ದ್ರಾಕ್ಷಿ ನಮ್ಮ ದೇಶದ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಉಷ್ಣ ಹವಾಮಾನ ಸೇರಿದಂತೆ ಎಲ್ಲಾ ರೀತಿಯ ವಾತಾವರಣಗಳಲ್ಲೂ ದ್ರಾಕ್ಷಿ ಬೆಳೆಯಬಹುದಾಗಿದೆ ಎಂದು ದ್ರಾಕ್ಷಿ ಸಂಶೋಧನಾ ಕೇಂದ್ರದ ನಿವೃತ್ತ ವಿಜ್ಞಾನಿ ಡಾ.ಪ್ರಕಾಶ್ ತಿಳಿಸಿದರು.
ತಾಲ್ಲೂಕಿನ ಮೇಲೂರಿನ ಗಂಗಾದೇವಿ ಸಮುದಾಯಭವನದಲ್ಲಿ ಮಂಗಳವಾರ ಗಂಗಾದೇವಿ ದ್ರಾಕ್ಷಿ ಬೆಳೆಗಾರರ ರೈತಕೂಟದಿಂದ ಆಯೋಜಿಸಿದ್ದ ದ್ರಾಕ್ಷಿ ಬೆಳೆಗಾರರ ಕಾರ್ಯಾಗಾರದಲ್ಲಿ ಸ್ಲೈಡ್ ಶೋ ಮೂಲಕ ವಿವರಣೆ ನೀಡಿ ಮಾತನಾಡಿದರು.
ದ್ರಾಕ್ಷಿ ಬೆಳೆಗೆ ಹೆಚ್ಚಿನ ಉಷ್ಣಾಂಶದ ಅಗತ್ಯವಿದೆ. ಶೀತ ವಾತವರಣದಿಂದ ಹಣ್ಣಿಗೆ ರೋಗ ತಗಲುವ ಸಾಧ್ಯತೆಯಿರುತ್ತದೆ. ಹಿಮ ಹಾಗೂ ಚಳಿಗಾಲದಲ್ಲಿ ದ್ರಾಕ್ಷಿಗೆ ರೋಗ ಹರಡುವ ಸಾಧ್ಯತೆಯಿರುತ್ತದೆ. ದ್ರಾಕ್ಷಿ ಉತ್ಪಾದನೆಯ ಶೇ.80 ರಷ್ಟು ಹಣ್ಣನ್ನು ವೈನ್ ತಯಾರಿಕೆಗೆ ಉಪಯೋಗಿಸಲಾಗುತ್ತದೆ. ಇನ್ನು 10 ರಷ್ಟು ಹಣ್ಣನ್ನು ಜ್ಯೂಸ್ ಮತ್ತಿತರ ಉದ್ದೇಶಗಳಿಗೆ ಬಳಸಲಾಗುತ್ತೆ. ಶೇ. 10 ರಷ್ಟು ಹಣ್ಣನ್ನು ಒಣದ್ರಾಕ್ಷಿಗಾಗಿ ತಯಾರಿಕೆಗೆ ಉಪಯಾಗಿಸಲಾಗುತ್ತದೆ.
ದ್ರಾಕ್ಷಿ ಬೆಳೆಗಾರರಿಗೆ ಅವರ ಉತ್ಪನ್ನಗಳಿಗೆ ಲಾಭ ಹೆಚ್ಚಿಸಲು ಹಾಗೂ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ವಂಚನೆಯಿಂದ ತಪ್ಪಿಸಲು ಅವರಿಗೆ ಉತ್ತಮ ಜ್ಞಾನದ ಅವಶ್ಯಕತೆಯಿದೆ. ಪ್ರಪಂಚದಲ್ಲಿ ದ್ರಾಕ್ಷಿ ಉತ್ಪಾದಿಸುವ ಮೊದಲ 10 ದೇಶಗಳ ಪಟ್ಟಿಯಲ್ಲಿ ಭಾರತವೂ ಸೇರಿದೆ. ಭಾರತ ಐರೋಪ್ಯ ದೇಶಗಳಾದ ಯು.ಕೆ, ಜರ್ಮನಿ, ಸಿಂಗಾಪೂರ, ನೆದರ್ಲ್ಯಾಂಡ್ಗೆ ಹೆಚ್ಚಿನ ಪ್ರಮಾಣದಲ್ಲಿ ದ್ರಾಕ್ಷಿ ರಫ್ತು ಮಾಡುತ್ತದೆ. ಭಾರತದ ಸೀಡ್ ಲೆಸ್ ದ್ರಾಕ್ಷಿಗೆ ವಿದೇಶಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ದೇಶದಲ್ಲಿ ಬೆಳೆಯುವ ಪ್ರಮಾಣವೂ ಏರಿಕೆಯಾಗುತ್ತಿದೆ. ದ್ರಾಕ್ಷಿಯನ್ನು ವೈನ್ ತಯಾರಿಕೆಯಲ್ಲಿ ಬಳಸುವುದರಿಂದ ಸರ್ಕಾರ ಹೆಚ್ಚಿನ ಬೆಂಬಲ ಹಾಗೂ ಸೂಕ್ತ ವ್ಯವಸ್ಥೆ ಮಾಡಿದರೆ ಜಾಗತಿಕ ಮಟ್ಟದಲ್ಲಿ ವೈನ್ ಉದ್ಯಮವನ್ನು ಬೆಳೆಸಬಹುದಾಗಿದೆ ಎಂದು ಹೇಳಿದರು.
ಮಣ್ಣು ಪರೀಕ್ಷೆ, ವಿವಿಧ ರೀತಿಯ ರೋಗಗಳು ಅದನ್ನು ತಡೆಯಲು ಬಳಸಬೇಕಾದ ವಿಧಾನಗಳು, ನೀರು ಮಿತವಾಗಿ ಬಳಸುವ ರೀತಿ, ನೀರನ್ನು ಸಾಂಗ್ಲಿ ಪದ್ಧತಿಯಲ್ಲಿ ನೀಡುವ ತಂತ್ರಜ್ಞಾನ, ಮಣ್ಣಿನ ಸಂರಕ್ಷಣೆ, ರಸಗೊಬ್ಬರ ಮತ್ತು ಪೌಷ್ಠಿಕಾಂಶಗಳನ್ನು ನೀಡುವ ಬಗೆ ಮುಂತಾದ ಹಲವಾರು ವಿಚಾರಗಳನ್ನು ಸ್ಲೈಡ್ ಶೋ ಮೂಲಕ ಪ್ರದರ್ಶಿಸಿ ವಿವರಿಸಿದರು.
ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ರಘು, ಸಹಾಯಕ ನಿರ್ದೇಶಕ ಆನಂದ್, ಮೇಲೂರು ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕಿ ಮಂಜುಳಾ, ಗಂಗಾದೇವಿ ದ್ರಾಕ್ಷಿ ಬೆಳೆಗಾರರ ರೈತಕೂಟದ ಅಧ್ಯಕ್ಷ ಕೆಂಪೇಗೌಡ, ಉಪಾಧ್ಯಕ್ಷ ಮಳ್ಳೂರು ಹರೀಶ್, ಕಾರ್ಯದರ್ಶಿ ನಾಗೇಂದ್ರ ಪ್ರಸಾದ್, ಮಳ್ಳೂರು ಎಸ್ಎಫ್ಸಿಎಸ್ ಅಧ್ಯಕ್ಷ ಬಿ.ಎಂ.ವೆಂಕಟರೆಡ್ಡಿ, ನವೀನ್, ಬಿ.ಎನ್.ಸಚಿನ್, ಮಳ್ಳೂರು ಕರಗಪ್ಪ, ರಾಮಣ್ಣ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -