ನಗರಸಭೆಯ ಗುತ್ತಿಗೆ ಪೌರಕಾರ್ಮಿಕರು ತಮಗೆ ಬರಬೇಕಾದ ಮೂರು ತಿಂಗಳ ಬಾಕಿ ವೇತನ ನೀಡುವಂತೆ ಆಗ್ರಹಿಸಿ ಮಂಗಳವಾರ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಗರದಲ್ಲಿ ಕಸ ವಿಲೇವಾರಿಯ ಕೆಲಸವನ್ನು ಸ್ಥಗಿತಗೊಳಿಸಿದ ಪೌರಕಾರ್ಮಿಕರು, ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ತಮಗೆ ಬರಬೇಕಾದ ೩ ತಿಂಗಳ ವೇತನವನ್ನು ಕೂಡಲೆ ನೀಡುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.
ಮೂರು ತಿಂಗಳಿಂದಲೂ ನಮಗೆ ಸಂಬಳ ಇಲ್ಲ. ನಮ್ಮ ಮಕ್ಕಳಿಗೆ ಫೀಸು ಕಟ್ಟಿಲ್ಲ. ರೇಷನ್ ಅಂಗಡಿಯಲ್ಲಿ ಬಾಕಿ ಕೊಡದ ಕಾರಣ ಅವರು ನಮಗೆ ರೇಷನ್ ಕೊಡ್ತಿಲ್ಲ. ಹಬ್ಬ ಹರಿದಿನಗಳಂದು ನೆಮ್ಮದಿಯಾಗಿ ಊಟ ಕೂಡ ಮಾಡುವಂತಿಲ್ಲ ಎಂದು ಅವಲತ್ತುಕೊಂಡರು.
ಕಳೆದ ಒಂದೂವರೆ ಎರಡು ವರ್ಷಗಳಿಂದಲೂ ಇದೆ ಗೋಳಾಗಿದೆ. ಸರಿಯಾಗಿ ಸಂಬಳ ಕೊಡುತ್ತಿಲ್ಲ. ನಾವು ಬಂದು ಗಲಾಟೆ ಮಾಡೋದು, ಅವರು ಏನೋ ಒಂದು ಹೇಳಿ ಕಳಿಸೋದು ಆಗಿದೆಯೆ ಹೊರತು ಕಾಲ ಕಾಲಕ್ಕೆ ಸಂಬಳ ಸಿಗುತ್ತಿಲ್ಲ. ನಮ್ಮ ಗುತ್ತಿಗೆದಾರರು ನಮಗೆ ಸಂಬಳ ಕೊಟ್ಟಿಲ್ಲ. ಅವರ ಮೇಲೆ ಇವರು ಏನೂ ಕ್ರಮವನ್ನೂ ತೆಗೆದುಕೊಂಡಿಲ್ಲ. ಇವರೂ ಸಂಬಳ ಕೊಡಲ್ಲ. ಎಲ್ಲರೂ ಕೆಲಸ ಮಾತ್ರ ಮಾಡಿ ಎಂದು ಹೇಳ್ತಾರೆ. ನಮಗೇನು ಹೊಟ್ಟೆ ಇಲ್ಲವೇ ಎಂದು ಪ್ರಶ್ನಿಸಿದರು.
ನಗರಸಭೆ ಸದಸ್ಯ ಲಕ್ಷ್ಮಣ್ ಇನ್ನಿತರರು ಪ್ರತಿಭಟನಾಕಾರರೊಂದಿಗೆ ಜತೆಗೂಡಿ ನಾವು ಕೂಡ ನಿಮ್ಮೊಂದಿಗೆ ಇರುತ್ತೇವೆ. ನಿಮಗೆ ಸಂಬಳ ಕೊಡುವವರೆಗೂ ನಾವು ನಿಮ್ಮ ಜತೆ ಕೈ ಜೋಡಿಸುತ್ತೇವೆ. ಆದರೆ ಕೆಲಸ ಸ್ಥಗಿತ ಮಾಡಬೇಡಿ.ಇದರಿಂದ ನಾಗರೀಕರಿಗೆ ಕಷ್ಟ ಆಗುತ್ತದೆ. ಕೆಲಸ ಮಾಡಿ. ನಿಮ್ಮ ಸಂಬಳ ಕೇಳಿ ಎಂದು ಮನವಿ ಮಾಡಿದರಾದರೂ ಪ್ರತಿಭಟನಾಕಾರರು ಅದಕ್ಕೆ ಒಪ್ಪಲಿಲ್ಲ.
ನಂತರ ನಗರಸಭೆ ಆಯುಕ್ತ ಹರೀಶ್ ಮಾತನಾಡಿ, ಸರ್ಕಾರದಿಂದ ಅನುದಾನ ಬಿಡುಗಡೆ ಆಗಿದ್ದು ಅದು ಖಜಾನೆಗೆ ಜಮೆ ಆಗಬೇಕಿದೆ. ಜಮೆ ಆದ ಕೂಡಲೆ ನಿಮಗೆ ಬಾಕಿ ಸಂಬಳ ಕೊಡುವುದಾಗಿ ಭರವಸೆ ನೀಡಿದರು.
ಈ ತಿಂಗಳ ೨೪ ರೊಳಗೆ ಬಾಕಿ ವೇತನ ಇತ್ಯರ್ಥ ಮಾಡುವ ಭರವಸೆ ನೀಡಿದ ಮೇಲಷ್ಟೆ ಪ್ರತಿಭಟನಾಕಾರರು ಪ್ರತಿಭಟನೆಯಿಂದ ಹಿಂದೆ ಸರಿದರು.
- Advertisement -
- Advertisement -
- Advertisement -
- Advertisement -