Sidlaghatta : ಶಾಲೆ ವಂಚಿತ ವಲಸೆ ಕಾರ್ಮಿಕ ಮಹಿಳೆ ಲಕ್ಷ್ಮಿಬಾಯಿ ಹೊಸಮನೆ ಅವರ 9 ವರ್ಷದ ಮಗಳು ರೂಪ ರನ್ನು ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿಸಲು ಅಸಂಘ ಟಿತ ಕಾರ್ಮಿಕರ ಸಂಘದ ತಾಲ್ಲೂಕು ಅಧ್ಯಕ್ಷ ದೇವರ ಮಳ್ಳೂರು ವಿ.ಚನ್ನಕೃಷ್ಣ ಮುಂದಾಗಿದ್ದಾರೆ.
ಬಿಜಾಪುರ ಮೂಲದ ಲಕ್ಷ್ಮಿಬಾಯಿ ಹೊಸಮನೆ ಅವರು ತನ್ನ ಮಗಳೊಂದಿಗೆ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದುದನ್ನು ಕಂಡು ವಿ.ಚನ್ನಕೃಷ್ಣ ಅವರು ಮಗುವನ್ನು ಶಾಲೆಗೆ ಸೇರಿಸಲು ಪೋಷಕರನ್ನು ಮನವೊಲಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ದೇವರ ಮಳ್ಳೂರು ವಿ.ಚನ್ನಕೃಷ್ಣ, “ಶಿಕ್ಷಣ ಎಲ್ಲರ ಬಾಳು ಬೆಳಕಾಗಿಸುತ್ತದೆ. ಸಮಾಜದ ಹಿತ ಕಾಯುತ್ತದೆ. ವಿದ್ಯೆಇರುವ ಮನೆ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗುತ್ತದೆ. ಮಗುವನ್ನು ತಪ್ಪದೇ ಶಾಲೆಗೆ ಕಳುಹಿಸುವಂತೆ ಪೋಷಕರಲ್ಲಿ ಮನವಿ ಮಾಡಿರುವೆ. ಆ ಮಗುವಿನ ಶಿಕ್ಷಣಕ್ಕೆ ಬೇಕಾದ ಪೂರಕ ಸಹಾಯ ನಾನು ಮಾಡಿಸುತ್ತೇನೆ ಎಂಬುದಾಗಿ ತಿಳಿಸಿರುವೆ. ಮಗುವನ್ನು ಶಾಲೆಗೆ ಸೇರಿಸುವ ವಿಚಾರದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳಾದ ಬಿ.ಆರ್.ಪಿ. ಕೆ. ಮಂಜುನಾಥ, ದೇವರಮಳ್ಳೂರು ಕ್ಲಸ್ಟರ್ ಸಿ.ಆರ್.ಪಿ ಬಿ.ವಿ. ಮಂಜುನಾಥ ಅವರು ಸಹಕಾರ ನೀಡುತ್ತಿದ್ದಾರೆ. ಶಾಲಾ ಮುಖ್ಯ ಶಿಕ್ಷಕರಾದ ಸುದರ್ಶನ್ ಸಹ ಶಾಲೆಗೆ ಸೇರಿಸಿಕೊಳ್ಳಲು ಒಪ್ಪಿಗೆ ನೀಡಿದ್ದಾರೆ. ಈ ರೀತಿಯ ಮಕ್ಕಳು ಯಾರಿಗೇ ಕಂಡು ಬಂದರೂ ಹತ್ತಿರದ ಸರ್ಕಾರಿ ಶಾಲೆಗೆ ಸೇರಿಸಬೇಕು” ಎಂದು ಅವರು ಹೇಳಿದರು.