Sidlaghatta : ತಾಲ್ಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ಕೈಗಾರಿಕಾ ಪ್ರದೇಶದ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ನಿಗದಿ ಪಡಿಸಿರುವ ಭೂಪರಿಹಾರ ದರ ತೀರಾ ಕಡಿಮೆ ಇದ್ದು, ಪ್ರತಿ ಎಕರೆಗೆ ಕನಿಷ್ಠ 3 ಕೋಟಿ ರೂ ಭೂಪರಿಹಾರ ಕೊಡಿಸಬೇಕೆಂದು ಶಾಸಕ ಬಿ.ಎನ್.ರವಿಕುಮಾರ್ ಅವರಿಗೆ ಜಂಗಮಕೋಟೆ ಹೋಬಳಿ KIADB ಜಮೀನುಗಳ ರೈತರ ಪರ ಹೋರಾಟ ಸಮಿತಿ ಸದಸ್ಯರು ಮನವಿ ಸಲ್ಲಿಸಿದರು.
ಜಂಗಮಕೋಟೆ ಹೋಬಳಿ ಕೈಗಾರಿಕಾ ಪ್ರದೇಶದ ಭೂ ಸ್ವಾಧೀನಕ್ಕೆ ಒಳಪಟ್ಟಿರುವ ಕೊಲಿಮಿಹೊಸೂರು, ಅರಿಕೆರೆ, ಸಂಜೀವಪಟ್ಟಣ, ಬಸವಾಪಟ್ಟಣ, ತಾದೂರು, ತೊಟ್ಲಗಾನಹಳ್ಳಿ, ನಡಿಪಿನಾಯಕನಹಳ್ಳಿ, ಯಣ್ಣಂಗೂರು, ಹೊಸಪೇಟೆ, ಚೊಕ್ಕಂಡಹಳ್ಳಿ, ದೇವಗಾನಹಳ್ಳಿ, ಗೊಲ್ಲಹಳ್ಳಿ, ಎದ್ದಲತಿಪ್ಪೇನಹಳ್ಳಿ ಗ್ರಾಮಗಳ 2271 ಎಕರೆ ಜಮೀನುಗಳ ಭೂಸ್ವಾಧೀನ ಅಂತಿಮ ಅಧಿಸೂಚನೆ ಆಗಿ ಸಲಹಾ ಸಮಿತಿ ಸಭೆಯಲ್ಲಿ ದರ ನಿಗದಿ ಮಾಡಿ ನಂತರ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯಲ್ಲಿ ನಿಗದಿಯಾದ ಭೂದರ ತೀರಾ ಕಡಿಮೆಯಿದೆ. ಈ ಪ್ರದೇಶಕೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೇವಲ 16 ಕಿ.ಮೀ.ದೂರವಿದೆ.
ಅಂತರ್ಜಲ ಕುಸಿತ, ರೈತರು ಬೆಳೆದ ಬೆಳೆಗೆ ಬೆಲೆ ಸಿಗದೆ, ಮಹಿಳೆಯರು ಮತ್ತು ಪುರುಷರು ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಕ್ಕೆ ವಲಸೆ ಹೋಗಬೇಕಾದ ಪರಿಸ್ಥಿತಿ ಇದೆ. ಈ ಸಮಸ್ಯೆಗಳಿಂದ ರೈತರು ಭೂಮಿ ಕೊಡಲು ಮುಂದಾಗಿದ್ದಾರೆ. ನಮ್ಮ ತಾಲ್ಲೂಕಿಗೆ ಕೈಗಾರಿಕೆಯ ಅವಶ್ಯಕತೆ ಇದೆ. ಶಾಶ್ವತವಾಗಿ ಭೂಮಿ ಕಳೆದುಕೊಳ್ಳುವ ರೈತರು, ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕೊಡುವ ಪರಿಹಾರದ ಹಣದಿಂದ ತಾಲ್ಲೂಕಿನ ಯಾವುದೇ ಭಾಗದಲ್ಲಿ ಕೃಷಿ ಭೂಮಿ ಕೊಳ್ಳಲು ಆಗುವುದಿಲ್ಲ. ಹಾಗಾಗಿ ಪ್ರತಿ ಎಕರೆಗೆ ಕನಿಷ್ಠ 3 ಕೋಟಿ ರೂ ಭೂಪರಿಹಾರ ಕೊಡಿಸಬೇಕೆಂದು ಮನವಿ ಮಾಡಿದರು.
ಭೂಮಿ ಕೊಟ್ಟ ರೈತನ ಕುಟುಂಬಕ್ಕೆ ಒಂದು ಖಾಯಂ ಉದ್ಯೋಗ ನೀಡಬೇಕು. ಭೂ ಪರಿಹಾರ ಪಡೆಯಲು ಒಪ್ಪದೇ ಇರುವ ರೈತರಿಗೆ ಪ್ರತಿ ಎಕರೆಗೆ 16 ಗುಂಟೆ ಪರ್ಯಾಯ ಜಮೀನನ್ನು ಬದಲಿಯಾಗಿ ನೀಡಲು ಕ್ರಮ ವಹಿಸಬೇಕೆಂದು ಮನವಿ ಸಲ್ಲಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ನಲ್ಲೇನಹಳ್ಳಿ ಸುಭ್ರಮಣಿ, ಬಸವಪಟ್ಟಣ ಗ್ರಾಮದ ಪ್ರಭುಗೌಡ, ಮಧುಗೌಡ, ರಾಮದಾಸ್, ಗಜೇಂದ್ರ,ಚೇತನ್, ಕನಕಪ್ಪ, ನಾರಾಯಣಪ್ಪ, ತಿಪ್ಪೇಗೌಡ, ಯಣ್ಣಂಗೂರು ಗ್ರಾಮದ ಮಧು, ಗಂಗಾಧರ್, ಈರಪ್ಪ, ಚೊಕ್ಕಂಡಹಳ್ಳಿ ದೇವರಾಜ್, ಅಮರನಾಥ್, ಜಂಗಮಕೋಟೆ ಜೆ.ಸಿ.ಮಂಜಣ್ಣ, ನಾರಾಯಣಸ್ವಾಮಿ ಹಾಜರಿದ್ದರು.








