ಪರಮಶಿವಯ್ಯನವರ ವರದಿಯ ಒಂದು ಭಾಗವಾಗಿರುವ ಎತ್ತಿನಹೊಳೆ ಯೋಜನೆಯನ್ನು ತೋರಿಸಿ, ಈ ಭಾಗದ ಜನತೆಯನ್ನು ಸರ್ಕಾರ ವಂಚನೆ ಮಾಡುತ್ತಿದೆ ಎಂದು ಕರ್ನಾಟಕ ಟಿಪ್ಪುಸುಲ್ತಾನ್ ಸಂಘದ ತಾಲ್ಲೂಕು ಅಧ್ಯಕ್ಷ ಅಪ್ಜಲ್ಪಾಷ ಆರೋಪಿಸಿದರು.
ನಗರದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಸೋಮವಾರ ಕರ್ನಾಟಕ ಟಿಪ್ಪುಸುಲ್ತಾನ್ ಸಂಘದ ವತಿಯಿಂದ ಶಾಶ್ವತ ನೀರಾವರಿ ಯೋಜನೆಯ ಅನುಷ್ಟಾನಕ್ಕಾಗಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ನೀರು ಕೇಳುವುದು ನಮ್ಮ ಹಕ್ಕು, ಪ್ರಾಕೃತಿಕವಾಗಿ ಸಿಗುವಂತಹ ನೀರು ಕೊಡಿ ಎಂದು ಸರ್ಕಾರಗಳಿಗೆ ಮಾಡುತ್ತಿರುವ ಮನವಿಗಳನ್ನು ಆಲಿಸದ ಸರ್ಕಾರಗಳು, ಡಾ.ಪರಮಶಿವಯ್ಯನವರ ವರದಿಯಂತೆ ಯೋಜನೆಗಳನ್ನು ಜಾರಿಗೊಳಿಸದೇ ಜನರಿಗೆ ಮಂಕು ಬೂದಿ ಎರಚುತ್ತಿದ್ದಾರೆ. ಸರ್ಕಾರ ಕೂಡಲೇ ಈ ಭಾಗದ ರೈತರು, ಹಾಗೂ ನಾಗರಿಕರ ಮನವಿಗಳಿಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದರು.
ಕರ್ನಾಟಕ ಟಿಪ್ಪುಸುಲ್ತಾನ್ ಸಂಘದ ತಾಲ್ಲೂಕು ಪದಾಧಿಕಾರಿಗಳು ಘೋಷಣೆಗಳನ್ನು ಕೂಗುತ್ತಾ ಬೈಕ್ ರ್ಯಾಲಿ ನಡೆಸಿ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟಿಸಿದರು.
ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ತಾದೂರು ಮಂಜುನಾಥ್, ಪ್ರತೀಶ್, ಕನ್ನಡ ಸೇನೆಯ ತಾಲ್ಲೂಕು ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ಹುಸೇನ್ಸಾಬ್, ಕರ್ನಾಟಕ ಟಿಪ್ಪು ಸುಲ್ತಾನ್ ಸಂಘದ ತಾಲ್ಲೂಕು ಗೌರವಾಧ್ಯಕ್ಷ ಷೇಕ್ ಶಬ್ಬೀರ್ಪಾಷಾ, ತಾಲ್ಲೂಕು ಅಧ್ಯಕ್ಷ ಅಪ್ಜಲ್ಪಾಷಾ, ಉಪಾಧ್ಯಕ್ಷರಾದ ಝಿಯಾವುಲ್ಲಾ, ಇಮ್ರಾನ್ಖಾನ್, ಕಾರ್ಯದರ್ಶಿ ಜಹೀರ್ಅಹ್ಮದ್, ಆರೀಪ್ಪಾಷಾ, ಖಜಾಂಚಿ ಇಂತಿಯಾಜ್ಪಾಷಾ, ಏಜಾಜ್, ಬಾಬು ಮುಂತಾದವರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -