Sidlaghatta : ಬೆಂಗಳೂರಿನ ಉಚ್ಚ ನ್ಯಾಯಾಲಯದ (High Court) ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಏಕೈಕ ಮತ್ತು ಪ್ರತಿಷ್ಠಿತ ನ್ಯಾಯಮಿತ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಗಾದಿ ಈ ಬಾರಿ ಶಿಡ್ಲಘಟ್ಟದ ಪಾಲಾಗಿದೆ. ಶಿಡ್ಲಘಟ್ಟದ ಹಿರಿಯ ವಕೀಲರಾದ ಎಸ್.ಬಿ. ಶ್ರೀನಿವಾಸ್ ಅವರು ಈ ಬ್ಯಾಂಕ್ನ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಸುಮಾರು 10 ಸಾವಿರಕ್ಕೂ ಹೆಚ್ಚು ವಕೀಲರು ಷೇರುದಾರರಾಗಿರುವ ಈ ಬ್ಯಾಂಕ್ ರಾಜ್ಯದ ನ್ಯಾಯಾಂಗ ವಲಯದಲ್ಲಿ ಅತ್ಯಂತ ಮಹತ್ವದ ಸ್ಥಾನ ಹೊಂದಿದೆ. ಒಟ್ಟು 17 ಮಂದಿ ನಿರ್ದೇಶಕರನ್ನು (ಡೆಲಿಗೇಟ್ಸ್) ಒಳಗೊಂಡಿರುವ ಈ ಬ್ಯಾಂಕ್ನ ಇತಿಹಾಸದಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಆಯ್ಕೆಯಾದ ಮೊದಲ ಮತ್ತು ಏಕೈಕ ಪ್ರತಿನಿಧಿ ಎಂಬ ಹೆಗ್ಗಳಿಕೆಗೆ ಎಸ್.ಬಿ. ಶ್ರೀನಿವಾಸ್ ಪಾತ್ರರಾಗಿದ್ದರು. ಈಗ ಅವರು ಬ್ಯಾಂಕ್ನ ಅತ್ಯುನ್ನತ ‘ಅಧ್ಯಕ್ಷ’ ಸ್ಥಾನಕ್ಕೇರುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಅಧ್ಯಕ್ಷರಾಗಿ ಆಯ್ಕೆಗೊಂಡ ಎಸ್.ಬಿ. ಶ್ರೀನಿವಾಸ್ ಅವರನ್ನು ಬ್ಯಾಂಕ್ನ ಎಲ್ಲಾ ನಿರ್ದೇಶಕರು ಹಾಗೂ ಹೈಕೋರ್ಟ್ನ ವಕೀಲರು ಹೂಮಾಲೆ ಹಾಕಿ, ಸಿಹಿ ಹಂಚಿ ಸಂಭ್ರಮಿಸಿದರು. ವಕೀಲ ಸಮುದಾಯದ ಆರ್ಥಿಕ ಭದ್ರತೆ ಮತ್ತು ಬ್ಯಾಂಕ್ನ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಈ ಸಂದರ್ಭದಲ್ಲಿ ಶ್ರೀನಿವಾಸ್ ಅವರು ಭರವಸೆ ನೀಡಿದರು.








