ಮೀಸಲಾತಿಯು ಪೂರ್ಣಪ್ರಮಾಣದಲ್ಲಿ ಸದ್ಭಳಕೆಯಾಗುತ್ತಿಲ್ಲ. ಜೀತ ಪದ್ಧತಿ ಇನ್ನೂ ನಿರ್ಮೂಲವಾಗಿಲ್ಲ ಎಂದು ಜೀವಿಕ ರಾಜ್ಯ ಸಂಚಾಲಕ ಕಿರಣ್ ಕಮಲ್ ಪ್ರಸಾದ್ ತಿಳಿಸಿದರು.
ನಗರದ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಶುಕ್ರವಾರ ಜೀವಿಕ (ಜೀತ ವಿಮುಕ್ತಿ ಕರ್ನಾಟಕ) ಸಂಘಟನೆಯಿಂದ ನಡೆದ ದಲಿತ ಯೋಧರ ಕೋರೆಗಾವ್ ವಿಜಯೋತ್ಸವ ಮತ್ತು ತಮಟೆ ಪ್ರೋತ್ಸಾಹ ಕಮಿಟಿಯ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ತಮಟೆ ಪ್ರೋತ್ಸಾಹ ಕಮಿಟಿಯು ದಲಿತರ ಕಲೆಯನ್ನು ಉತ್ತೇಜಿಸುವ ಕಾರ್ಯ ಮಾಡಲಿದೆ. ದಲಿತರು ಶತಮಾನಗಳ ಕಾಲ ಶೋಷಣೆಯನ್ನು ಅನುಭವಿಸಿದ್ದಾರೆ. ಈಚೆಗೆ ಪ್ರಗತಿಯ ಹಾದಿಯಲ್ಲಿ ಸಾಗುತ್ತಿರುವ ದಲಿತರು ಮುಖ್ಯ ವಾಹಿನಿಗೆ ಬರುತ್ತಿದ್ದಾರೆ. ಸಂವಿಧಾನದಲ್ಲಿ ಮೀಸಲಾತಿಯನ್ನು ಜಾರಿಗೊಳಿಸಿದ್ದರೂ ಕೆಲವರಿಗಷ್ಟೇ ಮೀಸಲಾತಿ ಲಭಿಸುತ್ತಿರುವುದು ದುರದೃಷ್ಟಕರ.
ತಮಟೆ ವಾದ್ಯವು ಸಂತಸ ಮತ್ತು ದುಃಖದ ಕಾರ್ಯಕ್ರಮಗಳಲ್ಲೆಲ್ಲಾ ಬಳಕೆಯಲ್ಲಿದೆ. ಅದರ ಅವಶ್ಯಕತೆಯು ನಾನಾ ಕಾರ್ಯಕ್ರಮಗಳಲ್ಲಿದ್ದರೂ ಕಲಾವಿದರಿಗೆ ಸೂಕ್ತ ಸಂಭಾವನೆ ದೊರಕುತ್ತಿಲ್ಲ. ಕಲಾವಿದರಿಗೆ ಆತ್ಮಸ್ಥೈರ್ಯ ತುಂಬುವುದು ಮತ್ತು ಆರ್ಥಿಕವಾಗಿ ಸಹಾಯ ಮಾಡುವ ಅಗತ್ಯವಿದೆ ಎಂದು ಹೇಳಿದರು.
ತಮಟೆ ಕಲಾವಿದ ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರು ತಮಟೆಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಕೀಲರಾದ ರಾಮಕೃಷ್ಣ, ಮೋಹನ್ ದಾಸ್, ಉಪನ್ಯಾಸಕ ಮೂರ್ತಿ, ಜೀವಿಕ ಜಿಲ್ಲಾ ಸಂಚಾಲಕ ನಾರಾಯಣಸ್ವಾಮಿ, ತಾಲ್ಲೂಕು ಸಂಚಾಲಕ ರವಿಕುಮಾರ್, ಈಧರೆ ತಿರುಮಲ ಪ್ರಕಾಶ್, ತಮಟೆ ಕಲಾವಿದರು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -