ಕನ್ನಡದ ಉತ್ಸವಗಳು ಗ್ರಾಮದೆಡೆಗೆ ಸಾಗಬೇಕು. ಸಾಹಿತ್ಯ ಜನರ ನಡುವೆ ಅರಳಬೇಕಿದೆ. ನಗರದಿಂದ ಗ್ರಾಮದೆಡೆಗೆ ಸಾಹಿತ್ಯಿಕ ಚಟುವಟಿಕೆಗಳು ಪಸರಿಸಬೇಕು. ಗ್ರಾಮ ಧರ್ಮವನ್ನು ಮರೆಯಬಾರದು ಎಂದು ಐದನೇ ತಾಲ್ಲೂಕು ಸಾಹಿತ್ಯ ಸಮ್ಮೇಳದ ಸಮ್ಮೇಳನಾಧ್ಯಕ್ಷ ಎನ್.ಶಿವಣ್ಣ ಅಭಿಪ್ರಾಯಪಟ್ಟರು.
ನಗರದ ವಾಸವಿ ಕಲ್ಯಾಣ ಮಂಟಪದ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆಯಲ್ಲಿ ಬುಧವಾರ ನಡೆದ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡ ನಾಡು ನುಡಿ ರಕ್ಷಣೆ, ಶಿಕ್ಷಣ ಮತ್ತು ಆಡಳಿತದಲ್ಲಿ ಕನ್ನಡ, ಜಲ, ನಿಸರ್ಗ ಸಂರಕ್ಷಣೆ ನಮ್ಮ ಆದ್ಯತೆಗಳಾಗಬೇಕು. ಜನಾಂಗೀಯ ಸಂಸ್ಕೃತಿಯ ಸ್ಮೃತಿಗಳಂತಿರುವ ಜಾನಪದ ಸಂಪತ್ತನ್ನು ಕಾಪಾಡಬೇಕು. ಮಾಹಿತಿ ತಂತ್ರಜ್ಞಾನದ ವೇಗದಾಳಿಗೆ ನಮ್ಮ ಬದುಕಿನ ಪ್ರತೀಕವಾದ ಕನ್ನಡ ಭಾಷೆ ನಲುಗದಂತೆ ನೋಡಿಕೊಳ್ಳಬೇಕು. ವೈಜ್ಞಾನಿಕ ವಿಚಾರಗಳಿಗೆ, ತಾತ್ವಿಕ ತರ್ಕ ದೀಪ್ತಿಗಳಿಗೆ ತೆರೆದುಕೊಳ್ಳುವ ಗುಣ ಕನ್ನಡ ಭಾಷೆಗಿದೆ. ಈ ದೆಸೆಯಲ್ಲಿ ಇಚ್ಛಾಶಕ್ತಿ ಕ್ರಿಯಾಶೀಲವಾಗಬೇಕು ಎಂದು ಹೇಳಿದರು.
ಕಾನ್ವೆಂಟ್ ಮತ್ತು ಕನ್ನಡ ಶಾಲೆಗಳ ನಡುವೆ ಅಂತರ ಕೇವಲ ಶೈಕ್ಷಣಿಕವಾಗಿ ಉಳಿದಿಲ್ಲ. ಕಾನ್ವೆಂಟ್ ಶಾಲೆಗಳ ಮುಂದೆ ಡೊನೇಷನ್ ಕೊಡಲು ಕ್ಯೂ ನಿಂತಿದ್ದರೆ, ಕನ್ನಡದ ಶಾಲೆಗಳ ಮುಂದಿರುವ ಸಾಲು ಬಿಸಿ ಊಟಕ್ಕೆ ನಿಂತಿದೆ. ಇದೆಲ್ಲಾ ಶೋಷಣೆಯ ಪ್ರತೀಕ. ಕಲಿಕಾ ಮಾಧ್ಯಮವನ್ನು ನಿರ್ಧರಿಸುವವರು ಕಲಿಯುವ ಮಕ್ಕಳು, ಶಿಕ್ಷಕರು, ಪೋಷಕರು ಅಥವಾ ತಜ್ಞರು ಆಗಿರದೆ ನ್ಯಾಯಾಲಯವಾಗಿರುವುದು ವಿಪರ್ಯಾಸ. ಕಲಿಯುವ ಮಕ್ಕಳಲ್ಲಿ ಅಂತರ, ಅಸಮಾನತೆ ತರಬಾರದು ಎಂದು ನುಡಿದರು.
ತಾಲ್ಲೂಕಿನ ಎಲ್ಲಾ ಶಾಲೆಗಳಲ್ಲಿ ಕನ್ನಡ ಕಲಿಕೆಗೆ ಆದ್ಯತೆ ನೀಡಬೇಕು. ಪ್ರತಿ ಗ್ರಾಮದಲ್ಲೂ ಕ್ರಿಯಾಶೀಲ ಕನ್ನಡಪರ ಸಂಘಟನೆಗಳಿರಬೇಕು. ಗ್ರಾಮದ ಸೊಗಡು ಬಿಂಬಿಸುವ ಕಾರ್ಯಕ್ರಮಗಳನ್ನು ನಡೆಸಬೇಕು. ಪ್ರತಿ ಗ್ರಾಮದಲ್ಲೂ ಕನ್ನಡ ಸಾಹಿತ್ಯಕ್ಕೆ ಪೂರಕ ಪುಸ್ತಕ ಭಂಡಾರಗಳನ್ನು ಸ್ಥಾಪಿಸಬೇಕು. ಕನ್ನಡ ಕಲಿತವರಿಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಉದ್ಯೋಗವಕಾಶಗಳು ಸಿಗಬೇಕು. ತಾಲ್ಲೂಕಿನ ಪ್ರಾಚೀನ ಕಲೆ, ಶಾಸನ, ಸ್ಮಾರಕಗಳನ್ನು ರಕ್ಷಿಸಬೇಕು. ಜಾನಪದ ಸಾಹಿತ್ಯ, ಕಲೆ, ನೃತ್ಯ, ಕ್ರೀಡೆ, ರಂಗಗೀತೆ, ನಾಟಕಗಳಿಗೆ ಮರುಜೀವ ನೀಡಬೇಕು. ಗ್ರಾಮೀಣ ಭೂಮಿ, ನೈಸರ್ಗಿಕ ಸಂಪತ್ತನ್ನು ಕಾಪಾಡಬೇಕು. ಗ್ರಾಮಗಳಲ್ಲಿ ಆರೋಗ್ಯ ನೈರ್ಮಲ್ಯಕ್ಕೆ ಆದ್ಯತೆ, ಪಂಚಾಯತಿಗೊಂದರಂತೆ ಆಸ್ಪತ್ರೆ ಸ್ಥಾಪಿಸಬೇಕು. ತಾಲ್ಲೂಕಿನಲ್ಲಿ ರಾಜ್ಯ, ಜಿಲ್ಲಾ ಸಾಹಿತಿಗಳ ಸಮಾಗಮ ಏರ್ಪಡಿಸಬೇಕು. ಶಾಶ್ವತ ನೀರಾವರಿಗೆ ನಾಯಕರ ಒಮ್ಮತದೊಂದಿಗೆ ನಿರಂತರ ಹೋರಾಟ ನಡೆಸಬೇಕು. ತಾಲ್ಲೂಕಿನ ಪ್ರತಿ ಗ್ರಾಮದಲ್ಲಿ ಮಹಿಳಾ ಚೇತನ ಕೇಂದ್ರಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹೋಬಳಿ ಮಟ್ಟದಲ್ಲಿ ಆಚರಿಸಬೇಕು. ಕನ್ನಡ ಕಾರ್ಯಕ್ರಮವನ್ನು ಜನರಿಂದ ಜನರಿಗಾಗಿ ಜನರಿಗೋಸ್ಕರ ನಡೆಯಬೇಕು. ಗ್ರಾಮದ ಸೊಗಡು ಸಮ್ಮೇಳನದ ಅಂದವನ್ನು ಹೆಚ್ಚಿಸಬೇಕು. ಕನ್ನಡ ಸಾಹಿತ್ಯದ ಬಗ್ಗೆ ಓದುವ ಹವ್ಯಾಸ ಹೆಚ್ಚಿಸುವ ಬಗ್ಗೆ ಕ.ಸಾ.ಪ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಹೇಳಿದರು.
ಬೆಳಿಗ್ಗೆ ವಾಸವಿ ಕಲ್ಯಾಣ ಮಂಟಪದ ಆವರಣದಲ್ಲಿ ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ ರಾಷ್ಟ್ರಧ್ವಜ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ನಾಡಧ್ವಜವನ್ನು ಹಾಗೂ ಸಾಹಿತ್ಯ ಪರಿಷತ್ನ ತಾಲ್ಲೂಕು ಅಧ್ಯಕ್ಷ ಕೃ.ನಾ.ಶ್ರೀನಿವಾಸ್ ಪರಿಷತ್ನ ಧ್ವಜಾರೋಹಣ ನೆರವೇರಿಸಿದರು.
ನಂತರ ನಗರದ ಮಿನಿ ವಿಧಾನಸೌಧದಿಂದ ಸಮ್ಮೇಳನಾಧ್ಯಕ್ಷರ ಹಾಗೂ ಕನ್ನಡ ತಾಯಿ ಭುವನೇಶ್ವರಿಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ವೀರಗಾಸೆ, ತಮಟೆ, ಮಂಗಳವಾದ್ಯ, ಶಾಲಾ ವಿದ್ಯಾರ್ಥಿಗಳ ವಾದ್ಯವೃಂದ, ಕಳಶ ಹೊತ್ತ ಮಹಿಳೆಯರು ಭಾಗವಹಿಸಿದ್ದರು. ಮೆರವಣಿಗೆಯು ಪ್ರವಾಸಿ ಮಂದಿರ ರಸ್ತೆಯಲ್ಲಿ ಸಾಗಿ ಕೋಟೆ ವೃತ್ತದ ಮೂಲಕ ಸಮ್ಮೇಳನ ನಡೆಯುವ ವಾಸವಿ ಕಲ್ಯಾಣ ಮಂಟಪಕ್ಕೆ ಆಗಮಿಸಿತು.
ಕಾರ್ಯಕ್ರಮದ ಮುನ್ನ ಈಚೆಗೆ ನಿಧನರಾದ ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಮತ್ತು ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ನಡೆಸಲಾಯಿತು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ, ಸಣ್ಣ ನೀರಾವರಿ ಇಲಾಖೆಯ ಗಣಪತಿ ಸಾಕರೆ, ಸಿ.ಡಿ.ಪಿ.ಒ ಅಧಿಕಾರಿ ಲಕ್ಷ್ಮೀದೇವಮ್ಮ, ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಕ.ಸಾ.ಪ ಜಿಲ್ಲಾ ಅಧ್ಯಕ್ಷ ವೈ.ಎಲ್.ಹನುಮಂತರಾವ್, ನಿಕಟಪೂರ್ವ ಸಮ್ಮೇಳಣಾಧ್ಯಕ್ಷ ಡಾ.ಡಿ.ಟಿ.ಸತ್ಯನಾರಾಯಣರಾವ್, ನಿಕಟಪೂರ್ವ ಜಿಲ್ಲಾಧ್ಯಕ್ಷ ಎಸ್.ವಿ.ನಾಗರಾಜರಾವ್, ತಾಲ್ಲೂಕು ಅಧ್ಯಕ್ಷ ಕೃ.ನಾ.ಶ್ರೀನಿವಾಸಮೂರ್ತಿ, ಜಿಲ್ಲಾ ಕ.ಸಾ.ಪ ಗೌರವ ಕಾರ್ಯದರ್ಶಿಗಳಾದ ಅಮೃತಕುಮಾರ್, ಮಂಚನಬಲೆ ಶ್ರೀನಿವಾಸ್, ಸಿ.ಬಿ.ಹನುಮಂತಪ್ಪ, ಚಂದ್ರಮೋಹನ್, ವಿ.ಕೃಷ್ಣ, ಮಂಜುನಾಥ್, ಜಿಲ್ಲಾ ರೈತ ಸಂಘದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಅನಂತಕೃಷ್ಣ, ಗುರುರಾಜರಾವ್, ವೆಂಕಟಸ್ವಾಮಿ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -