ಉತ್ತರ ಅಮೇರಿಕದ ‘ನಾವಿಕ’ (ನಾವು ವಿಶ್ವ ಕನ್ನಡಿಗರು) ಸಂಘಟನೆಯ 3ನೆಯ ದ್ವೈವಾರ್ಷಿಕ ಸಮ್ಮೇಳನ ನಾರ್ತ್ ಕೆರೊಲೈನ ರಾಜ್ಯದ ರಾಜಧಾನಿ ‘ರಾಲಿ’ಯಲ್ಲಿ ಸೆಪ್ಟೆಂಬರ್ 4,5,6ರಂದು ‘ವೈಭವ ವೈವಿಧ್ಯ ವಿನೂತನ’ ಎಂಬ ಆಶಯ ಇಟ್ಟುಕೊಂಡು ಜರುಗಿತು.
ಸುಮಾರು 1500ರಷ್ಟು ಸಂಖ್ಯೆಯಲ್ಲಿ ಕನ್ನಡಿಗರು ಸೇರಿದ್ದ ಈ ಸಮ್ಮೇಳನದಲ್ಲಿ ತಾಲ್ಲೂಕಿನ ಪಿಂಡಿಪಾಪನಹಳ್ಳಿಯ ನಾಡೋಜ ಮುನಿವೆಂಕಟಪ್ಪ ಮತ್ತು ತಂಡದವರ ತಮಟೆ ವಾದನ ವಿಶೇಷ ಆಕರ್ಷಣೆಯಾಗಿತ್ತು. ಮೂರು ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲ ‘ರಾಲಿ ಕನ್ವೆನ್ಷನ್ ಸೆಂಟರ್’ನಲ್ಲಿ ನಡೆಯಿತು. ಪಿಂಡಿಪಾಪನಹಳ್ಳಿಯ ನಾಡೋಜ ಮುನಿವೆಂಕಟಪ್ಪ, ಪ್ರಸನ್ನಕುಮಾರ್, ಮಧು, ದೇವರಮಳ್ಳೂರು ಮುನಿಯಪ್ಪ, ಶ್ರೀನಿವಾಸಪುರ ವೆಂಕಟೇಶಪ್ಪ ನಮ್ಮ ದೇಸೀಯ ಸೊಗಡು ಮತ್ತು ಸೊಬಗನ್ನು ಆವಾಹಿಸಿಕೊಂಡಿರುವ ಗಂಡುಕಲೆ ತಮಟೆ ವಾದನವನ್ನು ಸಮ್ಮೇಳನದಲ್ಲಿ ಪ್ರತಿಧ್ವಿನಿಸಿ ಅನಿವಾಸಿ ಕನ್ನಡಿಗರನ್ನು ಕುಣಿಸಿದ್ದಾರೆ.
ಕರ್ನಾಟಕ ಸರ್ಕಾವು ಕಲಾವಿದರನ್ನು ಮತ್ತು ಸರ್ಕಾರದ ಪ್ರತಿನಿಧಿಯಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಡಾ. ಎಲ್. ಹನುಮಂತಪ್ಪ ಅವರೊಂದಿಗೆ ಕಳುಹಿಸುವಾಗ ಕೆಲ ಕಲಾವಿದರಿಗೆ ವಿಸಾ ದೊರಕಿಲ್ಲ. ಆಗ ಕಳೆದ ವರ್ಷವಷ್ಟೆ ಅಮೆರಿಕೆಯ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಆಶ್ರಯದಲ್ಲಿ ಸ್ಯಾನ್ಹೂಸೆ ನಗರದಲ್ಲಿ ನಡೆದ ಎಂಟನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದ್ದ ಪಿಂಡಿಪಾಪನಹಳ್ಳಿಯ ಮುನಿವೆಂಕಟಪ್ಪ ಮತ್ತು ತಂಡದವರಿಗೆ ಈಗಾಗಲೇ ವೀಸಾ ಇರುವುದರಿಂದ ಅವಕಾಶ ದೊರಕಿದೆ.
ನಮ್ಮೂರಿನ ಜಾತ್ರೆ ಅಥವಾ ಮೇಳದ ವಾತಾವರಣವನ್ನು ರಾಲಿ ಸಭಾ ಕನ್ವೆನ್ಶನ್ ಸೆಂಟರ್ ಪ್ರಾಂಗಣದಲ್ಲಿ ನಿರ್ಮಿಸುವುದರಲ್ಲಿ ಪಿಂಡಿಪಾಪನಹಳ್ಳಿಯ ಮುನಿವೆಂಕಟಪ್ಪ ಮತ್ತು ತಂಡದವರು ಯಶಸ್ವಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ತಮಟೆ ವಾದನ ಬಯಲು ಸೀಮೆಯ ಜನಕ್ಕೆ ಸುಪರಿಚಿತ. ಅಂತಿಮ ಯಾತ್ರೆಯಲ್ಲಿ ಮಸಣದವರೆಗೂ ಜತೆ ನೀಡಿ ವಿದಾಯ ಹೇಳುವುದೂ ತಮಟೆಯ ನಾದದಿಂದಲೇ. ಊರ ಜಾತ್ರೆ, ಮೆರವಣಿಗೆ ಅಥವಾ ಕರಗದಂತಹ ಸಾಂಸ್ಕೃತಿಕ ಉತ್ಸವಗಳಲ್ಲಿ ತಮಟೆ ಸದ್ದು ಕೇಳಿಸಲೇಬೇಕು. ಇಂಥ ನೆಲ ಸಂಸ್ಕೃತಿಯ ಕಲೆಯನ್ನು ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಹೊಸ ಭಾಷ್ಯವನ್ನು ಬರೆದ ಅದ್ಭುತ ಕಲಾವಿದ. ದೇಶ ವಿದೇಶಗಳಲ್ಲಿ ತಮಟೆ ನಾದವನ್ನು ಮೊಳಗಿಸಿ ಕನ್ನಡನಾಡಿಗೆ ಕೀರ್ತಿ ತಂದಿದ್ದಾರೆ. ಪ್ರಶಸ್ತಿಗಳ ಸರಮಾಲೆಯೇ ಇವರ ಕೊರಳನ್ನು ಅಲಂಕರಿಸಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ‘ನಾಡೋಜ’ ಪ್ರಶಸ್ತಿಯೂ ಸಂದಿದೆ. ಜನಪದ ಅಕಾಡೆಮಿಯ ಸದಸ್ಯರೂ ಆಗಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಕುಗ್ರಾಮ ಪಿಂಡಿಪಾಪನಹಳ್ಳಿಯಲ್ಲಿ ಜನಿಸಿದ ಇವರದು ಬಡಕುಟುಂಬ. ತಂದೆ ಪಾಪಣ್ಣ ತಾಯಿ ಮುನಿಗಂಗಮ್ಮ. ಬದಕಿನ ಆಸರೆಗಾಗಿ ತಂದೆಯಿಂದಲೇ ತಮಟೆ ವಾದನದ ಮೊದಲ ಪಾಠ. ನಾಲ್ಕನೇ ಕ್ಲಾಸಿಗೇನೆ ಕಲಿಕೆ ನಿಲ್ಲಿಸಿದ ಮುನಿವೆಂಕಟಪ್ಪ ‘ನಾಡೋಜ’ ಪ್ರಶಸ್ತಿಯವರೆಗೂ ಬೆಳೆದು ನಿಂತದ್ದು ಮಾತ್ರ ಅವರ ಏಕಲವ್ಯ ಸಾಧನೆಯ ಮಹಾನ್ ಯಾತ್ರೆ!
‘1992 ರಲ್ಲಿ ಜಪಾನ್ಗೆ ಸರ್ಕಾರ ಕಳುಹಿಸಿತ್ತು. ಕಳೆದ ವರ್ಷ ಅಮೆರಿಕೆಯ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸುವ ಅವಕಾಶ ಲಭಿಸಿತ್ತು. ಈ ಬಾರಿ ಕೆಲವರಿಗೆ ವೀಸಾ ಸಿಗದ ಕಾರಣ ಅಕಸ್ಮಾತ್ತಾಗಿ ನಮಗೆ ರಾಲಿ ಎಂಬ ಪಟ್ಟಣದಲ್ಲಿ ನಡೆದ ‘ನಾವಿಕ ಕನ್ನಡ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು. ನಮ್ಮ ಕಲೆಗೆ ಜನರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ನಮ್ಮ ನಾದಕ್ಕೆ ಅಲ್ಲಿನವರು ಕುಣಿದು ಕುಪ್ಪಳಿಸಿದರು. ನಮ್ಮನ್ನು ಆತ್ಮೀಯವಾಗಿ ಉಪಚರಿಸಿದರು. ಕನ್ನಡದ ಕಲಾವಿದರಾದ ಮುಖ್ಯಮಂತ್ರಿ ಚಂದ್ರು, ಶ್ರೀನಾಥ್, ಯಶ್, ರಾಧಿಕಾ ಪಂಡಿತ್, ಸಿಹಿಕಹಿ ಚಂದ್ರು ಮುಂತಾದವರು ಅಲ್ಲಿ ಸಿಕ್ಕಿದ್ದರು’ ಎಂದು ಅಮೆರಿಕೆಯ ಅನುಭವವನ್ನು 68 ವರ್ಷದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ತಿಳಿಸಿದರು.
- Advertisement -
- Advertisement -
- Advertisement -
- Advertisement -