ಕುಟುಂಬದ ಪ್ರತಿಯೊಬ್ಬ ಸದಸ್ಯರೂ ಉಳಿತಾಯ ಖಾತೆಗಳನ್ನು ಹೊಂದಿರಬೇಕು. ಇದರಿಂದ ಸರ್ಕಾರದ ವಿವಿಧ ಸೌಲಭ್ಯಗಳು ಸಿಗುತ್ತವೆ ಎಂದು ಕೆನರಾಬ್ಯಾಂಕ್ ಉಪಮಹಾಪ್ರಬಂಧಕ ಎಂ.ಎಂ.ಚಿನಿವಾರ್ ತಿಳಿಸಿದರು.
ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿರುವ ಕೆಂಪೇಗೌಡ ಸಭಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ರೈತಕೂಟಗಳ ಪ್ರಾರಂಭೋತ್ಸವ ಹಾಗೂ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿ ಬ್ಯಾಂಕ್ನಿಂದ ಸಿಗುವ ಸೌಲಭ್ಯಗಳ ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಮಹಾಪ್ರಬಂಧಕರಾದ ಜಿ.ಆರ್.ಚಿಂತಲಾ ಮಾತನಾಡಿ ಮಹಿಳಾ ರೈತಕೂಟಗಳಿಗೆ ಸುಮಾರು 50 ರಿಂದ 60 ಸಾವಿರ ರೂಗಳ ಆಹಾರವನ್ನು ಸಂಸ್ಕರಿಸುವ ಉಪಕರಣವನ್ನು ಉಚಿತವಾಗಿ ನೀಡಲಾಗುತ್ತದೆ. ಹೆಚ್ಚಿನ ತಿಳುವಳಿಕೆಗಾಗಿ ಹೊರರಾಜ್ಯಗಳಿಗೆ ಭೇಟಿ ನೀಡಲೂ ಸಹ ಪ್ರತಿ ರೈತಕೂಟಕ್ಕೆ 60 ಸಾವಿರ ರೂಗಳನ್ನು ನೀಡಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಇಬ್ಬರು ಅಂಗವಿಕಲರಿಗೆ ವೀಲ್ ಚೇರುಗಳನ್ನು, ಆರು ಮಂದಿ ಅಂಧರಿಗೆ ಊರುಗೋಲುಗಳನ್ನು, ಹಿರಿಯ ನಾಗರಿಕರಾದ ವಾಸುದೇವರಾವ್, ಸೊಣ್ಣೇನಹಳ್ಳಿ ರಾಮಚಂದ್ರಾಚಾರ್, ಬೆಳ್ಳೂಟಿ ಮಾರೇಗೌಡ, ಮಳ್ಳೂರು ರಾಮರೆಡ್ಡಿ ಮತ್ತಿತರರಿಗೆ ಗೌರವಿಸಲಾಯಿತು. ವೇಳೆಗೆ ಸರಿಯಾಗಿ ಸಾಲ ತೀರಿಸಿರುವವರಿಗೆ ಉತ್ತೇಜನ ನೀಡಲು ಬಹುಮಾನಗಳನ್ನು ವಿತರಿಸಲಾಯಿತು. ಸ್ವಸಹಾಯ ಗುಂಪುಗಳಿಗೆ 60 ಲಕ್ಷ ರೂಗಳು ಸಾಲ ವಿತರಿಸಲಾಯಿತು. ಬೋದಗೂರು ಸಿರಿ ಸಮೃದ್ಧಿ ರೈತಕೂಟ, ಆನೂರು ವಿವೇಕಾನಂದ ರೈತ ಕೂಟ, ಗಂಗನಹಳ್ಳಿ ಆಂಜನೇಯಸ್ವಾಮಿ ರೈತಕೂಟವನ್ನು ಉದ್ಘಾಟಿಸಲಾಯಿತು.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಅಪರ ನಿರ್ದೇಶಕ ಡಾ.ಬಿ.ಮುನಿವೆಂಕಟಪ್ಪ ಕುರಿ ಮತ್ತು ಮೇಕೆ ಸಾಕಾಣಿಕೆ ಬಗ್ಗೆ ವೈಜ್ಞಾನಿಕ ತಿಳುವಳಿಕೆ ನೀಡಿದರು.
ನಬಾರ್ಡ್ ಉಪಮಹಾಪ್ರಬಂಧಕ ಟಿ.ರಮೇಶ್, ಜಿಲ್ಲಾ ಅಭಿವೃದ್ಧಿ ಪ್ರಬಂಧಕ ಸುಪರ್ಣಾ ಟಂಡನ್, ರೇಷ್ಮೆ ಇಲಾಖೆ ಉಪನಿರ್ದೇಶಕ ಬಿ.ಆರ್.ನಾಗಭೂಷಣ್, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಸಹಾಯಕ ನಿರ್ದೇಶಕರಾದ ರಾಘವೇಂದ್ರ, ಚಂದ್ರಪ್ಪ, ಆನಂದ್, ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಎಚ್.ಜಿ.ಗೋಪಾಲಗೌಡ, ಶಿವಕುಮಾರಗೌಡ, ಕೆನರಾಬ್ಯಾಂಕ್ ವ್ಯವಸ್ಥಾಪಕ ಗಿರೀಶ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -