಇದರಿಂದ ವಾಹನ ಅಪಘಾತವಾದಾಗ ನಿಮಗೆ ಹಾಗು ಕುಟುಂಬಸ್ಥರಿಗೆ ಇದರಿಂದ ಅನುಕೂಲವಾಗಲಿದೆ ಎಂದರು.
ವಾಹನ ಸವಾರರಿಗೆ ವಾಹನದ ಸುರಕ್ಷತೆ ಹಾಗೂ ವಾಹನದ ದಾಖಲೆಗಳನ್ನು ಸರಿಯಾಗಿಟ್ಟುಕೊಳ್ಳುವ ಬಗ್ಗೆ ಗೊತ್ತಿದ್ದರೂ ಅದೇಕೋ ಉದಾಸೀನ ಪ್ರದರ್ಶಿಸುತ್ತಾರೆ. ಪ್ರತಿಯೊಬ್ಬರೂ ವಾಹನ ಚಾಲನಾ ಪರವಾನಿಗೆ ಮತ್ತು ವಾಹನದ ವಿಮೆ ಮಾಡಿಸಿಕೊಂಡ ನಂತರವೇ ರಸ್ತೆಗೆ ಬರಬೇಕು. ಇದೀಗ ಪ್ರತಿಯೊಂದು ವಾಹನದ ಪರಿಶೀಲನೆ ನಡೆಸಿ ವಿಮೆ ಇಲ್ಲದ ವಾಹನಗಳಿಗೆ ಸ್ಥಳದಲ್ಲಿಯೇ ವಿಮೆ ಮಾಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಾಹನ ಸವಾರರ ಬಳಿ ವಾಹನದ ದಾಖಲೆಗಳಿಲ್ಲದಿದ್ದರೆ ದಂಡ ವಿಧಿಸಿ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಸ್ತೆಯಲ್ಲಿ ಸಾಗುವ ಪ್ರತಿಯೊಂದು ವಾಹನದ ವಿಮೆ ಪರಿಶೀಲನೆ ನಡೆಸಿದರು. ವಿಮೆ ಇಲ್ಲದ ಸುಮಾರು 100 ಕ್ಕೂ ಹೆಚ್ಚು ದ್ವಿ ಚಕ್ರ ವಾಹನಗಳಿಗೆ ವಿಮೆ ಮಾಡಿಸಲಾಯಿತು.
ರಸ್ತೆಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾರೆ ಎಂಬ ವಿಷಯ ತಿಳಿದ ಕೆಲವರು ಬೇರೆ ದಾರಿಗಳಲ್ಲಿ ಸಂಚರಿಸಿದ್ದು ಕಂಡುಬಂದಿತು.