Sidlaghatta, Chikkaballapur : ವರದಕ್ಷಿಣೆ ಕಿರುಕುಳದಿಂದ ನವವಿವಾಹಿತೆ ಆತ್ಮಹತ್ಯೆಗೆ ಶಂಕಿತ ಸಂಪರ್ಕವಿರುವ ಆರೋಪದ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಕಲಾವತಿ ವಿರುದ್ಧ ಗ್ರಾಮಸ್ಥರು ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಿದ್ದಾರೆ.
ರಾಮಲಿಂಗಾಪುರ ಗ್ರಾಮದ 50ಕ್ಕೂ ಹೆಚ್ಚು ಮಂದಿ ಚಿಕ್ಕಬಳ್ಳಾಪುರ ಮಾರ್ಗದಲ್ಲಿರುವ ಸಿಡಿಪಿಒ (CDPO) ಕಚೇರಿಗೆ ಆಗಮಿಸಿ, ಕಲಾವತಿ ವಿರುದ್ಧ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಗ್ರಾಮದ ನವವಿವಾಹಿತೆ ಶಿರಿಷ ವರದಕ್ಷಿಣೆ ಕಿರುಕುಳದಿಂದ ಜೀವ ಬಲಿದಾನ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಅವರು ಮುಂದುವರಿದು, “ಕಲಾವತಿ ಸರಿಯಾಗಿ ಅಂಗನವಾಡಿ ಕೇಂದ್ರಕ್ಕೆ ಹಾಜರಾಗುವುದಿಲ್ಲ. ಪೌಷ್ಟಿಕ ಆಹಾರ, ಮೊಟ್ಟೆ ಮತ್ತು ಇತರೆ ಪರಿಕರಗಳನ್ನು ಸಮಯಕ್ಕೆ ಸರಿಯಾಗಿ ಹಾಗೂ ಅರ್ಹ ಫಲಾನುಭವಿಗಳಿಗೆ ವಿತರಿಸುತ್ತಿಲ್ಲ. ಈ ವಿಷಯವನ್ನು ಪ್ರಶ್ನಿಸಿದರೆ ನಮ್ಮ ವಿರುದ್ಧ ಪಿತೂರಿ ನಡೆಸುತ್ತಾರೆ” ಎಂದು ಹೇಳಿದರು.
ಅವರು ಕಲಾವತಿ ವಿರುದ್ಧ ಹಲವು ದೂರುಗಳು ದಾಖಲಾಗಿವೆ ಮತ್ತು ನ್ಯಾಯಾಲಯ ಹಾಜರಾತಿಗೆ ಹೆಸರಿನಲ್ಲಿ ಕೆಲಸಕ್ಕೆ ಹಾಜರಾಗದೆ ಇಲಾಖೆಗೆ ತಪ್ಪು ಮಾಹಿತಿ ನೀಡುತ್ತಾರೆ ಎಂಬ ಆರೋಪವನ್ನೂ ಮಾಡಿದರು. ಗ್ರಾಮಸ್ಥರು ಕಲಾವತಿಯನ್ನು ಕೆಲಸದಿಂದ ವಜಾ ಮಾಡಲು ಸಿಡಿಪಿಒಗೆ ಮನವಿ ಸಲ್ಲಿಸಿದರು.
ಮನವಿಯನ್ನು ಸ್ವೀಕರಿಸಿದ ಸಿಡಿಪಿಒ ವಿದ್ಯಾ ವಸ್ತ್ರದ್ ಅವರು, “ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಲಾಖೆ ತನಿಖೆಯ ವರದಿ ಪಡೆಯುತ್ತೇನೆ. ನೀವು ಉಲ್ಲೇಖಿಸಿದ ಇತರ ಆರೋಪಗಳ ಕುರಿತು ಸಂಪೂರ್ಣ ತನಿಖೆ ನಡೆಸಿ, ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು,” ಎಂದು ಭರವಸೆ ನೀಡಿದರು.
Sidlaghatta, Chikkaballapur District : ಶಿಡ್ಲಘಟ್ಟ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ನಡೆಯುತ್ತಿರುವ ನರೇಗಾ ಹಾಗೂ ವಿವಿಧ ಸರ್ಕಾರಿ ಯೋಜನೆಗಳ ಕಾಮಗಾರಿಗಳನ್ನು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅತೀಕ್ ಪಾಷಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಳಮಾಚನಹಳ್ಳಿ, ತಾದೂರು, ನಾಗಮಂಗಲ, ಜಂಗಮಕೋಟೆ ಹಾಗೂ ಕುಂಭಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳಾದ ಎನ್ಆರ್ಎಲ್ಎಂ ಕಟ್ಟಡ, ಡಿಜಿಟಲ್ ಲೈಬ್ರರಿ, ಸಭಾಂಗಣ, ಮಾದರಿ ಅಂಗನವಾಡಿ ಕೇಂದ್ರ, ಮಳೆನೀರು ಕೊಯ್ಲು ಯೋಜನೆಗಳು ಹಾಗೂ ಉದ್ಯಾನವನಗಳ ನಿರ್ಮಾಣ ಕಾರ್ಯಗಳನ್ನು ಅವರು ಸ್ಥಳದಲ್ಲಿ ಪರಿಶೀಲಿಸಿದರು.
ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ನೀಡಲಾಗುವ ಆಹಾರ ಗುಣಮಟ್ಟವನ್ನು ಕಾಪಾಡಬೇಕು ಎಂಬ ಸೂಚನೆಯನ್ನು ಅತೀಕ್ ಪಾಷಾ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ವಿವಿಧ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರು, ಜಿಲ್ಲಾ ಯೋಜನಾ ಅಧಿಕಾರಿಗಳು ಹಾಗೂ ಎಂಜಿನಿಯರು ಸೇರಿದಂತೆ ಹಲವರು ಹಾಜರಿದ್ದರು.
Malamachanahalli, Sidlaghatta, chikkaballapur : ಗ್ರಾಮೀಣ ಜೀವನದ ಪ್ರಮುಖ ಆಧಾರವಾದ ಹೈನುಗಾರಿಕೆಯನ್ನು ಕ್ರಮಬದ್ಧ ಮತ್ತು ವೈಜ್ಞಾನಿಕ ರೀತಿಯಲ್ಲಿ ನಡೆಸಿದರೆ ಮಾತ್ರ ಸ್ಥಿರ ಲಾಭ ದೊರೆಯುತ್ತದೆ. ಇಲ್ಲವಾದಲ್ಲಿ ನಷ್ಟಗಳ ಸರಮಾಲೆಯೇ ಎದುರಾಗುತ್ತದೆ ಎಂದು ಕೆಎಂಎಫ್ ನಿವೃತ್ತ ವ್ಯವಸ್ಥಾಪಕ ಡಾ. ರಾಘವನ್ ತಿಳಿಸಿದರು.
ತಾಲ್ಲೂಕಿನ ಮಳಮಾಚನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ವತಿಯಿಂದ ಆಯೋಜಿಸಲಾದ ಪಶು ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಗ್ರಾಮೀಣರು ಹೈನುಗಾರಿಕೆಯಿಂದಲೇ ತಮ್ಮ ದಿನನಿತ್ಯದ ಆರ್ಥಿಕ ಅವಶ್ಯಕತೆಗಳನ್ನು ಪೂರೈಸುತ್ತಿದ್ದಾರೆ. ಆದರೆ ಜಾನುವಾರುಗಳಿಗೆ ತಗುಲುವ ಸಾಂಕ್ರಾಮಿಕ ರೋಗಗಳ ಬಗ್ಗೆ ಮುಂಚಿತ ಎಚ್ಚರಿಕೆ ಇರದಿದ್ದರೆ, ಅದರಿಂದ ಉಂಟಾಗುವ ನಷ್ಟ ಅತೀವ ಗಂಭೀರವಾಗಿರುತ್ತದೆ. ಹೀಗಾಗಿ ಉಚಿತ ಪಶು ಆರೋಗ್ಯ ಶಿಬಿರಗಳನ್ನು ರೈತರು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಬೇಕು,” ಎಂದು ಅವರು ಸಲಹೆ ನೀಡಿದರು.
ಶಿಬಿರದಲ್ಲಿ ಫಲಕಚ್ಚದ, ಗೊಡ್ಡು ಬೀಳುವ ರಾಸುಗಳು, ಗರ್ಭಕೋಶದ ತೊಂದರೆಗಳು, ಮತ್ತು ಪೌಷ್ಠಿಕ ಕೊರತೆಗಳು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡಲಾಯಿತು. ರೈತರಿಗೆ ಪಶುಪಾಲನಾ ಕ್ರಮಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾರ್ಗದರ್ಶನ ನೀಡಲಾಯಿತು.
ಒಟ್ಟು 50ಕ್ಕೂ ಹೆಚ್ಚು ರಾಸುಗಳಿಗೆ ತಪಾಸಣೆ ನಡೆಸಿ ಅಗತ್ಯ ಔಷಧಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ಬಿ.ಆರ್. ರವಿಕಿರಣ್ (ಶಿಡ್ಲಘಟ್ಟ ಶಿಬಿರ ಕಚೇರಿ ವ್ಯವಸ್ಥಾಪಕ), ಡಾ. ಹರೀಶ್, ವಿಸ್ತರಣಾಧಿಕಾರಿ ಶ್ರೀನಿವಾಸ್, ಎಂ. ವಿನಯ್ (ಕಾರ್ಯನಿರ್ವಹಣಾಧಿಕಾರಿ), ಮಾಜಿ ಅಧ್ಯಕ್ಷ ರಾಮಚಂದ್ರಾಚಾರಿ, ಕೇಶವಮೂರ್ತಿ, ಮತ್ತು ಡೈರಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Sidlaghatta, Chikkaballapur District : ನಗರದ ವ್ಯಾಪ್ತಿಯ 31 ವಾರ್ಡುಗಳಲ್ಲಿ ಮಳೆಯಿಂದಾಗಿ ಉಂಟಾದ ಯಾವುದೇ ಸಮಸ್ಯೆಗಳಿದ್ದರೆ ತಕ್ಷಣ ನಗರಸಭೆಯ ಗಮನಕ್ಕೆ ತರಬೇಕು, ನಾಗರಿಕರ ಅಸೌಕರ್ಯ ನಿವಾರಣೆಗಾಗಿ ನಾವು ಸದಾ ಸಿದ್ಧವಿದ್ದೇವೆ ಎಂದು ನಗರಸಭೆ ಪೌರಾಯುಕ್ತೆ ಜಿ. ಅಮೃತ ಹೇಳಿದರು.
ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ವಿಜಯಲಕ್ಷ್ಮಿ ವೃತ್ತ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ನೀರು ಸರಾಗವಾಗಿ ಹರಿಯದ ತೊಂದರೆ ಉಂಟಾದ ಹಿನ್ನೆಲೆಯಲ್ಲಿ, ಅವರು ಸಿಬ್ಬಂದಿಯೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.
ಪರಿಶೀಲನೆಯ ವೇಳೆ ನಾಗರಿಕರು, “ವಿಜಯಲಕ್ಷ್ಮಿ ವೃತ್ತದ ಬಳಿಯ ರಾಜಕಾಲುವೆ ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ, ಇದರಿಂದ ಮಳೆ ಬಂದಾಗ ನೀರು ನಿಲ್ಲುತ್ತದೆ ಮತ್ತು ಜನಜೀವನ ಅಸ್ತವ್ಯಸ್ತವಾಗುತ್ತದೆ” ಎಂದು ದೂರು ಸಲ್ಲಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಪೌರಾಯುಕ್ತೆ ಜಿ. ಅಮೃತ “ರಾಜಕಾಲುವೆ ಅಥವಾ ಚರಂಡಿಗಳ ಮೇಲೆ ಅಕ್ರಮ ನಿರ್ಮಾಣ ಮಾಡಿದರೆ, ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಮತ್ತು ಅವರ ನಿರ್ದೇಶನದಂತೆ ತೆರವು ಕ್ರಮ ಕೈಗೊಳ್ಳಲಾಗುತ್ತದೆ. ನಾಗರಿಕರು ಸಹಕರಿಸಬೇಕು,” ಎಂದು ಅವರು ತಿಳಿಸಿದರು.
ಅವರು ಮುಂದುವರೆದು, “ಮನೆ ಮತ್ತು ಅಂಗಡಿಗಳ ತ್ಯಾಜ್ಯವನ್ನು ರಸ್ತೆಯ ಮೇಲೆ ಅಥವಾ ಚರಂಡಿಗಳಲ್ಲಿ ಸುರಿಯಬಾರದು, ಬದಲಾಗಿ ನಗರಸಭೆಯ ತ್ಯಾಜ್ಯ ಸಂಗ್ರಹಣಾ ವಾಹನಗಳಿಗೆ ನೀಡಬೇಕು. ಸ್ವಚ್ಛ ನಗರ – ನಮ್ಮೆಲ್ಲರ ಜವಾಬ್ದಾರಿ,” ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಸ್ಥಳದಲ್ಲಿದ್ದ ನಗರಸಭೆ ಅಧ್ಯಕ್ಷ ಎಂ.ವಿ. ವೆಂಕಟಸ್ವಾಮಿ, ಸದಸ್ಯರು ನಾರಾಯಣಸ್ವಾಮಿ, ಮಂಜುನಾಥ್ (ಬಸ್), ಆರೋಗ್ಯ ನಿರೀಕ್ಷಕ ನರೇಶ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
Sidlaghatta : ಶಿಡ್ಲಘಟ್ಟ ನಗರ ಹಾಗೂ ತಾಲ್ಲೂಕು ಪ್ರದೇಶಗಳಲ್ಲಿ ನಡೆಯುತ್ತಿರುವ ಜಾತಿ ಗಣತಿ ಕಾರ್ಯದಲ್ಲಿ ಅಸಮರ್ಪಕತೆ ಕಂಡುಬಂದಿದ್ದು, ಅಧಿಕಾರಿಗಳು ಒಂದೇ ಮನೆಗೆ 4-5 ಬಾರಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿರುವುದು ನಾಗರಿಕರಲ್ಲಿ ಅಸಮಾಧಾನ ಮೂಡಿಸುವುದರೊಂದಿಗೆ ಅನುಮಾನಕ್ಕೂ ಕಾರಣವಾಗಿದೆ.
ಜನರ ಮಾಹಿತಿಯನ್ನು ಸಂಗ್ರಹಿಸಲು ನೇಮಿಸಲಾದ ಗಣತಿದಾರರು ಹಾಗೂ ಅಧಿಕಾರಿಗಳು ನಿಗದಿತ ಸಮಯವಿಲ್ಲದೆ ಸಂಜೆ, ರಾತ್ರಿ ವೇಳೆಯಲ್ಲಿಯೂ ಮನೆ ಮನೆಗೆ ತೆರಳುತ್ತಿರುವುದರಿಂದ ಸಾರ್ವಜನಿಕರು ಅಸೌಕರ್ಯ ಅನುಭವಿಸುತ್ತಿದ್ದಾರೆ. ಕೆಲವರು ಗಣತಿದಾರರು ಎಂದು ಹೇಳಿಕೊಂಡು ಹಾಳೆ, ಪುಸ್ತಕ ಹಿಡಿದು ಬಂದು ಮಾಹಿತಿ ಪಡೆಯುವುದು, ಕೆಲವೊಮ್ಮೆ ರಾತ್ರಿ ವೇಳೆ ಗಣತಿದಾರರೆಂದು ಬಂದು, ಹಿಂದೆ ಮಾಡಿದವರು ಗಣತಿ ಸರಿಯಾಗಿ ಮಾಡಿಲ್ಲ, ಮತ್ತೆ ಗಣತಿ ಮಾಡಬೇಕೆಂದು ಒಂದೇ ಮಾಹಿತಿಯನ್ನು ಪುನಃ ಪುನಃ ಕೇಳುತ್ತಿರುವುದು ಜನರಲ್ಲಿ ಕಸಿವಿಸಿಯನ್ನು ಉಂಟುಮಾಡುತ್ತಿರುವುದಲ್ಲದೆ, ಗಣತಿದಾರರೆಂದು ಹೇಳಿಕೊಂಡು ಬರುವವರು ತಮ್ಮ ಗುರುತಿನ ಚೀಟಿ ಕೇಳಿದರೆ ತೋರಿಸದೆ ಇರುವುದು ಜನರ ಅನುಮಾನಗಳಿಗೂ ಕಾರಣವಾಗುತ್ತಿದೆ.
ಮಹಿಳೆಯರು ಮನೆಗಳಲ್ಲಿ ಒಬ್ಬಂಟಿಯಾಗಿ ಇರುವ ವೇಳೆ ನಿಗದಿತ ಸಮಯ ಅಥವಾ ಮಾಹಿತಿ ಇಲ್ಲದೆ ಹೀಗೆ ಮನೆಗಳಿಗೆ ವಿವರವನ್ನು ಕೇಳಲು ಬರುವುದು, ಈಗಾಗಲೇ ನಾವು ಮಾಹಿತಿ ನೀಡಿದ್ದೇವೆ ಎಂದರೂ ಕೇಳದೆ ಮತ್ತೆ ವಿವರವನ್ನು ನೀಡಬೇಕು ಎಂದು ಹೆದರಿಸುವುದು ಆತಂಕಕ್ಕೆ ಕಾರಣವಾಗಿದೆ.
ಈಗಾಗಲೇ ಜಾತಿ ಗಣತಿಯ ಕಾರ್ಯ ಬಹುತೇಕ ಪೂರ್ಣಗೊಂಡಿದೆ, ಉಳಿದ ಮನೆಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ತಹಸೀಲ್ದಾರ್ ಗಗನ ಸಿಂಧು ಮಾಹಿತಿ ನೀಡಿದ್ದು, ಈಗಾಗಲೇ ಗಣತಿ ಮುಗಿದಿರುವ ಮನೆಗಳಿಗೆ ಪುನಃ ಪುನಃ ಗಣತಿದಾರರು ಭೇಟಿ ನೀಡುವುದು ಅಸಮರ್ಪಕತೆಯನ್ನು ತೋರಿಸುತ್ತಿದೆ.
ಏತನ್ಮಧ್ಯೆ ಶಿಡ್ಲಘಟ್ಟ ನಗರ ಭಾಗದಲ್ಲಿ, ನಗರಸಭೆಯಿಂದ ಇನ್ನೊಂದು ಗಣತಿ ನಡೆಯುತ್ತಿದೆ ಎಂದು ಯಾವುದೇ ಪೂರ್ವ ಮಾಹಿತಿ ನೀಡದೆ ಅಧಿಕಾರಿಗಳು ಮನೆ, ಮನೆಗೆ ಭೇಟಿ ಕೊಡುತ್ತಿರುವುದು ಮತ್ತಷ್ಟು ಗೊಂದಲಗಳಿಗೆ ಕಾರಣವಾಗಿದೆ.
“ಒಮ್ಮೆಲೇ ಸಂಪೂರ್ಣ ಮಾಹಿತಿ ತೆಗೆದುಕೊಂಡು ದಾಖಲೆ ಮಾಡಬಹುದಿತ್ತು. ಆದರೆ, ಪ್ರತಿ ಬಾರಿ ಬೇರೆಯವರು ಬಂದು ಅದೇ ಪ್ರಶ್ನೆಗಳನ್ನು ಕೇಳುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ, ನಾವು ಕೆಲಸಕ್ಕೆ ಅಥವಾ ಹೊರಗೆ ಹೋದಾಗ ಮನೆಯಲ್ಲಿ ತಾಯಿ, ಪತ್ನಿ – ಹೆಂಗಸರು ಒಂಟಿಯಾಗಿ ಇರುತ್ತಾರೆ, ಹೊತ್ತು, ಗೊತ್ತು ಇಲ್ಲದೆ 8 ಗಂಟೆಯ ನಂತರವೂ ಬಂದು ಮಾಹಿತಿ ನೀಡಬೇಕೆಂದು ಒತ್ತಾಯಿಸುವುದು ಸುರಕ್ಷತೆ ಬಗ್ಗೆ ಪ್ರಶ್ನೆ ಎತ್ತುತ್ತದೆ. ಈಗಾಗಲೇ 3-4 ಬಾರಿ ಮಾಹಿತಿ ನೀಡಿದ್ದರೂ ನಗರಸಭೆಯಿಂದ ಎಂದು ಹೇಳಿಕೊಂಡು ಮತ್ತೆ ವಿವರ ಸಂಗ್ರಹಿಸುತ್ತಿರುವುದು ಯಾಕೆ? ಈಗ ಎಷ್ಟು ಗಣತಿ ಕಾರ್ಯಗಳು ನಡೆಯುತ್ತಿವೆ?” ಎಂದು ನಗರದ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಗಣತಿ ಕಾರ್ಯದಲ್ಲಿ ತಾಂತ್ರಿಕ ದೋಷಗಳು, ದಾಖಲೆಗಳ ಸಂಗ್ರಹಣೆಯಲ್ಲಿ ಅಸಂಗತತೆ ಹಾಗೂ ತರಬೇತಿ ಕೊರತೆಯೂ ಕಾರ್ಯದ ನಿಧಾನಗತಿಗೆ ಕಾರಣವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಪ್ರತಿ ಕುಟುಂಬದ ಮಾಹಿತಿಯನ್ನು ನಿಖರವಾಗಿ ದಾಖಲು ಮಾಡುವ ಉದ್ದೇಶದಿಂದ ಗಣತಿ ಪ್ರಕ್ರಿಯೆ ನಡೆಯುತ್ತಿದ್ದರೂ, ನಿರ್ವಹಣಾ ದೋಷ, ಸುರಕ್ಷತೆಯ ಅಭಾವದಿಂದ ಸಾರ್ವಜನಿಕರ ಸಹಕಾರದ ಕುಗ್ಗುತ್ತಿರುವುದು ಆಡಳಿತಾಧಿಕಾರಿಗಳು ಗಮನ ನೀಡಬೇಕಿದೆ. ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ, ಗಣತಿ ಕಾರ್ಯವನ್ನು ಸಮರ್ಪಕವಾಗಿ ನಡೆಸಲು ಕ್ರಮ ಕೈಗೊಳ್ಳಬೇಕೆಂದು ನಾಗರೀಕರು ಆಗ್ರಹಿಸಿದ್ದಾರೆ.
Sidlaghatta : ಶಿಡ್ಲಘಟ್ಟ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ ಅವರು ಕಾಂಗ್ರೆಸ್ ವಿರುದ್ಧ ಕಿಡಿ ಹೊತ್ತಿಸಿದರು. “ಮೇಕ್ ಇನ್ ಇಂಡಿಯಾ” ಮತ್ತು “ವೋಕಲ್ ಫಾರ್ ಲೋಕಲ್” ಯೋಜನೆಗಳು ದೇಶದ ರಕ್ಷಣಾ ವಲಯವನ್ನು ಬಲಪಡಿಸಿ ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸುತ್ತಿವೆ ಎಂದು ಹೇಳಿದರು.
ಅವರು ಕಾಂಗ್ರೆಸ್ ಪಕ್ಷದ ನಾಯಕರನ್ನು ಟೀಕಿಸಿ — “ಆರೆಸ್ಸೆಸ್ ನಿಷೇಧದ ಕನಸು ಕಾಣುವುದು ವ್ಯರ್ಥ. ಇಂದಿರಾ ಗಾಂಧಿ, ನೆಹರು ಅವರಿಂದಲೂ ಆಗಲಿಲ್ಲ, ಈಗ ನಿಮಗೆ ಹೇಗೆ ಸಾಧ್ಯ?” ಎಂದು ವ್ಯಂಗ್ಯವಾಡಿದರು. ಮುಸ್ಲೀಮರನ್ನು ಓಲೈಸುವ ರಾಜಕಾರಣಕ್ಕಾಗಿ ಹಿಂದೂಧರ್ಮದ ವಿರುದ್ಧ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಈ ತಿಂಗಳ 19 ರಂದು ಶಿಡ್ಲಘಟ್ಟದಲ್ಲಿ ಆರ್.ಎಸ್.ಎಸ್ ಪಥಸಂಚಲನ ನಡೆಯಲಿದ್ದು, ದೇಶಾಭಿಮಾನಿಗಳು ಹಾಗೂ ಹಿಂದೂಗಳು ಭಾಗವಹಿಸುವಂತೆ ಅವರು ಕರೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳೀಧರ್, ಕಾರ್ಯದರ್ಶಿ ಅಶ್ವತ್ಥ್, ಮಧುಚಂದ್ರ, ಡಾ.ಸತ್ಯನಾರಾಯಣರಾವ್, ಕನಕಪ್ರಸಾದ್ ಮತ್ತು ನರೇಶ್ ಉಪಸ್ಥಿತರಿದ್ದರು.
Sidlaghatta : ನಗರೋತ್ಥಾನ ಹಂತ–4ರ ಅನುದಾನದಲ್ಲಿ ಶಿಡ್ಲಘಟ್ಟ ನಗರದ ಚಿಂತಾಮಣಿ ರಸ್ತೆಯ ಟೋಲ್ಗೇಟ್ ಬಳಿಯ ರಾಜಕಾಲುವೆ ದುರಸ್ತಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ಮಂಗಳವಾರ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲಿಸಿದರು.
ರಾಜಕಾಲುವೆಗೆ ಸಿಮೆಂಟ್ ನೆಲಹಾಸು ಹಾಗೂ ತಡೆಗೋಡೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಕಾಮಗಾರಿ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಜೊತೆಗೆ ಸಮಯಕ್ಕೆ ಮುಗಿಸುವಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಡಿಸಿ ಸೂಚನೆ ನೀಡಿದರು.
ಈ ವೇಳೆ ಸ್ಥಳೀಯ ನಿವಾಸಿಗಳು ಜಿಲ್ಲಾಧಿಕಾರಿಯವರ ಗಮನಕ್ಕೆ ಹಲವು ಸಮಸ್ಯೆಗಳನ್ನು ತಂದರು. ರಾಜಕಾಲುವೆಯ ಒಂದು ಬದಿಯಲ್ಲಿ ಸುಮಾರು ಎಂಟು ಮನೆಗಳಿದ್ದು, ಹಳೆಯ ಮೋರಿ ತೆಗೆದುಹಾಕಲ್ಪಟ್ಟಿರುವುದರಿಂದ ಸಂಚಾರಕ್ಕೆ ಅಡಚಣೆ ಉಂಟಾಗಿದೆ ಎಂದು ಅವರು ಅಹವಾಲು ನೀಡಿದರು.
“ನಾವು ಕಾಲುವೆ ಮೇಲೆ ನಿರ್ಮಿಸಿದ್ದ ಮೋರಿಯ ಮೂಲಕವೇ ಓಡಾಡುತ್ತಿದ್ದೆವು. ಈಗ ಅದು ತೆರವುಗೊಳಿಸಲಾಗಿದ್ದು, ಹೊಸದಾಗಿ ಮೋರಿ ನಿರ್ಮಿಸಲು ನಗರಸಭೆ ಅಧಿಕಾರಿಗಳು ಅನುಮತಿ ಇಲ್ಲವೆಂದಿದ್ದಾರೆ. ಹೀಗಾಗಿ ನಮ್ಮ ಮನೆಗಳಿಗೆ ಹೋಗಲು ದಾರಿಯೇ ಉಳಿದಿಲ್ಲ,” ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು, “ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ನಿಮ್ಮ ಅಹವಾಲು ಆಲಿಸಿದ್ದೇನೆ. ಸ್ಥಳಪರಿಸ್ಥಿತಿಯನ್ನು ಪರಿಶೀಲಿಸಿ, ತಾಂತ್ರಿಕ ಸಾಧ್ಯತೆಗಳ ಅನ್ವಯ ಅನುಕೂಲಕರ ಕ್ರಮ ಕೈಗೊಳ್ಳಲು ಪೌರಾಯುಕ್ತರು ಹಾಗೂ ಇಂಜಿನಿಯರ್ಗಳಿಗೆ ಸೂಚಿಸುತ್ತೇನೆ,” ಎಂದು ಭರವಸೆ ನೀಡಿದರು.
ಈ ವೇಳೆ ಪೌರಾಯುಕ್ತೆ ಜಿ. ಅಮೃತ ಮತ್ತು ಜೆಇ ಚಕ್ರಪಾಣಿ ಸೇರಿದಂತೆ ನಗರಸಭೆಯ ಅಧಿಕಾರಿಗಳು ಹಾಜರಿದ್ದರು.