ಪ್ರತಿಯೊಬ್ಬರ ಜೀವನದಲ್ಲೂ ಸುಖ ಶಾಂತಿ, ಸದ್ಭಾವನೆ, ನೆಮ್ಮದಿ, ಶಾಂತಿ ಮೂಡಲಿ. ಸಮಾಜದಲ್ಲಿ ಪರಸ್ಪರ ಪ್ರೀತಿ, ಸ್ನೇಹ, ಉತ್ತಮ ಬಾಂಧವ್ಯ ಮೂಡಲಿ ಎಂಬ ಉದ್ದೇಶದಿಂದ ದ್ವಾದಶ ಲಿಂಗಗಳ ದರ್ಶನವನ್ನು ಏರ್ಪಡಿಸಿದ್ದೇವೆ ಎಂದು ಬ್ರಹ್ಮಕುಮಾರಿ ಸಮಾಜದ ಜಯಕ್ಕ ತಿಳಿಸಿದ್ದಾರೆ.
ನಗರದ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಬ್ರಹ್ಮಕುಮಾರಿ ಸಮಾಜದ ವತಿಯಿಂದ ಸುಮಾರು ಆರು ದಿನಗಳಿಂದ ಆಯೋಜಿಸಲಾಗಿರುವ ದ್ವಾದಶ ಲಿಂಗಗಳ ದರ್ಶನದ ಬಗ್ಗೆ ಅವರು ಮಾತನಾಡಿದರು.
ಸಮಾಜದಲ್ಲಿನ ಕೆಟ್ಟದ್ದನ್ನು ಹೋಗಲಾಡಿಸಿ, ರಾಮರಾಜ್ಯವಾಗುವಂತೆ ಭಗವಂತನು ಅನುಗ್ರಹಿಸಲಿ. ಮಳೆ ಬೆಳೆ ಸಕಾಲಕ್ಕೆ ಆಗಲಿ. ನಾಡು ಸುಭಿಕ್ಷವಾಗಲಿ, ಭ್ರಷ್ಟಾಚಾರ, ಅನಾಚಾರಗಳು ನಿರ್ಮೂಲವಾಗಲಿ. ದೇಶದಾದ್ಯಂತ ಇರುವ ದ್ವಾದಶ ಲಿಂಗಗಳನ್ನು ಜನರು ಇಲ್ಲಿಯೇ ದರ್ಶನ ಮಾಡಿ ಪುಣ್ಯವನ್ನು ಗಳಿಸಲಿ ಎಂಬುದು ನಮ್ಮ ಆಶಯ ಎಂದು ಹೇಳಿದರು.
ಪೂಜೆಯಲ್ಲಿ ಪಾಲ್ಗೊಂಡಿದ್ದ ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಮಾತನಾಡಿ, ಭಗವಂತನ ಕೃಪಾಕಟಾಕ್ಷವಿದ್ದಲ್ಲಿ ಅನೇಕ ಸಮಸ್ಯೆಗಳು ತನ್ನಿಂತಾನೇ ಪರಿಹಾರವಾಗುತ್ತವೆ. ಧಾರ್ಮಿಕ ಆಚರಣೆಗಳು, ಭಾವನೆಗಳು ಮಾನವನನ್ನು ಸರಿದಾರಿಯಲ್ಲಿ ನಡೆಸುತ್ತವೆ. ಭಾರತೀಯರಲ್ಲಿ ಇಂದಿಗೂ ದ್ವಾದಶ ಜ್ಯೋತಿರ್ಲಿಂಗಗಳ ಬಗ್ಗೆ ಅಪಾರ ಶ್ರದ್ಧೆ, ನಂಬಿಕೆಯಿದೆ. ಇವುಗಳ ಪುಣ್ಯ ದರ್ಶನದಿಂದಲೇ ತಮ್ಮ ಪಾಪಗಳೆಲ್ಲ ಕಳೆದು ಪುನೀತರಾಗಬಹುದೆಂಬ ನಂಬಿಕೆ ಜನರಲ್ಲಿದೆ. ಇಷ್ಟಾರ್ಥಗಳ ಸಿದ್ಧಿಗೆ ತಮ್ಮ ಜೀವಿತಾವಧಿಯಲ್ಲಿ ಹನ್ನೆರಡು ಲಿಂಗಗಳ ದರ್ಶನ ಮಾಡಬೇಕೆಂಬ ಬಯಕೆ ಎಲ್ಲರಲ್ಲಿಯೂ ಇರುತ್ತದೆ. ಇದನ್ನು ಅರಿತ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದವರು ಒಂದೇ ಕಡೆ ದ್ವಾದಶ ಲಿಂಗಗಳ ದರ್ಶನವನ್ನು ಏರ್ಪಡಿಸಿದ್ದಾರೆ ಎಂದು ಹೇಳಿದರು.
ನಗರದ ಹಾಗೂ ತಾಲ್ಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆರು ದಿನಗಳಿಂದ ಆಗಮಿಸಿ ದ್ವಾದಶ ಲಿಂಗಗಳ ದರ್ಶನವನ್ನು ಪಡೆದರು.
- Advertisement -
- Advertisement -
- Advertisement -
- Advertisement -