ದೇಶವೆಂದರೆ ಮಣ್ಣು, ಕಲ್ಲಲ್ಲ. ದೇಶವೆಂದರೆ ಪ್ರಜೆಗಳು. ನಿಜ ಅರ್ಥದಲ್ಲಿ ಪ್ರಜೆಗಳೇ ರಾಷ್ಟ್ರ. ಕೆಲವರು ರಾಷ್ಟ್ರವೆಂದರೆ ಭೌಗೋಳಿಕ ಪ್ರದೇಶ, ಭೂಪಟ ಮತ್ತು ಬಾವುಟಕ್ಕೆ ಸೀಮಿತಗೊಳಿಸುತ್ತಾ ಶಾಲಾ ಕಾಲೇಜುಗಳಲ್ಲಿ ವ್ಯವಸ್ಥಿತವಾಗಿ ತುಂಬಲಾಗುತ್ತಿದೆ. ಪ್ರಜೆಗಳಿಗೆಲ್ಲಾ ಸಮಾನ ಹಕ್ಕು ಅಧಿಕಾರವನ್ನು ನೀಡುವುದು ದೇಶಪ್ರೇಮ ಎಂಬುದನ್ನು ತಿಳಿಸಿಕೊಡುವ ಅಗತ್ಯತೆ ಇದೆ ಎಂದು ಖ್ಯಾತ ಅಂಬೇಡ್ಕರ್ ವಾದಿ ಎನ್.ಮಹೇಶ್ ತಿಳಿಸಿದರು.
ನಗರದ ಬಸ್ ನಿಲ್ದಾಣದ ಬಳಿ ಇರುವ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಬಹುಜನ ವಿದ್ಯಾರ್ಥಿ ಸಂಘದಿಂದ ಶನಿವಾರ ನಡೆದ ‘ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಪ್ರಜಾಪ್ರಭುತ್ವ ಉಳಿಸೋಣ’ ಎಂಬ ತಾಲ್ಲೂಕು ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ದೇಶದಲ್ಲಿ ನಿರ್ಜೀವ ಸಂಕೇತಗಳಿಗೆ ನೀಡುತ್ತಿರುವ ಗೌರವ ಪ್ರೀತಿಯನ್ನು ಜೀವಂತ ಪ್ರಜೆಗಳಿಗೆ ನೀಡುತ್ತಿಲ್ಲ. ಸಂವಿಧಾನ ಬದ್ಧವಾಗಿ ನಾವು ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದರೂ ಇಂದು ನಮ್ಮನ್ನು ಆಳುತ್ತಿರುವವರು ಮಾತ್ರ ಮನುವಾದಿ, ಜಾತಿವಾದಿ, ಸಾಮ್ರಾಜ್ಯಶಾಹಿ ಧೋರಣೆಯ ಮನಸ್ಥಿತಿ ಉಳ್ಳವರು. ಪ್ರಜೆಗಳು ತಮ್ಮ ಭವಿಷ್ಯದ ಬಗ್ಗೆ ಆಲೋಚಿಸದಂತೆ ಮಾಡಿ ಅವರ ಭಾವನೆಗಳನ್ನು ದೇಶದ ನಿರ್ಜೀವ ಸಂಕೇತಗಳಿಗೆ ಅಣಿಗೊಳಿಸಿ ಅವರನ್ನು ನಿರಂತರವಾಗಿ ಆಳ್ವಿಕೆ ಮಾಡುವುದೇ ಮನುವಾದಿ ಸಾಮ್ರಾಜ್ಯಶಾಹಿ ಧೋರಣೆಯಾಗಿದೆ ಎಂದು ಹೇಳಿದರು.
ಬಹುಜನ ವಿದ್ಯಾರ್ಥಿ ಸಂಘ(ಬಿ.ವಿ.ಎಸ್)ದ ಜಿಲ್ಲಾ ಸಂಯೋಜಕ ಜರ್ನಾರ್ಧನ್ ಮಾತನಾಡಿ, ಪ್ರಬುದ್ದ ಭಾರತ ನಿರ್ಮಾಣಕ್ಕಾಗಿ ಪ್ರಜಾಪ್ರಭುತ್ವ ಉಳಿಸೋಣ ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ನಿಟ್ಟಿನಲ್ಲಿ ಮಾರ್ಚ್ 4ರ ಶನಿವಾರದಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯ ಮಟ್ಟದ ವಿದ್ಯಾರ್ಥಿ ಸಮ್ಮೇಳನ ಆಯೋಜಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಕರೆನೀಡಿದರು.
ನಗರದ ಪ್ರವಾಸಿಮಂದಿರದಿಂದ ಬಸ್ ನಿಲ್ದಾಣದವರೆಗೂ ವಿದ್ಯಾರ್ಥಿಗಳು, ಬಿ.ವಿ.ಎಸ್ನ ಪದಾಧಿಕಾರಿಗಳು ಘೋಷಣೆಗಳನ್ನ ಕೂಗುತ್ತಾ ಮೆರವಣಿಗೆ ಮೂಲಕ ಸಾಗಿದರು.
ಬೆಂಗಳೂರು ವಿಶ್ವ ವಿದ್ಯಾನಿಲಯದ ಸ್ನಾತಕೋತರ ವಿದ್ಯಾರ್ಥಿ ಶ್ರೀನಾಥ್ ಪ್ರಬಂಧವನ್ನು ಮಂಡನೆ ಮಾಡಿದರು.
ಬಿ.ವಿ.ಎಸ್ನ ಸಂಯೋಜಕರಾದ ಪ್ರೊ.ಹರಿರಾಮ್, ಶ್ರೀನಿವಾಸ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಟಿಪ್ಪು ಸೆಕ್ಯುಲರ್ ಸೇನೆ ತಾಲ್ಲೂಕು ಅಧ್ಯಕ್ಷ ಮೌಲಾ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -