
Sidlaghatta : 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ಪ್ರಕಾರದ ಕೆಲಸಗಳಿಗೆ ಬಳಸುವುದು ಕಾನೂನಾತ್ಮಕ ಅಪರಾಧವೆಂದು ಶಿಡ್ಲಘಟ್ಟ ಜೆ.ಎಂ.ಎಫ್.ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ರವರು ಹೇಳಿದರು
ತಾಲ್ಲೂಕು ಕಾನೂನು ಸೇವಾ ಸಮಿತಿ ಶಿಡ್ಲಘಟ್ಟ, ವಕೀಲರ ಸಂಘ ಶಿಡ್ಲಘಟ್ಟ, ಕಂದಾಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಇಂಟಿಗ್ರೇಟರ್ ವೆಲ್ ಫೇರ್ ಫೌಂಡೇಶನ್ ಶಿಡ್ಲಘಟ್ಟ ಇವರ ಸಂಯುಕ್ತಾಶ್ರಯದಲ್ಲಿ ಸಂತೋಷ್ ನಗರದಲ್ಲಿರುವ ಸರ್ಕಾರಿ ಉರ್ದು ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೋಷಕರು, ಸಂಬಂಧಿಕರು ಅಥವಾ ಪರಿಚಿತರು ಮಕ್ಕಳನ್ನು ಕಟ್ಟಡ ಕಾಮಗಾರಿ, ಮರದ ಕೆಲಸ, ಪೇಂಟಿಂಗ್, ಅಂಗಡಿ ಅಥವಾ ಮನೆಗಳಲ್ಲಿ ಕೂಲಿ ಕೆಲಸಗಳಿಗೆ ಬಳಸಬಾರದು. ಇದು ಕಳ್ಳತನ ಅಥವಾ ಅಪರಾಧ ಚಟುವಟಿಕೆಗೆ ಸಮಾನ ಎಂದು ಹೇಳಿದರು.
ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಪೋಷಕರು ಶ್ರಮಿಸಬೇಕು. ಕಡ್ಡಾಯ ಶಿಕ್ಷಣಕ್ಕೆ ಮಕ್ಕಳನ್ನು ಸೇರಿಸಬೇಕು ಮತ್ತು ಮುಂದಿನ ಶಿಕ್ಷಣಕ್ಕೂ ಉತ್ತೇಜನೆ ನೀಡಬೇಕು ಎಂದು ತಿಳಿಸಿದರು. ಅಲ್ಲದೆ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ವಿವಾಹ ಹಾಗೂ 22 ವರ್ಷ ಒಳಗಿನ ಗಂಡು ಮಕ್ಕಳ ವಿವಾಹ ಕೂಡ ಕಾನೂನಿನಂತೆ ನಿಷಿದ್ಧವಾಗಿದೆ. ತೀವ್ರ ಆರ್ಥಿಕ ಸಂಕಷ್ಟದಲ್ಲೂ ಮಕ್ಕಳನ್ನು ದುಡಿಯಲು ಬಿಡಬಾರದು, ಯಾವುದೇ ಸಮಸ್ಯೆ ಎದುರಾದರೆ 1098 ಹೆಲ್ಪ್ ಲೈನ್ ಅನ್ನು ಸಂಪರ್ಕಿಸಲು ಹೇಳಿದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ. ಭಾಸ್ಕರ್ ಮಾತನಾಡಿ, ಶಿಡ್ಲಘಟ್ಟದಲ್ಲಿ ಕೆಲವು ಸ್ಥಳಗಳಲ್ಲಿ ಇನ್ನೂ ಮಕ್ಕಳನ್ನು ಬಳಸಿ ರೇಷ್ಮೆ ನೂಲು ತೆಗೆಯುವಂತಹ ಕೆಲಸಗಳು ನಡೆಯುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಸಾಲ ತೀರಿಸಲು ಶಕ್ತಿಯಿಲ್ಲದ ಕುಟುಂಬಗಳು ಮಕ್ಕಳನ್ನೂ ಸೇರಿಸಿ ಕೆಲಸ ಮಾಡಿಸುತ್ತಿರುವುದರಿಂದ ಮಕ್ಕಳ ಆರೋಗ್ಯಕ್ಕೂ ಹಾನಿಯಾಗುತ್ತಿದೆ ಎಂದು ತಿಳಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಸುಕನ್ಯಾ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ರಂಜಿತಾ.ಎಸ್, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್, ವಕೀಲರ ಸಂಘದ ಅಧ್ಯಕ್ಷ ಎ. ನಾರಾಯಣಸ್ವಾಮಿ, ತಾಲ್ಲೂಕು ಕಾರ್ಮಿಕ ಇಲಾಖೆ ನಿರೀಕ್ಷಕಿ ವಿಜಯಲಕ್ಷ್ಮಿ, ನಗರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವೇಣುಗೋಪಾಲ್, ಮುಖ್ಯ ಶಿಕ್ಷಕಿ ಆಜಂ ಪಾಷ, ಶಿಕ್ಷಕರಾದ ಮುಕ್ಬುಲ್ ಪಾಷಾ, ನಫೀಸ್ ಫಾತೀಮಾ, ನಸೀನ್, ದಾವೂದ್ ಪಾಷಾ. ಎಸ್, ಹೀನಾ ಕೌಸರ್ ಹಾಜರಿದ್ದರು