ನಮ್ಮ ದೇಶದಲ್ಲೀಗ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕುತ್ತು ಬರುತ್ತಿದೆ ಎಂದು ಅಖಿಲ ಭಾರತ ರಾಷ್ಟ್ರ ಸೇವಾದಳ ಅಧ್ಯಕ್ಷ ಡಾ.ಸುರೇಶ್ ಖೈರ್ನಾರ್ ತಿಳಿಸಿದರು.
ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ. ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಬಿಎಂವಿ ಪ್ರೌಢಶಾಲೆಯ ರಾಷ್ಟ್ರ ಸೇವಾದಳ ಸೇನಾನಿಗಳ ಸಮಾವೇಶ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಸುವಿನ ಹೆಸರಿನಲ್ಲಿ ತಲೆಯ ಮೇಲಿನ ಟೋಪಿ ವಿಚಾರದಲ್ಲಿ, ಗಡ್ಡದ ಕುರಿತಾಗಿ, ಮನೆಯಲ್ಲಿ ತಯಾರಾಗುವ ಅಡುಗೆಯ ಬಗ್ಗೆ, ಕೊನೆಗೆ ಬಾಲಿವುಡ್ ನಲ್ಲಿ ತಯಾರಾದ ಚಲನಚಿತ್ರ ಪದ್ಮಾವತಿ ಕುರಿತಾಗಿಯೂ ಅನಗತ್ಯ ವಿವಾದ ಸೃಷ್ಟಿಸಲಾಗುತ್ತಿದೆ. ನನಗೆ ವೈಯಕ್ತಿಕವಾಗಿ ಬಾಲಿವುಡ್ ಚಲನಚಿತ್ರಗಳ ಬಗ್ಗೆ ಆಸಕ್ತಿಯಿಲ್ಲ. ಆದರೆ, ಪದ್ಮಾವತಿ ಚಲನಚಿತ್ರದ ವಿರುದ್ಧ ನಡೆದಿರುವ ವಿವಾದಕ್ಕೆ ಪ್ರತಿಕ್ರಿಯೆಯಾಗಿ, ಗೋವಾದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಬಾಲಿವುಡ್ ಒಗ್ಗಟ್ಟಿನಿಂದ ಬಹಿಷ್ಕರಿಸಿರುವುದನ್ನು ಅಭಿನಂದಿಸುತ್ತೇನೆ ಎಂದರು.
ಪ್ರಜಾಪ್ರಭುತ್ವದಲ್ಲಿ ಮಾಧ್ಯಮದ ಪಾತ್ರ ಬಹುದೊಡ್ಡದು. ರಾಣಾ ಅಯ್ಯುಬ್ ಎಂಬಾಕೆ ರಚಿಸಿರುವ ‘ಗುಜರಾತ್ ಫೈಲ್ಸ್’ ಕೃತಿಯನ್ನು ನಾನು ಸದಾ ಜೊತೆಗಿರಿಸಿಕೊಂಡಿರುತ್ತೇನೆ. ತನಿಖಾ ಪತ್ರಿಕೋದ್ಯಮದ ಮಾಸ್ಟರ್ ಪೀಸ್ ಈ ಕೃತಿ. ಮುಚ್ಚಿಟ್ಟ ಸತ್ಯಗಳನ್ನು ಇದರಲ್ಲಿ ತೆರೆದಿಡಲಾಗಿದೆ ಎಂದರು.
ಬಿ.ಎಂ.ವಿ. ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಲ್.ಕಾಳಪ್ಪ ಮಾತನಾಡಿ, ಗ್ರಾಮೋದ್ಧಾರವು ಗಾಂಧೀಜಿಯ ಕನಸಾಗಿತ್ತು. ಗ್ರಾಮಗಳನ್ನು ಸಶಕ್ತಗೊಳಿಸುವುದು ನಮ್ಮ ಸಂವಿಧಾನದ ಮೂಲ ಆಶವಾಗಿದೆ. ಅದೇ ಆಶಯಗಳನ್ನು ರಾಷ್ಟ್ರ ಸೇವಾದಳ ಅಳವಡಿಸಿಕೊಂಡಿದೆ. ಪ್ರತಿವರ್ಷವೂ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ರಾಷ್ಟ್ರ ಸೇವಾದಳದ ಶಿಬಿರವನ್ನು ನಡೆಸುತ್ತೇವೆ. ದೈಹಿಕ ಕಸರತ್ತು, ಯೋಗ, ಪ್ರಾರ್ಥನೆ, ಆಟಪಾಠಗಳು, ಹಾಡುಗಳು, ನೃತ್ಯ, ಕಥೆ ಹೇಳುವುದು, ಉಪನ್ಯಾಸ, ಸಂವಾದ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ದೇಶ ಪ್ರೇಮ ಮೂಡಿಸಿ, ವ್ಯಕ್ತಿತ್ವ ರೂಪಿಸುತ್ತಿರುವುದಾಗಿ ಹೇಳಿದರು.
ವಿದ್ಯಾರ್ಥಿಗಳು ರಾಷ್ಟ್ರ ಸೇವಾದಳದ ಶಿಬಿರದಲ್ಲಿ ಕಲಿತಿದ್ದ ವ್ಯಾಯಾಮಗಳನ್ನು ಪ್ರದರ್ಶಿಸಿ, ಗೀತೆಗಳನ್ನು ಒಗ್ಗೂಡಿ ಹಾಡಿದರು.
ಬಿ.ಎಂ.ವಿ. ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ವಿ.ಮುನೇಗೌಡ, ರಾಷ್ಟ್ರ ಸೇವಾದಳದ ಪ್ರಧಾನ ಕಾರ್ಯದರ್ಶಿ ಬಾಬಾ ಸಾಹೇಬ್ ನಡಾಫ್, ಸಮಾಜವಾದಿ ಅಧರ್ಯಯನ ಕೇಂದ್ರದ ಬಾಬು ಹೆದ್ದೂರು ಶೆಟ್ಟಿ, ಪ್ರೊ.ಹನುಮಂತ, ಜಿ.ಎಸ್.ಸುಂದರ್, ಪ್ರೊ.ನಾಗರಾಜ್, ಆಶಾ ಮಲಾಟ್ಕರ್, ನಾಗರಾಜ್ ಬೇಲೂರು, ಅಪ್ಪಾಸಾಬ್ ಯರ್ನಾಳ್, ಡಾ.ಎಸ್.ಬಿ.ರವಿಕಲಾ ಕಾಳಪ್ಪ, ಅಂಬಿಕಾ, ದೇವರಾಜ್, ಚಿದಾನಂದ ಹಾಜರಿದ್ದರು.
- Advertisement -
- Advertisement -
- Advertisement -
- Advertisement -