Sadahalli, Sidlaghatta, chikkaballapur : ಶಿಡ್ಲಘಟ್ಟ ತಾಲ್ಲೂಕಿನ ಸಾದಹಳ್ಳಿ ಗ್ರಾಮದ ದಾಳಿಂಬೆ ತೋಟಕ್ಕೆ ನುಗ್ಗಿದ ಕಳ್ಳರು ಸುಮಾರು 400 ಕೆಜಿ (ಒಂಬತ್ತು ಚೀಲ) ದಾಳಿಂಬೆ ಕದ್ದು ಕಾರಿನಲ್ಲಿ ತುಂಬುವ ವೇಳೆಯಲ್ಲಿ ತೋಟದ ಮಾಲೀಕರಿಂದಲೇ ಪತ್ತೆಯಾಗಿದ್ದಾರೆ. ರೈತರು ಜಾಗೃತೆಯಿಂದ ವರ್ತಿಸಿ ಇಬ್ಬರು ಆರೋಪಿಗಳನ್ನು ಸ್ಥಳದಲ್ಲೇ ಹಿಡಿದು 112 ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ರೈತ ಚಂದ್ರಪ್ಪ ಅವರ ತೋಟದಲ್ಲಿ ಬುಧವಾರ ರಾತ್ರಿ 8:30ರ ಸುಮಾರಿಗೆ ಶಂಕಾಸ್ಪದ ಚಲನವಲನ ಗಮನಕ್ಕೆ ಬಂದಿತು. ತಕ್ಷಣ ಟಾರ್ಚ್ ಹಿಡಿದು ತೋಟದೊಳಗೆ ತೆರಳಿದ ಅವರು ನಾಲ್ವರು ಶಂಕಿತರು ದಾಳಿಂಬೆ ಕಿತ್ತು ಚೀಲಗಳಲ್ಲಿ ತುಂಬಿ, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಇಂಡಿಕಾ ಕಾರಿಗೆ ಹಾಕುತ್ತಿದ್ದುದನ್ನು ಕಂಡರು. ತಕ್ಷಣ ಅಣ್ಣ ರಾಜಣ್ಣ ಅವರನ್ನು ಕರೆಸಿ ಸಹಾಯದಿಂದ ಕಳ್ಳರನ್ನು ಹಿಡಿಯಲು ಪ್ರಯತ್ನಿಸಿದಾಗ, ಇಬ್ಬರು ಸ್ಥಳದಲ್ಲೇ ಸಿಕ್ಕಿ ಬಿದ್ದರು.
ಈ ಪ್ರಕರಣದಿಂದ ರೈತರ ನಡುವೆ ಕಳವಿನ ಭಯ ಮತ್ತೆ ಹೆಚ್ಚಾಗಿದೆ. ಬೆಲೆ ಏರಿಳಿತ, ಕಾರ್ಮಿಕ ಕೊರತೆ, ಹಾಗೂ ಪ್ರಕೃತಿ ಅವಾಂತರಗಳ ನಡುವೆ ಹಣ್ಣು ತೋಟವನ್ನು ಕಳ್ಳರಿಂದ ರಕ್ಷಿಸುವ ಹೊಸ ತಲೆನೋವು ರೈತರಿಗೆ ಎದುರಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕಳ್ಳತನಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸ್ಥಳೀಯರು ಪೊಲೀಸ್ ಇಲಾಖೆ ತೋಟ ಪ್ರದೇಶಗಳಲ್ಲಿ ರಾತ್ರಿ ಗಸ್ತು ಬಲಪಡಿಸಬೇಕೆಂದು ಆಗ್ರಹಿಸಿದ್ದಾರೆ.
ನೆರೆಯ ತೋಟದವರೇ ಕಳ್ಳರು :
ಸಾದಹಳ್ಳಿಯ ರೈತ ಚಂದ್ರಪ್ಪನ ತೋಟದ ಪಕ್ಕದ ತೋಟದ ಬೈರಗಾನಹಳ್ಳಿಯ ಮನೋಜ್ ಹಾಗು ಶಿವರಾಜ್ ನನ್ನು ಸ್ಥಳದಲ್ಲಿ ಹಿಡಿದು ಪೊಲೀಸರಿಗೆ ಒಪ್ಪಿಸಲಾಯಿತು. ಕೃತ್ಯಕ್ಕೆ ಬಳಿಸಿದ ಕಾರನ್ನು ವಶಪಡಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಮತ್ತಿಬ್ಬರಾದ ಬೈರಗಾನಹಳ್ಳಿಯ ಚರಣ್ ಮತ್ತು ಮೋಹನ್ ಪತ್ತೆಹಚ್ಚುತ್ತಿದ್ದಾರೆ.
ಸುಮಾರು ಮೂರು ಎಕರೆ ಜಮೀನಿನಲ್ಲಿ ಸಾಲ ಮಾಡಿ ದಾಳಿಂಬೆ ಬೆಳೆಯನ್ನ ಬೆಳೆದಿದ್ದೆವು. ಸುಮಾರು 10 ರಿಂದ 12 ಲಕ್ಷ ರೂಗಳ ಬಂಡವಾಳವನ್ನು ಹಾಕಿ ತಾಯಿ ತನ್ನ ಮಗುವನ್ನು ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಇರಿಸಿಕೊಂಡು ಯಾವ ರೀತಿ ಬೆಳೆಸುತ್ತಾಳೋ ಅದೇ ರೀತಿ ನಾವು ಈ ಬೆಳೆಯನ್ನ ಬೆಳೆದಿದ್ದೇವೆ. ಆ ಬೆಳಗೆ ಎಷ್ಟು ಕಷ್ಟಪಟ್ಟಿದ್ದೇವೆ ಅಂತ ನಮಗೆ ಗೊತ್ತಿದೆ. ನನ್ನ ಬಳಿಯ ಒಡವೆಗಳನ್ನೆಲ್ಲ ಅಡ ಇಟ್ಟು ಸಾಲ ಮಾಡಿ ಬಂಡವಾಳವನ್ನು ಹಾಕಿದ್ದೇವೆ. ಇನ್ನು ನನ್ನ ಬಳಿ ಇರುವುದು ಕೇವಲ ನನ್ನ ಮಾಂಗಲ್ಯ ಮಾತ್ರ. ಅವರಿಗೆ ಈ ದಾಳಿಂಬೆ ಹಣ್ಣು ಕದಿಯಲು ಮನಸ್ಸಾದರೂ ಹೇಗೆ ಬಂತು. ಅವರು ರೈತರಾಗಿದ್ದುಕೊಂಡು ಇನ್ನೊಬ್ಬ ರೈತರ ಕಷ್ಟವನ್ನು ಅರ್ಥ ಮಾಡಿಕೊಳ್ಳದೆ ಇಂತಹ ಕೃತ್ಯ ಮಾಡಿರೋದು ನಮಗೆ ಬೇಸರವಾಗುತ್ತಿದೆ. ತಪ್ಪತಸ್ಥರಿಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.
Sidlaghatta, chikkaballapur : “ಆರೆಸ್ಸೆಸ್ ಯಾವುದೇ ನೋಂದಾಯಿತ ಸಂಘವಲ್ಲ, ಸದಸ್ಯತ್ವ ನೋಂದಣಿ ಇಲ್ಲ, ದೇಣಿಗೆ ಸಂಗ್ರಹಿಸುವುದೂ ಇಲ್ಲ. ಕೇವಲ ದೇಶಪ್ರೇಮದ ತತ್ವವನ್ನು ಅನುಸರಿಸುವ ಸಂಘಟನೆಯನ್ನು ನಿಷೇಧಿಸಲು ಕಾಂಗ್ರೆಸ್ ಮುಂದಾಗಿರುವುದು ಅಸಾಧ್ಯವಾದ ವಿಚಾರ,” ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಶಿಡ್ಲಘಟ್ಟದಲ್ಲಿ ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ಶಿಡ್ಲಘಟ್ಟದಲ್ಲಿ ವಿಜಯದಶಮಿ ಪಥಸಂಚಲನ ನಡೆಯಿತು. ವಾಸವಿ ವಿದ್ಯಾ ಸಂಸ್ಥೆಯಿಂದ ಆರಂಭವಾದ ಪಥಸಂಚಲನ ಕೋಟೆ ವೃತ್ತ, ಹೂವಿನ ವೃತ್ತ, ನಗಾರ್ತಪೇಟೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಶಿಸ್ತಿನ ಸಾಲಿನಲ್ಲಿ ಕರ ಹಿಡಿದ ನೂರಾರು ಸ್ವಯಂಸೇವಕರು ಭಾರತಮಾತೆಯ ಭಾವಚಿತ್ರದ ಹಿಂದೆ ಹೆಜ್ಜೆಯಿಟ್ಟು ಸಾಗಿದರೆ, ನಾಗರಿಕರು ರಸ್ತೆ ಬದಿಯಲ್ಲಿ ನಿಂತು ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ, ವಿವಿಧ ಸಂಘಟನೆಗಳ ಮುಖಂಡರು, ಶಾಲಾ ಮಕ್ಕಳು ಸಹ ಪಥಸಂಚಲನದಲ್ಲಿ ಭಾಗವಹಿಸಿದರು.
ಪಥಸಂಚಲನದ ಬಳಿಕ ಬಿಜೆಪಿ ಸೇವಾ ಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, “ಕಾಂಗ್ರೆಸ್ ಪಕ್ಷ ಆರೆಸ್ಸೆಸ್ ನಿಷೇಧದ ಮಾತು ಆರಂಭಿಸಿದ ಬಳಿಕ ದೇಶದಲ್ಲಿ ಆರೆಸ್ಸೆಸ್ ಸದಸ್ಯರ ಸಂಖ್ಯೆ ಬೃಹತ್ ಪ್ರಮಾಣದಲ್ಲಿ ಹೆಚ್ಚಿದೆ. ಅದಕ್ಕೆ ಕಾಂಗ್ರೆಸ್ಗೆ ಅಭಿನಂದನೆ ಸಲ್ಲಿಸಬೇಕು,” ಎಂದು ವ್ಯಂಗ್ಯವಾಡಿದರು.
ಅವರು ಮುಂದುವರಿದು, “ಆರೆಸ್ಸೆಸ್ ನೋಂದಾಯಿತ ಸಂಘವಲ್ಲದಿದ್ದಾಗ ನಿಷೇಧದ ಪ್ರಶ್ನೆಯೇ ಬರದು. ಇದನ್ನು ಅರಿಯದ ಕಾಂಗ್ರೆಸ್ ನಾಯಕರಿಗೆ ಮೂಲಭೂತ ಜ್ಞಾನವೇ ಇಲ್ಲ,” ಎಂದು ಟೀಕಿಸಿದರು.
ರಾಜ್ಯ ಸರ್ಕಾರ ಆರೆಸ್ಸೆಸ್ ಹಾಗೂ ಬಿಜೆಪಿ ವಿರುದ್ಧ ಹೋರಾಟದ ಹೆಸರಿನಲ್ಲಿ ತಾವೇ ರಾಜಕೀಯ ತಪ್ಪು ಮಾಡಿಕೊಂಡಿದೆ, ಎಂದು ಅವರು ಆರೋಪಿಸಿದರು. “ಪಥಸಂಚಲನದಲ್ಲಿ ಹಿಂದಿನ ವರ್ಷ 300 ರಿಂದ 500 ಮಂದಿ ಭಾಗವಹಿಸುತ್ತಿದ್ದರೆ, ಈಗ 5,000 ರಿಂದ 10,000 ಜನರು ಭಾಗವಹಿಸುತ್ತಿದ್ದಾರೆ — ಇದಕ್ಕೆ ಕಾಂಗ್ರೆಸ್ ನಿಷೇಧದ ಹೇಳಿಕೆಯೇ ಕಾರಣ,” ಎಂದು ಹೇಳಿದರು.
ನಾರಾಯಣಸ್ವಾಮಿ ಅವರು, “ಸರ್ಕಾರ ಸಭೆ, ಸಮಾರಂಭಗಳಿಗೆ ಪೂರ್ವಾನುಮತಿ ಕಡ್ಡಾಯವೆಂದು ಹೇಳಿ, ಪರೋಕ್ಷವಾಗಿ ಪ್ರಧಾನಿ ಮೋದಿ ಅವರ ‘ಒಂದು ದೇಶ, ಒಂದು ಕಾನೂನು’ ತತ್ವವನ್ನು ಬೆಂಬಲಿಸಿದೆ. ಈಗ ಮುಸ್ಲಿಂ ಸಮುದಾಯದ ಹಬ್ಬಗಳಿಗೂ ಇದೇ ನಿಯಮ ಅನ್ವಯವಾಗಲಿದೆ,” ಎಂದರು.
ಅವರು 1975ರ ಎಮರ್ಜೆನ್ಸಿ ಆಡಳಿತವನ್ನು ನೆನಪಿಸುವ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿ, “ಜನರು ಅವರ ಕೆಲಸಕ್ಕೆ ಶೀಘ್ರದಲ್ಲೇ ಉತ್ತರ ಕೊಡುತ್ತಾರೆ,” ಎಂದರು.
Sidlaghatta, chikkaballpur : ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಜಾರಿಗೆ ತಂದಿರುವ ಇ-ಹರಾಜು ವ್ಯವಸ್ಥೆ (e-Auction System) ಕುರಿತು ನಡೆಯುತ್ತಿರುವ ವಿವಾದದ ನಡುವೆ, ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಮಳ್ಳೂರು ಶಿವಣ್ಣ ಅವರು “ಈ ವ್ಯವಸ್ಥೆಯಲ್ಲಿ ಕೆಲವೊಂದು ಸಣ್ಣ ಪುಟ್ಟ ಲೋಪ ದೋಷಗಳಿದ್ದರೂ, ಅವುಗಳನ್ನು ಸರಿಪಡಿಸಿ ಇ-ಹರಾಜನ್ನು ಮುಂದುವರೆಸಬೇಕು. ರೈತರಿಗೆ ಅಥವಾ ರೀಲರ್ಗಳಿಗೆ ಯಾವುದೇ ರೀತಿಯ ಅನಾನುಕೂಲ ಇಲ್ಲ,” ಎಂದು ಸ್ಪಷ್ಟಪಡಿಸಿದರು.
ನಗರದ ರೇಷ್ಮೆ ಬಿತ್ತನೆ ಕೋಠಿ ಸಭಾಂಗಣದಲ್ಲಿ ನಡೆದ ರೈತರ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಅವರು ಮಾತನಾಡಿದರು. ಇತ್ತೀಚೆಗೆ ಶಾಸಕ ಬಿ.ಎನ್. ರವಿಕುಮಾರ್ ಅವರು ಜಿಲ್ಲಾ ಕೆಡಿಪಿ ಸಭೆಯಲ್ಲಿ “ಇ-ಹರಾಜು ವ್ಯವಸ್ಥೆಯನ್ನು ರದ್ದುಪಡಿಸಬೇಕು” ಎಂದು ಪ್ರಸ್ತಾಪಿಸಿದ್ದ ಹಿನ್ನೆಲೆ, ಈ ಸಭೆ ಆಯೋಜಿಸಲಾಗಿತ್ತು.
ಸಭೆಯಲ್ಲಿ ತಾಲ್ಲೂಕಿನ ನಾನಾ ಭಾಗಗಳಿಂದ ಬಂದ ರೇಷ್ಮೆ ಬೆಳೆಗಾರರು ಇ-ಹರಾಜು ಪರವಾಗಿಯೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. “ಹರಾಜು ಮೊದಲು ರೇಷ್ಮೆಗೂಡಿನ ಗುಣಮಟ್ಟ ಪರೀಕ್ಷೆ ನಡೆಯಬೇಕು. ಕನಿಷ್ಠ ಬೆಲೆ ನಿಗದಿಪಡಿಸಿ ಅದಕ್ಕಿಂತ ಕಡಿಮೆ ದರದಲ್ಲಿ ಹರಾಜು ಆರಂಭಿಸಬಾರದು. ಹರಾಜು ನಂತರ ಅರ್ಧ ಗಂಟೆಯೊಳಗೆ ತೂಕ ಹಾಕಿ, ಎರಡು ಗಂಟೆಯೊಳಗೆ ರೈತನ ಬ್ಯಾಂಕ್ ಖಾತೆಗೆ ಹಣ ಜಮೆ ಆಗಬೇಕು,” ಎಂದು ಅವರು ಒತ್ತಾಯಿಸಿದರು.
ರೈತರು ಮಾರುಕಟ್ಟೆ ಆವರಣದಲ್ಲೇ ಬ್ಯಾಂಕ್ ಶಾಖೆ ತೆರೆಯಬೇಕು, ಹಾಗೆಯೇ ಭಾನುವಾರ ಹಾಗೂ ಸರ್ಕಾರಿ ರಜಾದಿನಗಳಲ್ಲೂ ಪಾವತಿ ವ್ಯವಸ್ಥೆ ಇರಬೇಕು ಎಂದು ವಿನಂತಿಸಿದರು. ಕೆಲವು ರೈತರು ಮತ್ತು ರೀಲರ್ಗಳು ಮಾರುಕಟ್ಟೆ ಹೊರಗೆ ವಹಿವಾಟು ನಡೆಸುತ್ತಿರುವುದು ಸರಿಯಲ್ಲ ಎಂದು ಹೇಳಿ, ಎಲ್ಲಾ ವ್ಯಾಪಾರವೂ ಅಧಿಕೃತ ಹರಾಜು ವ್ಯವಸ್ಥೆಯಲ್ಲಿಯೇ ನಡೆಯಬೇಕೆಂದು ಮನವಿ ಮಾಡಿದರು.
ಮಳ್ಳೂರು ಶಿವಣ್ಣ ಅವರು “ಇ-ಹರಾಜು ಪದ್ದತಿಯಿಂದ ರೈತರು ಮತ್ತು ರೀಲರ್ಗಳು ಎರಡೂ ಪಕ್ಷಗಳು ಲಾಭ ಪಡೆಯುತ್ತಿವೆ. ಈ ವ್ಯವಸ್ಥೆ ವಿರುದ್ದ ಅನಾವಶ್ಯಕ ಅಪಪ್ರಚಾರ ಮಾಡಬಾರದು,” ಎಂದು ಹೇಳಿದರು.
ಸಭೆಯಲ್ಲಿ ಪ್ರಗತಿಪರ ರೈತರು ಹಿತ್ತಲಹಳ್ಳಿ ಗೋಪಾಲಗೌಡ, ಬೋದಗೂರು ವೆಂಕಟಸ್ವಾಮಿರೆಡ್ಡಿ, ಉಪ ನಿರ್ದೇಶಕ ಉಮೇಶ್, ಸಹಾಯಕ ನಿರ್ದೇಶಕ ಕೆ. ತಿಮ್ಮರಾಜು, ಅಕ್ಮಲ್ ಪಾಷ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.
Sidlaghatta : ಶಿಡ್ಲಘಟ್ಟ ನಗರದ ಹೃದಯ ಭಾಗದಲ್ಲಿರುವ ಕೋಟೆ ವೃತ್ತದ ಶ್ರೀ ಸೋಮೇಶ್ವರಸ್ವಾಮಿ ದೇವಾಲಯದ ಪುನರ್ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಈಗ ಆವರಣದಲ್ಲಿ ಪಾದಚಾರಿ ಮಾರ್ಗ, ಹುಲ್ಲು ಹಾಸು ಮತ್ತು ಪ್ರಸಾದ ವಿನಿಯೋಗ ಸ್ಥಳ ನಿರ್ಮಾಣ ಕಾರ್ಯಗಳು ಅಂತಿಮ ಹಂತದಲ್ಲಿವೆ ಎಂದು ದೇವಾಲಯ ಅಭಿವೃದ್ದಿ ಸಮಿತಿ ಅಧ್ಯಕ್ಷ ಎ. ನಾಗರಾಜ್ ತಿಳಿಸಿದ್ದಾರೆ.
ಅವರು ದೇವಾಲಯದ ಜೀರ್ಣೋದ್ಧಾರ ಮತ್ತು ಪುನರ್ಪ್ರತಿಷ್ಠಾಪನೆ ಕಾರ್ಯಕ್ರಮಕ್ಕಾಗಿ ಆರ್ಯವೈಶ್ಯ ಮಂಡಳಿಯಿಂದ ನೀಡಲಾದ ₹1.6 ಲಕ್ಷ ದೇಣಿಗೆಯನ್ನು ಸ್ವೀಕರಿಸಿ ಮಾತನಾಡಿದರು.
“ಈ ದೇವಾಲಯ ನೂರಾರು ವರ್ಷಗಳ ಇತಿಹಾಸ ಹೊಂದಿದ್ದು, ಮುಜರಾಯಿ ಇಲಾಖೆಗೆ ಸೇರಿದರೂ, ಭಕ್ತರು ಮತ್ತು ದಾನಿಗಳ ಸಹಕಾರದಿಂದ ಸಂಪೂರ್ಣ ಕಲ್ಲಿನ ಕಟ್ಟಡವನ್ನು ಪುನರ್ನಿರ್ಮಾಣ ಮಾಡಲಾಗಿದೆ. ಈಗ ದೇವಾಲಯ ಅತ್ಯಂತ ಸುಂದರ ರೂಪ ಪಡೆದುಕೊಂಡಿದೆ,” ಎಂದು ಹೇಳಿದರು.
ನವೆಂಬರ್ 1ರಿಂದ ಮೂರು ದಿನಗಳ ಕಾಲ ನಡೆಯಲಿರುವ ಪುನರ್ಪ್ರತಿಷ್ಠಾಪನೆ ಹಾಗೂ ಜೀರ್ಣೋದ್ಧಾರ ಕಾರ್ಯಕ್ರಮದ ಸಂದರ್ಭದಲ್ಲಿ ಸುಮಾರು 5,000 ಭಕ್ತರಿಗೆ ಪ್ರತಿದಿನ ಪ್ರಸಾದ ಮತ್ತು ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ನಾಗರಾಜ್ ವಿವರಿಸಿದರು. ಭಕ್ತರು ಮತ್ತು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅವರು ಕೋರಿದರು.
ಆರ್ಯವೈಶ್ಯ ಮಂಡಳಿಯ ವತಿಯಿಂದ ₹1.6 ಲಕ್ಷ ದೇಣಿಗೆಯನ್ನು ಮಂಡಳಿ ಅಧ್ಯಕ್ಷ ಮಹೇಶ್ ಬಾಬು, ಕಾರ್ಯದರ್ಶಿ ರೂಪಸಿ ರಮೇಶ್, ವಾಸವಿ ಮಹಿಳಾ ಮಂಡಳಿ ಅಧ್ಯಕ್ಷೆ ಜಯಶ್ರೀ ಕೇದಾರನಾಥ್, ಯುವಜನ ಸಂಘದ ಅಧ್ಯಕ್ಷ ಅರವಿಂದ್, ಹಾಗೂ ಇತರ ಸದಸ್ಯರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಹಲವಾರು ದೇವಾಲಯ ಅಭಿವೃದ್ದಿ ಸಮಿತಿ ಸದಸ್ಯರು ಹಾಗೂ ಭಕ್ತರು ಹಾಜರಿದ್ದರು.
Sidlaghatta, Chikkaballapur : ಶಿಡ್ಲಘಟ್ಟ ತಾಲ್ಲೂಕಿನ ತಲದುಮ್ಮನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ನಲ್ಲಿಗಳ ಮೂಲಕ ಮಣ್ಣು ಮಿಶ್ರಿತ ಹಳದಿ ಬಣ್ಣದ ನೀರು ಪೂರೈಕೆಯಾಗುತ್ತಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ ಇಪ್ಪತ್ತು ದಿನಗಳಿಂದ ಈ ಅಶುದ್ಧ ನೀರು ಪೂರೈಕೆ ಸಮಸ್ಯೆ ಮುಂದುವರಿದಿದ್ದು, ರೇಷ್ಮೆ ಕೃಷಿ ಹಾಗೂ ಹೈನುಗಾರಿಕೆ ಆಧಾರಿತ ಕುಟುಂಬಗಳು ತೀವ್ರ ಸಂಕಷ್ಟ ಅನುಭವಿಸುತ್ತಿವೆ.
ಗ್ರಾಮದ ನಲ್ಲಿಗಳಲ್ಲಿ ಹರಿಯುತ್ತಿರುವ ನೀರಿನಲ್ಲಿ ಮಣ್ಣು, ಹುಳು, ಉಪ್ಪಟೆಗಳು ಕಾಣಿಸುತ್ತಿದ್ದು, ಈ ನೀರನ್ನು ಕುಡಿಯಲು, ಅಡುಗೆಗೆ ಅಥವಾ ಹಸು-ಕುರಿಗಳಿಗೆ ನೀಡಲು ಸಹ ಗ್ರಾಮಸ್ಥರು ಹೆದರುತ್ತಿದ್ದಾರೆ. ಅನಿವಾರ್ಯವಾಗಿ ದಿನನಿತ್ಯದ ಬಳಕೆಗಾಗಿ ಜನರು ₹700 ರೂಪಾಯಿ ನೀಡಿ ಖಾಸಗಿ ಟ್ಯಾಂಕರ್ ನೀರು ಖರೀದಿಸುವಂತಾಗಿದೆ.
ಗ್ರಾಮದ ಹೊರವಲಯದಲ್ಲಿರುವ ಕೊಳವೆಬಾವಿಯ ಪಕ್ಕದಲ್ಲೇ ನೀರಿನ ಕಾಲುವೆ ಮತ್ತು ಹಳ್ಳವಿರುವುದರಿಂದ, ಮಳೆಗಾಲದಲ್ಲಿ ಕಾಲುವೆ ಮತ್ತು ಹಳ್ಳದ ನೀರು ಕೊಳವೆಬಾವಿಗೆ ಸೇರಿ ಮಣ್ಣು ಮತ್ತು ಜೀವಾಣು ಮಿಶ್ರಿತ ನೀರು ನಲ್ಲಿಗಳ ಮೂಲಕ ಪೂರೈಕೆಯಾಗುತ್ತಿದೆ.
ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ಯಾರೂ ಅದನ್ನು ಉಪಯೋಗಿಸುತ್ತಿಲ್ಲ. ಆದರೆ ಹಾಲು ನೀಡುವ ಎಮ್ಮೆ, ಕುರಿ, ಆಕಳುಗಳಿಗೂ ಈ ಅಶುದ್ಧ ನೀರನ್ನೇ ಬಳಸಲಾಗುತ್ತಿದೆ, ಇದು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿಯಾಗಿದೆ.
ಗ್ರಾಮಸ್ಥರು ಈ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ಅನೇಕ ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ. “ನೀರಿನ ಗುಣಮಟ್ಟ ಪರೀಕ್ಷೆ ಮಾಡಿಸಿ ಶುದ್ಧ ನೀರು ಪೂರೈಕೆಯಾಗುವಂತೆ ಕ್ರಮ ಕೈಗೊಳ್ಳಬೇಕು,” ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Sidlaghatta : “ದೀಪಾವಳಿ ಹಬ್ಬವನ್ನು ಸಂಭ್ರಮಿಸುವಾಗ ಪರಿಸರದ ಮೇಲಿನ ಹೊಣೆಗಾರಿಕೆಯನ್ನು ಮರೆಯಬಾರದು. ಪಟಾಕಿ ಸಿಡಿಸುವುದರಿಂದ ಉಂಟಾಗುವ ಅಪಾಯಗಳು ಮತ್ತು ಪರಿಸರದ ದುಷ್ಪರಿಣಾಮಗಳ ಬಗ್ಗೆ ಎಲ್ಲರಿಗೂ ಜಾಗೃತಿ ಮೂಡಿಸಬೇಕು,” ಎಂದು ಉಪ ವಿಭಾಗದ ಡಿವೈಎಸ್ಪಿ ಮುರಳಿಧರ್ ಹೇಳಿದ್ದಾರೆ.
ನಗರದ ಗರುಡಾದ್ರಿ ಶಾಲೆಯ ವಿದ್ಯಾರ್ಥಿಗಳಿಂದ ಶನಿವಾರ ಆಯೋಜಿಸಲಾದ “ಪಟಾಕಿ ದುಷ್ಪರಿಣಾಮಗಳ ಕುರಿತು ಜಾಗೃತಿ ಜಾಥಾ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ಪಟಾಕಿ ಸಿಡಿಸುವುದರಿಂದ ಶಬ್ದ ಮತ್ತು ವಾಯು ಮಾಲಿನ್ಯ ಮಾತ್ರವಲ್ಲದೆ ಪಕ್ಷಿಗಳು, ಪ್ರಾಣಿಗಳು ಹಾಗೂ ಪರಿಸರದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ವಿದ್ಯಾರ್ಥಿಗಳು ಹಸಿರು ದೀಪಾವಳಿ ಆಚರಣೆಗೆ ಮುಂದಾಗಿರುವುದು ಶ್ಲಾಘನೀಯ,” ಎಂದು ಹೇಳಿದರು.
ತಹಶೀಲ್ದಾರ್ ಗಗನ ಸಿಂಧು ಅವರು, “ಪರಿಸರ ಸ್ನೇಹಿ ದೀಪಾವಳಿ ಎಂದರೆ ಸಂತೋಷವನ್ನು ಕಡಿಮೆ ಮಾಡುವುದು ಅಲ್ಲ. ದೀಪಗಳನ್ನು ಹಚ್ಚಿ, ಸಿಹಿ ಹಂಚಿಕೊಂಡು, ಸಮುದಾಯದಲ್ಲಿ ಬೆಳಕು ಚೆಲ್ಲುವ ಮೂಲಕ ಹಬ್ಬದ ನಿಜವಾದ ಅರ್ಥವನ್ನು ಕಾಪಾಡೋಣ. ಪಟಾಕಿ ತ್ಯಜಿಸಿ, ಮಣ್ಣಿನ ದೀಪಗಳಿಂದ ಮನೆಗಳನ್ನು ಬೆಳಗಿಸೋಣ,” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಎಂ. ಶ್ರೀನಿವಾಸ್, ನಗರ ಠಾಣಾ ಪಿಎಸ್ಐ ವೇಣುಗೋಪಾಲ್, ಗರುಡಾದ್ರಿ ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.