Sidlaghatta : ಕನ್ನಡ ಭಾಷೆ ಹಾಗೂ ಸಾಹಿತ್ಯವನ್ನು ಉಳಿಸಿ ಬೆಳೆಸಲು ನಾವೇನು ಹೆಚ್ಚು ಕಷ್ಟ ಪಡಬೇಕಿಲ್ಲ. ನಮ್ಮ ದಿನ ನಿತ್ಯದ ಬದುಕಿನಲ್ಲಿ ಹಾಗೂ ವ್ಯವಹಾರದಲ್ಲಿ ಕನ್ನಡ ಭಾಷೆಯನ್ನು ಮಾತನಾಡಿದರೆ ಸಾಕು. ಕನ್ನಡ ತಂತಾನೆ ಬೆಳೆಯುತ್ತದೆ ಉಳಿಯುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ ನ 112ನೇ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಬಾಷೆ ಸಾಹಿತ್ಯಕ್ಕೆ ಎಂದಿಗೂ ಕೊನೆ ಎಂಬುದಿಲ್ಲ. ಈ ಭೂಮಿ ಮೇಲೆ ಮನುಷ್ಯ ಇರುವ ತನಕ ಕನ್ನಡ ಭಾಷೆ ಸಾಹಿತ್ಯ ಇರುತ್ತದೆ. ಕನ್ನಡಿಗನ ಬದುಕು ಉತ್ತಮಗೊಳ್ಳಬೇಕು. ಕನ್ನಡ ನಾಡು ಎಲ್ಲರನ್ನೂ ಎಲ್ಲವನ್ನೂ ಒಳಗೊಂಡಂತೆ ಅಭಿವೃದ್ದಿಯ ಪಥದಲ್ಲಿ ಸಾಗಬೇಕು ಎಂದರು.
ಉದ್ಯೋಗಕ್ಕಾಗಿ, ಬದುಕಿಗಾಗಿ ಎಲ್ಲ ಭಾಷೆಗಳನ್ನು ಕಲಿಯೋಣ, ಎಲ್ಲ ಸಾಹಿತ್ಯವನ್ನು ಓದಿ ಜ್ಞಾನವನ್ನು ಹೆಚ್ಚಿಸಿಕೊಳ್ಳೋಣ. ಆದರೆ ಆತ್ಮತೃಪ್ತಿಗೆ, ಆತ್ಮ ಸಾಕ್ಷಿಗೆ, ಅಂತಃಕರಣಕ್ಕಾಗಿ ಕನ್ನಡವನ್ನು ಕಲಿಯೋಣ, ಕನ್ನಡವನ್ನು ಓದಿ ಬರೆಯೋಣ, ಕನ್ನಡತನವನ್ನು ಮೈಗೂಡಿಸಿಕೊಳ್ಳೋಣ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ನ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಆರಂಭಗೊಂಡು 112 ವರ್ಷಗಳಾಗಿವೆ. ಅನೇಕ ಮಹನೀಯರು ಕನ್ನಡ ಸಾಹಿತ್ಯ ಪರಿಷತ್ ಅನ್ನು ಸ್ಥಾಪಿಸಿ ಕನ್ನಡ ನಾಡು ನುಡಿ ಹಾಗೂ ಕನ್ನಡಿಗರ ಪ್ರಗತಿಗೆ ಅಡಿಪಾಯ ಹಾಕಿದರು ಎಂದರು.
ಕನ್ನಡ ಪರ ಕಾರ್ಯಕ್ರಮ, ಚಟುವಟಿಕೆಗಳ ಮೂಲಕ ಕನ್ನಡ ಭಾಷೆ ಸಾಹಿತ್ಯವನ್ನು ಜೀವಂತವಾಗಿಡುವ ಜತೆಗೆ ಕನ್ನಡಿಗರನ್ನು ಒಗ್ಗೂಡಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದು ಕಸಾಪ ಅತ್ಯಂತ ಹಳೆಯದಾದ ಮತ್ತು ಹೆಚ್ಚು ಸದಸ್ಯರನ್ನು ಹೊಂದಿರುವ ಸಂಘಟನೆಯಾಗಿದೆ ಎಂದು ಹೇಳಿದರು.
ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಪ್ರೊ.ಮುರಳಿ ಆನಂದ್, ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮೃತ್ ಕುಮಾರ್, ಡಾ.ಸತ್ಯನಾರಾಯಣರಾವ್ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು. ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಸ್.ವಿ.ನಾಗರಾಜರಾವ್, ರೂಪಸಿ ರಮೇಶ್, ಜಿ.ಎನ್.ಶ್ಯಾಮಸುಂದರ್ ಅವರು ಕನ್ನಡ ಕವಿತೆಗಳನ್ನು ವಾಚಿಸಿದರು.
ವಿ.ಕೃಷ್ಣ, ಕೆಂಪಣ್ಣ, ಎಂ.ದೇವರಾಜ್, ಹಿತ್ತಲಹಳ್ಳಿ ಸುರೇಶ್, ಎನ್.ಸುಂದರ್, ಶ್ರೀನಿವಾಸ್ ವಿಶ್ವಕರ್ಮ, ಡಾ. ವೆಂಕಟೇಶ್, ಪ್ರೊ. ಆದಿನಾರಾಯಣಪ್ಪ, ಪ್ರೊ.ಸುನಿತಾ, ಪ್ರೊ.ಶಫಿ ಅಹಮದ್, ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.








