ಮಕ್ಕಳ ಮನಸ್ಸು ನಿರ್ಮಲವಾದ್ದು. ಬಾಲ್ಯದಲ್ಲಿ ಅವರು ಕಲಿತದ್ದು ಮರೆಯುವುದಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ತರಲು ಹೋರಾಡಿದ ಮಹನೀಯರು ಹೇಗೆಲ್ಲಾ ಶ್ರಮಿಸಿದರು ಎಂದು ಛಾಯಾಚಿತ್ರಗಳು ಮತ್ತು ಸಾಕ್ಷಚಿತ್ರದ ಮೂಲಕ ಪುಟಾಣಿ ಮಕ್ಕಳಿಗೆ ತಿಳಿಸುವಾಗ ಆಸಕ್ತಿಯಿಂದ ಅವರು ಆಲಿಸುತ್ತಿದ್ದರು ಎಂದು ಶಿಕ್ಷಕಿ ಮಂಜುಳಾ ತಿಳಿಸಿದರು.
ನಗರದ ಶ್ರೀಸರಸ್ವತಿ ಕಾನ್ವೆಂಟ್ ಎಜುಚಾಂಪ್ನ ನಾಲ್ಕೈದು ವರ್ಷದ ಸುಮಾರು 14 ವಿದ್ಯಾರ್ಥಿಗಳನ್ನು ಶನಿವಾರ ಜಿಲ್ಲೆಯ ಜಲಿಯನ್ವಾಲಾಬಾಗ್ ಎಂದೇ ಖ್ಯಾತಿ ಪಡೆದಿರುವ ವಿದುರಾಶ್ವತ್ಥಕ್ಕೆ ಕರೆದುಕೊಂಡು ಹೋಗಿ ಬಂದುದರ ಅನುಭವವನ್ನು ಅವರು ವಿವರಿಸಿದರು.
ಮಹಾಭಾರತದ ವಿಧುರ ನೆಟ್ಟಿರುವ ಅರಳೀ ವೃಕ್ಷದ ಅಡಿಯಲ್ಲಿ ಕುಳಿತು ಮಕ್ಕಳಿಗೆ ಮಹಾಭಾರತದ ಕಥೆ, ಕರ್ನಾಟಕದ ಜಲಿಯನ್ ವಾಲಾಭಾಗ್ ಎಂದೇ ಪ್ರಸಿದ್ಧೀ ಪಡೆದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ಗುಂಡಿಗೆ ಪ್ರಾಣತೆತ್ತ ಸ್ಥಳ, ಸ್ಮಾರಕ, ಬೃಹತ್ ವೀರಸೌಧದಲ್ಲಿ ಸ್ವಾತಂತ್ರ್ಯ ಸೇನಾನಿಗಳನ್ನು ಪರಿಚಯಿಸುವ ಗ್ರಂಥಾಲಯ, ಸ್ವಾತಂತ್ರ್ಯ ಜ್ಯೋತಿ ತೋರಿಸಿದೆವು. ಮಕ್ಕಳು ಉದ್ಯಾನವನದಲ್ಲಿ ಆಡಿ ನಲಿದರು. ಇಲ್ಲಿನ ಹವಾನಿಯಂತ್ರಿತ ಸಭಾಂಗಣದಲ್ಲಿ ದೇಶದ ಸ್ವಾತಂತ್ರ್ಯ ಸಂಗ್ರಾಮದ ಕುರಿತು ಸಮಗ್ರ ಮಾಹಿತಿ ಸಿಗುತ್ತದೆ. ಅದರ ಮೇಲ್ವಿಚಾರಕರಾದ ರಾಮಕೃಷ್ಣಪ್ಪ ಮಕ್ಕಳಿಗೆ ಸಾಕ್ಷ್ಯಚಿತ್ರ ತೋರಿಸಿ, ಪ್ರತಿಯೊಂದು ಚಿತ್ರಪಟಗಳ ಬಳಿಯೂ ಕರೆದೊಯ್ದು ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯಿಸಿದರು. ಎಳೆಯ ಮಕ್ಕಳ ಮನದಲ್ಲಿ ದೇಶಭಕ್ತಿಯ ಬೀಜವನ್ನು ಈ ರೀತಿ ಬಿತ್ತಿದೆವು ಡಂದು ಹೇಳಿದರು.
ವಿದುರಾಶ್ವತ್ಥದ ದೇವಸ್ಥಾನ, ಮುದ್ದುಗಾನಕುಂಟೆ, ಮಿಣಕಲಗುರ್ಕಿ, ರಂಗಸ್ಥಳವನ್ನು ತೋರಿಸುವ ಮೂಲಕ ಜಿಲ್ಲೆಯ ಚಾರಿತ್ರಿಕ, ಧಾರ್ಮಿಕ, ಸಾಂಸ್ಕೃತಿಕ ಸ್ಥಳಗಳ ಪರಿಚಯವನ್ನು ಮಕ್ಕಳಿಗೆ ಮಾಡಿಸಿದೆವು. ದಾರಿಯಲ್ಲಿ ರೈಲನ್ನು ಕಂಡಾಗ, ಮಿಣಕಲಗುರ್ಕಿಯಲ್ಲಿ ಜಿಂಕೆಯನ್ನು ಕಂಡಾಗ ಮಕ್ಕಳು ಉತ್ಸಾಯ ಎಲ್ಲೆ ಮೀರಿತ್ತು ಎಂದು ವಿವರಿಸಿದರು.
- Advertisement -
- Advertisement -
- Advertisement -
- Advertisement -