ಪ್ರತಿಯೊಬ್ಬ ವ್ಯಕ್ತಿಗೂ ಕಣ್ಣುಗಳು ದೇವರು ಕೊಟ್ಟ ವರದಾನವಾಗಿವೆ. ದೇಹಾಂತ್ಯದ ನಂತರ ನಮ್ಮ ಕಣ್ಣುಗಳು ಮಣ್ಣಾಗುವ ಬದಲು ಇಬ್ಬರು ಅಂಧರಿಗೆ ಬೆಳಕಾಗುವಂತೆ ಪಣ ತೊಡಬೇಕಾದ ಕಾರ್ಯ ಎಲ್ಲರಿಂದಾಗಬೇಕಿದೆ ಎಂದು ಜಂಗಮಕೋಟೆ ಸರ್ಕಾರಿ ಆಸ್ಪತ್ರೆಯ ನೇತ್ರ ವೈದ್ಯಾಧಿಕಾರಿ ಡಾ.ಲವಕುಮಾರ್ ಕರೆನೀಡಿದರು.
ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣ ಸಂಘ, ಅಂಧತ್ವ ನಿವಾರಣಾ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಅಂಧತ್ವ ನಿಯಂತ್ರಣಾ ಜಾಗೃತಿ ಕಾರ್ಯಕ್ರಮದ ಪ್ರಯುಕ್ತ ಮಕ್ಕಳ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರೂ ಬದುಕಿದ್ದಾಗಲೇ ನೇತ್ರದಾನ ಮಾಡುವುದಾಗಿ ವಾಗ್ದಾನವನ್ನು ಮಾಡಿ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು.ಕನ್ನಡಕ ಧರಿಸುವವರು, ಸಕ್ಕರೆ ಕಾಯಿಲೆ, ರಕ್ತದೊತ್ತಡ, ಅಸ್ತಮಾದಂತಹ ಕಾಯಿಲೆಗಳಿರುವ ವ್ಯಕ್ತಿಗಳೂ ನೇತ್ರದಾನ ಮಾಡಬಹುದು ಎಂದು ಅವರು ವಿವರಿಸಿದರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಗ್ರಾಮದಲ್ಲಿ ಘೋಷಣೆಗಳೊಂದಿಗೆ ಜಾಗೃತಿ ಜಾಥಾ ನಡೆಯಿತು. ಆರೋಗ್ಯ ಇಲಾಖೆಯ ಸಿಬ್ಬಂದಿ, ಶಾಲಾ ಶಿಕ್ಷಕವರ್ಗದವರು, ಮತ್ತಿತರರು ಇದ್ದರು.
- Advertisement -
- Advertisement -
- Advertisement -