Sidlaghatta : ಶಿಡ್ಲಘಟ್ಟ ನಗರದ ಕೆ.ಎಚ್.ಬಿ ಕಾಲೋನಿಯಲ್ಲಿ ನೆಲೆಸಿರುವ ಶ್ರೀಮಹಾಗಣಪತಿ, ಶ್ರೀಗಾಯಿತ್ರಿ ದೇವಿ, ಶ್ರೀಕಲ್ಯಾಣ ವೆಂಕಟೇಶ್ವರಸ್ವಾಮಿ ಹಾಗೂ ಶನೇಶ್ವರಸ್ವಾಮಿ ದೇವಾಲಯದಲ್ಲಿ ಶ್ರೀಶನೇಶ್ವರಸ್ವಾಮಿ ಜಯಂತಿ ಹಾಗೂ ಶ್ರೀಮತ್ಕಲ್ಯಾಣ ಬ್ರಹ್ಮ ರಥೋತ್ಸವವು ಶನಿವಾರ ನಡೆಯಿತು.
29ನೇ ವರ್ಷದ ಶ್ರೀಶನೇಶ್ವರ ಜಯಂತಿ ಅಂಗವಾಗಿ ದೇವಾಲಯದಲ್ಲಿನ ಶ್ರೀಮಹಾಗಣಪತಿ, ಶ್ರೀಗಾಯಿತ್ರಿ ದೇವಿ, ಶ್ರೀಕಲ್ಯಾಣ ವೆಂಕಟೇಶ್ವರಸ್ವಾಮಿ ಹಾಗೂ ಶನೇಶ್ವರಸ್ವಾಮಿ ಮೂರ್ತಿಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಿ ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.

108 ಲೀಟರ್ ಕ್ಷೀರಾಭಿಷೇಕ ನೆರವೇರಿಸಿ ಸಾಮೂಹಿಕವಾಗಿ ಭಕ್ತರಿಂದ ಎಳ್ಳು ದೀಪ ಬೆಳಗಲಾಯಿತು. ಇಷ್ಟಾರ್ಥಗಳು ಈಡೇರಲೆಂದು ಕೈ ಮುಗಿದು ಪ್ರಾರ್ಥಿಸಲಾಯಿತು.
ನಂತರ ಉತ್ಸವ ಮೂರ್ತಿಯನ್ನು ಅಲಂಕೃತ ತೇರಿನಲ್ಲಿ ಪ್ರತಿಷ್ಠಾಪಿಸಿ ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕುವ ಮೂಲಕ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ತೇರಿನ ಹಗ್ಗ ಹಿಡಿದೆಳೆದು ಭಗವಂತನಿಗೆ ಕೈ ಮುಗಿದು ಪ್ರಾರ್ಥಿಸಿದರು.
ಪ್ರಧಾನ ಅರ್ಚಕ ವಿ.ಎನ್.ರಾಮ ಮೋಹನ್ ಶಾಸ್ತ್ರಿ ನೇತೃತ್ವದಲ್ಲಿ ಎಲ್ಲ ಪೂಜೆ ಪುನಸ್ಕಾರ ಹೋಮ ಹಾಗೂ ಬ್ರಹ್ಮ ರಥೋತ್ಸವ ಉತ್ಸವಗಳು ನಡೆದವು.
ದೇವಾಲಯದ ಅಭಿವೃದ್ದಿ ಟ್ರಸ್ಟ್ ನ ಅಧ್ಯಕ್ಷ ತೀರ್ಥಂಕರ, ಗೌರವಾಧ್ಯಕ್ಷ ಪ್ರಕಾಶ್, ಕೃಷ್ಣಪ್ಪ, ಮಣಿ, ನಾರಾಯಣಸ್ವಾಮಿ, ಶ್ರೀನಾಥ್ ಇನ್ನಿತರೆ ಪ್ರಮುಖರು, ಭಕ್ತರು ಭಾಗವಹಿಸಿದ್ದರು.