ರಾಷ್ಟ್ರಕ್ಕೆ ಅತ್ಯುತ್ತಮ ವಾಲಿಬಾಲ್ ಕ್ರೀಡಾಪಟುಗಳನ್ನು ನೀಡಿದ ಕೀರ್ತಿ ಶಿಡ್ಲಘಟ್ಟದ್ದು. ಯುವಕರಿಗೆ ಉತ್ತೇಜನ ನೀಡಿದಲ್ಲಿ ಭವಿಷ್ಯದಲ್ಲಿ ಒಳ್ಳೆಯ ಕ್ರೀಡಾಳುಗಳು ನಮ್ಮ ತಾಲ್ಲೂಕಿನಿಂದ ಹೊರಹೊಮ್ಮುತ್ತಾರೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ದೀಪಾವಳಿ ಹಬ್ಬ ಹಾಗೂ ಎಸ್.ಮುನಿಶಾಮಪ್ಪನವರ ಜ್ಞಾಪಕಾರ್ಥ ನಡೆದ ಹೊನಲು ಬೆಳಕಿನ ರಾಜ್ಯಮಟ್ಟದ ವಾಲಿಬಾಲ್ ಪಂದ್ಯದಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ಆರೋಗ್ಯಕರವಾದ ಸ್ಪರ್ಧೆಯಿರಬೇಕು. ಕ್ರೀಡೆಯಲ್ಲಿ ಕೆಲವರಿಗೆ ಅಪಾರ ಪ್ರತಿಭೆ ಮತ್ತು ಆಸಕ್ತಿ ಇರುತ್ತದೆ. ಅಂಥಹವರನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಹಿಂದಿನಿಂದಲೂ ಶಿಡ್ಲಘಟ್ಟದಲ್ಲಿ ವಾಲಿಬಾಲ್ ಕ್ರೀಡೆಗೆ ಅಪಾರ ಜನಮನ್ನಣೆಯಿದೆ. ಅಷ್ಟೇ ಪ್ರಮಾಣದಲ್ಲಿ ಕ್ರೀಡಾಪಟುಗಳು ಸಹ ಇದ್ದಾರೆ. ಹೊಸ ಪೀಳಿಗೆಯು ತಾಲ್ಲೂಕಿನ ಕೀರ್ತಿ ಹೆಚ್ಚಿಸುವಂತಾಗಲಿ ಎಂದು ಹೇಳಿದರು.
ಪ್ರಥಮ ಬಹುಮಾನ 30 ಸಾವಿರ ರೂ ಮತ್ತು ಟ್ರೋಫಿಯನ್ನು ಕೋಲಾರ ಜಗದೀಶ್ ತಂಡ ಗೆದ್ದರೆ, ದ್ವಿತೀಯ ಬಹುಮಾನ 20 ಸಾವಿರ ರೂ ಮತ್ತು ಟ್ರೋಫಿಯನ್ನು ತಾಲ್ಲೂಕಿನ ಭಗತ್ಸಿಂಗ್ ಅಥ್ಲೆಟಿಕ್ ಅಸೋಸಿಯೇಷನ್ ತಂಡ ಪಡೆಯಿತು. ತೃತೀಯ ಬಹುಮಾನ 15 ಸಾವಿರ ರೂಗಳನ್ನು ಬೆಂಗಳೂರಿನ ಕೆ.ಎಸ್.ಪಿ ತಂಡ ಮತ್ತು ನಾಲ್ಕನೆಯ ಬಹುಮಾನ 7,500 ರೂಗಳನ್ನು ಶಿಡ್ಲಘಟ್ಟ ಫ್ರೆಂಡ್ಸ್ ಪಡೆದವು.
ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ನಗರಸಭಾ ಅಧ್ಯಕ್ಷ ಅಫ್ಸರ್ಪಾಷ, ಸದಸ್ಯ ಲಕ್ಷ್ಮಣ್, ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ, ಮೇಲೂರು ಆರ್.ಎ.ಉಮೇಶ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -